Advertisement

ಜೂನ್‌ 9ಕ್ಕೆ “ರಾತ್ರಿ ಆಟ’

06:00 AM Jun 09, 2018 | |

“ಕಲಾ ಪ್ರೇಕ್ಷಕರಿಗಾಗಿ’ ಎಂಬ ಘೋಷವಾಕ್ಯದೊಂದಿಗೆ ಸಮಾನ ಮನಸ್ಕ ಯಕ್ಷಗಾನ ಆಸಕ್ತರ ಕೂಡುವಿಕೆಯಿಂದ ಹುಟ್ಟಿಕೊಂಡ ಉಡುಪಿಯ ತೆಂಕುತಿಟ್ಟು ವೇದಿಕೆ ಈ ಬಾರಿ ಐದನೇ ವರ್ಷದ “ರಾತ್ರಿ ಆಟ’ಕ್ಕೆ ಸಜ್ಜಾಗುತ್ತಿದೆ. ಈ ಸಂಘಟನೆಯ ಮೂಲ ಉದ್ದೇಶ ಒಂದೇ – ವರ್ಷದಲ್ಲಿ ಒಂದು ಅಥವಾ ಎರಡು ಸದಭಿರುಚಿಯ ಯಕ್ಷಗಾನ ಪ್ರದರ್ಶನಗಳನ್ನು ಇಡೀ ರಾತ್ರಿ ಕಾಲ ಆಯೋಜಿಸಿ ಆಸಕ್ತ ಕಲಾಭಿಮಾನಿಗಳಿಗೆ ಯಕ್ಷಾನಂದವನ್ನು ಉಣಬಡಿಸುವುದು. 

Advertisement

ಕಳೆದ ನಾಲ್ಕು ವರ್ಷಗಳಿಂದ ಜೂನ್‌ ಆದಿಭಾಗದಲ್ಲಿ ಇಂತಹ ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸಿದ ತೆಂಕುತಿಟ್ಟು ವೇದಿಕೆ ಈಗ ನಾಲ್ಕನೆಯ ವರ್ಷದ ಯಕ್ಷಗಾನ ಪ್ರದರ್ಶನವನ್ನು ಅರ್ಪಿಸಲು ಸಜ್ಜಾಗಿದೆ. ಉಡುಪಿ ಮತ್ತು ಆಸುಪಾಸಿನಲ್ಲಿ “ರಾತ್ರಿ ಆಟ’ ಎಂಬುದಾಗಿಯೇ ಹೆಸರನ್ನು ಗಳಿಸಿಕೊಂಡಿರುವ ಈ ಪ್ರದರ್ಶನ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜೂನ್‌ 9ರಂದು ಸಂಜೆ 7 ಗಂಟೆಗೆ ಆರಂಭವಾಗಿ ಮರುದಿನ ಪ್ರಾತಃ ಕಾಲದ ತನಕ ನಡೆಯಲಿದೆ. 

ಆರಂಭದಲ್ಲಿ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಬಾಲರಿಂದ ಸಾಂಪ್ರದಾಯಿಕ ಪೂರ್ವರಂಗದಲ್ಲಿ ಪರಂಪರೆಯ ಪಾಂಡವರ ಒಡ್ಡೋಲಗ ಪ್ರದರ್ಶನ ಕಾಣಲಿದೆ. ಆ ಬಳಿಕ ಬೆಳಗಿನ ತನಕ “ಅಕ್ಷಯಾಂಬರ- ಬಭುವಾಹನ- ರತಿ ಕಲ್ಯಾಣ’ ಪ್ರಸಂಗಗಳು ವೇದಿಕೆಯೇರಲಿವೆ. ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟರಿಗೆ ಈ ವರ್ಷದ ತೆಂಕು ತಿಟ್ಟು ವೇದಿಕೆ ಪ್ರಶಸ್ತಿ ಪ್ರದಾನದೊಂದಿಗೆ 10,000 ರೂ. ಗೌರವನಿಧಿ ಅರ್ಪಿಸಲಾಗುತ್ತದೆ.

ತೆಂಕುತಿಟ್ಟು ವೇದಿಕೆ ಹುಟ್ಟಿಕೊಂಡದ್ದು ಕುತೂಹಲಕರ ರೀತಿಯಲ್ಲಿ. ಯಕ್ಷಗಾನ ಆಸಕ್ತ ಉದ್ಯಮಿ ಸುಧಾಕರ ಆಚಾರ್ಯರು ಅನೇಕ ವರ್ಷಗಳಿಂದ “ಸ್ವಾತಂತ್ರೊéàತ್ಸವ ತಾಳಮದ್ದಲೆ’ಯನ್ನು ಆಯೋಜಿಸುತ್ತ ಬಂದಿದ್ದಾರೆ. ಇದರ ರಜತ ಮಹೋತ್ಸವದ ಸಂದರ್ಭದಲ್ಲಿ 2014ರ ಆಗಸ್ಟ್‌ 15ರಂದು ಸಮಾನಮನಸ್ಕ ಕಲಾಪೋಷಕರ ಸಹಕಾರದೊಂದಿಗೆ ಉದ್ಭವವಾದದ್ದು ತೆಂಕುತಿಟ್ಟು ವೇದಿಕೆ. ಪೌರಾಣಿಕ ಪ್ರಸಂಗಗಳ ಪೂರ್ಣರಾತ್ರಿಯ ಕಲಾಪ್ರದರ್ಶನವನ್ನು ಏರ್ಪಡಿಸುವುದರ ಜತೆಗೆ ಹಿರಿಯ, ಸಾಧಕ ಯಕ್ಷಗಾನ ಕಲಾವಿದರಿಗೆ ಗೌರವ ನಿಧಿಯ ಅರ್ಪಣೆಯ ಜತೆಗೆ ಪ್ರಶಸ್ತಿ ಪ್ರದಾನವನ್ನೂ ತೆಂಕುತಿಟ್ಟು ವೇದಿಕೆ ನಡೆಸುತ್ತ ಬಂದಿದೆ. ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಅನುಗ್ರಹ, ಶ್ರೀಕೃಷ್ಣ ಮಠದ ಆಶ್ರಯ, ಸುಧಾಕರ ಆಚಾರ್ಯ ಮತ್ತು ಅವರ ಸಮಾನಮನಸ್ಕ ಕಲಾ ಪೋಷಕರ ಸಹಕಾರಗಳಿಂದ ತೆಂಕುತಿಟ್ಟಿನ ಚತುರ ಕಲಾವಿದರ ಕೂಡುವಿಕೆಯಲ್ಲಿ ನಡೆಯುವ ಈ ವಿಶಿಷ್ಟ ಯಕ್ಷಗಾನ ಪ್ರದರ್ಶನ ರಸಿಕರ ಕಣ್ಮನಗಳನ್ನು ಸೆಳೆಯಲಿದೆ.

ಕಲಾಪ್ರಿಯ

Advertisement
Advertisement

Udayavani is now on Telegram. Click here to join our channel and stay updated with the latest news.

Next