Advertisement

Editorial; ಕನ್ನಡಿಗರಿಗೆ ಉದ್ಯೋಗ: ಸರಕಾರ ಗಮನಹರಿಸಲಿ

12:11 AM Jul 03, 2024 | Team Udayavani |

“ಖಾಸಗಿ ಕಂಪೆನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ’. ಈ ಕೂಗು ಇಂದು- ನಿನ್ನೆಯದಲ್ಲ. ಕನ್ನಡ ನಾಡಿನ ಮಣ್ಣಿನಲ್ಲಿ ಖಾಸಗಿ ಕಂಪೆನಿಗಳು ಕಾಲಿಟ್ಟಾಗಿನಿಂದಲೂ ಈ ಕರುಳ ಕೂಗು ಇದ್ದೇ ಇದೆ. ಈ ನಿಟ್ಟಿನಲ್ಲಿ ನ್ಯಾಯ ಒದಗಿಸಲು ಸರಕಾರಗಳು ಪ್ರಯತ್ನ ಮಾಡಿವೆ. ಆದರೆ ಅದು ಎಷ್ಟರ ಮಟ್ಟಿಗೆ ಸಫ‌ಲವಾಗಿವೆ ಎಂಬುದರ ಆತ್ಮಾವಲೋಕನಕ್ಕೆ ಇದು ಸಕಾಲ.

Advertisement

ಇತರೆ ರಾಜ್ಯಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮೀಸಲಾತಿಯನ್ನು ಸ್ಥಳೀಯರಿಗೆ ಕಲ್ಪಿಸುವ ಕಾನೂನುಗಳಿವೆ. ಆದರೆ ಕರ್ನಾಟಕದಲ್ಲಿ ಇರುವ ಕಾನೂನುಗಳು ಪ್ರಬಲವಾಗಿ ಇಲ್ಲದೇ ಇರುವುದರಿಂದಲೇ ಕನ್ನಡಿಗರಿಗೆ ವಂಚನೆಯಾಗುತ್ತದೆ ಎನ್ನುವ ಹೋರಾಟಗಳು ಸಾಕಷ್ಟು ನಡೆದಿವೆ. ಸ್ಥಳೀಯರಿಗೆ ಉದ್ಯೋಗ ಕೊಟ್ಟರೆ ಕನಿಷ್ಠ ವೇತನ ಸೇರಿದಂತೆ ಸೌಲಭ್ಯಗಳನ್ನು ಕೊಡಬೇಕು ಹಾಗೂ ಸ್ಥಳೀಯ ಕಾರ್ಮಿಕ ಕಾನೂನನ್ನು ಪಾಲನೆ ಮಾಡಬೇಕು. ಇಂತಹ ಹಲವಾರು ಕಾರಣಗಳಿಂದಾಗಿ ಹೊರರಾಜ್ಯಗಳಿಂದ ಜನರನ್ನು ಕರೆತಂದು ಉದ್ಯೋಗ ಕೊಡಲಾಗುತ್ತದೆ. ಇದರಿಂದ ಕನ್ನಡಿಗರ ಅವಕಾಶಗಳನ್ನು ಹೊರರಾಜ್ಯಗಳವರು ಕಿತ್ತುಕೊಳ್ಳುತ್ತಿದ್ದಾರೆ ಎನ್ನುವ ಅರಣ್ಯರೋದನ ಸರಕಾರಕ್ಕೆ ಕೇಳಿಸದ್ದೇನಲ್ಲ.

ಇತ್ತೀಚೆಗಂತೂ ಬಂಡವಾಳ ಹೂಡಿಕೆ ಆಕರ್ಷಿಸುವ ಸಲುವಾಗಿ ಸರಕಾರಗಳು ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದ್ದು, ಹೂಡಿಕೆದಾರರ ಸಮಾವೇಶಗಳನ್ನು ಆಯೋಜಿಸುವುದಲ್ಲದೆ, ವಿದೇಶಗಳಲ್ಲೂ ರೋಡ್‌ಶೋ, ಸಭೆ, ಸಮಾವೇಶ ಮಾಡುವ ಮೂಲಕ ವಿದೇಶಿ ಹೂಡಿಕೆ ಆಕರ್ಷಿಸುವ ಯತ್ನಗಳನ್ನೂ ನಡೆಸುತ್ತಿವೆ.

ಹೂಡಿಕೆಗೆ ಪೂರಕವಾದ ವಾತಾವರಣ ನಿರ್ಮಿಸಲು ಇನ್ನಿಲ್ಲದ ಕೊಡುಗೆಗಳನ್ನೂ ಖಾಸಗಿ ಕಂಪೆನಿಗಳಿಗೆ ಸರಕಾರ ಕೊಡುತ್ತಿದೆ. ದೊಡ್ಡ ಕೈಗಾರಿಕ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದು, ಮೂಲಸೌಕರ್ಯಗಳನ್ನು ಒದಗಿಸು ವುದರ ಜತೆಗೆ ಸಾಲ ಸೌಲಭ್ಯ, ವಿವಿಧ ವಿನಾಯಿತಿಗಳು, ಅನುಮೋದನೆಗೆ ಏಕಗವಾಕ್ಷಿ ವ್ಯವಸ್ಥೆಯಂತಹ ಈಸ್‌ ಆಫ್ ಡೂಯಿಂಗ್‌, ಈಸ್‌ ಆಫ್ ಬ್ಯುಸಿನೆಸ್‌ನ ತಂತ್ರಗಳನ್ನು ಅನುಸರಿಸಿ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ.

ಇವೆಲ್ಲವೂ ರಾಜ್ಯದ ಅಭಿವೃದ್ಧಿಗೆ ಪೂರಕವೂ ಹೌದು. ಆದರೆ 2011ರ ಜನಗಣತಿಯ ಪ್ರಕಾರವೇ ಬೆಂಗಳೂರಿನಲ್ಲಿ ಶೇ.50ಕ್ಕೂ ಹೆಚ್ಚು ವಲಸಿಗರು ಉದ್ಯೋಗ ಪಡೆದಿದ್ದಾರೆ. ಅದರಲ್ಲೂ ಬಹುರಾಷ್ಟ್ರೀಯ ಕಂಪೆನಿಗಳ ವ್ಯವಸ್ಥೆ ನೆಲೆಯೂರಿದಂತೆ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಕ್ಷೀಣಿಸಿವೆ.

Advertisement

ಮೊದಲಿನಿಂದಲೂ ಅನುಭವಿಸಿಕೊಂಡು ಬಂದ ಇಂತಹ ಅವಕಾಶ ವಂಚ ನೆಯ ಕಾರಣದಿಂದಲೇ ಡಾ| ಸರೋಜಿನಿ ಮಹಿಷಿ ನೇತೃತ್ವದಲ್ಲಿ 1983ರಲ್ಲಿಯೇ ಸಮಿತಿ ರಚಿಸಿದ್ದ ಸರಕಾರ, ಉದ್ಯೋಗಾವಕಾಶಗಳ ಕುರಿತು ಪರಾಮರ್ಶೆ ನಡೆಸಿ ವರದಿ ನೀಡಲು ನಿರ್ದೇಶಿಸಿತ್ತು. ಅದರಂತೆ ಸರೋಜಿನಿ ಮಹಿಷಿ ವರದಿಯೂ ಸಲ್ಲಿಕೆಯಾಗಿತ್ತು. ಆದರೆ ಅದು ಕಾರ್ಯಗತ ಆಗಿಲ್ಲ ಎಂಬುದನ್ನು ಒತ್ತಿ ಹೇಳಬೇಕಿಲ್ಲ. ಕೊನೆಗೆ ಈ ವರದಿಯಲ್ಲಿನ ಎಲ್ಲ ಶಿಫಾರಸುಗಳನ್ನೂ ಅನುಷ್ಠಾನ ಮಾಡಲು ಆಡಳಿತಾತ್ಮಕವಾಗಿ ದುಸ್ತರವೆಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಕನ್ನಡ ಕಾವಲು ಸಮಿತಿಯ ಅಧ್ಯಕ್ಷರೂ ಆಗಿದ್ದ ಸಿದ್ದರಾಮಯ್ಯ ಅವರು 2017 ರಲ್ಲಿ ಸಿಎಂ ಆಗಿದ್ದಾಗ ಪರಿಷ್ಕೃತ ವರದಿಯನ್ನೂ ಸ್ವೀಕರಿಸಿದ್ದರು. ಅಂದಿನಿಂದ ಪರಿಷ್ಕೃತ ವರದಿಯಲ್ಲಿನ ಶಿಫಾರಸುಗಳೂ ಅನುಷ್ಠಾನವಾಗಿಲ್ಲ. ಸ್ಥಳೀಯರು ಎಂಬುದನ್ನು ಪರಿಗಣಿಸಲು ಕರ್ನಾಟಕದಲ್ಲಿ 15 ವರ್ಷ ವಾಸವಿರಬೇಕು ಎಂಬ ನಿಯಮವನ್ನು 10 ವರ್ಷಕ್ಕೆ ಇಳಿಸುವ ಬೇಡಿಕೆಯೂ ಇದರೊಂದಿಗೆ ಇದೆ. ಈ ಹೋರಾಟದ ಕಿಚ್ಚು ಮತ್ತೆ ಹೊತ್ತಿಕೊಂಡಿದ್ದು, ಕರ್ನಾಟಕ ರಕ್ಷಣ ವೇದಿಕೆ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಮತ್ತೆ ಬೀದಿಗಿಳಿದಿವೆ. ಕನ್ನಡಿಗರ ಈ ನ್ಯಾಯಯುತ ಬೇಡಿಕೆಯನ್ನು ಸಂವಿಧಾನದ ಮಿತಿಯಲ್ಲಿ ರಾಜ್ಯ ಸರಕಾರ ಮಾಡುವ ಬಗ್ಗೆ ಆಲೋಚನೆ ಮಾಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next