Advertisement

ಜೂ.12, ಬೆಳಿಗ್ಗೆ 11.30 ಸಂಪುಟ ವಿಸ್ತರಣೆ ಕಾಲ

01:51 AM Jun 09, 2019 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕಾಂಗ್ರೆಸ್‌-ಜೆಡಿಎಸ್‌ ಅಂತೂ ಇಂತೂ ಜೂ.12 ರಂದು ಸಂಪುಟ ವಿಸ್ತರಣೆಗ ಮಹೂರ್ತ ನಿಗದಿ ಮಾಡಿದೆ. ಇದರ ಬೆನ್ನಲ್ಲೇ ಸಚಿವಾಕಾಂಕ್ಷಿಗಳು ಓವರ್‌ಲೋಡ್‌ ಆಗಿದ್ದಾರೆ. ಪಕ್ಷೇತರರಿಗೆ ಮಣೆ ಹಾಕಿದರೆ ನಾವು ಸುಮ್ಮನಿರಲ್ಲ ಎಂದು ಕಾಂಗ್ರೆಸ್‌ನ ಅತೃಪ್ತ ಶಾಸಕರು ಸಂದೇಶ ರವಾನಿಸಿದ್ದು ತಲೆನೋವಾಗಿದೆ.

Advertisement

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಶನಿವಾರ ರಾಜ್ಯಪಾಲ ವಜೂಭಾಯ್‌ ವಾಲಾ ಅವರನ್ನು ದಿಢೀರ್‌ ಭೇಟಿ ಮಾಡಿ ಸಂಪುಟ ಬುಧವಾರ ಬೆಳಗ್ಗೆ 11.30ಕ್ಕೆ ಸಂಪುಟ ವಿಸ್ತರಣೆಗೆ ಸಮಯ ಪಡೆದುಕೊಂಡಿದ್ದಾರೆ. ವಿಸ್ತರಣೆಗೆ ಮಾತ್ರ ಸೀಮಿತವಾ, ಪುನಾರಚನೆಯೂ ಆಗುತ್ತಾ ಎಂಬುದು ಕುತೂಹಲ ಮೂಡಿಸಿದೆ.

ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳ ಪೈಕಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಕೋಟಾದಡಿ ಪಕ್ಷೇತರ ಶಾಸಕರಾದ ಆರ್‌.ಶಂಕರ್‌ ಹಾಗೂ ನಾಗೇಶ್‌ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಅನಿವಾರ್ಯವಾದರೆ ಇನ್ನೊಂದು ಸ್ಥಾನ ತುಂಬಲಾಗುವುದು ಎಂದು ಹೇಳಲಾಗುತ್ತಿದೆ. ಆದರೆ, ಸ್ಥಾನ ಪಡೆಯುವವರು ಯಾರು ಎಂಬುದು ಇನ್ನೂ ನಿಗೂಢವಾಗಿದೆ.

ಕಾಂಗ್ರೆಸ್‌ ಕೋಟಾದಿಂದ ಆರ್‌.ಶಂಕರ್‌ (ಸಿ.ಎಸ್‌.ಶಿವಳ್ಳಿ ಅವರಿಂದ ತೆರವಾಗಿರುವ ಸ್ಥಾನ), ಜೆಡಿಎಸ್‌ ಕೋಟಾದಿಂದ ನಾಗೇಶ್‌ ( ಬಿಎಸ್‌ಪಿಯ ಎನ್‌.ಮಹೇಶ್‌ ಅವರಿಂದ ತೆರವಾಗಿರುವ ಸ್ಥಾನ) ತುಂಬಲಾಗುವುದು. ಜೆಡಿಎಸ್‌ನ ಇನ್ನೊಂದು ಸ್ಥಾನ ಅಲ್ಪಸಂಖ್ಯಾತರ ಕೋಟಾದಡಿ ಬಿ.ಎಂ.ಫಾರೂಕ್‌ ಅವರಿಗೆ ನೀಡಲಾಗುವುದು ಎಂಬ ಮಾತುಗಳು ಕೇಳಿಬರುತ್ತಿವೆ.

ಆದರೆ, ಇರುವ ಮೂರು ಸ್ಥಾನಕ್ಕೆ ಒಂದು ಡಜನ್‌ ಆಕಾಂಕ್ಷಿಗಳು ಇರುವುದರಿಂದ ಪಕ್ಷೇತರರಿಗೆ ಮಾತ್ರ ಅವಕಾಶ ಕಲ್ಪಿಸಿದರೂ ಉಳಿದ ಅತೃಪ್ತರು ಬಂಡಾಯ ಏಳುವ ಲಕ್ಷಣಗಳು ಕಂಡುಬರುತ್ತಿವೆ.

Advertisement

ಮತ್ತೂಂದು ಮೂಲಗಳ ಪ್ರಕಾರ ಜೆಡಿಎಸ್‌ನ ಎರಡು ಸ್ಥಾನ ಕಾಂಗ್ರೆಸ್‌ಗೆ ಬಿಟ್ಟುಕೊಡಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಪಕ್ಷೇತರ ಶಂಕರ್‌ ಅಥವಾ ನಾಗೇಶ್‌ ಇಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಇನ್ನೊಬ್ಬರಿಗೆ ನಿಗಮ ಮಂಡಳಿ ನೀಡಿ ಸಂಪುಟ ದರ್ಜೆ ನೀಡುವುದು. ಎರಡು ಸಚಿವ ಸ್ಥಾನ ಅತೃಪ್ತರಿಗೆ ನೀಡುವ ಲೆಕ್ಕಾಚಾರವೂ ಇದೆ.

ಅತೃಪ್ತರಲ್ಲಿ ರಾಮಲಿಂಗಾರೆಡ್ಡಿ, ಬಿ.ಸಿ.ಪಾಟೀಲ್, ಬಿ.ನಾಗೇಂದ್ರ , ಭೀಮಾನಾಯಕ್‌, ಡಾ.ಸುಧಾಕರ್‌, ಅಮರೇಗೌಡ ಬಯ್ನಾಪುರ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಇವರಲ್ಲಿ ಯಾರಿಗೆ ಅವಕಾಶ ಸಿಗುತ್ತದೆ ಎಂಬುದು ಕಾದು ನೋಡಬೇಕು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್‌ನ ಎರಡು ಕೋಟಾದ ಸಚಿವ ಸ್ಥಾನ ಇಬ್ಬರು ಪಕ್ಷೇತರರಿಗೆ ನೀಡಿ, ಕಾಂಗ್ರೆಸ್‌ ಕೋಟಾದ ಒಂದು ಸ್ಥಾನ ಬಿ.ಸಿ.ಪಾಟೀಲ್ ಇಲ್ಲವೇ ರಾಮಲಿಂಗಾರೆಡ್ಡಿ ಅವರಿಗೆ ನೀಡೋಣ ಎಂಬ ಪ್ರಸ್ತಾವ ಇಟ್ಟಿದ್ದಾರೆ ಎಂದೂ ಹೇಳಲಾಗಿದೆ.

ವಿರೋಧ: ಜೆಡಿಎಸ್‌ನ ಎರಡೂ ಸ್ಥಾನ ಕಾಂಗ್ರೆಸ್‌ಗೆ ಬಿಟ್ಟುಕೊಡಲು ಜೆಡಿಎಸ್‌ನಲ್ಲಿ ವಿರೋಧ ವ್ಯಕ್ತವಾಗಿದೆ. ಸರ್ಕಾರ ಉಳಿಸಿಕೊಳ್ಳುವುದು ಎರಡೂ ಪಕ್ಷಗಳ ಜವಾಬ್ದಾರಿ. ಇಬ್ಬರು ಪಕ್ಷೇತರರ ಪೈಕಿ ಕಾಂಗ್ರೆಸ್‌-ಜೆಡಿಎಸ್‌ ಒಂದೊಂದು ಸ್ಥಾನ ಕೊಡಲಿ. ಜೆಡಿಎಸ್‌ನ ಮತ್ತೂಂದು ಸ್ಥಾನ ಹೊಸಬರಿಗೆ ನೀಡಬಹುದು ಎಂದು ಜೆಡಿಎಸ್‌ ನಾಯಕರು ವಾದ ಮುಂದಿಟ್ಟಿದ್ದಾರೆ.

ಕಾಂಗ್ರೆಸ್‌ ಕೋಟಾದಡಿ ಶಂಕರ್‌ಗೆ ಸ್ಥಾನ ಕೊಡಲಿ, ಜೆಡಿಎಸ್‌ ಕೋಟಾದಡಿ ನಾಗೇಶ್‌ಗೆ ನೀಡಬಹುದು. ಇನ್ನೊಂದು ಜೆಡಿಎಸ್‌ನ ಸ್ಥಾನ ಬಿ.ಎಂ.ಫಾರೂಕ್‌, ಬಸವರಾಜ ಹೊರಟ್ಟಿ ಅಥವಾ ಎಚ್.ವಿಶ್ವನಾಥ್‌ ಅವರಲ್ಲಿ ಒಬ್ಬರಿಗೆ ನೀಡಿ ಎಂದು ಒತ್ತಾಯ ಕೇಳಿಬರುತ್ತಿದೆ. ದೇವೇಗೌಡರೂ ಈ ಬಗ್ಗೆ ಒಲವು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಚೇಲಾಗಳಿಗೆ ಮಣೆ
ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳು ಹೆಚ್ಚಾಗಿ ಅಸಮಾಧಾನವೂ ಸ್ಫೋಟಗೊಂಡಿದೆ. ಪ್ರಮುಖ ಆಕಾಂಕ್ಷಿ ಬಿ.ಸಿ.ಪಾಟೀಲ್ ಅವರು, ಪಕ್ಷೇತರರಿಗೆ ಮಣೆ ಹಾಕಿ ಪಕ್ಷದ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿರುವುದು ಸರಿಯಲ್ಲ. ಚೇಲಾಗಳಿಗೆ ಚಮಚಾಗಳಿಗೆ ಮಣೆ ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ. ಪಕ್ಷೇತರ ಶಾಸಕರಿಗೆ ಅವಕಾಶ ನೀಡುವ ಬಗ್ಗೆ ಬಹುತೇಕ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಮೂಗಿಗೆ ತುಪ್ಪ?

ಅತೃಪ್ತಿ ಶಮನಗೊಳಿಸುವ ನಿಟ್ಟಿನಲ್ಲಿ ಸಂಪುಟ ವಿಸ್ತರಣೆಗೆ ಮುನ್ನವೇ ‘ರಂಗಪ್ರವೇಶ’ ಮಾಡಿರುವ ನಾಯಕರು ಆರು ತಿಂಗಳು ಸುಮ್ಮನಿರಿ. ಆರು ಸಚಿವರ ಕೈಲಿ ರಾಜೀನಾಮೆ ಕೊಡಿಸಲಾಗುವುದು. ಹಿರಿಯ ಸಚಿವರನ್ನು ಪಕ್ಷ ಸಂಘಟನೆಗೆ ಬಳಕೆ ಮಾಡಲಾಗುವುದು. ಹೀಗಾಗಿ, ಎಲ್ಲರಿಗೂ ಅವಕಾಶ ಸಿಗಲಿದೆ ಎಂಬ ಸಮಜಾಯಿಷಿ ನೀಡುತ್ತಿದ್ದಾರೆ. ಆದರೆ, ಇದನ್ನು ಒಪ್ಪಲು ಅತೃಪ್ತರು ತಯಾರಿಲ್ಲ ಎಂದು ಹೇಳಲಾಗಿದೆ.

ಗೌರವಾನ್ವಿತ ರಾಜ್ಯಪಾಲರನ್ನು ಇಂದು(ಶನಿವಾರ )ಭೇಟಿಯಾಗಿ ಸಚಿವ ಸಂಪುಟ ವಿಸ್ತರಣೆಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದೆ. ಅವರು ಪ್ರಮಾಣ ವಚನ ಬೋಧನೆಗೆ ಬುಧವಾರ ಬೆಳಗ್ಗೆ 11.30ಕ್ಕೆ ಸಮಯ ನಿಗದಿ ಮಾಡಿದ್ದಾರೆ.
-ಎಚ್.ಡಿ.ಕುಮಾರಸ್ವಾಮಿ, ಸಿಎಂ

ಸಚಿವ ಸ್ಥಾನಕ್ಕಾಗಿ ಕಚ್ಚಾಡುತ್ತಿದ್ದಾರೆ. ಮತ್ತೆ ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರಂತೆ. ಕಚ್ಚಾಟದಿಂದ ಸರ್ಕಾರ ಬಿದ್ದರೆ ನಾವೇ ಸರ್ಕಾರ ನಡೆಸುತ್ತೇವೆ. ಅವರಿಗೆ ಆಡಳಿತ ನಡೆಸಲು ಆಗುತ್ತಿಲ್ಲ. 
-ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next