Advertisement

ಗಣರಾಜ್ಯ ಅಸ್ತಿತ್ವಕ್ಕೆ ಸಂವಿಧಾನವೇ ತಳಹದಿ

11:48 AM Jan 27, 2020 | |

ಕಲಬುರಗಿ: ಜಿಲ್ಲೆಯಲ್ಲಿ 32 ವರ್ಷಗಳ ನಂತರ ಅಖೀಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜಿಸುವ ಭಾಗ್ಯ ದೊರೆತಿರುವುದರಿಂದ ಸಮ್ಮೇಳನ ಯಶಸ್ವಿಗೆ ನೆರವು, ಸರ್ವರ ಭಾಗಿದಾರಿಕೆ, ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಮ್ಮೇಳನದ ಪ್ರಧಾನ ಸಂಚಾಲಕ ಶರತ್‌ ಬಿ. ಕೋರಿದರು.

Advertisement

ಗಣರಾಜ್ಯೋತ್ಸವ ಅಂಗವಾಗಿ ರವಿವಾರ ನಗರದ ಪೊಲೀಸ್‌ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಫೆ. 5ರಿಂದ ಮೂರು ದಿನಗಳ ಕಾಲ ಸಮ್ಮೇಳನ ರೂಪಿಸಲಾಗುತ್ತಿದೆ. ಈ ಸಮ್ಮೇಳನ ಅರ್ಥಪೂರ್ಣ ಹಾಗೂ ಸದಾಕಾಲ ಸ್ಮರಣೀಯವಾಗುವಂತೆ ಆಗಲು ಎಲ್ಲರೂ ಸಹಕಾರ ನೀಡಬೇಕೆಂದು ಜನತೆಯಲ್ಲಿ ಮನವಿ ಮಾಡಿದರು.

ಗಣರಾಜ್ಯದ ಅಸ್ತಿತ್ವಕ್ಕೆ ಸಂವಿಧಾನವೇ ತಳಹದಿ. ಈ ಸಂವಿಧಾನ ರಚಿಸಿದ್ದೂ ಒಂದು ಯಶೋಗಾಥೆಯೇ ಸರಿ. ಸಂವಿಧಾನ ಕರಡು ಸಮಿತಿ ಮತ್ತು ರಚನಾ ಸಭೆಯಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಪಾತ್ರ ವಿಶೇಷವಾಗಿತ್ತು. ತಮ್ಮ ಪಾತ್ರವನ್ನು ಸಂಪೂರ್ಣವಾಗಿ ನಿರ್ವಹಿಸುವಲ್ಲಿ ಅಂಬೇಡ್ಕರ್‌ ಅವರಿಗೆ ಹಲವಾರು ದೇಶಗಳ ಸಂವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿದ ಅನುಭವ ನೆರವಾಯಿತು. ಇವರ ಸೇವೆಗೆ ಮನ್ನಣೆ ದೊರೆತು ಇವರನ್ನು ಸಂವಿಧಾನದ ಪಿತಾಮಹ ಎಂದು ನಾವು ಸ್ಮರಿಸುವಂತಾಗಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕದ ಪ್ರಮುಖ ಕೇಂದ್ರ ಕಲಬುರಗಿ. ಗಣರಾಜ್ಯವಾದ ತರುವಾಯ ಜಿಲ್ಲೆ ಹಲವಾರು ಬೆಳವಣಿಗೆ ಕಂಡಿದೆ. ವಸತಿ, ರಸ್ತೆ, ಕುಡಿಯುವ ನೀರು, ಚರಂಡಿ, ವಿದ್ಯುದ್ದೀಪ, ಶಾಲಾ ಕಟ್ಟಡ ಹೀಗೆ ಪ್ರಮುಖ ಮೂಲಭೂತ ಸೌಕರ್ಯಗಳೊಂದಿಗೆ ಜಿಲ್ಲೆಯು ಇದೀಗ ವಾಯುಯಾನದಂತ ಪ್ರಮುಖ ಸಾರಿಗೆ ವ್ಯವಸ್ಥೆಗೆ ತೆರೆದುಕೊಂಡಿರುವುದು ಪ್ರಗತಿಯ ದ್ಯೋತಕವಾಗಿದೆ. ಕಳೆದ ನವೆಂಬರ್‌ 22ರಂದು ಮುಖ್ಯಮಂತ್ರಿಗಳು ಕಲಬುರಗಿ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಿದರು. ವಾಣಿಜ್ಯ ಸಂಚಾರ ಆರಂಭಗೊಂಡ ನಂತರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕೆ, ವಾಣಿಜ್ಯೋದ್ಯಮ, ಶೈಕ್ಷಣಿಕ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ, ಹೂಡಿಕೆ, ಉದ್ಯೋಗ ಸೃಷ್ಟಿಗೆ ವಿಫುಲ ಅವಕಾಶಗಳು ಲಭಿಸಲಿವೆ. ಅಲ್ಲದೇ ಇತ್ತೀಚೆಯ ದಿನಗಳಲ್ಲಿ ನಿರೀಕ್ಷೆಗೂ ಮೀರಿ ಹಲವಾರು ಪ್ರಮುಖ ವಿದ್ಯಮಾನಗಳು ನಡೆಯುತ್ತಿವೆ ಎಂದು ವಿವರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜನಪ್ರತಿನಿ ಧಿಗಳ ಸಲಹೆ-ಸೂಚನೆಯಂತೆ ಪ್ರಮುಖವಾಗಿ ಶಿಕ್ಷಣ, ಆರೋಗ್ಯ, ಕೃಷಿ, ಮೂಲಭೂತ ಸೌಕರ್ಯ ಕಲ್ಪಿಸಲು ಶ್ರಮಿಸಲಾಗುತ್ತಿದೆ ಎಂದರು.

Advertisement

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕ ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕ ಶಂಕರ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಅಬ್ದುಲ್‌ ಅಜೀಮ್‌, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ದಿಲೀಪ ಸಿಂಗ್‌, ಕಲಬುರಗಿ ಮಹಾನಗರ ಪಾಲಿಕೆ ಅಭಿಯಂತರ ಭೀಮಾಶಂಕರ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಜಿಲ್ಲಾ ಕಾರ್ಯಕ್ರಮ ಸಹಾಯಕಿ ಅರ್ಚನಾ ಮಾಡ್ಯಾಳಕರ್‌, ಕಲಬುರಗಿ ತಹಶೀಲ್ದಾರ್‌ ಕಚೇರಿಯ ಶಿರಸ್ತೇದಾರ ನಾಗರತ್ನ, ಕೊಂಚಾವರಂ ಪಿಡಿಒ ತುಕ್ಕಪ್ಪ ಉರಡಿ, ಜಿಲ್ಲಾ ಪಂಚಾಯತ್‌ ಕಚೇರಿಯ ರಾಜೇಶ, ಅರಣ್ಯ ರಕ್ಷಕ ಬಸವಂತಪ್ಪ ಧನೋಜಿ, ಸ್ವಾತಂತ್ರ್ಯ ಯೋಧರಾದ ಸೈಯದ್‌ ಖುರ್ಶೀದ್‌ ಅಲಿ, ವೆಂಕಟರಾವ್‌ ಶಿಂಧೆ, ಸಿತಾರಾಂ ಭೀಮು ನಾಯಕ, ಶ್ಯಾಮರಾವ್‌ ಕುಲಕರ್ಣಿ, ಭೀಮರಾವ ರುದ್ರವಾಡಿ, ವಿಜಯಕುಮಾರ ಪ್ರಭುರಾವ್‌ ಅವರಿಗೆ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.

ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ ಅವ್ವಣ್ಣ ಸಿದ್ರಾಮ ಪಾರಗೊಂಡ, ಶಾಂತಪ್ಪ ಶರಣಪ್ಪ, ಸಂಜೀವಕುಮಾರ ಪುಣ್ಯಶೆಟ್ಟಿ, ಚಂದ್ರಕಾಂತ ಸಿದ್ದಣ್ಣ, ಮಲ್ಲಣಗೌಡ ಶರಣಗೌಡ ಪಾಟೀಲ, ಸೋನು ಬಾಯಿ ರಾಮಚಂದ್ರ, ಚನ್ನಬಸಪ್ಪ ರಾಜೇಂದ್ರಪ್ಪ ಹಾಗರಗಿ ಅವರನ್ನು ಸನ್ಮಾನಿಸಲಾಯಿತು.

ಇದೇ ವೇಳೆ ವಿಶೇಷ ಸಾಧನೆ ಮಾಡಿದ ಕಲಬುರಗಿ ಗ್ರಾಮೀಣ ಉಪವಿಭಾಗದ ಉಪ ಪೊಲೀಸ್‌ ವರಿಷ್ಠಾ ಧಿಕಾರಿ ಸಂಗಪ್ಪ ಎಸ್‌. ಹುಲ್ಲೂರ, ಸಂದಪ್ಪ ಅಂಗದಾನ ಮಾಡಿದ ಹಿನ್ನೆಲೆಯಲ್ಲಿ ವಾರಸುದಾರರಾದ ಅವರ ಪತ್ನಿ ಸಾವಿತ್ರಮ್ಮ, ಪತಿ ಜಗದೇವಪ್ಪ ಅವರಿಗೆ ಅಂಗಾಂಗ ದಾನ ಮಾಡಿದ ಶಿವಮ್ಮ ಅವರಿಗೆ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದ ಜಯತೀರ್ಥ ಕಾಗಲಕರ್‌, ಶರಣಯ್ಯ ಸ್ವಾಮಿ, ವಿಜಯಕುಮಾರ ವಾರದ, ಮಹಮ್ಮದ್‌ ಮುಕ್ತಾರೋದ್ದಿನ್‌ ಜುನೈದಿ ಅವರನ್ನು ಸನ್ಮಾನಿಸಲಾಯಿತು.

ಸಂಸದ ಡಾ| ಉಮೇಶ ಜಾಧವ, ಶಾಸಕರಾದ ದತ್ತಾತ್ರೇಯ ಪಾಟೀಲ, ಖನೀಜ್‌ ಫಾತಿಮಾ, ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಪ್ರಾದೇಶಿಕ ಆಯುಕ್ತ ಸುಬೋಧ ಯಾದವ, ಈಶಾನ್ಯ ವಲಯ ಐಜಿಪಿ ಮನೀಷ ಖರ್ಬಿಕರ್‌, ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಹೆಚ್ಚುವರಿ ಜಿಲ್ಲಾಧಿಕಾರಿ ಡಾ| ಶಂಕ್ರಣ್ಣ ವಣಿಕ್ಯಾಳ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next