ಕಡಬ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯ ರ್ಥಿಯ ಸೋಲಿನ ಪರಾಮರ್ಶೆ ಸಭೆಯಲ್ಲಿ ಎರಡು ಬಣಗಳ ಮಧ್ಯೆ ಅಸಮಾಧಾನ ಮತ್ತೆ ಸ್ಫೋಟ ಗೊಂಡು ಮಾರಾಮಾರಿ ನಡೆದ ಘಟನೆ ಶುಕ್ರವಾರ ಸಂಭವಿಸಿದೆ.
ಕಡಬ ಅಂಬೇಡ್ಕರ್ ಭವನದಲ್ಲಿ ನಡೆದ ಪರಾಮರ್ಶೆ ಸಭೆಯು ಕಾಂಗ್ರೆಸ್ ಮುಖಂಡರಾದ ಜಿ. ಕೃಷ್ಣಪ್ಪ ಹಾಗೂ ನಂದಕುಮಾರ್ ಬಣದ ಕಾರ್ಯಕರ್ತರ ವಾಕ್ಸಮರ ಕೈ ಕೈ ಮಿಲಾಯಿಸಿಕೊಳ್ಳುವ ಮೂಲಕ ಬಹಿರಂಗಗೊಂಡಿತು. ರಾಜ್ಯದಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲವು ಸಾಧಿಸಿದರೂ ಸುಳ್ಯ ಕ್ಷೇತ್ರ ದಲ್ಲಿನ ಹೀನಾಯ ಸೋಲನ್ನು ಅರಗಿಸಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಒದ್ದಾಡುತ್ತಿರುವಾಗ ಎರಡು ಬಣಗಳ ಮಧ್ಯೆ ಉಂಟಾದ ಬಹಿರಂಗ ಗುದ್ದಾಟ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಸಭೆಗೆ ನಂದಕುಮಾರ್ ಬಣದ ಉಚ್ಚಾಟಿತ ಮುಖಂಡರು ಆಗಮಿಸುತ್ತಿದ್ದಂತೆಯೇ ಕೃಷ್ಣಪ್ಪ ಬಣದ ಅಕ್ರೋಶದ ಕಟ್ಟೆ ಒಡೆಯಿತು.
ಸ್ವತಃ ಕೃಷ್ಣಪ್ಪ ಅವರೇ ಉಚ್ಚಾಟಿತ ಮುಖಂಡರಿಗೆ ನೀವು ಈ ಸಭೆಗೆ ಯಾಕೆ ಬಂದಿದ್ದೀರಿ, ನಿಮಗೆ ಮಾನ ಮರ್ಯಾದೆ ಇಲ್ಲವೇ ಎಂದು ಛೇಡಿಸಿದ್ದಾರೆ ಎನ್ನಲಾಗಿದೆ. ಬಳಿಕ ಮುಖಂಡರೋರ್ವರು ಸಭೆಯಲ್ಲಿ ಪಕ್ಷದಿಂದ ಉಚ್ಚಾಟಿತರು ಭಾಗವಹಿಸಲು ಅವಕಾಶವಿದೆಯೇ ಎಂದು ಪ್ರಶ್ನಿಸಿದರು. ಅಷ್ಟೇ ಸಾಕಾಯಿತು ಮಾತಿನ ಚಕಮಕಿ ಪರಸ್ಪರ ಹಲ್ಲೆ, ತಳ್ಳಾಟ ನಡೆಯುವ ತನಕ ಮುಟ್ಟಿತು. ಕೃಷ್ಣಪ್ಪ ಬಣದ ಕೆಲವು ಮಂದಿ ಮುಖಂಡರು ನಂದಕುಮಾರ್ ಬಣದ ಮಹಿಳಾ ಮುಖಂಡರೋರ್ವರು ಸೇರಿದಂತೆ ನಾಲ್ವರ ಮೇಲೆ ಹಲ್ಲೆ ನಡೆಸಿದ ಆರೋಪ ವ್ಯಕ್ತವಾಗಿದೆ. ಈ ಮಧ್ಯೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.