Advertisement

ಕಮಲ ಬಿಡಲ್ಲ, ಕೈ ಹಿಡಿಯಲ್ಲ: ರಮೇಶ ಕತ್ತಿ

12:30 AM Apr 02, 2019 | Team Udayavani |

ಬೆಳಗಾವಿ: ನಾನು ಹಿಂದಿನ ಬಾಗಿಲಿನಿಂದ ಬರುವ ರಾಜಕಾರಣಿ ಅಲ್ಲ. ಅಂತಹ ಪ್ರಯತ್ನ ಸಹ ನಾನು ಮಾಡುವುದಿಲ್ಲ, ಆ ರೀತಿ ಆಸೆಯೂ ಇಲ್ಲ. ಪಕ್ಷದ ವಿರುದ್ಧ ಬಂಡಾಯ ಇಲ್ಲ, ಕಾಂಗ್ರೆಸ್‌ ಸೇರಲ್ಲ ಎಂದು ಮಾಜಿ ಸಂಸದ ರಮೇಶ ಕತ್ತಿ ಸ್ಪಷ್ಟಪಡಿಸಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಚಿಕ್ಕೋಡಿ ಲೋಕಸಭೆ ಟಿಕೆಟ್‌ ಕೈ ತಪ್ಪಿದ್ದಕ್ಕೆ ಯಾವುದೇ ಅಸಮಾಧಾನ ಇಲ್ಲ. ಪ್ರಧಾನಿ ಮೋದಿ ನಮ್ಮ ನಾಯಕರು. ನಾನು ಚಿಕ್ಕೋಡಿ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಆದರೆ ಟಿಕೆಟ್‌ ಕೈತಪ್ಪಿದ್ದರಿಂದ ನಿರಾಸೆಯಾಗಿಲ್ಲ. ಕಾರ್ಯಕರ್ತರ ನೋವು ಸ್ವಾಭಾವಿಕ. ಶೀಘ್ರ ಈ ನೋವನ್ನು ಬಿಜೆಪಿ ಸರಿಪಡಿಸಲಿದೆ. ಹಾಗೆಂದು ನಾವು ಪಕ್ಷದ ವಿರುದ್ಧ ಬಂಡಾಯ ಏಳುವ ಪ್ರಶ್ನೆಯೇ ಇಲ್ಲ. ಟಿಕೆಟ್‌ ಕೈತಪ್ಪಿದ್ದರಿಂದ ನನ್ನನ್ನು ಸಮಾಧಾನಪಡಿಸಲು ಪಕ್ಷದ ವರಿಷ್ಠರು ವಿಧಾನ ಪರಿಷತ್‌ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎಂಬುದೆಲ್ಲಾ ಊಹಾಪೋಹ. ನನ್ನ ಜತೆ ಅಂತಹ ಯಾವುದೇ ಮಾತುಕತೆ ನಡೆದೇ ಇಲ್ಲ. ಬಿಜೆಪಿ ವರಿಷ್ಠರು ಸಹ ಈ ರೀತಿಯ ಆಫರ್‌ ಪ್ರಸ್ತಾಪ ಮಾಡಿಲ್ಲ ಎಂದರು.

ನಾನು ಮತ್ತು ಉಮೇಶ ಕತ್ತಿ ಅಸಮಾಧಾನಗೊಂಡೇ ಇಲ್ಲ. ಲೋಕಸಭೆ ಚುನಾವಣೆ ಸಿದ್ಧತೆ ಬಗ್ಗೆ ಚರ್ಚಿಸಲು ಯಡಿಯೂರಪ್ಪ ಇಲ್ಲಿಗೆ ಬಂದಿದ್ದರು. ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳನ್ನು ಗೆಲ್ಲುವ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮ ಹಾಗೂ ಅನುಸರಿಸಬೇಕಾದ ಕಾರ್ಯತಂತ್ರದ ಕುರಿತು ಶಾಸಕರು, ಸಂಸದರು, ಮಾಜಿ ಶಾಸಕರ ಜೊತೆ ಚರ್ಚಿಸಲಾಯಿತು. ಇದನ್ನು ಬಿಟ್ಟರೆ ಬೇರೆ ಯಾವುದೇ ಚರ್ಚೆ ನಡೆದಿದಲ್ಲ ಎಂದು ಸ್ಪಷ್ಟಪಡಿಸಿದರು.

ಕಳೆದ ಚುನಾವಣೆಯಲ್ಲಿ ನಾನು ಕೇವಲ ಮೂರು ಸಾವಿರ ಮತಗಳ ಅಂತರದಿಂದ ಸೋತಿದ್ದೆ. ಹೀಗಾಗಿ ರಾಯಬಾಗ, ಚಿಕ್ಕೋಡಿ, ಮತ್ತು ಅಥಣಿ ಭಾಗದ ಬೆಂಬಲಿಗರು ಈ ಬಾರಿ ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸಿದ್ದರು. ಈ ಕಾರಣ ಚಿಕ್ಕೋಡಿ ಕ್ಷೇತ್ರದ ಟಿಕೆಟ್‌ ಮರು ಪರಿಶೀಲನೆ ನಡೆಸುವಂತೆ ನಮ್ಮ ಸಹೋದರರು ಮನವಿ ಮಾಡಿದ್ದರು. ಆದರೆ ಪಕ್ಷದ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದರು.

ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್‌ನ ಯಾವ ನಾಯಕರೂ ಸಂಪರ್ಕ ಮಾಡಿಲ್ಲ, ಮಾತುಕತೆ ನಡೆದಿಲ್ಲ. ಇದೆಲ್ಲ ಕೇವಲ ಊಹಾಪೋಹ. ನಾವು ಬಿಜೆಪಿ ಜೊತೆಗಿದ್ದೇವೆ. ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸುತ್ತೇವೆ.
– ರಮೇಶ ಕತ್ತಿ, ಮಾಜಿ ಸಂಸದ

Advertisement

ಸಹೋದರ ರಮೇಶ ಕತ್ತಿಗೆ ಟಿಕೆಟ್‌ ಸಿಗದೇ ಇರುವುದಕ್ಕೆ ಬೇಸರ ಇಲ್ಲ. ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಟಿಕೆಟ್‌ ನೀಡಿದ್ದರಿಂದ ನಾವು ಬಂಡಾಯ ಏಳುವ ಪ್ರಶ್ನೆ ಇಲ್ಲ. ಬದಲಾಗಿ ಎರಡೂ ಕ್ಷೇತ್ರಗಳಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಸಹೋದರ ರಮೇಶ ಕಾಂಗ್ರೆಸ್‌ ಸೇರುವ ಮಾತು ಸತ್ಯಕ್ಕೆ ದೂರವಾದ ಮಾತು. ಅದು ಬರೀ ಊಹಾಪೋಹ. ನಾವು ಬಿಜೆಪಿಯಲ್ಲೇ ಇರುತ್ತೇವೆ.
– ಉಮೇಶ ಕತ್ತಿ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next