Advertisement

ಹುಟ್ಟೂನಲ್ಲೇ ಜೀವನ ಪಯಣ ಮುಗಿಸಿದ ಸಂತ

11:10 AM Oct 19, 2019 | Naveen |

ಕಾಗವಾಡ/ಬೆಳಗಾವಿ: ಜನನ ಮರಣಗಳ ಹುಟ್ಟಡಗಿಸಿ ಮೋಹವೆಂಬ ಗಾಡಾಂಧಕಾರವನ್ನು ಮೆಟ್ಟಿ ನಿಂತ ಮಹಾತಪಸ್ವಿ. ಕರುಣೆಯ ಸಹಾನುಮೂರ್ತಿ ರಾಷ್ಟ್ರಸಂತ ಚಿನ್ಮಯಸಾಗರಜೀ (ಜಂಗಲ್‌ವಾಲೆ ಬಾಬಾ) ಶುಕ್ರವಾರ ಸಂಜೆ ಸೂರ್ಯ ಮುಳುಗುವ ಹೊತ್ತಿನಲ್ಲಿ ಹುಟ್ಟೂರು ಜುಗೂಳ ಗ್ರಾಮದಲ್ಲೇ ಸಮಾಧಿ ಮರಣ ಹೊಂದಿದರು.

Advertisement

ಜನರ ಮಧ್ಯೆ ಜನಿಸಿದರೂ ಸದಾ ಕಾಡಿನ ವಾತಾವರಣವನ್ನೇ ಬಯಸುತ್ತಿದ್ದ, ಅಲ್ಲಿಂದಲೇ ಹೊಸ ಕ್ರಾಂತಿ ಮಾಡಬೇಕು ಎಂಬ ಮಹದುದ್ದೇಶ ಹೊಂದಿ ಎಲ್ಲರಿಗೂ ಮಾದರಿಯಾಗಿದ್ದ ಅವರು, ಆದಿವಾಸಿ ಜನರ ಧ್ವನಿಯಾದವರು. ಜನರನ್ನು ದುಶ್ಚಟಗಳಿಂದ ವಿಮುಕ್ತಗೊಳಿಸುತ್ತ ಅಹಿಂಸಾ ಪರಮೋದ್ಧಾರಕ ಎನಿಸಿಕೊಂಡವರು. ಆಧ್ಯಾತ್ಮ ಚಿಂತನೆ, ವ್ಯಸನಮುಕ್ತ ಸಮಾಜ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತ ನಿರ್ಮಾಣದ ಚಿಂತನೆಯಲ್ಲೇ ಮುಳುಗಿ ಅದೇ ಸಂದೇಶ ಸಾರುತ್ತಿದ್ದ ಚಿನ್ಮಯಸಾಗರಜೀ ತಮ್ಮ ಪೂರ್ವಾಶ್ರಮದ ಹೆಸರಿಗಿಂತ ‘ಜಂಗಲ್‌ವಾಲೆ ಬಾಬಾ’ ಎಂದೇ ಗುರುತಿಸಿಕೊಂಡವರು. ಅದರಿಂದಲೇ ಜಗದ್ವಿಖ್ಯಾತಿ ಪಡೆದವರು. ಮುನಿ ಮಹಾರಾಜರು ಆಧ್ಯಾತ್ಮಿಕ ಚಿಂತನದೊಂದಿಗೆ ದೇಶದ ಅಭಿವೃದ್ಧಿ ಬಗ್ಗೆ ಚಿಂತಿಸುವ ಮಹಾರಾಜರು.

ವ್ಯಸನಮುಕ್ತ ಸಮಾಜ ಮತ್ತು ಭ್ರಷ್ಟಾಚಾರಮುಕ್ತ ಆಡಳಿತ ನಿರ್ಮಾಣ ವಾಗಬೇಕು ಎಂಬುದು ಈ ಶಾಂತಿ ಧೂತನ ನಿರಂತರ ತುಡಿತವಾಗಿತ್ತು. ದೇಶದ ಭದ್ರ ಬುನಾದಿಯಾಗಿರುವ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ದಕ್ಷತೆಯಿಂದ ಕಾರ್ಯನಿರ್ವಹಿಸಿದರೆ ಅರಾಜಕತೆಯೇ ಎದುರಾಗದು ಎಂಬುದು ಅವರ ಆಶಯ ಹಾಗೂ ದೃಢವಾದ ಅಭಿಪ್ರಾಯವಾಗಿತ್ತು. ಸದಾ ಅರಣ್ಯದಲ್ಲಿ ಚಾತುರ್ಮಾಸ ಕೈಗೊಂಡ ಏಕೈಕ ಸಂತ. ಮೋಕ್ಷದಾರಿ ಹುಡುಕುತ್ತಲೆ ಹುಟ್ಟಿದ ಊರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜುಗೂಳದಲ್ಲೇ ಮೋಕ್ಷಕಂಡ ಪುಣ್ಯಾತ್ಮ. ಮೋಕ್ಷದ ದಾರಿ ಹುಡುಕುತ್ತಲೇ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಲಕ್ಷಾಂತರ ಗಿಡಗಳನ್ನು ಬೆಳೆಸಿ ಅರಣ್ಯ ಪ್ರದೇಶದಲ್ಲಿ ಚಾತುರ್ಮಾಸ ಮಾಡಿ 45 ಸಾವಿರ ಕಿಮೀಗಿಂತ ಹೆಚ್ಚು ದೂರ ಸಂಚಾರ ಮಾಡಿ ಜೈನಧರ್ಮದ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ್ದರು.

ದಿಗ್ವಿಜಯ್‌ ಸಿಂಗ್‌ ಬಂದಿದ್ದರು: ಖಾನಾಪುರ ತಾಲೂಕಿನ ಸಡಾ ಎಂಬ ಗ್ರಾಮದ ಬಳಿಯ ದುರ್ಗಮ ಕಾಡಿನಲ್ಲಿ ಯಾವುದೇ ಭಯವಿಲ್ಲದೆ ಕಾಡು ಪ್ರಾಣಿಗಳ ಮಧ್ಯೆ ಚಾತುರ್ಮಾಸ ಕೈಗೊಂಡಿದ್ದ ಮುನಿಶ್ರೀಗಳ ದರ್ಶನಕ್ಕೆ ಆಗಿನ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌ ಸೇರಿದಂತೆ ದೇಶದ ಅನೇಕ ರಾಜಕೀಯ ನಾಯಕರು ಬಂದಿದ್ದರು. ದೆಹಲಿ, ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ, ಮಹಾರಾಷ್ಟ್ರದ ಹೈಕೋರ್ಟ್‌ ನ್ಯಾಯಮೂರ್ತಿಗಳು ಮುನಿಶ್ರೀ ಬರೆದ “ಜಸ್ಟಿಸ್‌ ಆ್ಯಂಡ್‌ ಮೊರ್ಯಾಲಿಟಿ’ (ನ್ಯಾಯ ಮತ್ತು ನೈತಿಕತೆ) ಸಾಹಿತ್ಯವನ್ನು ಓದಿ ಆಶ್ಚರ್ಯರಾಗಿದ್ದರು.

ಪೂರ್ವಾಶ್ರಮ
ಮುನಿಶ್ರೀ ಚಿನ್ಮಯಸಾಗರರ ಪೂರ್ವಾಶ್ರಮದ ಹೆಸರು ಧರಣೇಂದ್ರಕುಮಾರ ಜೈನ್‌. ತಂದೆ ಅಣ್ಣಪ್ಪಾ ಮೋಳೆ ಜೈನ್‌. ತಾಯಿ ಹೀರಾದೇವಿ ಮೋಳೆ ಜೈನ್‌. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜುಗೂಳ ಗ್ರಾಮದಲ್ಲಿ 1961ರ ಆಗಸ್ಟ್‌ 6ರಂದು ಜನನ. ಹೈಯರ್‌ ಸೆಕೆಂಡರಿ ಶಿಕ್ಷಣದ ಬಳಿಕ ಮಧ್ಯಪ್ರದೇಶದ ಮುರೈನಾದ ಶ್ರೀ ಗೋಪಾಳದಾಸ ಬರೈ ಜೈನ್‌ ಸಂಸ್ಕೃತಿ ಸಿದ್ಧಾಂತ ಮಹಾವಿದ್ಯಾಲಯದಲ್ಲಿ ಧಾರ್ಮಿಕ ಶಿಕ್ಷಣ ಪಡೆದಿದ್ದರು. 1982ರಲ್ಲಿ ಬ್ರಹ್ಮಚರ್ಯ ವ್ರತ ಸ್ವೀಕರಿಸಿದ್ದರು. 1987ರ ಏಪ್ರಿಲ್‌ 9ರಂದು ಮಧ್ಯಪ್ರದೇಶದ ಅತಿಶಯಕ್ಷೇತ್ರ ಥುಬಾನಜೀಯಲ್ಲಿ ಸಂಘ ಪ್ರವೇಶವಾಯಿತು. ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜರು ಇವರ ದೀಕ್ಷಾ ಗುರು.

Advertisement

ಅರಣ್ಯ ತಪಸ್ಸಿನ ಅನುಭವ ಯಾವ ಭಯವಿಲ್ಲದೇ ಕ್ರೂರ ಪ್ರಾಣಿಗಳ ಮಧ್ಯದಲ್ಲಿಯೇ ತಪಸ್ಸು ಮಾಡಿದ ಸಂತ. ಕಾಂಕ್ರಿಟ್‌ ಕಾಡಿನಲ್ಲಿರುವ ಈ ಮಾನವ ಪ್ರಾಣಿಗಳಿಂದ ಭಯವಿದೆ ಎಂದು ಅವರು ಹೇಳುತ್ತಿದ್ದರು. ಪ್ರಾಣಿಗಳು ಕ್ರೂರಿಯಾದರೂ ಒಮ್ಮೆ ವಿಶ್ವಾಸ ಬಂದ ನಂತರ ಎಂದೂ ಯಾರಿಗೂ ತೊಂದರೆ ಮಾಡುವುದಿಲ್ಲ. ಆದರೆ ಮನುಷ್ಯ ಮಾತ್ರ ವಿಶ್ವಾಸ ಘಾತಿ ಎನ್ನುತ್ತಿದ್ದರು. ಮನುಷ್ಯ ತುಂಬಾ ಸ್ವಾರ್ಥಿ, ತನ್ನ ರಕ್ಷಣೆಯನ್ನು ಮಾತ್ರ ಬಯಸುತ್ತಾನೆ. ಎಲ್ಲಿಯವರೆಗೆ ಯುವಕರು ದುರ್ವ್ಯಸನಗಳನ್ನು ಸಂಪೂರ್ಣವಾಗಿ ತ್ಯಜಿಸುವುದಿಲ್ಲವೋ ಅಲ್ಲಿಯವರೆಗೆ ಅದರ ನಿರ್ಮೂಲನೆ ಅಸಾಧ್ಯ. ಜನರಲ್ಲಿ ಜಾಗೃತಿ ಮೂಡಿಸಬೇಕು. ಇಂದಿನ ಯುವ ಪೀಳಿಗೆ ಮೇಲೆ ದೇಶ ರಕ್ಷಣೆಯ ದೊಡ್ಡ ಜವಾಬ್ದಾರಿ ಇದೆ. ಅದನ್ನು ನಮ್ಮ ಯುವಕರು ಅರ್ಥ ಮಾಡಿಕೊಳ್ಳಬೇಕು. ಇದರಲ್ಲಿ ಸಮಾಜದ ಜವಾಬ್ದಾರಿಯೂ ಇದೆ ಎನ್ನುತ್ತಿದ್ದರು ಮುನಿಶ್ರೀಗಳು.

Advertisement

Udayavani is now on Telegram. Click here to join our channel and stay updated with the latest news.

Next