Advertisement

ದಕ್ಷಿಣದಲ್ಲೂ ಸ್ಫೋಟಕ್ಕೆ ಜೆಎಂಬಿ ಸಂಚು

12:30 AM Jan 29, 2019 | Team Udayavani |

ಬೆಂಗಳೂರು: ಬಾಂಗ್ಲಾದೇಶದ ಉಗ್ರ ಸಂಘಟನೆ ಜಮಾತ್‌-ಉಲ್‌-ಮುಜಾಹಿದ್ದೀನ್‌ ಬಾಂಗ್ಲಾದೇಶ್‌ (ಜೆಎಂಬಿ) ಸಂಘಟನೆಯ ಉಗ್ರ ಜಹೀಲುªಲ್‌ ಇಸ್ಲಾಂ ಅಲಿಯಾಸ್‌ ಕೌಸರ್‌ ಹಾಗೂ ಆತನ ಸಹಚರರು ದಕ್ಷಿಣ ಭಾರತದ ಬೌದ್ಧ ವಿಹಾರಗಳ ಮೇಲೂ ದಾಳಿಗೆ ಸಂಚು ರೂಪಿಸಿದ್ದರು. ಸೋಮವಾರ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಪಾಟ್ನಾದಲ್ಲಿರುವ ವಿಶೇಷ ಕೋರ್ಟ್‌ಗೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಈ ಅಂಶ ಉಲ್ಲೇಖೀಸಲಾಗಿದೆ. ಜಹೀಲುದ್ದೀನ್‌ ಬಿಹಾರದ ಬೋಧ್‌ಗಯಾದಲ್ಲಿ ಬೌದ್ಧ ಗುರು ದಲೈಲಾಮ ಅವರನ್ನು ಗುರಿಯಾಗಿಸಿಕೊಂಡು ಬಾಂಬ್‌ ಸ್ಫೋಟ ನಡೆಸಲು ಸಂಚು ರೂಪಿಸಿದ ಆರೋಪ ಎದುರಿಸುತ್ತಿದ್ದಾನೆ.

Advertisement

ಕಳೆದ ವರ್ಷ ಜ.19ರಂದು ಬೋಧ್‌ಗಯಾದ ಕಾಲಚಕ್ರ ಮೈದಾನದಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ)ಗಳನ್ನು ಸ್ಫೋಟಿಸಿದ ಪ್ರಕರಣದಲ್ಲಿ ರಾಮನಗರದಲ್ಲಿ ಆತ ಬಂಧಿತನಾಗಿದ್ದ. 

ಮ್ಯಾನ್ಮಾರ್‌ನ‌ಲ್ಲಿ ರೋಹಿಂಗ್ಯಾ ಮುಸ್ಲಿಂರ ಮೇಲೆ ನಡೆಯುತ್ತಿದ್ದ ದೌರ್ಜನ್ಯಕ್ಕೆ ಪ್ರತಿಯಾಗಿ ಭಾರತದ ಬೌದ್ಧಮಂದಿರಗಳಲ್ಲಿ ಸ್ಫೋಟ ನಡೆಸಿ ಉಗ್ರ ಕೃತ್ಯಗಳನ್ನು ನಡೆಸುವ ಉದ್ದೇಶ ಹೊಂದಿದ್ದ ಕೌಸರ್‌ ಹಾಗೂ ಇತರ ಆರೋಪಿಗಳು ಬೋಧ್‌ಗಯಾ ಸೇರಿದಂತೆ ದೇಶದ ಇತರೆ ಬೌದ್ಧ ಮಂದಿರಗಳಲ್ಲಿ ಬಾಂಬ್‌ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು. ಈ ಕಾರ್ಯಕ್ಕಾಗಿ ಕರ್ನಾಟಕ, ಹೈದರಾಬಾದ್‌, ಚೆನ್ನೈ ಸೇರಿದಂತೆ ದಕ್ಷಿಣ ಭಾರತದ ಹಲವು ಕಡೆ ಸಂಚರಿಸಿದ್ದು ಸಂಚು ಹೆಣೆದಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಪ್ರತಿಪಾದಿಸಲಾಗಿದೆ. ಐಇಡಿ ಬಾಂಬ್‌ ತಯಾರಿಸುವಲ್ಲಿ ನಿಪುಣನಾಗಿರುವ ಉಗ್ರ ಕೌಸರ್‌, ಮೂರು ಸುಧಾರಿತ ಸ್ಫೋಟಕ (ಐಇಡಿ), ಎರಡು ಕಚ್ಚಾ ಬಾಂಬ್‌ಗಳನ್ನು ತಯಾರಿಸಿದ್ದ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ತಿಳಿಸಲಾಗಿದೆ.

ಸ್ಲಿàಪರ್‌ ಸೆಲ್‌: ಬೋಧ್‌ಗಯಾ ಸ್ಫೋಟ ಪ್ರಕರಣದ ನಂತರ ಬೆಂಗಳೂರಿಗೆ ಆಗಮಿಸಿದ್ದ ಕೌಸರ್‌ ಹಾಗೂ ಆತನ ಸಹಚರರು ಗುರುತನ್ನು ಮರೆಮಾಚಿ ಬೆಂಗಳೂರು ನಗರದ ಹೊರವಲಯಗಳಲ್ಲಿ ಬಾಡಿಗೆ ಮನೆಗಳಲ್ಲಿ  ವಾಸಿಸುತ್ತಿದ್ದರು. ಉಗ್ರ ಸಂಘಟನೆಗೆ ಬೇಕಾದ ಹಣ ಹೊಂದಿಸಲು ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಡಕಾಯಿತಿ ಕೃತ್ಯಗಳನ್ನು ಎಸಗಿದ್ದರು ಎಂದೂ ಸ್ಪಷ್ಟಪಡಿಸಿದ್ದಾರೆ.

ಕಳೆದ ಏಪ್ರಿಲ್‌ 24ರಂದು ರಾತ್ರಿ 10 ಗಂಟೆ ಸುಮಾರಿಗೆ ಉಗ್ರ ಕೌಸರ್‌ ಅಲಿ ಮತ್ತು ತಂಡ  ವೆಂಕಟೇಶ್‌ ರೆಡ್ಡಿ ಎಂಬವರ ಮನೆಗೆ ನುಗ್ಗಿ ಅವರ ಕೈ, ಕಾಲುಗಳನ್ನು ಕಟ್ಟಿ ಮನೆಯಲ್ಲಿದ್ದ 4.5 ಲಕ್ಷ ರೂ. ನಗದು, 12 ಗ್ರಾಂ ತೂಕದ ಉಂಗುರ, 25 ಸಾವಿರ ರೂ. ಮೌಲ್ಯದ ವಾಚ್‌ ಹಾಗೂ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಇದೇ ರೀತಿ ನಾಗರಾಜ್‌ರೆಡ್ಡಿ  ಎಂಬವರ ಮನೆಗೂ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿದ್ದಾರೆ. ಜತೆಗೆ, ಇನ್ನೂ ಹಲವು ಡಕಾಯಿತಿ ಕೃತ್ಯಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

Advertisement

ರಾಮನಗರದಲ್ಲಿ ಸೆರೆ: ಬೋಧ್‌ಗಯಾ ಸ್ಫೋಟ ಘಟನೆ ಬಳಿಕ ಬೆಂಗಳೂರಿಗೆ ಆಗಮಿಸಿದ್ದ ಕೌಸರ್‌ ರಾಮನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಆಶ್ರಯ ಪಡೆದುಕೊಂಡು ಇಲ್ಲಿಂದಲೇ ಉಗ್ರ ಕೃತ್ಯಗಳಿಗೆ ಸಂಚು ರೂಪಿಸಿದ್ದ. ಈ ಮಾಹಿತಿ ಆಧರಿಸಿದ ಎನ್‌ಐಎ ಅಧಿಕಾರಿಗಳು ಕಳೆದ ಆಗಸ್ಟ್‌ 7ರಂದು ಕೌಸರ್‌ ಉಳಿದುಕೊಂಡಿದ್ದ ನಿವಾಸದ ಮೇಲೆ ದಾಳಿ ನಡೆಸಿ ಬಂಧಿಸಿದ್ದರು. ಬಳಿಕ ಆತನ ಸಹಚರ ಆದಿಲ್‌ ಶೇಖ್‌ನನ್ನು ಕಂಟೋನ್ಮೆಂಟ್‌ ರೈಲ್ವೇ ನಿಲ್ದಾಣದಲ್ಲಿ ಬಂಧಿಸಿದ್ದರು. 

ಉಗ್ರ ಆರೀಫ್ಗಾಗಿ ಶೋಧ! 
ಬೋಧ್‌ಗಯಾ ಸ್ಫೋಟ ಪ್ರಕರಣ ಸಂಬಂಧ ಕಳೆದ ಸೆಪ್ಟೆಂಬರ್‌ನಲ್ಲಿ ಪೈಗಂಬರ್‌ ಶೇಕ್‌ ಸೇರಿದಂತೆ ಮೂವರ ವಿರುದ್ಧ ಮೊದಲ ಹಂತದ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು. ಇದೀಗ ಪ್ರಕರಣದ ಪ್ರಮುಖ ಆರೋಪಿಗಳಾದ ಕೌಸರ್‌, ಆದಿಲ್‌ ಶೇಖ್‌, ದಿಲ್ವಾರ್‌ ಹುಸೈನ್‌, ಅಬ್ದುಲ್‌ ಕರೀಂ, ಮುಸ್ತಾಫಿಜೂರ್‌ ರೆಹಮಾನ್‌,  ಆರೀಪ್‌ ಹುಸೇನ್‌ ವಿರುದ್ಧ ಸೋಮವಾರ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ತಲೆಮರೆಸಿಕೊಂಡಿರುವ ಉಗ್ರ ಆರೀಪ್‌ ಹುಸೈನ್‌ಗಾಗಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಉಗ್ರ ಕೌಸರ್‌ ಹಾಗೂ ಆತನ ಸಹಚರರು ರಾಜ್ಯದ ಬೌದ್ಧ ಮಂದಿರಗಳನ್ನು ಟಾರ್ಗೆಟ್‌ ಮಾಡಿಕೊಂಡಿದ್ದರು ಜತೆಗೆ, ಉಗ್ರ ಸಂಘಟನೆಯ ಆರ್ಥಿಕ ಬಲ ವೃದ್ಧಿಸುವುದಕ್ಕಾಗಿ ಬೆಂಗಳೂರಿನಲ್ಲಿ ಡಕಾಯಿತಿ ಕೃತ್ಯಗಳಲ್ಲಿ ಭಾಗಿಯಾಗಿದ್ದರು ಎಂಬ ಬಗ್ಗೆ ಉದಯವಾಣಿ ಈ ಹಿಂದೆ ವಿಶೇಷ ವರದಿಗಳನ್ನು ಪ್ರಕಟಿಸಿತ್ತು. 

– ಮಂಜುನಾಥ ಲಘುಮೇನಹಳ್ಳಿ
 

Advertisement

Udayavani is now on Telegram. Click here to join our channel and stay updated with the latest news.

Next