Advertisement

ಜಿಂದಾಲ್‌ ಉದ್ಯೋಗಿಗೆ ಸೋಂಕು

02:55 PM Jun 22, 2020 | Suhan S |

ಕೊಪ್ಪಳ: ಜಿಲ್ಲೆಯಲ್ಲಿ ಜಿಂದಾಲ್‌ ಕಾರ್ಖಾನೆಯ ಉದ್ಯೋಗಿಗೆ ಭಾನುವಾರ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆಯು 29ಕ್ಕೆ ಏರಿಕೆಯಾದಂತಾಗಿದೆ.

Advertisement

ಇನ್ನೂ ಜಿಂದಾಲ್‌ ನಂಜು ಜಿಲ್ಲೆಯಲ್ಲಿ ಸದ್ದಿಲ್ಲದೇ ವ್ಯಾಪಿಸಲಾರಂಭಿಸಿದ್ದು, ಜನತೆಯಲ್ಲಿ ಆತಂಕ ಮನೆ ಮಾಡಿದೆ. ಜಿಲ್ಲೆಯ ಗಂಗಾವತಿ ತಾಲೂಕಿನ ಮರಳಿ ಗ್ರಾಮದ 32 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಈತನು ಬಳ್ಳಾರಿ ಜಿಲ್ಲೆಯ ಜಿಂದಾಲ್‌ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದಾನೆ. ಈತನಿಗೆ ಸೋಂಕಿನ ಲಕ್ಷಣವಿಲ್ಲದಿದ್ರೂ ಸೋಂಕು ದೃಢಪಟ್ಟಿದೆ. ಇನ್ನೂ ಈ ವ್ಯಕ್ತಿಯನ್ನು ಜೂ.14ರಂದು ಗಂಗಾವತಿ ತಾಲೂಕಿನ ಹೊಸಳ್ಳಿಯ ದೇವರಾಜ ಅರಸು ವಸತಿ ನಿಲಯದಲ್ಲಿ ಕ್ವಾರೆಂಟೈನ್‌ ಮಾಡಲಾಗಿತ್ತು. ಜೂ.18 ರಂದು ಗಂಟಲು ದ್ರವ ಪಡೆದು ಪ್ರಯೋಗಾಲಯಕ್ಕೆ ರವಾನಿಸಿತ್ತು. ಭಾನುವಾರ ಸೋಂಕು ದೃಢಪಟ್ಟಿದೆ. ಇನ್ನೂ ಈತನ ಟ್ರಾವೆಲ್‌ ಹಿಸ್ಟರಿ ನೋಡಿದಾಗ ಪ್ರತಿ ನಿತ್ಯ ಮರಳಿ ಗ್ರಾಮದಿಂದ ಜಿಂದಾಲ್‌ ಕಾರ್ಖಾನೆಗೆ ಬೈಕ್‌ನಲ್ಲಿ ತೆರಳಿ ವಾಪಸ್ಸಾಗುತ್ತಿದ್ದನು. ಜೂ.8 ರಂದು ಕೊನೆಯದಾಗಿ ಈತನು ಜಿಂದಾಲ್‌ ಕಾರ್ಖಾನೆಗೆ ತೆರಳಿದ್ದನು. ಆ ಬಳಿಕ ಈತನನ್ನು ಮನೆಯಲ್ಲಿಯೇ ಹೋಂ ಕ್ವಾರಂಟೈನ್‌ ಮಾಡುವಂತೆ ಸೂಚಿಸಲಾಗಿತ್ತು. ಬಳಿಕ ವಸತಿ ನಿಲಯದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಗೆ ಒಳಪಡಿಸಲಾಗಿತ್ತು. ಸೋಂಕಿತನಿಗೆ ಮನೆಯಲ್ಲಿ ನಾಲ್ಕು ಜನ ಈತನಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದು, 4 ಜನ ದ್ವಿತೀಯ ಸಂಪರ್ಕಕ್ಕೆ ಬಂದಿದ್ದಾರೆ.

ಈತನನ್ನು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಜಿಲ್ಲೆಯಲ್ಲಿ ಶನಿವಾರದ ಅಂತ್ಯಕ್ಕೆ 28 ಜನರು ಕೋವಿಡ್ ಸೋಂಕಿತರಿದ್ದರು. ಭಾನುವಾರಕ್ಕೆ ಸೋಂಕಿತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಈ ವರೆಗೂ ಕೋವಿಡ್‌ ಆಸ್ಪತ್ರೆಯಿಂದ 12 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದಾಳೆ. ಇನ್ನೂಳಿದವರಿಗೆ ಚಿಕಿತ್ಸೆ ಮುಂದುವರಿದಿದೆ.

ಜಿಂದಾಲ್‌ ನಂಜು ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಈಚೆಗಷ್ಟೆ ಮರಳಿ ಗ್ರಾಮದಲ್ಲಿ ಜಿಂದಾಲ್‌ ದಂಪತಿಗೆ ಸೋಂಕು ತಗುಲಿತ್ತು. ಇದರಲ್ಲಿ ಮಹಿಳೆ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಳು. ಜಿಂದಾಲ್‌ ಜಾಲವು ಜಿಲ್ಲೆಯ ಕೆಲವು ಭಾಗದಲ್ಲಿ ಕಾಣಿಸಿಕೊಂಡು ಜನರನ್ನು ತಲ್ಲಣಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next