Advertisement

‘ಮತ’ಪಟ್ಟಿಗೆ ಸೇರ್ಪಡೆ ಎಲ್ಲರ ಹೊಣೆ

09:41 AM Sep 02, 2019 | Team Udayavani |

ಧಾರವಾಡ: ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠಗೊಳಿಸುವಲ್ಲಿ ಎಲ್ಲ ಅರ್ಹ ಮತದಾರರು ಸಾರ್ವತ್ರಿಕ ಚುನಾವಣೆಗಳಲ್ಲಿ ಭಾಗವಹಿಸಿ, ತಪ್ಪದೆ ಮತದಾನ ಮಾಡಬೇಕು. ಅದಕ್ಕಾಗಿ ಅರ್ಹ ಪ್ರತಿ ಮತದಾರನ ಹೆಸರು, ವಿವರಗಳನ್ನು ಮತದಾರ ಪಟ್ಟಿಗೆ ಸೇರ್ಪಡೆಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಈಶಪ್ಪ ಭೂತೆ ಹೇಳಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಮತದಾರರ ಯಾದಿಯ ವಿಶೇಷ ಪರಿಷ್ಕರಣೆ-2020 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಚುನಾವಣಾ ಆಯೋಗ ಮತದಾರ ಸ್ನೇಹಿಯಾಗಿರುವ ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡುತ್ತಿದೆ. ವಿಶೇಷ ಪರಿಷ್ಕರಣೆ ಕಾರ್ಯಕ್ರಮದ ಮೂಲಕ ಮತದಾರ ಮತದಾರರ ಯಾದಿಯಲ್ಲಿ ದಾಖಲಾಗಿರುವ ತನ್ನ ಮಾಹಿತಿ ಪರಿಶೀಲಿಸಿ ಸರಿಪಡಿಸಿಕೊಳ್ಳುವ ಅವಕಾಶ ನೀಡಿದೆ. ಇದು ಉತ್ತಮ ಕಾರ್ಯ. ಜಿಲ್ಲಾಡಳಿತ ಈ ಕಾರ್ಯಕ್ರಮ ಯಶಸ್ವಿಯಾಗುವಂತೆ ಕ್ರಮ ಜರುಗಿಸಿ, ಸಂಬಂಧಿತ ಎಲ್ಲ ಅಧಿಕಾರಿಗಳು ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಮಾಡಬೇಕು ಎಂದರು.

ಜಿಲ್ಲಾ ಸ್ವೀಪ್‌ ಯೋಜನೆ ಮುಖ್ಯಸ್ಥರಾದ ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಮಾತನಾಡಿ, ಕಳೆದ ಲೋಕಸಭೆಯ ಚುನಾವಣೆಯಲ್ಲಿ ಮತದಾನದ ಸಂಖ್ಯೆ ಹೆಚ್ಚಳವಾಗಿದೆ. ಈ ಕಾರ್ಯಕ್ರಮದಲ್ಲಿ ಮತದಾರರ ಸೇರ್ಪಡೆ ಗುರಿಯನ್ನು ಪೂರ್ಣವಾಗಿ ಪ್ರಗತಿ ಸಾಧಿಸಲಾಗುವುದು. ಸರಕಾರಿ ನೌಕರರು ತಮ್ಮ ಹಾಗೂ ತಮ್ಮ ಕುಟುಂಬದ ಅರ್ಹ ಸದಸ್ಯರ ಮಾಹಿತಿಯನ್ನು ಮತದಾರರ ಯಾದಿಯಲ್ಲಿ ಸೇರ್ಪಡೆ ಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದರು.

ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಮಾತನಾಡಿ, ಸಾರ್ವಜನಿಕರಿಗೆ ಚುನಾವಣಾ ಆಯೋಗ ನೀಡಿರುವ ಸಹಾಯವಾಣಿ, ಆ್ಯಪ್‌ ಮತ್ತು ಆನ್‌ಲೈನ್‌ ನೀಡಿರುವ ಅವಕಾಶ ಬಳಸಿಕೊಂಡು ಪ್ರತಿಯೊಬ್ಬರು ಮತದಾರರ ಯಾದಿಗೆ ತಮ್ಮ ಹೆಸರು, ವಿವರ ಸೇರಿಸುವಂತೆ ಪ್ರೇರೇಪಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಚುನಾವಣಾಧಿಕಾರಿಯಾದ ಡಿಸಿ ದೀಪಾ ಚೋಳನ್‌ ಮಾತನಾಡಿ, ಮತದಾರರ ಪಟ್ಟಿಯಿಂದ ಯಾವುದಾದರೂ ಹೆಸರು ಕೈಬಿಡುವ ಮೊದಲು ಮತದಾರರಿಗೆ ಇದೇ ಮೊದಲ ಬಾರಿಗೆ ಅವರ ಹೆಸರು ತೆಗೆದು ಹಾಕಿರುವ ಕುರಿತು ಏಳು ದಿನಗಳ ಕಾಲಾವಧಿಯ ನೋಟಿಸ್‌ ನೀಡಲಾಗುತ್ತದೆ ಅಥವಾ ಅವರ ಮನೆಗೆ ನೋಟಿಸ್‌ ಪ್ರತಿ ಅಂಟಿಸಲಾಗುತ್ತದೆ ಎಂದರು.

Advertisement

ಹಿರಿಯ ಸಿವಿಲ್ ನ್ಯಾಯಾಧಿಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್‌.ಎಸ್‌. ಚಿನ್ನಣ್ಣವರ ಮಾತನಾಡಿದರು. ಪ್ರೋಬೆಷನರಿ ಐಎಎಸ್‌ ಅಧಿಕಾರಿ ಆಕೃತಿ ಬನ್ಸಾಲ್, ಅಪರ ಡಿಸಿ ಇಬ್ರಾಹಿಂ ಮೈಗೂರ, ಹಿರಿಯ ಸಿವಿಲ್ ನ್ಯಾಯಾಧಿಧೀಶ ಚಿಣ್ಣನ್ನವರ ಆರ್‌.ಎಸ್‌., ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶಕುಮಾರ, ಉಪವಿಭಾಗಾಧಿಕಾರಿ ಮಹಮ್ಮದ ಜುಬೇರ ಇದ್ದರು.

ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಮಾತನಾಡಿದರು. ಡಿವೈಎಸ್‌ಪಿ ರಾಮನಗೌಡ ಹಟ್ಟಿ, ಜಿ.ಪಂ. ಉಪಕಾರ್ಯದರ್ಶಿ ಎಸ್‌.ಜಿ. ಕೊರವರ, ಎಸಿಪಿ ಎಂ.ಎನ್‌. ರುದ್ರಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಜಾನನ ಮನ್ನಿಕೇರಿ, ಧಾರವಾಡ ತಹಶೀಲ್ದಾರ್‌ ಪ್ರಕಾಶ ಕುದರಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ಧಾರವಾಡ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮತದಾರ ಪಟ್ಟಿಯ ಪರಿಶೀಲನಾ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಪಂಚಾಯತ್‌ ಆವರಣದಲ್ಲಿ ಜಿಲ್ಲಾಡಳಿತದಿಂದ ಸ್ವಾಪಿಸಿರುವ ಕೇಂದ್ರವನ್ನು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಈಶಪ್ಪ ಭೂತೆ ಹಾಗೂ ಡಿಸಿ ದೀಪಾ ಚೋಳನ್‌ ಅವರು ಉದ್ಘಾಟಿಸಿ, ಸ್ವತಃ ತಮ್ಮ ವಿವರಗಳನ್ನು ಆನ್‌ಲೈನ್‌ ಮೂಲಕ ಪರಿಶೀಲಿಸಿ, ಖಚಿತ ಪಡಿಸಿಕೊಂಡರು. ಉಳಿದಂತೆ ಅಧಿಕಾರಿಗಳು, ಸಿಬ್ಬಂದಿಗಳು ಸರತಿಯಲ್ಲಿ ನಿಂತು ತಮ್ಮ ವಿವರ ಪರಿಶೀಲಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next