Advertisement

ಬಾಯಿ ತೆರೆದ ಭೂಮಿತಾಯಿ

10:43 PM Jan 09, 2023 | Team Udayavani |

ಉತ್ತರಾಖಂಡ, ಭಾರತ ಅಷ್ಟೇ ಏಕೆ ಜಗತ್ತಿನ ದೇವಭೂಮಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಜ್ಯದಲ್ಲಿ ಈಗ ಪ್ರಾಕೃತಿಕವಾಗಿ ಮತ್ತು ಮಾನವ ನಿರ್ಮಿತವಾಗಿ ಉಂಟಾಗಿರುವ ಸಮಸ್ಯೆ ತಲೆದೋರಿದೆ. ಪವಿತ್ರ ಯಾತ್ರಾ ಸ್ಥಳ ಬದರಿನಾಥದ ಪ್ರವೇಶದ್ವಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜೋಶಿಮಠದಲ್ಲಿ ಕಟ್ಟಡಗಳಲ್ಲಿ ಭಾರಿ ಪ್ರಮಾಣದಲ್ಲಿ ಬಿರುಕುಗಳು ಬಿಟ್ಟಿವೆ. ಭೂಮಿಯ ಒಳಗಿನಿಂದ ನೀರಿನ ಬುಗ್ಗೆಗಳು ಏಳಲಾರಂಭಿಸಿವೆ. ಹೀಗಾಗಿ, ಸ್ಥಳೀಯರಲ್ಲಿ ಮುಂದೆ ಪರಿಸ್ಥಿತಿ ಏನು ಎಂಬ ಆತಂಕ ಕಾಡಲಾರಂಭಿಸಿದೆ. ಈ ಹೊತ್ತಿಗಾಗಲೇ 100 ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳಿಸಲಾಗಿದೆ. ಬಿಕ್ಕಟ್ಟಿಗೆ ಕಾರಣಗಳೇನು, ಅದಕ್ಕೆ ಪರಿಹಾರೋಪಾಯಗಳೇನು ಎಂಬ ಬಗ್ಗೆ ಚರ್ಚೆಗಳು ನಡೆದಿವೆ.

Advertisement

ಜೋಶಿಮಠ ಎಲ್ಲಿದೆ?
ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆ, ಹಿಮಾಲಯ ಪರ್ವತಗಳ ತಪ್ಪಲಿನ ಘರ್ವಾಲ್‌ ಹಿಮಾಲಯ ಪರ್ವತ ಪ್ರದೇಶದಲ್ಲಿ ಈ ಸ್ಥಳ ಇದೆ. ಬದರಿನಾಥ ಮತ್ತು ಹೇಮಕುಂಡ ಸಾಹಿಬ್‌ಗ ತೆರಳುವ ನಿಟ್ಟಿನಲ್ಲಿ ಈ ದಾರಿಯ ಮೂಲಕವೇ ಹೋಗಬೇಕು. ಸಮುದ್ರಮಟ್ಟದಿಂದ ಈ ಸ್ಥಳ 6,150 ಅಡಿ ಎತ್ತರದಲ್ಲಿದೆ. ಯುನೆಸ್ಕೋದ ವಿಶ್ವಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ “ಹೂವುಗಳ ಕಣಿವೆ’ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ. ಧಾರ್ಮಿಕ ಕ್ಷೇತ್ರ, ಪ್ರವಾಸಿ ಸ್ಥಳ, ಚಾರಣಿಗರ ಮೆಚ್ಚಿನ ದಾರಿ ಎಂದೂ ಜೋಶಿಮಠ ಪ್ರಸಿದ್ಧಿ ಪಡೆದಿದೆ.

ಬಿಕ್ಕಟ್ಟು ಎಲ್ಲಿಂದ ಶುರು?
2013 ಜೂನ್‌ ಮತ್ತು 2021 ಫೆಬ್ರವರಿಯಲ್ಲಿ ಉಂಟಾಗಿದ್ದ ಪ್ರವಾಹದ ಬಳಿಕ ಈ ಪ್ರದೇಶದ ಸ್ಥಿತಿ ಬಿಗಡಾಯಿಸುತ್ತಾ ಹೋಯಿತು. ಅದಕ್ಕಿಂತ ಪೂರ್ವದಲ್ಲಿ ನಿಯಮಗಳನ್ನು ಮೀರಿ ನಡೆಯುತ್ತಿದ್ದ ನಿರ್ಮಾಣ ಚಟುವಟಿಕೆಗಳು ಕೂಡ ಕಾರಣ. 2022 ಡಿ.22ರಂದು ಹಿಲಾಂಗ್‌- ಜೋಶಿಮಠ ನಡುವಿನ ಹೆದ್ದಾರಿ ಮಾರ್ವಾಡಿ ಎಂಬ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಇಪ್ಪತ್ತು ವರ್ಷಗಳ ಹಿಂದೆಯೇ ಕಟ್ಟಡಗಳಲ್ಲಿ ಸಣ್ಣದಾಗಿ ಶುರುವಾಗಿದ್ದ ಬಿರುಕು ಈಗ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ.

ಭೌಗೋಳಿಕವಾಗಿ ಹೇಗಿದೆ?
ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಯುಎಸ್‌ಡಿಎಂಎ) ನಡೆಸಿದ ಅಧ್ಯಯನದ ಪ್ರಕಾರ ಈ ಪ್ರದೇಶ ಭೂಕುಸಿತಕ್ಕೆ ತುತ್ತಾಗುವ ಪ್ರದೇಶ. ಜತೆಗೆ ರಿಕ್ಟರ್‌ ಮಾಪಕದಲ್ಲಿ 5ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಭೂಕಂಪಕ್ಕೆ ಒಳಗಾಗುವ ಪ್ರದೇಶ. ಭೂಕಂಪನದ ವ್ಯಾಪ್ತಿಯಲ್ಲಿ ಹೇಳುವುದಿದ್ದರೆ ಅದು ವಲಯ ಐದರಲ್ಲಿ ಬರುತ್ತದೆ.

ವಿಪತ್ತು ನಿರ್ವಹಣಾ ಕಾರ್ಯದರ್ಶಿ ಶಿಫಾರಸುಗಳೇನು?
ಉತ್ತರಾಖಂಡ ಸರ್ಕಾರದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯದರ್ಷಿ ರಂಜಿತ್‌ ಸಿನ್ಹಾ ನೇತೃತ್ವದ ಸಮಿತಿ ಜ.5 ಮತ್ತು 6ರಂದು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಹೆಚ್ಚು ಬಿರುಕು ಬಿಟ್ಟ ಮನೆಗಳು ಹಾಗೂ ಕಟ್ಟಡಗಳನ್ನು ಕೆಡವಿ ಹಾಕುವುದು ಸೂಕ್ತ ಎಂದು ಶಿಫಾರಸು ಮಾಡಿದೆ. ಸದ್ಯ ಉಂಟಾಗಿರುವ ಸಮಸ್ಯೆಯಿಂದಾಗಿ ಶೇ.25 ಮಂದಿಗೆ ಅಂದರೆ 25 ಸಾವಿರ ಮಂದಿಗೆ ತೊಂದರೆಯಾಗಿದೆ. ಗಂಭೀರ, ಮಧ್ಯಮ, ಸಣ್ಣ ಪ್ರಮಾಣದ ಬಿರುಕು ಬಿಟ್ಟ ಕಟ್ಟಡಗಳು ಎಂದು ವರ್ಗೀಕರಿಸಬಹುದು. ಸುನಿಲ್‌, ಮನೋಹರ್‌ ಭಾಗ್‌, ಸಿಂಗ್‌ ಧರ್‌, ಮಾರ್ವಾರಿ ಎಂಬಲ್ಲಿ ಇರುವ ಕಟ್ಟಡಗಳು, ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಸಿನ್ಹಾ ಸಮಿತಿಯ ಪ್ರಕಾರ ಜೋಶಿಮಠದ ಜೇಪಿ ಕಾಲೋನಿಯಲ್ಲಿ ಜ.2ರಂದು ಉಂಟಾಗಿದ್ದ ದುರಂತವನ್ನು ಉಲ್ಲೇಖೀಸಿದೆ. “ಜೆ.ಪಿ.ಕಾಲೋನಿಯಿಂದ ಮಾರ್ವಾರಿವರೆಗೆ ರಭಸದಿಂದ ನೀರು ಹರಿದು ಹೋಗಿತ್ತು. ಇದರಿಂದಾಗಿ ನೆಲದ ಕೆಳಭಾಗದಲ್ಲಿ ಟೊಳ್ಳು ಪದರ ಉಂಟು ಮಾಡಿರುವ ಸಾಧ್ಯತೆ ಇದೆ. ಇದರಿಂದಾಗಿ ಆ ಪ್ರದೇಶದ ವ್ಯಾಪ್ತಿಯಲ್ಲಿ ಇರುವ ಕಟ್ಟಡಗಳ ಅಡಿಭಾಗ ಕುಸಿತಗೊಂಡು, ವಾಲುವ ಹಂತ ತಲುಪಿರುವ ಸಾಧ್ಯತೆ ಇದೆ. ಜತೆಗೆ ನೆಲವೂ ಬಿರುಕು ಬಿಟ್ಟಿರುವ ಸಾಧ್ಯತೆ ಇದೆ’ ಎಂದು ಇದು ಅಭಿಪ್ರಾಯಪಟ್ಟಿದೆ.

Advertisement

ಎನ್‌ಟಿಪಿಸಿ ಸ್ಥಳಕ್ಕೆ ಭೇಟಿ
ಸ್ಥಳೀಯ ನಿವಾಸಿಗಳು ಆಕ್ಷೇಪ ಮಾಡುವ ಪ್ರಕಾರ ರಾಷ್ಟ್ರೀಯ ಉಷ್ಣ ವಿದ್ಯುತ್‌ ನಿಗಮ ನಿಯಮಿತದ ನಿರ್ಮಾಣ ಕೂಡ ಸದ್ಯದ ಬಿಕ್ಕಟ್ಟಿಗೆ ಕೊಡುಗೆ ನೀಡಿದೆ. ಆದರೆ, ಆರೋಪವನ್ನು ನಿಗಮ ತಿರಸ್ಕರಿಸಿದೆ. ಸಿನ್ಹಾ ಸಮಿತಿ ತಪೋವನ ವಿಷ್ಣುಗಢದಲ್ಲಿ ಇರುವ ಎನ್‌ಟಿಪಿಸಿ ಸ್ಥಾವರದ ಸ್ಥಳಕ್ಕೆ ಭೇಟಿದ ಬಳಿಕ “ವಿಷ್ಣು ಪ್ರಯಾಗದಲ್ಲಿ ಅಲಕಾನಂದ ನದಿಯ ಪ್ರವಾಹದಿಂದಾಗಿ ಭೂಮಿಯ ಕೊರೆತ ಉಂಟಾಗುತ್ತಿದೆ. ಅದಕ್ಕಾಗಿ ಮಾರ್ವಾರಿ ಮತ್ತು ವಿಷ್ಣು ಪ್ರಯಾಗದ ನಡುವಿನ ನದಿಯ ಎಡ ದಂಡೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರವಾಹ ತಡೆಯುವ ಗೋಡೆ ನಿರ್ಮಾಣವಾಗಬೇಕು’ ಎಂದು ಸಲಹೆ ಮಾಡಿದೆ.

ಕೇವಲ ಜೋಶಿಮಠ ಮಾತ್ರವಲ್ಲ
ಉತ್ತರಾಖಂಡದ ನೈನಿತಾಲ್‌, ಉತ್ತರಕಾಶಿ, ಚಂಪಾವತ್‌ ಕೂಡ ಇದೇ ದಾರಿಯಲ್ಲಿದೆ ಎನ್ನುತ್ತಾರೆ ಕುಮಾನ್‌ ವಿವಿಯ ಭೂಗರ್ಭಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಬಹಾದುರ್‌ ಸಿಂಗ್‌ ಕೋಟಿಲ. ನೈನಿತಾಲ್‌ನಲ್ಲಿ ಕೂಡ ನಿಯಮ ಮೀರಿ ನಿರ್ಮಾಣ ಚಟಿವಟಿಕೆಗಳು ನಡೆಯುತ್ತಿವೆ. ಈ ಪ್ರದೇಶ ಕೂಡ ಯಾವುದೋ ಒಂದು ಅವಧಿಯಲ್ಲಿ ಉಂಟಾಗಿದ್ದ ಭೂಕುಸಿತದಿಂದ ನಿರ್ಮಾಣಗೊಂಡ ಅವಶೇಷಗಳ ಮೇಲೆ ನಿರ್ಮಾಣಗೊಂಡಿದೆ. 2009ರಲ್ಲಿ ಬಲಿಯಾ ನಾಲಾ ಎಂಬಲ್ಲಿ ಉಂಟಾಗಿದ್ದ ಭೂಕುಸಿತದ ಬಗ್ಗೆ ಉಲ್ಲೇಖೀಸುವ ಕೋಟಿಲ ಇಳಿಜಾರಿನ ಪ್ರದೇಶದಿಂದಾಗಿ ಹೆಚ್ಚಿನ ಅನಾಹುತಗಳು ಉಂಟಾಗುತ್ತವೆ. ಜತೆಗೆ ಅನಿಯಮಿತ ನಿರ್ಮಾಣದಿಂದಾಗಿ ಭೂಮಿಯ ಒಳಭಾಗದಲ್ಲಿ ಉಂಟಾಗುವ ಬದಲಾವಣೆ (ಟೆಕ್ಟಾನಿಕ್‌ ) ಕೂಡ ಅನಾಹುತಗಳಿಗೆ ಕಾರಣವಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಪ್ರಕೃತಿ ಸಹಜವಾಗಿ ಇರುವ ರಚನೆಗೆ ಧಕ್ಕೆ ಬಂದ ಬಳಿಕ ಉಂಟಾಗುವ ಅನಾಹುತವನ್ನು ಯಾವುದೇ ಕಾರಣಕ್ಕೂ, ಯಾವುದರಿಂದಲೂ ತಡೆಯಲು ಸಾಧ್ಯವಿಲ್ಲ.

47 ವರ್ಷಗಳ ಹಿಂದೆಯೇ ಎಚ್ಚರಿಕೆ
ಉತ್ತರಾಖಂಡದಂತ‌ ಪ್ರಾಕೃತಿಕ ಸೂಕ್ಷ್ಮ ರಾಜ್ಯದಲ್ಲಿ ಎಂತಹ ಕೆಲಸ ಗಳನ್ನು ಕೈಗೆತ್ತಿಕೊಳ್ಳಬೇಕು ಮತ್ತು ಕೈಗೆತ್ತಿಕೊಳ್ಳಬಾರದು ಎಂಬ ಬಗ್ಗೆ 47 ವರ್ಷ ಗಳ ಹಿಂದೆಯೇ, ಅಂದರೆ 1976ರಲ್ಲಿ ವರದಿ ಸಲ್ಲಿಕೆಯಾಗಿತ್ತು. ಘರ್ವಾಲ್‌ನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಎಂ.ಸಿ.ಮಿಶ್ರಾ ಅವರ ನೇತೃತ್ವದಲ್ಲಿ 18 ಮಂದಿ ಸದಸ್ಯರ ಸಮಿತಿ ಕರಾರುವಾಕ್ಕಾಗಿ ಅಲ್ಲದೇ ಇದ್ದರೂ, ಸೂಕ್ಷ್ಮವಾಗಿ ಮುನ್ನೆಚ್ಚರಿಕೆ ನೀಡಿತ್ತು. ಅದರ ಪ್ರಕಾರ
1 ಜೋಶಿಮಠ ಪರಿಸರ ಒಂದು ಕಾಲದಲ್ಲಿ ಭೂಕುಸಿತ ಸಂಭವಿಸಿದ್ದ ಪ್ರದೇಶದಲ್ಲಿ ಉಂಟಾದ ಸ್ಥಳ. ಮರಳು ಮತ್ತು ಕಲ್ಲುಗಳ ಮೇಲ್ಪದರದಲ್ಲಿ ನಿರ್ಮಾಣವಾಗಿದೆ. ಅಲ್ಲಿ ದೃಢವಾದ ನೆಲಪದರ ಇಲ್ಲ.
2 ಇದರಿಂದಾಗಿ ಈ ಪ್ರದೇಶದಲ್ಲಿ ನಗರ ನಿರ್ಮಾಣ, ಹೆಚ್ಚಿನ ಪ್ರಮಾಣದ ಸಂಚಾರ, ದೊಡ್ಡ ಪ್ರಮಾಣದ ಸ್ಫೋಟಗಳನ್ನು ನಡೆಸಲು ಸಾಧ್ಯವಿಲ್ಲ. ಅದರಿಂದ ಉಂಟಾಗುವ ಅದುರುವಿಕೆ ಈ ಭೂಪ್ರದೇಶಕ್ಕೆ ಸೂಕ್ತವಾದದ್ದು ಅಲ್ಲ.
3 ಅಲಕಾನಂದ, ದೂಧ್‌ ಗಂಗಾ ನದಿಯಲ್ಲಿ ಉಂಟಾಗುವ ಪ್ರವಾಹಗಳಿಂದ ಭೂಮಿಯ ಕೊರತೆ ಉಂಟಾಗುತ್ತದೆ. ಜತೆಗೆ ಈ ಪ್ರದೇಶದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಯೇ ಭೂಕುಸಿತಕ್ಕೆ ಕಾರಣವಾಗಿದೆ.
4 ಇಳಿಜಾರಿನ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬಾರದು.
5 ಸರಿಯಾದ ರೀತಿಯಲ್ಲಿ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲ. ಇದರಿಂದಾಗಿ ನೀರು ಇಂಗಿ ಹೋಗುತ್ತದೆ. ಇದರಿಂದಾಗಿ ನೆಲದ ಒಳಭಾಗದಲ್ಲಿ ಮಣ್ಣು ಮತ್ತು ಕಲ್ಲುಗಳ ನಡುವೆ ಬಿರುಕು ಉಂಟು ಮಾಡಿ ಭೂಕುಸಿತಕ್ಕೆ ಕಾರಣವಾಗುತ್ತದೆ.
6 ಬೃಹತ್‌ ಪ್ರಮಾಣದ ನಿರ್ಮಾಣದ ಕಾಮಗಾರಿಗಳ ಮೇಲೆ ಕಡ್ಡಾಯವಾಗಿ ನಿಷೇಧ ಹೇರಬೇಕು. ಮಣ್ಣು ಮತ್ತು ನೆಲದ ದೃಢತೆ ಪರಿಶೀಲಿಸಿದ ಬಳಿಕವೇ ಅದಕ್ಕೆ ಅವಕಾಶ ಮಾಡಿಕೊಡಬೇಕು. ಇಳಿಜಾರಿನಲ್ಲಿ ಅಗೆತದ ಪ್ರಮಾಣದ ಮೇಲೆ ನಿಯಂತ್ರಣ ಹೇರಬೇಕು.
7 ರಸ್ತೆ ಕಾಮಗಾರಿಗಳ ಸಂದರ್ಭದಲ್ಲಿ ಗುಡ್ಡ ಹಾಗೂ ಪರ್ವತಗಳ ಮೇಲೆ ಇರುವ ಬೃಹತ್‌ ಬಂಡೆಗಳನ್ನು ತೆಗೆಯಬಾರದು. ಅದಕ್ಕಾಗಿ ಸ್ಫೋಟ ಮತ್ತು ಬೃಹತ್‌ ಪ್ರಮಾಣದಲ್ಲಿ ಅಗೆತ ಮಾಡುವುದರಿಂದ ದುರಂತಕ್ಕೆ ಕಾರಣವಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next