ಜಾಲಹಳ್ಳಿ: ಕಾಯಕವೇ ಕೈಲಾಸವೆಂದು ನಂಬಿ ಕೃಷಿ, ಪಶು ಸಂಗೋಪನೆಯಲ್ಲಿ ತೊಡಗಿರುವ, ಹಾಲಿನಂತ ಮನಸ್ಸುಳ್ಳ ಹಾಲುಮತ ಸಮಾಜದ ಸಂಸ್ಕೃತಿ ಶ್ರೇಷ್ಠವಾಗಿದೆ ಎಂದು ಹೊಸದುರ್ಗ ಭಗೀರಥ ಪೀಠದ ಶ್ರೀ
ಪುರುಷೋತ್ತಮಾನಂದಪುರಿ ಸ್ವಾಮೀಜಿ ನುಡಿದರು.
ಸಮೀಪದ ತಿಂಥಣಿ ಬ್ರಿಜ್ ಕಾಗಿನೆಲೆ ಕನಕಗುರು ಪೀಠದಲ್ಲಿ ಹಮ್ಮಿಕೊಂಡ ಹಾಲುಮತ ಸಂಸ್ಕೃತಿ ವೈಭವ-2020 ಕಾರ್ಯಕ್ರಮದ ಮೂರನೇ ದಿನ ಮಂಗಳವಾರ ನಡೆದ ರೇವಣಸಿದ್ದೇಶ್ವರ, ಸಿದ್ದರಾಮೇಶ್ವರ ಸ್ಮರಣೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಕನಕದಾಸರು, ಸಂಗೊಳ್ಳಿ ರಾಯಣ್ಣ, ಕವಿರತ್ನ ಕಾಳಿದಾಸ, ಅಹಲ್ಯಾಬಾಯಿ ಹೋಳ್ಕರ್, ಚಂದ್ರಗುಪ್ತ ಮೌರ್ಯ, ಹಕ್ಕಬುಕ್ಕರಂತ ಶ್ರೇಷ್ಠ ವ್ಯಕ್ತಿಗಳು ಹಾಲುಮತ ಸಮಾಜದವರು ಎಂಬುದು ಹೆಮ್ಮೆಯ ವಿಷಯ ಎಂದರು.
ಕನಕಗುರು ಪೀಠದ ನೇತೃತ್ವದಲ್ಲಿ ಎಲ್ಲ ಹಿಂದುಳಿದ ವರ್ಗಗಳ ಮಠಗಳು ಒಕ್ಕೂಟ ರಚಿಸಿಕೊಂಡು ಸಮಾಜವನ್ನು ಕಟ್ಟುವಂತ ಕೆಲಸ ಮಾಡುತ್ತಿವೆ. ತೀರ ಹಿಂದುಳಿದ ಈ ಪ್ರದೇಶದಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿ ಕನಕ ಗುರುಪೀಠದ ಮೂಲಕ ಶಿಕ್ಷಣ, ಸಂಸ್ಕೃತಿ, ಸಂಸ್ಕಾರ ನೀಡುತ್ತಿದ್ದಾರೆ ಎಂದರು.
ಗೋಕಾಕ ಪತಂಜಲಿ ಯೋಗಪೀಠದ ಬ್ರಹ್ಮಾನಂದ ಗುರೂಜಿ ಯೋಗ ಮತ್ತು ಆರೋಗ್ಯ ಕುರಿತು ಮಾತನಾಡಿ, ಒತ್ತಡದ ಬದುಕಿನಲ್ಲಿ ಆರೋಗ್ಯದ ಕಡೆ ಗಮನ ಹರಿಸದೇ ಅನಾರೋಗ್ಯಕ್ಕೀಡಾಗುತ್ತಿದ್ದೇವೆ. ನಿತ್ಯ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯಕರ ಜೀವನ ಸಾಗಿಸಲು ಸಾಧ್ಯ. ಯೋಗಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಋಷಿಮುನಿಗಳು ಯೋಗ ಮಾಡುತ್ತಿದ್ದರಿಂದ ನೂರಾರು ವರ್ಷ ಬದುಕಿದ್ದರು. ಆದರೆ ನಾವು ಒತ್ತಡದ ಬದುಕಿನಲ್ಲಿ ಆರೋಗ್ಯ ಕಾಳಜಿ ನಿರ್ಲಕ್ಷಿಸಿದ್ದೇವೆ. ಇದರಿಂದ ಚಿಕ್ಕ ವಯಸ್ಸಿನಲ್ಲೇ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಯೋಗ ಸರ್ವ ರೋಗಗಳಿಗೆ ಮದ್ದಾಗಿದೆ. ನಿತ್ಯ ಒಂದಷ್ಟು ಸಮಯವನ್ನು ಯೋಗಾಭ್ಯಾಸಕ್ಕೆ
ಮೀಸಲಿಡಬೇಕು. ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಮಹಿಳೆಯರು ಚಿನ್ನಾಭರಣ ಹಾಕಿಕೊಳ್ಳುವುದು ಸೌಂದರ್ಯ ಹೆಚ್ಚಿಸಿಕೊಳ್ಳುವುದಕ್ಕೆ ಎಂದು ಅನೇಕ ಜನ ತಿಳಿದಿದ್ದಾರೆ. ಚಿನ್ನಾಭರಣ ಹಾಕಿಕೊಳ್ಳುವುದರಿಂದ ಹಲವು ಕಾಯಿಲೆ ದೂರ ಮಾಡಬಹುದು ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಹಣೆಯಲ್ಲಿ ಕುಂಕುಮ ಹಚ್ಚುವುದರಿಂದ
ಸೂರ್ಯನ ಕಿರಣಗಳು ಕುಂಕುಮದ ಮೇಲೆ ಬಿದ್ದು ನಮ್ಮ ಆತ್ಮ ಬಲವನ್ನು ಜಾಗೃತಗೊಳಿಸುತ್ತದೆ. ತಲೆಯಲ್ಲಿ ತುರುಬು ಕಟ್ಟುವುದರಿಂದ ಜ್ಞಾನ, ಬುದ್ದಿಶಕ್ತಿ ಹೆಚ್ಚುತ್ತದೆ ಎಂದರು.
ಮಾಜಿ ಸಚಿವ ಶಿವರಾಜ ತಂಗಡಗಿ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು. ಕೆ.ಆರ್.ನಗರದ ಶಿವಾನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಾಸಕ ಡಿ.ಎಸ್.ಹೂಲಗೇರಿ, ಬೆಂಗಳೂರು ಅಹಲ್ಯಾಬಾಯಿ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಪ್ರಭಾವತಿ. ಸಂಗಣ್ಣ ಬಯ್ನಾಪುರು, ಚಿದಾನಂದಯ್ಯ ಗುರುವಿನ, ಶಿವಶಂಕರಗೌಡ ಗೌಡರ, ಹನುಮಂತಪ್ಪ ಕಂದಗಲ್, ಭೂಪನಗೌಡ ಕರಡಕಲ್ ಇತರರು ಇದ್ದರು.