Advertisement

ರೆಕ್ಕೆ ಬಿಚ್ಚಿದ ಕಲಬುರಗಿ

09:39 AM Nov 22, 2019 | mahesh |

ಕಲ್ಯಾಣ ಕರ್ನಾಟಕಕ್ಕೆ ಸುವರ್ಣ ಕಾಲ. ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಹುಬ್ಬಳ್ಳಿ ಬಳಿಕ ರಾಜ್ಯದ 6ನೇ ನಾಗರಿಕ ವಿಮಾನ ನಿಲ್ದಾಣ ಕಲಬುರಗಿಯಲ್ಲಿ ಉದ್ಘಾಟನೆಗೆ ಸಜ್ಜಾಗಿದೆ. ನಾಲ್ಕು ದಶಕಗಳ ಕನಸು ಈಗ ಈಡೇರಿದೆ…

Advertisement

4 ದಶಕಗಳ ಕನಸಿಗೆ “ರೆಕ್ಕೆ’ಪುಕ್ಕ
ಕಲಬುರಗಿಯಿಂದ ವಿಮಾನ ಹಾರಾಟ ಬರೋಬ್ಬರಿ ನಾಲ್ಕು ದಶಕಗಳ ಕನಸು. ವಿಶಾಲವಾದ 742 ಎಕರೆ ಭೂಮಿಯಲ್ಲಿ ನಿರ್ಮಾಣಗೊಂಡ “ಕಲಬುರಗಿ ವಿಮಾನ ನಿಲ್ದಾಣ’ ಶುಕ್ರ ವಾರ (ನ.22)ರಂದು ಉದ್ಘಾಟನೆಗೆ ಸಜ್ಜಾಗಿದೆ. ನಾಗರಿಕ ವಿಮಾನಯಾನ ಶುರುವಾಗುತ್ತಿರುವುದು ಕಲ್ಯಾಣ ಕರ್ನಾಟಕದ ಭಾಗ್ಯದ ಬಾಗಿಲು ತೆರೆಯುವಂತಾಗಿದೆ.

ವರ್ಷದ ಹಿಂದೆ ಪರೀಕ್ಷಾರ್ಥ ಹಾರಾಟ
2018, ಆ.26ರಂದು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪರೀಕ್ಷಾರ್ಥ ವಿಮಾನ ಹಾರಾಟ ಯಶಸ್ವಿಯಾಗಿ ನಡೆದಿದೆ. ಹೈದ್ರಾಬಾದ್‌ನ ಏಶಿಯನ್‌ ಫೆಸಿಫಿಕ್‌ ಫ್ಲೈಟ್‌ ಟ್ರೇನಿಂಗ್‌ ಅಕಾಡೆಮಿಯ ಡೈಮಂಡ್‌-40 ಮತ್ತು ಡೈಮಂಡ್‌-42 ಎಂಬ 4 ಅಸನವುಳ್ಳ ಎರಡು ಲಘು ವಿಮಾನಗಳು ಬಂದಿಳಿಯುವ ಮೂಲಕ ಗಗನಯಾನಕ್ಕೆ ಹಸಿರು ನಿಶಾನೆ ತೋರಿಸಿದವು. ಉಡಾನ್‌ ಯೋಜನೆಯಡಿ ಸೇರಿದ್ದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಿದೆ. ಸುತ್ತಮುತ್ತಲಿನ ಭೂಮಿಗೆ ಈಗ ಭಾರೀ ಬೆಲೆ ಬಂದಿದೆ.

ಮೊದಲಿನ ಜಾಗದಲ್ಲಿ ಹೈಕೋರ್ಟ್‌ ಪೀಠ
ಕಲಬುರಗಿ ವಿಮಾನ ನಿಲ್ದಾಣಕ್ಕೆ ರೆಕ್ಕೆಪುಕ್ಕ ಬಂದಿದ್ದು 1980ರ ಅವಧಿಯಲ್ಲಿ. ಆಗ ನಗರಕ್ಕೆ ಹೊಂದಿಕೊಂಡಂತೆ ಅಫ‌ಜಲಪುರ ರಸ್ತೆಯ ಬಿದ್ದಾಪುರ ಕಾಲೋನಿ ಬಳಿ 214 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ನಗರ ವಿಸ್ತಾರಗೊಳ್ಳುತ್ತಾ ಉದ್ದೇಶಿತ ವಿಮಾನ ನಿಲ್ದಾಣಕ್ಕೆ ತಲುಪಲಾರಂಭಿಸಿತು. ತದನಂತರ ಭೂಮಿ ಸಮತಟ್ಟವಾಗಿಲ್ಲ ಹಾಗೂ ಹೆಚ್ಚುವರಿ ಭೂಮಿ ಸಿಗದ ಹಿನ್ನೆಲೆಯಲ್ಲಿ ಆ ಭೂಮಿಯನ್ನು 2003ರಲ್ಲಿ ಕರ್ನಾಟಕ ಹೌಸಿಂಗ್‌ ಬೋರ್ಡ್‌ಗೆ ಹಸ್ತಾಂತರಿಸಲಾಯಿತು. ಈಗ ಅದೇ ಜಾಗದಲ್ಲಿ ಕರ್ನಾಟಕ ಹೈಕೋರ್ಟ್‌ ಪೀಠ ನಿರ್ಮಾಣವಾಗಿದೆ. ಉಳಿದ ಜಾಗದಲ್ಲಿ ಕೆಎಚ್‌ಬಿ ಕಾಲೋನಿ ನಿರ್ಮಾಣವಾಗಿದೆ. ಹೀಗಾಗಿ 2002ರಲ್ಲಿ ನಗರದ 15 ಕಿಮೀ ದೂರದ ಸೇಡಂ ರಸ್ತೆಯ ಶ್ರೀನಿವಾಸ ಸರಡಗಿ ಸೀಮಾಂತರದಲ್ಲಿ ಮೊದಲಿಗೆ 567 ಎಕರೆ ಭೂಮಿಯನ್ನು ಪ್ರತಿ ಎಕರೆಗೆ 1.25 ಲಕ್ಷ, ತದನಂತರ 126 ಹಾಗೂ 26 ಎಕರೆಯನ್ನು 5 ಲಕ್ಷ ಪ್ರತಿ ಎಕರೆಗೆ ಪರಿಹಾರ ನೀಡಿ ನೇರವಾಗಿ ಖರೀದಿಸಲಾಗಿದೆ. ಇತ್ತೀಚಿಗೆ ರಾತ್ರಿ ವಿಮಾನ ಬಂದಿಳಿಯಲು ಅಗತ್ಯ ಪ್ರಕಾಶಮಾನದ ದೀಪದ ವ್ಯವಸ್ಥೆಗಾಗಿ 48 ಎಕರೆ ಭೂಮಿಯನ್ನು ಮಾತ್ರ ಎಕರೆಗೆ 15 ಲಕ್ಷ ರೂ ಪರಿಹಾರ ನೀಡಿ ಪಡೆಯಲಾಗಿದೆ. ಒಟ್ಟಾರೆ 22 ಕೋಟಿ ರೂ. ಮಾತ್ರ ಪರಿಹಾರ ರೈತರಿಗೆ ಸಿಕ್ಕಿದೆ.

ದಿಕ್ಸೂಚಿ ಕಾರ್ಯನಿರ್ವಹಣೆ ಎಲ್ಲಿ?
ಮೊದಲು ವಿಮಾನ ನಿಲ್ದಾಣ ಸ್ಥಾಪಿಸಲು ಉದ್ದೇಶಿಸಿರುವ ಕೆಎಚ್‌ಬಿ ಕಾಲೋನಿಯಲ್ಲಿಯೇ 6 ಎಕರೆ ಪ್ರದೇಶದಲ್ಲಿ ಮೂರುವರೆ ದಶಕಗಳ ಹಿಂದೆಯೇ ವಿಮಾನಯಾನ ದಿಕ್ಸೂಚಿ (ವೈಮಾನಿಕ ಸಂಚಾರ ಕೇಂದ್ರ) ಸ್ಥಾಪಿಸಲಾಗಿದೆ. ಈಗಲೂ ಇದರಿಂದಲೇ ಕಾರ್ಯ ನಿರ್ವಹಿಸ ಲಾಗುತ್ತಿದೆ. ಹೊಸ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರದ ಮಾರ್ಗವನ್ನು ಇದೇ ಕೇಂದ್ರದಿಂದ ನಿರ್ವಹಿಸಲಾಗುತ್ತಿದೆ. ಒಂದೆರಡು ತಿಂಗಳ ನಂತರ ಹೊಸ ವಿಮಾನ ನಿಲ್ದಾಣದಲ್ಲಿ ಅತ್ಯಾಧುನಿಕ ಸೌಲಭ್ಯ ಗಳುಳ್ಳ ವೈಮಾನಿಕ ಸಂಚಾರ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ. ಆಗ 6 ಎಕರೆ ಭೂಮಿ ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಡುತ್ತದೆ.

Advertisement

ಯಾವ ಹೆಸರಿಡಬೇಕು?
ಕಲಬುರಗಿ ವಿಮಾನ ನಿಲ್ದಾಣಕ್ಕೆ ಈಗ ಹೆಸರಿಡುವ ತಿಕ್ಕಾಟ ಶುರುವಾಗಿದೆ. ಹರಿದಾಡುತ್ತಿರುವ ಹೆಸರುಗಳಿವು…

ನೃಪತುಂಗ
ಸಂತ ಸೇವಾಲಾಲ್‌ ಮಹಾರಾಜ್‌
ಶರಣಬಸವೇಶ್ವರ
ಅಪ್ಪ

ಅಡಿಗಲ್ಲು ಹಾಕಿದ್ದ ಬಿಎಸ್‌ವೈ ಅವರಿಂದಲೇ ಉದ್ಘಾಟನೆ
ಶ್ರೀನಿವಾಸ ಸರಡಗಿ ಬಳಿ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಆಗಿನ ಸಿಎಂ ಯಡಿಯೂರಪ್ಪ 2008, ಜೂ.14ರಂದು ಅಡಿಗಲ್ಲು ಹಾಕಿದ್ದರು. ಲೋಕೋಪಯೋಗಿ ಇಲಾಖೆ ರೈಟ್ಸ್‌ ಲಿಮಿಟೆಡ್‌ನ‌ ತಾಂತ್ರಿಕ ನೆರವಿನೊಂದಿಗೆ ನಿರ್ಮಿಸಿದ್ದು, ಈಗ ವಿಮಾನ ನಿಲ್ದಾಣ ಪ್ರಾ ಧಿಕಾರ (ಎಎಐ) ನಿರ್ವಹಿಸುತ್ತಿದೆ. ಮೊದಲು ವಿಮಾನ ನಿಲ್ದಾಣವನ್ನು 120 ಕೋಟಿ ನೆರವಿನೊಂದಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ನಿರ್ಧರಿಸಲಾಗಿತ್ತು. 2007ರಲ್ಲಿ ಮೆತಾಸ್‌ ಕಂಪನಿಯೊಂದಿಗೆ 30 ವರ್ಷಗಳ ಅವಧಿಗೆ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಹಣಕಾಸಿನ ನಿರ್ವಹಣೆ, ವಿವಾದಗಳಿಂದ ಕಾಮಗಾರಿ ಸ್ಥಗಿತಗೊಳಿಸಲಾಯಿತು. ಯೋಜನಾ ಅಭಿವೃದ್ಧಿ ಒಪ್ಪಂದವನ್ನು ಪಾಲಿಸದ ಕಾರಣ ರಾಜ್ಯ ಸರ್ಕಾರ 2015, ಜನವರಿಯಲ್ಲಿ ಒಪ್ಪಂದ ರದ್ದುಗೊಳಿಸಿತು. 2016ರಲ್ಲಿ ಉಳಿದ ಕೆಲಸವನ್ನು ಲೋಕೋಪಯೋಗಿ ಇಲಾಖೆಯ ಮೂಲಕ ಪೂರ್ಣಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿತು. ಈಗ 175 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ಪೂರ್ಣಗೊಳಿಸಲಾಗಿದೆ.

ಅಭಿವೃದ್ಧಿಗೆ ಹೇಗೆ ಪೂರಕ?
ಬೀದರ್‌ನಲ್ಲಿ ವಾಯುನೆಲೆ, ಬಳ್ಳಾರಿ ಜಿಲ್ಲೆಯ ತೊರಣಗಲ್‌ನಲ್ಲಿ ಜಿಂದಾ ಲ್‌ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಬಲೊಟ ಖಾಸಗಿ ವಿಮಾನ ನಿಲ್ದಾಣವಿದೆ. ಆದರೆ, ಕಲ್ಯಾಣ ಕರ್ನಾಟಕದ ಮೊದಲ ನಾಗರಿಕ ವಿಮಾನಯಾನ ನಿಲ್ದಾಣ ಇದಾಗಿರುವುದರಿಂದ ಅಭಿವೃದ್ಧಿಗೆ ಪೂರಕವಾಗಲಿದೆ. ಕರ್ನಾಟಕ ಕೇಂದ್ರೀಯ ವಿವಿ ಜತೆಗೆ ನಾಲ್ಕು ವಿವಿಗಳು, ಮೂರು ವೈದ್ಯಕೀಯ ಕಾಲೇಜು ಸೇರಿದಂತೆ ಹತ್ತಾರು ಶಿಕ್ಷಣ ಸಂಸ್ಥೆಗಳಿವೆ. ಸಿಮೆಂಟ್‌ ಕಾರ್ಖಾನೆಗಳಿವೆ. ಅಪರೂಪದ ತೊಗರಿ ಕಣಜವಿದೆ. ಹೊನ್ನಕಿರಣಗಿ, ನದಿ ಸಿನ್ನೂರ, ಫಿರೋಜಾಬಾದ ಬಳಿ ನನೆಗುದಿಗೆ ಬಿದ್ದಿರುವ ಉಷ್ಣ ವಿದ್ಯುತ್‌ ಸ್ಥಾವರ, ಚಿತ್ತಾಪುರ ತಾಲೂಕಿನ ರಾಷ್ಟ್ರೀಯ ಬಂಡವಾಳ ಮತ್ತು ಉತ್ಪಾದನಾ ವಲಯವೂ ಪುನಾರಂಭವಾಗಲು ಅನುಕೂಲವಾಗಲಿದೆ.

ಯಾವ ಸ್ಥಳಗಳಿಗೆ ಬೇಡಿಕೆ?
ಕಲಬುರಗಿ ವಿಮಾನ ನಿಲ್ದಾಣದಿಂದ ಬೆಂಗಳೂರು, ನವದೆಹಲಿ, ತಿರುಪತಿ ಹಾಗೂ ಮುಂಬೈಗೆ ತೆರಳುವ ಬೇಡಿಕೆಯಿದೆ. ಈಗ ಸ್ಟಾರ್‌ಏರ್‌ ವಿಮಾನ ಸಂಸ್ಥೆ ಮೊದಲಿಗೆ ಬೆಂಗಳೂರು-ಕಲಬುರಗಿ ನಡುವೆ ವಿಮಾನಯಾನಕ್ಕೆ ಮುಂದೆ ಬಂದು ಒಪ್ಪಂದ ಮಾಡಿಕೊಂಡಿದೆ. ಪ್ರಾರಂಭದಲ್ಲಿ ವಾರದಲ್ಲಿ ಮೂರು ದಿನ ಸಂಚಾರ ನಡೆಸಲು ನಿರ್ಧರಿಸಿದ್ದು, ಅದೇ ರೀತಿ ಅಲೈನ್ಸ್‌ ಏರ್‌ ಸಂಸ್ಥೆಯು ತನ್ನ ವಿಮಾನಯಾನಕ್ಕೆ ಮುಂದೆ ಬಂದು ಒಪ್ಪಂದ ಮಾಡಿಕೊಂಡಿದ್ದು, ನವೆಂಬರ್‌ ಮಾಸಾಂತ್ಯದೊಳಗೆ ತನ್ನ ಸೇವೆ ಆರಂಭಿಸಲಿದೆ.

ರಾಜ್ಯದ 2ನೇ ಅತಿ ಉದ್ಧದ ರನ್‌ವೇ
ದೇಶದಲ್ಲಿ ಒಟ್ಟಾರೆ 449 ವಿಮಾನ ನಿಲ್ದಾಣಗಳಿವೆ. ಇದರಲ್ಲಿ 126 ನಿಲ್ದಾಣಗಳು ಮಾತ್ರ ಕೇಂದ್ರ ವಿಮಾನಯಾನ ಸಚಿವಾಲಯದ್ದಾಗಿವೆ. 100 ವಿಮಾನ ನಿಲ್ದಾಣಗಳಿಂದ ನಾಗರಿಕ ಹಾಗೂ ವಾಣಿಜ್ಯ ಸಂಚಾರವಿದೆ. ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿ ನಾಗರಿಕ ವಿಮಾನಯಾನ ನಿಲ್ದಾಣಗಳಿವೆ. ಇದರಲ್ಲಿ ಬೆಂಗಳೂರು ಹಾಗೂ ಮಂಗಳೂರು ನಿಲ್ದಾಣಗಳು ಮಾತ್ರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿವೆ. ಕಲಬುರಗಿ ವಿಮಾನ ನಿಲ್ದಾಣ 3.25 ಕೀಮೀ ರನ್‌ ವೇ ಹೊಂದಿದ್ದು, ರಾಜ್ಯದ ಎರಡನೇ ಅತಿ ಉದ್ದದ ರನ್‌ವೇ ಹೆಗ್ಗಳಿಕೆ ಪಡೆದಿದೆ.

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next