Advertisement

ಕಡಬ ಸಮುದಾಯ ಆಸ್ಪತ್ರೆ ಸಿಬ್ಬಂದಿಯ ಎಡವಟ್ಟು! ಗಾಯದೊಳಗೆ 14 ಕಲ್ಲುಗಳು!

06:50 PM May 05, 2022 | Team Udayavani |

ಕಡಬ: ಕಡಬ ಸಮುದಾಯ ಆಸ್ಪತ್ರೆಯಲ್ಲಿ, ಚಿಕಿತ್ಸೆಯಲ್ಲಿ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿ, ಬೈಕ್‌ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯ ಗಾಯದೊಳಗೆ ಬರೋಬ್ಬರಿ 14 ಕಲ್ಲುಗಳನ್ನು ಬಿಟ್ಟು, ಶುಚಿಗೊಳಿಸದೆ ಹಾಗೆಯೇ  ಹೊಲಿಗೆ ಹಾಕಲಾಗಿದೆ.

Advertisement

ಚಿಕಿತ್ಸೆಯ ನಿರ್ಲಕ್ಷ್ಯದ  ಪರಿಣಾಮ ಗಾಯ ಉಲ್ಬಣಗೊಂಡು ಗಾಯಾಳು ಕಂಗಾಲಾಗಿದ್ದು, ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯ ಮೂಲಕ ಗಾಯದೊಳಗಿದ್ದ ಕಲ್ಲುಗಳನ್ನು ಹೊರತೆಗೆಯಲಾಗಿದೆ.

ಘಟನೆಯ ವಿವರ

ಕೋಡಿಂಬಾಳ ಗ್ರಾಮದ ಕಲ್ಪುರೆ ನಿವಾಸಿ, ರೈಲ್ವೇ ಉದ್ಯೋಗಿ ಪುರುಷೋತ್ತಮ ಎಂಬವರು ಏ.25ರಂದು ರಾತ್ರಿ ತನ್ನ ಪತ್ನಿಯೊಂದಿಗೆ ಸಂಬಂಧಿಕರ ಮನೆಗೆಂದು ಹೊರಟವರು ಉಂಡಿಲ ಎಂಬಲ್ಲಿ ಸ್ಕೂಟಿ ಸ್ಕಿಡ್ ಆಗಿ ಬಿದ್ದು, ಅವರ ಮೊಣ ಕಾಲಿಗೆ ಗಾಯವಾಗಿತ್ತು. ಕೂಡಲೇ ಪುರುಷೋತ್ತಮ ಹಾಗೂ ಅವರ ಪತ್ನಿಯನ್ನು ಸ್ಥಳೀಯರು ಕಡಬ ಸಮುದಾಯ ಆಸ್ಪತ್ರೆಗೆ ಕರೆ ತಂದಿದ್ದರು. ಈ ವೇಳೆ ಆಸ್ಪತ್ರೆಯ ವೈದ್ಯರು ಪರಿಶೀಲಿಸಿ ಗಾಯಕ್ಕೆ ಸ್ಟಿಚ್ ಹಾಕುವಂತೆ ಸೂಚಿಸಿದ್ದರು. ಬಳಿಕ   ದಾದಿಯರು ಹಾಗೂ ಸಿಬ್ಬಂದಿಗಳು ಗಾಯಕ್ಕೆ ಸ್ಟಿಚ್ ಹಾಕಿದ್ದರು.

ಇದನ್ನೂ ಓದಿ:ಬೈಕ್ ನಿಂದ ಬಿದ್ದು ಗಾಯಗೊಂಡ ಯುವಕನ ರಕ್ಷಣೆಗೆ ಮುಂದಾದ ಸಚಿವ ಸುನಿಲ್ ಕುಮಾರ್

Advertisement

ಗಾಯ ಉಲ್ಬಣ

ಆದಾದ ವಾರದ ಬಳಿಕವೂ ಗಾಯ ಗುಣವಾಗದೆ ಉಲ್ಬಣಗೊಂಡಿತ್ತು. ಆ ಬಗ್ಗೆ ಪುರುಷೋತ್ತಮ ಅವರು ಮೇ.4ರಂದು ಕಡಬದ ನಾಡೋಳಿ ಡಯಾಗ್ನಸ್ಟಿಕ್ ಸೆಂಟರ್ ನಲ್ಲಿ ಗಾಯದ ಎಕ್ಸರೆ ತೆಗೆಸಿ ಅಲ್ಲಿಯೇ ಕ್ಲಿನಿಕ್ ನಲ್ಲಿದ್ದ ತಜ್ಞ ವೈದ್ಯರಿಗೆ ತೋರಿಸಿದ್ದರು. ವೈದ್ಯರು ಎಕ್ಸರೇ ಪರಿಶೀಲಿಸಿ ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದರು. ಆ ಹಿನ್ನಲೆಯಲ್ಲಿ ಪುರುಷೋತ್ತಮ ಅವರು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಬರೋಬ್ಬರಿ 14 ಕಲ್ಲು!

ಆಸ್ಪತ್ರೆಯಲ್ಲಿ ಮೇ.4ರಂದು ರಾತ್ರಿ ಸರ್ಜರಿ ನಡೆಸಲಾಗಿದ್ದು ಈ ವೇಳೆ ವೈದ್ಯರಿಗೆ ಬರೋಬ್ಬರಿ 14 ಕಲ್ಲುಗಳು ದೊರೆತಿದೆ. ಗಾಯವಾದ ಆ ದಿನವೇ ಸ್ಟಿಚ್ ಮಾಡುವಾಗ ಸರಿಯಾಗಿ ಶುಚಿಗೊಳಿಸಿ ಸ್ಟಿಚ್ ಮಾಡುತ್ತಿದ್ದರೆ ಗಾಯ ಉಲ್ಬಣಗೊಳ್ಳುವ ಪ್ರಮೇಯ ಉಂಟಾಗುತ್ತಿರಲಿಲ್ಲ ಎಂದು ಅಲ್ಲಿನ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಕಡಬ ಆಸ್ಪತ್ರೆಯಲ್ಲಿನ ನಿರ್ಲಕ್ಷಕ್ಕೆ ಕೊನೆ ಇಲ್ಲವೆ?

ಕಡಬ ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರು, ದಾದಿಯರು, ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಕೊನೆ ಇಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದುರಾಗಿದೆ. ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next