Advertisement

ಜಯವೇ (ರಾಜ)ಧರ್ಮದ ಮೂಲವಯ್ಯ!

11:15 PM Apr 08, 2023 | Team Udayavani |

ಚುನಾವಣೆಯಲ್ಲಿ ನಾನಾ ಸಿದ್ಧಾಂತದ ಪಕ್ಷಗಳು ತಮ್ಮ ನೀತಿಯನ್ನು ಹೇಳಿದಾಗ ಜನರು ಅವರಿಗಿಷ್ಟವಾದ ಪಕ್ಷವನ್ನು ಆರಿಸುತ್ತಾರೆಂಬ ನೀತಿ ಪ್ರಜಾಪ್ರಭುತ್ವದ ಬುನಾದಿ. ಆರಂಭದಲ್ಲಿ ಪಕ್ಷವನ್ನು ಗಟ್ಟಿಗೊಳಿಸಲು ಜನರ ಮುಂದೆ ಹೋಗುತ್ತಿದ್ದಾಗ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗಿತ್ತು. ಆಗ ಸಿದ್ಧಾಂತ ಪ್ರಥಮ, ಗೆಲುವು ದ್ವಿತೀಯ ಸ್ಥಾನಿಯಾಗಿತ್ತು. ಕ್ರಮೇಣ ಗೆಲುವು ಪ್ರಥಮ ಸ್ಥಾನಿಯಾ ದಾಗ ಸಿದ್ಧಾಂತ ದ್ವಿತೀಯ ಸ್ಥಾನಕ್ಕೆ ಕುಸಿಯಬೇಕಾಯಿತು. ನಾಯಕರ ಲ್ಲಾದ ಈ ಬದಲಾವಣೆ ಸಮಾಜದ ಮೇಲೂ ಸಹಜವಾಗಿಯೇ ಮೂಡಿದೆ.

Advertisement

ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡು ಸದಾಶಿವ ರಾಯರು ಆಗರ್ಭ ಶ್ರೀಮಂತರಾಗಿದ್ದು ಎಲ್ಲವನ್ನೂ ಕಳೆದುಕೊಂಡ ಮೇಲೆ “ಶಿವರಾಮ, ನನಗೆ ಒಂದು 25 ರೂ. ಸಾಲ ಕೊಡು’ ಎಂದು ಸಾಹಿತಿ ಶಿವರಾಮ ಕಾರಂತರನ್ನು ಕೇಳಿದ್ದುಂಟು. ಕಾರಂತರು “ಔದಾರ್ಯದ ಉರುಳಲ್ಲಿ’ ಕಾದಂಬರಿಯನ್ನು ಸದಾಶಿವ ರಾಯರಿಗೆ ಸಮರ್ಪಿಸಿದರು.

1937ರಲ್ಲಿಯೇ ಪ್ರಾಂತೀಯ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ನಿಂದ ಕಾರ್ನಾಡು ಸದಾಶಿವ ರಾಯರು ವಂಚಿತರಾದದ್ದನ್ನೂ, ತ್ಯಾಗಕ್ಕೆ ಇನ್ನೊಂದು ಹೆಸರಾದ ಸ್ವಾತಂತ್ರ್ಯಹೋರಾಟಗಾರ ಮೂಡುಬಿದಿರೆ ಉಮೇಶ ರಾಯರು ಕಾಸರಗೋಡಿನ ಉಳಿವಿಗಾಗಿ ಹೋರಾಡಿದ ಬಗೆಯನ್ನೂ ಕವಿ ಕಯ್ನಾರ ಕಿಂಞಣ್ಣ ರೈಯವರು “ದುಡಿತವೇ ನನ್ನ ದೇವರು’ ಕೃತಿಯಲ್ಲಿ ಸ್ಮರಿಸುತ್ತಾರೆ.
1954ರಲ್ಲಿ ಭಾರತೀಯ ಜನಸಂಘ (1980ರ ಬಳಿಕ ಬಿಜೆಪಿ) ಜನ್ಮತಾಳಿತು. 1957ರಲ್ಲಿ ಪುತ್ತೂರಿ ನಲ್ಲಿ ಕೆ.ರಾಮ ಭಟ್‌, ಮಂಗಳೂರು 1ರಲ್ಲಿ ಪ್ರಭಾಕರ, 1962ರಲ್ಲಿ ಪುತ್ತೂರಿನಲ್ಲಿ ರಾಮ ಭಟ್‌, ಬೆಳ್ತಂಗಡಿಯಲ್ಲಿ ವಿಶ್ವನಾಥ ಶೆಣೈ, ಮಂಗಳೂರು 1ರಲ್ಲಿ ಸಿ.ಜಿ.ಕಾಮತ್‌, ಮಂಗಳೂರು 2ರಲ್ಲಿ ರಘುನಾಥ್‌, ಸುರತ್ಕಲ್‌ನಲ್ಲಿ ಸುಂದರ ಅಮೀನ್‌, ಉಡುಪಿಯಲ್ಲಿ ದೇವಪ್ರಸಾದ ಶೆಟ್ಟಿ, ಬ್ರಹ್ಮಾವರದಲ್ಲಿ ಕೆ.ಮಹಾಬಲೇಶ್ವರ ಅಡಿಗ ಸ್ಪರ್ಧಿಸಿ ಠೇವಣಿ ಕಳೆದುಕೊಂಡರು. 1967ರಲ್ಲಿ ಪುತ್ತೂರು- ರಾಮ ಭಟ್‌, ಬೆಳ್ತಂಗಡಿ- ಕೆ.ವಿ.ನಾಯಕ್‌, ಮಂಗಳೂರು 1- ಸಿ.ಜಿ.ಕಾಮತ್‌ ಸ್ಪರ್ಧಿಸಿ ಸ್ವಲ್ಪ ಹೆಚ್ಚಿಗೆ ಮತಗಳನ್ನು ಗಳಿಸಿದ್ದರೆ, ಕಾರ್ಕಳದಲ್ಲಿ ಬೋಳ ರಘುರಾಮ ಶೆಟ್ಟಿಯವರು ವಿಜೇತರಾದರು. 1972ರಲ್ಲಿ ಸುಳ್ಯ- ಮುಂದಾರ, ಪುತ್ತೂರು- ರಾಮ ಭಟ್‌, ಬೆಳ್ತಂಗಡಿ – ನೇಮಿರಾಜ ಶೆಟ್ಟಿ, ಬಂಟ್ವಾಳ- ರುಕ್ಮಯ್ಯ ಪೂಜಾರಿ, ಮಂಗಳೂರು 1- ಸಿ.ಜಿ.ಕಾಮತ್‌, ಮಂಗಳೂರು 2- ನಾರಾಯಣ ಶೆಟ್ಟಿ, ಉಡುಪಿ- ಡಾ|ವಿ.ಎಸ್‌.ಆಚಾರ್ಯರು ಎರಡನೆಯ ಸ್ಥಾನಕ್ಕೆ ಬಂದರೆ, ಸುರತ್ಕಲ್‌- ರಘುನಾಥ ಕೋಟೆಂಕರ್‌, ಬ್ರಹ್ಮಾವರ- ಮಹಾಬಲೇಶ್ವರ ಅಡಿಗ, ಬೈಂದೂರು- ಎಸ್‌.ವಿ. ಪೈ, ಕಾರ್ಕಳ- ಬೋಳ ರಘುರಾಮ ಶೆಟ್ಟಿಯವರು ಆ ಸ್ಥಾನಕ್ಕೂ ತಲುಪಲಿಲ್ಲ.
1978ರಲ್ಲಿ ಜನತಾ ಪಾರ್ಟಿಯಾಗಿ ಸುಳ್ಯ, ಪುತ್ತೂರು, ಕುಂದಾಪುರದಲ್ಲಿ ಗೆಲುವು ಸಾಧಿಸಿದ್ದರೆ, ಉಳಿದ ಕ್ಷೇತ್ರ ಗಳಲ್ಲಿ ಎರಡನೆಯ ಸ್ಥಾನಕ್ಕೆ ತಲುಪಿತು. 1983ರಲ್ಲಿ ಕರಾವಳಿಯಲ್ಲಿ ಬಿಜೆಪಿ ಎಂಟು, 1985, 1989ರಲ್ಲಿ ಏಕಮಾತ್ರ, 1994ರಲ್ಲಿ ಏಳು, 1999ರಲ್ಲಿ ಐವರು, 2004ರಲ್ಲಿ 12, 2008ರಲ್ಲಿ ಎಂಟು, 2014ರಲ್ಲಿ ಇಬ್ಬರು, 2018ರಲ್ಲಿ ಉಡುಪಿ ಜಿಲ್ಲೆಯಲ್ಲಿ ಎಲ್ಲ ಐದು, ದ.ಕ. ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಏಳರಲ್ಲಿ ಗೆಲುವು ಸಾಧಿಸಿತು.

1957, 1962ರಲ್ಲಿ ಸಿಪಿಐ ಪುತ್ತೂರು, ಪಾಣೆ
ಮಂಗಳೂರು, ಮಂಗಳೂರಿನ ಎರಡು ಕ್ಷೇತ್ರಗಳಲ್ಲಿ ಎರಡು, ಮೂರನೆಯ ಸ್ಥಾನದಲ್ಲಿತ್ತು. 1972ರಲ್ಲಿ ಬಂಟ್ವಾಳ ಕ್ಷೇತ್ರದಿಂದ ಬಿ.ವಿ.ಕಕ್ಕಿಲ್ಲಾಯ ವಿಜೇತರಾಗಿ ದ್ದರು. 1989, 2008ರಲ್ಲಿ ಬಂಟ್ವಾಳದಲ್ಲಿ 3, 4ನೆಯ ಸ್ಥಾನಕ್ಕೆ ಇಳಿಯಿತು. 1967ರಿಂದ ಕೆಲವು ಕ್ಷೇತ್ರಗಳಲ್ಲಿ ಸೋಲುತ್ತಿದ್ದ ಸಿಪಿಐಎಂನಿಂದ 1983ರಲ್ಲಿ ಉಳ್ಳಾಲ ದಲ್ಲಿ ಪಿ.ರಾಮಚಂದ್ರ ರಾವ್‌ ಗೆಲುವು ಸಾಧಿಸಿದ್ದರು.
1957ರಲ್ಲಿ ಪ್ರಜಾ ಸೋಶಲಿಸ್ಟ್‌ ಪಾರ್ಟಿ(ಪಿಎಸ್‌ಪಿ)ಯ ಇಬ್ಬರು, 1962, 1967ರಲ್ಲಿ ತಲಾ ಮೂವರು ಶಾಸಕರು ಆಯ್ಕೆಯಾಗಿದ್ದರು. ಇದುವೇ ಜನತಾ ಪಾರ್ಟಿ, ಜನತಾ ದಳ, ಜೆಡಿಯು-ಜೆಡಿಎಸ್‌ ರೂಪಾಂತರಗಳು. ಈ ಜನತಾಪರಿವಾರ 1980-90ರ ದಶಕದಲ್ಲಿಯೂ ಪ್ರಬಲವಾಗಿಯೇ ಇದ್ದು ಹಲವು ಶಾಸಕರನ್ನು ಹೊಂದಿತ್ತು.

ಪಕ್ಷದ ಆರಂಭದ ಹಂತದಲ್ಲಿ ಕಳೆದುಕೊಳ್ಳುವು ದಕ್ಕಾಗಿಯೇ ಒಂದಿಷ್ಟು ನಾಯಕರು ಹುಟ್ಟಿದಂತೆ ಕಾಣುತ್ತದೆ. ಕಾಂಗ್ರೆಸ್‌ನಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಇದು ಕಂಡುಬಂದಿದೆ. ಸಿಪಿಐ 1925ರಲ್ಲಿ, ಸಿಪಿಎಂ 1964ರಲ್ಲಿ ಜನಿಸಿದ್ದವು. ಜನಸಂಘದಲ್ಲಿ 1950ರ ದಶಕದಲ್ಲಿ ಕಂಡಿದೆ. ಕೇಡರ್‌ ಬೇಸ್ಡ್ ಪಕ್ಷಗಳಾದ ಜನಸಂಘ, ಸಿಪಿಐ, ಸಿಪಿಐಎಂ ಲಾಭಕ್ಕಾಗಿ ಅಲ್ಲ, ಕರ್ತವ್ಯ, ಸಂಘಟನೆ ವೃದ್ಧಿಗಾಗಿ ಸ್ಪರ್ಧಿಸಿ ಗೀತೆಯಲ್ಲಿ ಶ್ರೀಕೃಷ್ಣ ಹೇಳಿದಂತೆ ನಿಷ್ಕಾಮ ಸೇವೆ ಸಲ್ಲಿಸಿದ್ದವು. ಈಗಲೂ ಠೇವಣಿ ಕಳೆದುಕೊಳ್ಳುವವರಿಲ್ಲವೆಂದಲ್ಲ, ಇದರಲ್ಲಿಯೂ ಲಾಭ ಗಳಿಸಿಕೊಳ್ಳುವ ನಿಪುಣರಿದ್ದಾರೆ. ಕಳೆದುಕೊಳ್ಳುವಾಗ ಜಾತಿಮತ, ಆರ್ಥಿಕ, ಸಾಮಾಜಿಕ ಭೇದವಿರುವುದಿಲ್ಲ. ಅಧಿಕಾರದಿಂದ ಲಾಭ ಮಾಡಿ ಕೊಳ್ಳಬಹುದು ಎಂಬ ಪ್ರಜ್ಞೆ ಮೂಡಿದಾಗ ಜಾತ್ಯ ತೀತರು ಜಾತಿವಾದಿಗಳಾಗುತ್ತಾರೆ, ಜಾತಿವಾದಿಗಳೂ ಜಾತ್ಯತೀತರಾಗುತ್ತಾರೆ.

Advertisement

ದಾಸರು ಹೀಗೆ ಹಾಡಿದ್ದಾರೆ
ಉಂಟಾದ ಕಾಲಕ್ಕೆ ನೆಂಟರು ಇಷ್ಟರು
ಬಂಟರಾಗಿ ಬಾಗಿಲ ಕಾಯ್ವರು|
ಉಂಟಾದತನ ತಪ್ಪಿ ಬಡತನ ಬಂದರೆ
ಒಂಟೆಯಂತೆ ಕತ್ತು ಮೇಲೆತ್ತುವರು||
ಇದನ್ನೇ ಸ್ವಲ್ಪ ತಿದ್ದುಪಡಿ
ಹೀಗೆ ಹಾಡಬಹುದು
ಜಯಗಳಿಸುವ ಕಾಲಕ್ಕೆ ಓಡೋಡಿ ಬರುವರು
ಸೋಲುವ ಕಾಲಕ್ಕೆ ಓಡೋಡಿ ಹೋಗುವರು||

ಪ್ರಜಾ(ಕು)ತಂತ್ರ!
ಪ್ರಜಾಪ್ರಭುತ್ವವನ್ನು “ಪ್ರಜಾತಂತ್ರ’ ಎಂದು ಕರೆಯುತ್ತಾರೆ. ನಡುವೆ “ಕು’ ಸೇರಿಸಿದರೆ ವರ್ತಮಾನ ಪರಿಸ್ಥಿತಿಗೆ ತೀರ ಸಮೀಪವಾಗುತ್ತೇವೆ ಎಂದು ಶಿವರಾಮ ಕಾರಂತರು ಇಳಿವಯಸ್ಸಿನಲ್ಲಿ ಹೇಳಿದ್ದರು.

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next