Advertisement

ಪ್ರೀತಿಯೊಂದೇ ಮನುಕುಲದ ಅಡಿಪಾಯ

10:07 AM Dec 16, 2019 | mahesh |

ಮಲಯಾಳ ಭಾಷೆಯ ಪ್ರಸಿದ್ಧ ಕವಿ ಅಕ್ಕಿತ್ತಮ್‌ ಅಚ್ಯುತನ್‌ ನಂಬೂದಿರಿ ಅವರು 2019ನೆಯ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

ಕೋವಿ ಮತ್ತು ಖಡ್ಗ ನಿರ್ಮಿಸಲು ಬಳಸಿದ ಕಬ್ಬಿಣದ ತುಂಡುಗಳನ್ನು ಕರಗಿಸಿ ನೇಗಿಲು ಮಾಡಬಹುದು’ ಎಂದು ಬರೆಯುತ್ತ, ತಾನು ನಂಬಿ ಬಂದಿದ್ದ ಕಮ್ಯುನಿಸ್ಟ್ ಸಿದ್ಧಾಂತವನ್ನು ಹಿಂಸೆಯ ಕೈಕೋಳದಿಂದ ಮುಕ್ತಗೊಳಿಸಲು 1952ರಲ್ಲಿಯೇ ಕರೆ ನೀಡಿ, ಆ ಕಾಲಕ್ಕೆ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದವರು ಈ ಸಾಲಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ 93ರ ಹರೆಯದ ಅಕ್ಕಿತ್ತಮ್‌ ಅಚ್ಯುತನ್‌ ನಂಬೂದಿರಿ.

ಗೆಳೆಯನಾದ ಕಮ್ಯುನಿಸ್ಟ್ ಚಿಂತಕ ಇಎಂಎಸ್‌ ಸಹ ಮುನಿಸಿಕೊಂಡಿದ್ದರು- ಅಚ್ಯುತನ್‌ ಅವರ ಈ ಮಾತು ಕೇಳಿ. ಆದರೆ, ಋಗ್ವೇದದ ಸಂವಾದ ಸೂಕ್ತವೇ ತನ್ನನ್ನು ಕಮ್ಯುನಿಸಮ್‌ ಕಡೆಗೆ ಆಕರ್ಷಿಸಿದ್ದು ಎಂಬ ಅಂತರಂಗದ ಸತ್ಯವನ್ನು ಕೈಬಿಡದೆ, ತಾನು ತೆಗೆದುಕೊಂಡ ನಿಲುವನ್ನು ಸಡಿಲಿಸದೆ ಕೇರಳದ ಬೌದ್ಧಿಕ ಸಮುದಾಯವನ್ನು ವಿರೋಧಿಸಿ ಬುದ್ಧ, ಮಾರ್ಕ್ಸ್, ಕಬೀರ್‌ ಮತ್ತು ಗಾಂಧೀಜಿ ತೋರಿಸಿದ ಹಾದಿಯನ್ನು ಒಟ್ಟಾಗಿಸಿ ಅಕ್ಕಿಥಮ್‌ ಮುನ್ನಡೆದರು. ಸಂಪ್ರದಾಯವಾದಿ, ಹಿಂದೂ ಮೂಲಭೂತವಾದಿ, ಕಮ್ಯುನಿಸ್ಟ್ ವಿರೋಧಿ ಎಂಬಂತಹ ಹಣೆಪಟ್ಟಿಗಳನ್ನು ನಂಬೂದಿರಿಯವರಿಗೆ “ಪ್ರಗತಿಶೀಲರು’ ಉದಾರವಾಗಿ ನೀಡಿದಾಗಲೂ ಪ್ರೀತಿಯೊಂದೇ ಮನುಕುಲದ ಅಡಿಪಾಯ ಎಂದು ಪುನರುಚ್ಚರಿಸಿದರು ಈ ಭೀಷ್ಮಾಚಾರ್ಯ.

ಬೆಳಕಿನ ದುಃಖ ಕತ್ತಲಿನ ಸುಖ
ವೇದಪಂಡಿತರ ಕುಟುಂಬವೊಂದರಲ್ಲಿ ಹುಟ್ಟಿದ ಅಚ್ಯುತನಿಗೆ ಸಹಜವಾಗಿ ಸಂಸ್ಕೃತ ಭಾಷೆ ಮತ್ತು ಸಾಹಿತ್ಯದಲ್ಲಿ ಚಿಕ್ಕವನಾಗಿದ್ದಾಗಲೇ ಆಸಕ್ತಿ ಬೆಳೆದಿತ್ತು. ಬಾಲಕನಾದ ಅಚ್ಯುತನ್‌ ಮೊದಲು ಬರೆಯಲು ಆರಂಭಿಸಿದ್ದು ಸಂಸ್ಕೃತ ವೃತ್ತಗಳನ್ನು ಅಳವಡಿಸಿ ಮಲಯಾಳ ಶ್ಲೋಕಗಳನ್ನು. ಬಳಿಕ ತನ್ನ ಗುರುವಾದ ಇಡಶೇರಿ ಗೋವಿಂದನ್‌ ನಾಯರ್‌ ಎಂಬ ಮಹಾನ್‌ ಸಾಹಿತಿಯ ಒಡನಾಟದಿಂದ ಯುವಕ ಅಚ್ಯುತನಿಗೆ ಸಾಹಿತ್ಯದ ಆಯಾಮಗಳು ಮನದಟ್ಟಾದವು. ಹಲವು ಪತ್ರಿಕೆಗಳ ಸಂಪಾದಕನಾಗಿ ಸಾಹಿತ್ಯ ಸೃಷ್ಟಿ ಆರಂಭಿಸಿ¨ರು. ಅವರು ಸಾಹಿತ್ಯ ಲೋಕಕ್ಕೆ ಪರಿಚಿತರಾದುದು ಮೇರುಕೃತಿಯಾದ ಇರುಪತಾಂ ನೂಟಾಂಡಿನೆr ಇತಿಹಾಸಂ (20ನೆ ಶತಮಾನದ ಐತಿಹ್ಯ) ಮೂಲಕ. ತಮಸೋಮಾ ಜ್ಯೋತಿರ್ಗಮಯ, ಅಸತೋಮ ಸದ್ಗಮಯ ಎಂಬ ಶ್ಲೋಕವನ್ನು ತಿರುಚಿ ಬೆಳಕು ದುಃಖವಾಗುತ್ತದೆ, ಕತ್ತಲೋ ಸುಖಮಯ ಎಂದು ಬರೆದ ಅಚ್ಯುತನ್‌ 1952ರಲ್ಲಿ ನವ್ಯಕಾವ್ಯದ ಮುಂಗಾಮಿಯಾಗಿ ಹೊರಬಂದರು. ಇದರ ನಿಜವಾದ ಅರ್ಥ ಗೊತ್ತಾಗದ ಅನೇಕ ಮಂದಿ ಚಿಂತಕರು, ವಿಮರ್ಶಕರು, ಕವಿಗಳು ಇವರ ಮೇಲೆ ಹರಿಹಾಯ್ದು “ಇವನು ಕತ್ತಲಿನ ವಕ್ತಾರ’ ಎಂದು ಲೇವಡಿ ಮಾಡಿದರು. ಜೀವನವೆಂಬ ಬೆಳಕು ಶಾಶ್ವತವಾದ ಸಾವಿನ ಇರುಳಿನ ಮಧ್ಯೆ ಕಾಣುವ ಒಂದು ಕ್ಷಣಿಕವಾದ ಪ್ರಭೆ- ಎಂದು ಅಚ್ಯುತನ್‌ ಹೇಳುತ್ತಿರುವುದು ಯಾಕೋ ತುಂಬಾ ಬುದ್ಧಿಜೀವಿಗಳಿಗೆ ಅರ್ಥವಾಗಲಿಲ್ಲ. ಕಾಲ್ಪನಿಕತೆಯ ಲಾವಣ್ಯಮಯ ಪ್ರಪಂಚದಲ್ಲಿ ತೇಲಾಡುತ್ತಿದ್ದ ಓದುಗರಿಗೆ ಅಚ್ಯುತನ್‌ ಅವರ ಹೊಸ ಶೈಲಿ, ವಿಧಾನ, ಆಖ್ಯಾನ, ಕಥನ ಎಲ್ಲವೂ ದೊಡ್ಡ ಆಘಾತ ನೀಡಿತ್ತು.

ನವೋದಯ ಕಾಲದ ರಮ್ಯ ಪ್ರತೀಕಗಳನ್ನೂ, ರೂಪಕಗಳನ್ನೂ ಒಡೆಯುತ್ತ ಹೊಸ ಭಾಷ್ಯವನ್ನು ಕಾವ್ಯಪ್ರಪಂಚಕ್ಕೆ ನೀಡುತ್ತಾ ಆಧುನಿಕ ಜಗತ್ತಿನ ಅಮಾನುಷತೆಯತ್ತ ಓದುಗರ ಗಮನ ಸೆಳೆದ‌ರು. ಇಎಂಎಸ್‌ ಹಾಗೂ ವಿ.ಟಿ. ಭಟ್ಟತ್ತಿರಿಪಾಡ್‌ ಇವರ ಜೊತೆ ಸೇರಿ ನಂಬೂದಿರಿ ಸಮಾಜದಲ್ಲಿ ಕಂಡುಬಂದ ಸಾಮಾಜಿಕ ದುಷ್ಟತೆಗಳನ್ನು ನಿರ್ಮೂಲನೆ ಮಾಡಲು ಅಚ್ಯುತನ್‌ ಅಹಿರ್ನಿಶಿ ಪ್ರಯತ್ನಪಟ್ಟವರು. ಅಸ್ಪೃಶ್ಯತೆಯ ವಿರುದ್ಧ ಯುದ್ಧ ಸಾರಿದ ಅಚ್ಯುತನ್‌ ನಂಬೂದಿರಿಯವರು ತಮಗೆ ಸಹಜವಾಗಿ ಬಂದ ವೇದಗಳ ಅರಿವನ್ನು ಅಬ್ರಾಹ್ಮಣರಿಗೂ ಕಲಿಸಿಕೊಟ್ಟರು. ಸಂಸ್ಕೃತದಲ್ಲಿ ಮಾತ್ರ ಲಭ್ಯವಿದ್ದ ಶ್ರೀಮಹಾಭಾಗವತವನ್ನು ಮಲಯಾಳ ಭಾಷೆಗೆ ಅನುವಾದ ಮಾಡಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾದರು ಈ ಹೋರಾಟಗಾರ. ಮಿಕ್ಕವರಿಗಾಗಿ ಒಂದು ಬೊಟ್ಟು ಕಣ್ಣೀರು ಸುರಿಸಿದಾಗ ತಮ್ಮ ಆತ್ಮದಲ್ಲಿ ಸಾವಿರ ಸೌರಮಂಡಲಗಳು ಉದಯಿಸುತ್ತವೆ ಎಂದು ಅವರು ಮನಗಂಡಿದ್ದರು. ಮಿಕ್ಕವರಿಗೋಸ್ಕರ ಒಂದು ಸರಳ ನಗುವನ್ನು ವೆಚ್ಚಮಾಡಿದಾಗ ತಮಗೆ ಲಭಿಸುವುದು ಹೃದಯದಲ್ಲಿ ಅರಳುವ ನಿತ್ಯ ನಿರ್ಮಲವಾದ ಹುಣ್ಣಿಮೆ ಎಂದು ಈ ಕವಿ ಹೇಳುತ್ತ ಬಂದರು. ಇತಿಹಾಸ ಸೃಷ್ಟಿಸುವ ಪಾಪಗಳೆಲ್ಲವನ್ನೂ ತಾನು ಕಣ್ಣೀರಿನಿಂದ ತೊಳೆದುಬಿಡಬಲ್ಲೆ ಎಂಬ ನಂಬಿಕೆ ಅವರಿಗೆ ಇತ್ತು. ಹಾಗಾಗಿಯೆ “ಅವರ ಕವನದಲ್ಲಿ ಹರಿಯುತ್ತಿರುವ ಕಣ್ಣೀರು ರಕ್ತದ ಹನಿಗಳು’ ಎಂದು ವಿಮರ್ಶಕರು ಹೇಳಿರುವುದು.

Advertisement

ರಸ್ತೆಯಲ್ಲಿ ಕಾಗೆ ಕುಕ್ಕಿ ತಿನ್ನುತ್ತದೆ ಸತ್ತ ಹೆಣ್ಣಿನ ಕಣ್ಣುಗಳ ಮೊಲೆಯನ್ನು ಚೀಪುತ್ತದೆ ನರವರ್ಗದ ನವಅತಿಥಿ
-ಅಚ್ಯುತನ್‌ ಅವರ ಈ ಸಾಲು ಈಗಲೂ ಪ್ರಸ್ತುತವಾಗಿದೆ ಎಂಬುದು ಮೊನ್ನೆ ಹೈದರಾಬಾದಿನಲ್ಲಿ ನಡೆದ ಆಘಾತಕಾರಿ ಘಟನೆಯ ನೆನೆದಾಗ ಮನಕ್ಕೆ ತಾಗುತ್ತದೆ. ಪಾಪದ ಕೊಳದಲ್ಲಿ ಬಿದ್ದು ಒ¨ªಾಡುತ್ತಿರುವ ಆಧುನಿಕ ಮನುಕುಲಕ್ಕೆ ಮುಂದೆ ಸಾಗುವ ದಾರಿಯನ್ನು ಅವರು ತೋರಿದ್ದು- ಕಣ್ಣೀರನ್ನೂ ನಗೆಯನ್ನೂ ಬೆರೆಸಿ ಬರೆದಿರುವ ತಮ್ಮ ಕವನಗಳ ಮೂಲಕ.

93ನೆಯ ವಯಸ್ಸಿನಲ್ಲಿ ಬಂದ ಪ್ರಶಸ್ತಿ
ಉಕ್ರೇನ್‌ ರಾಜ್ಯದ ಅಂದಿನ ಶಸ್ತ್ರಾಸ್ತ್ರ ಗೃಹಗಳು ಇಂದು ಕೃಷಿ ಉಪಕರಣಗಳನ್ನು ನಿರ್ಮಿಸುವ ಕಾರ್ಖಾನೆಗಳಾಗಿ ಮಾರ್ಪಾಡಾಗಿವೆ ಎಂಬ ವಿಷಯವನ್ನು ಯಾರೋ ಅಕ್ಕಿತ್ತಮ್‌ ಬಳಿ ಹೇಳಿದಾಗ, ಸೊವಿಯಟ್‌ ಯೂನಿಯನ್‌ ಪತನವಾಗುವ ಎಷ್ಟೋ ವರ್ಷಗಳಿಗೆ ಮುನ್ನ ತಾವು ಬರೆದ, ಕೋವಿ ಮತ್ತು ಖಡ್ಗ ನಿರ್ಮಿಸಲು ಬಳಸಿದ ಕಬ್ಬಿಣದ ತುಂಡುಗಳನ್ನು ಕರಗಿಸಿ ನೇಗಿಲು ಮಾಡಬಹುದು ಎಂಬ ಸಾಲುಗಳನ್ನು ನೆನೆದು ಅವರ ಮುಖದಲ್ಲಿ ಮಂದಸ್ಮಿತವು ಹರಡಿತ್ತು. ಇವರ ದೂರದೃಷ್ಟಿಗೆ ಇದಲ್ಲದೆ ಬೇರೆ ಯಾವ ಉದಾಹರಣೆ ಬೇಕು? ಅಚ್ಯುತನ್‌ ಅವರ ಬಾಲಿ ದರ್ಶನಂ ಕೃತಿ 1973ರಲ್ಲಿ ಕೇಂದ್ರ ಸಾಹಿತ್ಯ ಪ್ರಶಸ್ತಿ ತಂದುಕೊಟ್ಟಿತ್ತು. ಅರಂಗೇಟ್ಟಂ, ಇಡಿಟಞು ಪೊಳಿಂಞ ಲೋಕಂ, ನಿಮಷ ಕ್ಷೇತ್ರಂ, ಉಪನಯನಂ, ಸಮವರ್ತನಂ, ಅಮೃತಘಟಿಕ ಮೊದಲಾದುವು ಅಚ್ಯುತನ್‌ ಅವರ ಶ್ರೇಷ್ಠ ಕೃತಿಗಳು.

ಈ ಆನೆಗಳು ಯಾವುವೂ ನನ್ನದಲ್ಲ, ಈ ಮಹಾನ್‌ ಕ್ಷೇತ್ರವೂ ನನ್ನದಲ್ಲ- ಎಂದು ಬರೆದ ಅಚ್ಯುತನ್‌ ಯಾವುದನ್ನೂ ತಮಗಾಗಿ ಬಯಸಲಿಲ್ಲ. 93ನೆಯ ವಯಸ್ಸಿನಲ್ಲಿ ಹೀಗೊಂದು ದೊಡ್ಡ ಪ್ರಶಸ್ತಿ ಬಂದಾಗ, “ನನಗಿಂತ ಅರ್ಹರು ಬೇರೆ ಎಷ್ಟೋ ಜನ ಇದ್ದಾರೆ’ ಎಂದು ಪ್ರತಿಕ್ರಿಯಿಸಿ ಬೊಚ್ಚು ಬಾಯಲ್ಲಿ ನಕ್ಕರು. ಪ್ರೀತಿ ಮತ್ತು ತಾಳ್ಮೆ ಒಂದು ದಿನ ಗೆಲ್ಲುತ್ತದೆ ಎಂಬ ಗಾಂಧಿ ತತ್ವವನ್ನು ಅಜ್ಜ ಈ ಹೊತ್ತಲ್ಲೂ ನೆನಪಿಸಿದರು. ಪದ್ಮಶ್ರೀ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಬೀರ್‌ ಸಮ್ಮಾನ್‌, ವಯಲಾರ್‌ ಅವಾರ್ಡ್‌, ಮಾತೃಭೂಮಿ ಪುರಸ್ಕಾರ ಅವರನ್ನು ಹುಡುಕಿ ಬಂದಿವೆ. ತುಂಬು ಜೀವನ ಕಂಡ, ಕಾವ್ಯ ದಾರ್ಶನಿಕ‌ ಅಜ್ಜನಿಗೆ ಈಗಲೂ ಯಾವುದೂ ತಮ್ಮದಾಗಿ ಇರುವುದಿಲ್ಲ. ಕಣ್ಣೀರು ಮತ್ತು ನಗು ಮಾತ್ರವೇ ಸದಾ ಅವರಿಗೆ ಸ್ವಂತ.

ಟಿ. ಕೆ. ರವೀಂದ್ರನ್‌

Advertisement

Udayavani is now on Telegram. Click here to join our channel and stay updated with the latest news.

Next