Advertisement
ಬೆಳ್ತಂಗಡಿ: ಒಂದು ನಿಷೇಧ ಹಲವು ಅಡ್ಡ ಪರಿಣಾಮ ಬೀರಬಾರದು. ಆಧುನಿಕತೆಯ ಭರಾಟೆಯಲ್ಲಿ ಕೃಷಿಗಾಗಿ ಜಾನುವಾರು ಸಾಕುವುದು, ಸಂಪ್ರದಾಯ, ಆಚರಣೆಗಳು ಮರೆಯಾಗುತ್ತಿವೆ. ಜನಪದ ನಂಬಿಕೆಗಳಿಗೆ ಕಡಿವಾಣ ಬೀಳುತ್ತಿದೆ. ಹಿಂಸೆಯಾಗದಂತೆ ಬದಲಾವಣೆ ಸೂಚಿಸಲಿ, ಆಚರಣೆಯ ಮೇಲಿನ ನಿಷೇಧ ಸಂಸ್ಕೃತಿಯ ನಾಶಕ್ಕೆ ಕಾರಣವಾಗಬಾರದು. ಕಂಬಳದ ಉಳಿವಿಗಾಗಿ ನಾನು ತುಳುನಾಡಿನ ಜನರ ಜತೆ ಕೈ ಜೋಡಿಸುತ್ತೇನೆ. ಹೀಗೆಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
Related Articles
Advertisement
ಪರಿವರ್ತನೆಯಿಂದಾಗಿ ಸ್ಪರ್ಧೆ: ಕಂಬಳದಲ್ಲಿ ನಡೆದ ಕೆಲವು ಪರಿವರ್ತನೆಗಳು ಸ್ಪರ್ಧೆಗೆ ಕಾರಣ. ಜಲ್ಲಿಕಟ್ಟು, ಬೆಂಕಿ ಹಾಯಿಸುವ ಸ್ಪರ್ಧೆ, ಕಂಬಳ ಸಾಂಪ್ರದಾಯಕವಾಗಿ ನಡೆದರೆ ಅದಕ್ಕೆ ಗೌರವ, ಬೆಲೆ ಇದೆ. ವಾಣಿಜ್ಯೀಕರಣವಾದಾಗ ಬದಲಾವಣೆಗಳಾಗುತ್ತವೆ. ಬಹುಮಾನ, ಪ್ರಶಸ್ತಿ, ಗೌರವಕ್ಕಾಗಿ ನಾನಾ ರೀತಿಯ ಪ್ರಚೋದನೆ ಅನಂತರ ಹಿಂಸಾರೂಪಕ್ಕೂ ತಿರುಗಿತು. ಜತೆಗೆ ನಡೆದು ಬಂದಿದ್ದ ಸಾಂಪ್ರದಾಯಿಕ ಆಚರಣೆಗಳು ಮರೆಯಾದವು. ದೈವಿಕ ಸ್ವರೂಪದ ಆರಾಧನೆಯ ಅಂಗವಾಗಿ ನಡೆಯುತ್ತಿದ್ದ ಕಂಬಳಗಳ ಸ್ವರೂಪ ಸ್ಪರ್ಧಾಕಣವಾಯಿತು. ಪಾವಿತ್ರ್ಯದ ಹಿನ್ನೆಲೆ ಕಾಣೆಯಾಯಿತು. ಯುವಜನತೆಯಂತೂ ಕೇವಲ ಮಜಾ, ಮೋಜು, ಮಸ್ತಿಯ ದೃಷ್ಟಿಯಿಂದಲೇ ಕಂಡರು. ಅನುಭವದ ಕೊರತೆ, ಪೂರ್ವತಯಾರಿ ಇಲ್ಲದಿರುವುದು, ಹಿರಿಯರಿಗೆ ಗೌರವ ಕೊಡದೇ ಸಂಪ್ರದಾಯ ಬಿಟ್ಟು, ಧಾರ್ಮಿಕ ಸ್ಪರ್ಶ ಇಲ್ಲದೇ ಕೇವಲ ಮೋಜಿನಾಟವಾಗಿ ನಡೆಸಿದಾಗ ಕಂಬಳ ನಿಷೇಧದ ಬಲಿಪೀಠಕ್ಕೆ ತಲೆಯೊಡ್ಡಬೇಕಾಯಿತು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.
ಸಂಪ್ರದಾಯಕ್ಕಾಗಿ ಬೇಕು: ಸಂಪ್ರದಾಯಕ್ಕಾಗಿ ಜಲ್ಲಿಕಟ್ಟು ಬೇಕು ಎಂಬ ವಾದದಲ್ಲಿ ಸಾಂಪ್ರದಾಯಿಕ, ಧಾರ್ಮಿಕ ಹಿನ್ನೆಲೆಯಿದೆ. ಅದು ಅಪಾಯಕಾರಿಯಾಗುವುದು ಆಧುನಿಕ ಹಿನ್ನೆಲೆಯಲ್ಲಿ ನಡೆದಾಗ. ಎತ್ತುಗಳನ್ನು ಬೆಂಕಿ ಹಾಯಿಸುವಲ್ಲಿ ಸ್ಪರ್ಧೆಗಾಗಿ ಬೆಂಕಿಯ ಮಿತಿ ಹೆಚ್ಚಿಸಿದಾಗ ಮತ್ತು ಕಂಬಳದಲ್ಲೂ ಸ್ಪರ್ಧೆಗಾಗಿ ಹೊಡಿಬಡಿ ಕ್ರಮ ಆರಂಭವಾಗುವುದು ಅಪಾಯಕಾರಿ ಲಕ್ಷಣ. ಕ್ರಿಕೆಟ್ ನೋಡುಗರಲ್ಲೂ ಎರಡು ವಿಧ. ಆಟವನ್ನು ಆನಂದಮಯವಾಗಿ ಆಸ್ವಾದಿಸುತ್ತಾ ಅನುಭವಿಸುವ ವರ್ಗ ಒಂದಾದರೆ ತಾವು ಇಚ್ಛಿಸಿದ ತಂಡದ ಗೆಲುವಿಗೆ ಹಪಹಪಿಸಿ ಜೂಜು ಕಟ್ಟುವುದು ಇನ್ನೊಂದು ವರ್ಗ. ಇದರಿಂದಾಗಿ ಕ್ರೀಡೆಗೆ ಅನಿವಾರ್ಯ, ಅರಿವಿಲ್ಲದಂತೆ ಒತ್ತಡಗಳು ಬೀಳುತ್ತವೆ. ಇದು ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳನ್ನು ಪ್ರತಿಬಿಂಬಿಸುತ್ತವೆ.
ಹಿಂಸೆರಹಿತಕ್ಕೆ ಅನುಮತಿ ನೀಡಲಿ: ಸರಕಾರ, ನ್ಯಾಯಾಲಯ ಕಂಬಳದಲ್ಲಿ ಹಿಂಸಾರೂಪವಿದ್ದರೆ ಅದರ ಪರಿವರ್ತನೆಗೆ ಸೂಚಿಸಲಿ. ಇದಕ್ಕೆ ಖಂಡಿತವಾಗಿ ನಮ್ಮ ತುಳುನಾಡಿನ ಜನತೆ ಒಪ್ಪಿಗೆ ಸೂಚಿಸುತ್ತಾರೆ. ಈಗಾಗಲೇ ಆಧುನಿಕ ಯಂತ್ರಗಳ ಭರಾಟೆಯಿಂದಾಗಿ ಕೃಷಿಗಾಗಿ ಜಾನುವಾರು ಸಾಕಣೆ ಕಡಿಮೆಯಾಗಿದೆ. ಹೋರಿ, ಕೋಣಗಳನ್ನು ಸಾಕುವುದರ ಹಿಂದಿನ ಪರಿಶ್ರಮ, ವೆಚ್ಚ, ಕಾರ್ಮಿಕರ ಕೊರತೆ ಗಮನಿಸಿದರೆ ಜಾನುವಾರು ಸಾಕಣೆ ನಿಂತೇ ಹೋಗಬಹುದು. ಈ ಅಂಶಗಳನ್ನು ಕೂಡ ಗಮನದಲ್ಲಿರಿಸಿ ತುಳುನಾಡ ಜನತೆಯ ಕೋರಿಕೆ ಮನ್ನಿಸಬೇಕು. ಕಂಬಳಕ್ಕೆ ಈಗ ಇರುವ ನಿಷೇಧ ತೆರವುಗೊಳಿಸಿ ಅನುಮತಿ ನೀಡಬೇಕು. ಇದಕ್ಕಾಗಿ ನಾನು ತುಳುನಾಡ ಜನತೆಯ ಜತೆಗಿರುತ್ತೇನೆ ಎಂದು ಡಾ| ಹೆಗ್ಗಡೆ ಹೇಳಿದರು.
– ಲಕ್ಷ್ಮೀ ಮಚ್ಚಿನ