Advertisement

ಕಡಿಯಾಳಿ: ಮನೆಮನೆ ಭಜನೆ-ಗ್ರಾಮ ಭಜನೆ ಉದ್ಘಾಟನೆ

12:14 PM Apr 04, 2022 | Team Udayavani |

ಉಡುಪಿ: ದೇವಸ್ಥಾನವೊಂದು ಸಮಗ್ರವಾಗಿ ಜೀರ್ಣೋದ್ಧಾರಗೊಳ್ಳುವಾಗ ಜಾತಿಮತ ಭೇದವಿಲ್ಲದೆ ಆ ಗ್ರಾಮದ ಎಲ್ಲ ಭಕ್ತರ ಮನೆಗಳಲ್ಲಿ ಭಜನೆ ಮಾಡುವುದು ವಿಶಿಷ್ಟ ಕಲ್ಪನೆಯ ಕ್ರಾಂತಿಯಾಗಿದೆ. ನಾವು ಬೇರೆ ಬೇರೆ ರೀತಿಯ ಭಜನೆಗಳನ್ನು ಕಂಡಿದ್ದೇವೆ. ಇದು ಮಾತ್ರ ವಿಶಿಷ್ಟವಾ ದುದು. ಇದರಿಂದ ದೇವಸ್ಥಾನದ ಜತೆ ಮನೆಗಳಲ್ಲಿಯೂ ಸಾನ್ನಿಧ್ಯ ವೃದ್ಧಿಯಾಗುತ್ತದೆ ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರು ಹೇಳಿದರು.

Advertisement

ಸಮಗ್ರ ಜೀರ್ಣೋದ್ಧಾರಗೊಳ್ಳುತ್ತಿ ರುವ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ‘ಮನೆಮನೆ ಭಜನೆ -ಗ್ರಾಮ ಭಜನೆ’ಯನ್ನು ಶನಿವಾರ ಶ್ರೀಪಾದರು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಬ್ರಹ್ಮಕಲಶೋತ್ಸವ ಪ್ರಚಾರದ ಸ್ಟಿಕ್ಕರ್‌ ಬಿಡುಗಡೆಗೊಳಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು, ಈ ವಿನೂತನ ಕಲ್ಪನೆಯನ್ನು ಬೇರೆ ದೇವಸ್ಥಾನಗಳಲ್ಲಿಯೂ ಅಳವಡಿಸಿಕೊಳ್ಳಬಹುದು. ದೇವಸ್ಥಾನದಲ್ಲಿ ಹಬ್ಬದ ವಾತಾವರಣವಿರುವಂತೆ ಭಕ್ತರ ಮನೆಗಳಲ್ಲಿಯೂ ಹಬ್ಬದ ವಾತಾವರಣ ಮೂಡಲು ಮನೆ ಮನೆ ಭಜನೆ ಸಹಕಾರಿಯಾಗುತ್ತದೆ ಎಂದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಾಗೇಶ್‌ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಸದಸ್ಯರಾದ ರಾಕೇಶ್‌ ಜೋಗಿ ಸ್ವಾಗತಿಸಿ ಸಂದೀಪ್‌ ಸನಿಲ್‌ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿದರು. ಶಾಸಕ ಕೆ.ರಘುಪತಿ ಭಟ್‌, ವ್ಯವಸ್ಥಾಪನ ಮಂಡಳಿ ಸದಸ್ಯ ಕೆ.ನಾಗರಾಜ ಶೆಟ್ಟಿ, ಗ್ರಾಮ ಭಜನೆ ಸಂಚಾಲಕ ಜೀವರತ್ನ ದೇವಾಡಿಗ, ಅರ್ಚಕ ರಾಧಾಕೃಷ್ಣ ಉಪಾಧ್ಯಾಯ, ಪವಿತ್ರ ಪಾಣಿ ಪ್ರೊ| ಕುಂಜಿತ್ತಾಯ ಶ್ರೀನಿವಾಸ ಉಪಾಧ್ಯಾಯ ಉಪಸ್ಥಿತರಿದ್ದರು.

‌ಸ್ವರ್ಣ ಕಲಶಕ್ಕೆ ಚಿನ್ನ ಸಮರ್ಪಣೆ

Advertisement

ಅರ್ಚಕ ದುರ್ಗಾಪ್ರಸಾದ್‌ ಉಪಾ ಧ್ಯಾಯ ಮತ್ತು ಶಾಂತಿ ಸುಧೀಂದ್ರ ತುಮಕೂರು ಅವರು ಸುಬ್ರಹ್ಮಣ್ಯ ದೇವರ ಗುಡಿಗೆ ಸ್ವರ್ಣಕಲಶದ ಬಾಬ್ತು 60 ಗ್ರಾಂ ಚಿನ್ನವನ್ನು ಸಮರ್ಪಿಸಿದರು.

ನಿತ್ಯ 60 ಮನೆಗಳಲ್ಲಿ ಭಜನೆ

ಮೊದಲ ದಿನ ಸುಮಾರು 65 ಮನೆಗಳಲ್ಲಿ ಭಜನೆ ನಡೆಯಿತು. ಪ್ರತೀ ಭಜನೆ ತಂಡದಲ್ಲಿ ತಲಾ 30 ರಿಂದ 40ರ ತನಕ ಮಹಿಳೆಯರು, ಮಕ್ಕಳು, ಯುವಕರು, ಹಿರಿಯರು ವಿಶೇಷ ಆಸಕ್ತಿಯಿಂದ ಪಾಲ್ಗೊಂಡರು. ಇಂತಹ ಐದು ತಂಡ ನಿತ್ಯ 60 ಮನೆಗಳನ್ನು ಭಜನೆ ಮೂಲಕ ಸಂಪರ್ಕಿಸಲಿದೆ. ಒಂದು ತಿಂಗಳ ಕಾಲ ಇದು ನಡೆಯಲಿದೆ. ಪ್ರತಿಯೊಂದು ಮನೆಯಲ್ಲಿ ದೀಪ ಹಚ್ಚಿ, ರಂಗವಲ್ಲಿ ಬಿಡಿಸಿ ಊದುಬತ್ತಿ ಹಚ್ಚಿ ಹೃದಯಾಂತರಾಳದಿಂದ ಸ್ವಾಗತಿಸಲಾಯಿತು. ಕೆಲವು ಮನೆಯಲ್ಲಿ ಹಣ್ಣು-ಹಂಪಲುಗಳೊಂದಿಗೆ ಪಾನಕದ ವ್ಯವಸ್ಥೆ ಮಾಡಿದ್ದರು. ಭಜನೆ ತಂಡದವರು ಮನೆಮನೆಗೆ ಶ್ರೀದೇವರ ಕುಂಕುಮ ಪ್ರಸಾದ ಪಂಚಕಜ್ಜಾಯ ಕಟ್ಟು, ಭಜನ ಪುಸ್ತಕವನ್ನು ಮತ್ತು ಬ್ರಹ್ಮಕಲಶೋತ್ಸವದ ಸ್ಟಿಕ್ಕರ್‌ ನೀಡುತ್ತಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಂಡದ ಮುಖ್ಯಸ್ಥರಾದ ಜೀವರತ್ನ ದೇವಾಡಿಗ, ಗೀತಾ ನಾಯಕ್‌, ಸುಮಾ ಉದಯ, ಅಶ್ವಿ‌ನಿ ಪೈ, ಶಕುಂತಳಾ ಶೆಟ್ಟಿಯವರಿಗೆ ಪ್ರಸಾದದ ಪರಿಕರಗಳನ್ನು ಹಸ್ತಾಂತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next