Advertisement

ಕತ್ತಲು ಎದುರಿಸುವ ಸಾತ್ವಿಕ ಪ್ರತಿಭಟನೆ

12:19 PM Aug 10, 2018 | Team Udayavani |

ಉಡುಪಿ: ಗೌರಿ ಲಂಕೇಶ್‌, ಎಂ.ಎಂ.ಕಲಬುರಗಿ ಅವರನ್ನು ಕಳೆದು ಕೊಂಡದ್ದು ದೊಡ್ಡ ಆತಂಕಕಾರಿ ವಿದ್ಯಮಾನ. ಇದನ್ನು ಎದುರಿಸಲು ಬಂಡಾಯದೊಳಗಿನ ಸಂತತನ ಬೇಕು. ಕೇಡಿನ ಪ್ರತೀಕವಾದ ಈ ಕತ್ತಲಿನ ವಿರುದ್ಧ ಸಾತ್ವಿಕ ಪ್ರತಿಭಟನೆ ನಡೆಸಬೇಕಾಗಿದೆ ಎಂದು ಕವಿ, ಉಪನ್ಯಾಸಕ ಡಾ| ಕೆ.ಪಿ.ನಟರಾಜ್‌ ಹೇಳಿದರು.

Advertisement

ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಗುರುವಾರ ಮಾಹೆಯ ಗೋವಿಂದ ಪೈ ಸಂಶೋಧನ ಕೇಂದ್ರದಿಂದ ಕೊಡಮಾಡಿದ ನಟರಾಜರ ‘ನಿತ್ಯವೂ ನಿನ್ನೊಡನೆ’ ಕವನ ಸಂಕಲಕ್ಕಾಗಿ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ಸಜೀವ ದೋಷ, ನಿರ್ಜೀವ ನಿರ್ದೋಷ
ಯಾವತ್ತೂ ಸಜೀವದಲ್ಲಿ ದೋಷ ಇರುತ್ತದೆ, ನಿರ್ಜೀವತೆಯಲ್ಲಿ ಮಾತ್ರ ಪರಿಪೂರ್ಣ ಇರುತ್ತದೆ. ನನ್ನದೇನಿದ್ದರೂ ಪರಿಪೂರ್ಣದತ್ತ ಸಾಗುವ ಪ್ರಯತ್ನ ಮಾತ್ರ. ನನ್ನ ಅಸಮಾಧಾನವನ್ನು ಕಡಿಮೆ ಮಾಡುವ ವಿಧಾನವಷ್ಟೆ ಎಂದು ನಟರಾಜ್‌ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಕೃತಿ ಚಿಂತಕಡಾ|ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು, ಕಡೆಂಗೋಡ್ಲು ಶಂಕರ ಭಟ್ಟರು ಪ್ರಾಧ್ಯಾಪಕ, ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ, ಕೃಷಿಕ ಹೀಗೆ ನಾನಾ ಮುಖಗಳಲ್ಲಿ ಯಶಸ್ಸು ಗಳಿಸಿದರು. 1964ರಲ್ಲಿ ಅವರು ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕಿತ್ತು. ರಾಜಕೀಯ ಕಾರಣಗಳಿಂದ ಆಗಲಿಲ್ಲ. 1965ರ ಕಾರವಾರದ ಸಮ್ಮೇಳನಕ್ಕೆ ಸರ್ವಾನುಮತದ ಆಯ್ಕೆ ನಡೆಯಿತು. ಆದರೆ ಕಡೆಂಗೋಡ್ಲು ಅವರು ಒಲ್ಲೆ ಎಂದರು. ಆಗ ಕಸಾಪ ಅಧ್ಯಕ್ಷರಾಗಿದ್ದ ಪ್ರೊ|ಜಿ. ವೆಂಕಟಸುಬ್ಬಯ್ಯ ಅವರು ಕಡೆಂಗೋಡ್ಲು ಅವರ ಮನೆಗೆ ಬಂದು ಊಟಕ್ಕೆ ಕುಳಿತಾಗ ಸಮ್ಮೇಳನಾಧ್ಯಕ್ಷತೆಗೆ ಒಪ್ಪುವುದಾದರೆ ಮಾತ್ರ ಊಟ ಮಾಡುತ್ತೇನೆಂದು ಷರತ್ತು ಹಾಕಿ ಕಡೆಂಗೋಡ್ಲು ಅವರನ್ನು ಒಪ್ಪಿಸಿದರು ಎಂಬುದನ್ನು ನೆನಪಿಸಿಕೊಂಡರು.

ಹನಿಮೂನ್‌ ಮರುದಿನ ವಿಚ್ಛೇದನ
ನನಗೆ ಪರಿಚಯವಿರುವವರಲ್ಲಿಯೇ ಹನಿಮೂನ್‌ ಮುಗಿಸಿ ಹಿಂದಿರುಗುವಾಗಲೇ ವಿಚ್ಛೇದನಕ್ಕೆ ಮುಂದಾಗಿದ್ದನ್ನು ನೋಡಿದ್ದೇನೆ. ಉನ್ನತ ವಿದ್ಯಾಭ್ಯಾಸ ಕೊಡಿಸಿದ ಪರಿಣಾಮ ಅಮೆರಿಕದಲ್ಲಿ ದೊಡ್ಡ ಉದ್ಯೋಗ ಗಳಿಸಿದ ಮಗ, ತಂದೆಯನ್ನು ವೃದ್ಧಾಶ್ರಮಕ್ಕೆ ಹಾಕುವುದನ್ನೂ ಕಂಡಿದ್ದೇನೆ. ಜೀವನಕ್ಕಾಗಿ ನೀವು ಏನನ್ನೇ ಓದಿ ಮಾನವರಾಗಿ ಬದುಕಲು ಸಾಹಿತ್ಯದ ಓದು ಅಗತ್ಯ. ಮೊದಲು ನೀವು ಮಾನವರಾಗಬೇಕಾಗಿದೆ ಎಂದು ಏರ್ಯ ಲಕ್ಷ್ಮೀನಾರಾಯಣ ಆಳ್ವ ಕರೆ ನೀಡಿದರು.

Advertisement

ವಿಮರ್ಶಕ ಪ್ರೊ| ಮುರಳೀಧರ ಉಪಾಧ್ಯ ಹಿರಿಯಡಕ ಕೃತಿ ಕುರಿತು ಮಾತನಾಡಿದರು. ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಆಡಳಿತಾಧಿಕಾರಿ ಡಾ|ಎಚ್‌. ಶಾಂತಾರಾಮ್‌ ಶುಭ ಕೋರಿದರು. ಸಂಶೋಧನ ಕೇಂದ್ರದ ಸಂಯೋಜನಾಧಿಕಾರಿ ವರದೇಶ ಹಿರೇಗಂಗೆ ಸ್ವಾಗತಿಸಿ ಸುಶ್ಮಿತಾ ಎ. ವಂದಿಸಿದರು. 

ಸಾಹಿತ್ಯ ಚೈತನ್ಯ ತುಂಬುತ್ತದೆ
ಹಿಂದಿನಿಂದಲೂ ನನಗೆ ಕವಿ ಆಗಬೇಕೆಂಬ ಹಂಬಲವಿತ್ತು. ವ್ಯಕ್ತಿಗೆ ಚೈತನ್ಯವನ್ನು ಸಾಹಿತ್ಯ ತುಂಬುತ್ತದೆ. ನನ್ನದು ಶುದ್ಧ ಸಾಹಿತ್ಯ ಕೃತಿಯಲ್ಲ . ಮನುಷ್ಯ ಏಕಾಂತದಿಂದ ಬಿಡಿಸಿಕೊಂಡು ಹೊರಬಂದು ವಿಶ್ವದ ಶಕ್ತಿ ಜತೆಗೆ ಗುರುತಿಸಿಕೊಳ್ಳುವುದು ಸವಾಲು . 
 - ಡಾ| ಕೆ.ಪಿ.ನಟರಾಜ್‌
 ಉಪನ್ಯಾಸಕ

Advertisement

Udayavani is now on Telegram. Click here to join our channel and stay updated with the latest news.

Next