Advertisement

ಪತ್ರಕರ್ತ ಅರ್ನಾಬ್‌ ಮೇಲೆ ದುಷ್ಕರ್ಮಿಗಳ ದಾಳಿ

01:37 AM Apr 24, 2020 | Hari Prasad |

ಮುಂಬಯಿ: ಪತ್ರಕರ್ತ ಅರ್ನಾಬ್‌ ಗೋಸ್ವಾಮಿ ಮೇಲೆ ಮುಂಬಯಿ ನಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ದಾಳಿ ನಡೆಸಿದ ಘಟನೆ ನಡೆದಿದೆ.

Advertisement

ಗುರುವಾರ ಬೆಳಗ್ಗೆ ತಮ್ಮ ಪತ್ನಿ ಜತೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭ ದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಆಗಂತುಕರು ಕಾರನ್ನು ಅಡ್ಡಗಟ್ಟಿದ್ದಾರೆ, ಕಾರಿನ ಗಾಜನ್ನು ಒಡೆದು ದಾಳಿ ನಡೆಸಲು ಪ್ರಯತ್ನಿಸಿದ್ದಾರೆ, ಮುಂಬಯಿನ ಗಣಪತ್ರಾವ್‌ ಕದಮ್‌ ರಸ್ತೆಯಲ್ಲಿ ನಡೆದ ದಾಳಿಯ ವೇಳೆ ಅರ್ನಾಬ್‌ ಅಂಗ ರಕ್ಷಕರು ಮತ್ತೂಂದು ಕಾರಿನಲ್ಲಿ ಹಿಂದಿ­ನಿಂದ ಬರುತ್ತಿದ್ದರು.

ಆಗಂತುಕರು ಕಪ್ಪು ಶಾಯಿಯ ಬಾಟಲಿಯೊಂದಿಗೆ ಬಂದಿದ್ದು ಅದನ್ನು ಕಾರಿನತ್ತ ಎಸೆದಿದ್ದಾರೆ. ತತ್‌ಕ್ಷಣ ಅವರನ್ನು ಅಂಗ ರಕ್ಷಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆ ಬಳಿಕ ವಿಡಿಯೊ ಮೂಲಕ ಮಾತನಾಡಿರುವ ಅರ್ನಾಬ್‌, ಈ ಕೃತ್ಯವನ್ನು ಎಸಗಿರುವುದು ಯುವ ಕಾಂಗ್ರೆಸ್‌ ಕಾರ್ಯಕರ್ತರು ಎಂದು ಆರೋಪಿಸಿದ್ದರಲ್ಲದೆ, ಸೋನಿಯಾ ಗಾಂಧಿ ಅವರೇ ನೇರ ಹೊಣೆ ಎಂದು ಟೀಕಿಸಿದ್ದಾರೆ.

ಇತ್ತೀಚೆಗೆ ಪಾಲ್ಘರ್‌ ಘಟನೆಗೆ ಸಂಬಂಧ ಪಟ್ಟಂತೆ ಅರ್ನಾಬ್‌ ತಮ್ಮ ಸುದ್ದಿ ಚಾನೆಲ್‌ನಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಟೀಕೆ ಮಾಡಿದ್ದರು. ಇದರಿಂದ ಸಿಟ್ಟಾಗಿ ಕಾಂಗ್ರೆಸ್‌ ಯುವ ಕಾರ್ಯಕರ್ತರು ದಾಳಿ ನಡೆಸಿ­ರ­ಬಹುದು ಎಂದು ಹೇಳಲಾಗಿದೆ. ಈ ಬಗ್ಗೆ ಪೊಲೀಸರು ಇದುವರೆಗೆ ಯಾವುದನ್ನೂ ಖಚಿತಪಡಿಸಿಲ್ಲ.

Advertisement

ದಾಳಿ ಖಂಡಿಸಿದ ನಾಯಕರು: ಅರ್ನಾಬ್‌ ಮೇಲಿನ ದಾಳಿಯನ್ನು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಲವು ಪಕ್ಷಗಳ ನಾಯಕರು ಖಂಡಿಸಿದ್ದಾರೆ.

‘ಆಘಾತಕಾರಿ ಸಂಗತಿ, ಪತ್ರಿಕಾ ಮಾಧ್ಯಮದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾದಂತಾಗಿದೆ’ ಎಂದು ನಡ್ಡಾ ಟ್ವೀಟ್‌ ಮಾಡಿದ್ದಾರೆ. ಆದರೆ ಕಾಂಗ್ರೆಸ್‌ ಮಾತ್ರ ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next