Advertisement

12 ಸೆಕೆಂಡುಗಳಲ್ಲಿ ಅವಳಿ ಕಟ್ಟಡ ಧರಾಶಾಯಿ

11:28 PM Aug 28, 2022 | Team Udayavani |

100 ಮೀಟರ್‌ ಎತ್ತರದ ಅವಳಿ ಕಟ್ಟಡಗಳು, 3,700 ಕೆ.ಜಿ. ಸ್ಫೋಟಕ, 9 ವರ್ಷಗಳ ಹೋರಾಟ…. ಎಲ್ಲವೂ ಅಂತ್ಯವಾಯಿತು.ಸುಪ್ರೀಂ ಕೋರ್ಟ್‌ ಆದೇಶದಂತೆ ರವಿವಾರ ಅಪರಾಹ್ನ 2.30ಕ್ಕೆ ಸರಿಯಾಗಿ ನೋಯ್ಡಾದ ಸೂಪರ್‌ಟೆಕ್‌ ಟ್ವಿನ್‌ ಟವರ್‌ಗಳು ಕೇವಲ 12 ಸೆಕೆಂಡುಗಳಲ್ಲಿ ನೆಲಕ್ಕುರುಳಿದವು. “ಸ್ಫೋಟದ ಬಟನ್‌’ ಒತ್ತುತ್ತಿದ್ದಂತೆ ಬೆಂಕಿಪೊಟ್ಟಣಗಳ ಗೋಪುರವೊಂದು ಕುಸಿದುಬಿದ್ದಂತೆ, ಕ್ಷಣಮಾತ್ರದಲ್ಲಿ 32 ಅಂತಸ್ತಿನ ಅವಳಿ ಕಟ್ಟಡಗಳು ಧರಾಶಾಯಿಯಾದವು. ಅದರ ತೀವ್ರತೆಗೆ 30 ಮೀಟರ್‌ ವ್ಯಾಪ್ತಿಯಲ್ಲಿ ಭೂಮಿಯು ಕಂಪಿಸಿತು. ಅಲ್ಲಿ ಎದ್ದ ಧೂಳಿನ ದಟ್ಟ ಹೊಗೆಯು ಸುತ್ತಲೂ ವ್ಯಾಪಿಸಿ, “ಅಕ್ರಮ ಕಟ್ಟಡ’ವನ್ನು ಇತಿಹಾಸದ ಪುಟ ಸೇರಿಸಿತು.

Advertisement

ತ್ಯಾಜ್ಯ ವಿಲೇವಾರಿಗೆ 3 ತಿಂಗಳು
ಕಟ್ಟಡ ಧ್ವಂಸವಾದ ಕೊಡಲೇ ದಟ್ಟ ಧೂಳಿನ ಹೊಗೆ ಎದ್ದಿದೆ. ಆ ಸ್ಥಳದಲ್ಲಿ ಸುಮಾರು 55 ಸಾವಿರದಿಂದ 80 ಸಾವಿರ ಟನ್‌ವರೆಗೆ ತ್ಯಾಜ್ಯ ಉತ್ಪತ್ತಿಯಾಗಿದೆ. ಇದರಲ್ಲಿ ಕಾಂಕ್ರೀಟ್‌ ರಾಳಿ, ಉಕ್ಕು ಮಕ್ಕು ಕಬ್ಬಿಣದ ಸರಳುಗಳೂ ಸೇರಿದ್ದು, ಇವೆಲ್ಲವನ್ನೂ ವಿಲೇವಾರಿ ಮಾಡಲು 3 ತಿಂಗಳುಗಳೇ ಬೇಕಾಗಬಹುದು.

500 ಕೋಟಿ ರೂ. ನಷ್ಟ
ಅವಳಿ ಕಟ್ಟಡವನ್ನು ಧ್ವಂಸಗೊಳಿಸಿರುವ ಕಾರಣ ನಮಗೆ 500 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ರಿಯಾಲ್ಟಿ ಸಂಸ್ಥೆ ಸೂಪರ್‌ಟೆಕ್‌ ಲಿ. ಹೇಳಿದೆ. ಭೂಮಿ ಮತ್ತು ನಿರ್ಮಾಣ ವೆಚ್ಚ, ನಿವಾಸಿಗಳಿಗೆ ಮರುಪಾವತಿ ವೇಳೆ ನೀಡಿದ ಶೇ.12ರ ಬಡ್ಡಿ ದರಕ್ಕಾದ ವೆಚ್ಚ ಎಲ್ಲವೂ ಸೇರಿ 500 ಕೋಟಿ ನಷ್ಟವುಂಟಾಗಿದೆ ಎಂದಿದೆ. ಕಟ್ಟಡ ಸ್ಫೋಟಕ್ಕೆ 20 ಕೋಟಿ ರೂ. ವೆಚ್ಚವಾಗಿದ್ದು, ಈ ಪೈಕಿ 5 ಕೋಟಿ ರೂ.ಗಳನ್ನು ಸೂಪರ್‌ಟೆಕ್‌ ಕಂಪೆನಿ ಪಾವತಿಸಲಿದೆ. ಉಳಿದ 15 ಕೋಟಿ ರೂ.ಗಳನ್ನು ಅವಶೇಷಗಳಲ್ಲಿರುವ ಸ್ಟೀಲ್‌, ಕಬ್ಬಿಣವನ್ನು ಮಾರಾಟ ಮಾಡಿ ಸಂಗ್ರಹಿಸಲಾಗುತ್ತದೆ.

ಚಪ್ಪಾಳೆ ತಟ್ಟಿ ಸಂಭ್ರಮಿಸಿದರು!
ಟ್ವಿನ್‌ ಟವರ್‌ಗಳು ನೆಲಕ್ಕಪ್ಪಳಿಸುವ ಅಪರೂಪದಲ್ಲಿ ಅಪರೂಪದ ದೃಶ್ಯವನ್ನು ನೋಡಲು ನೋಯ್ಡಾದ ಮೈದಾನಕ್ಕೆ ನೂರಾರು ಮಂದಿ ಬೆಳಗ್ಗೆಯೇ ಜಮಾಯಿಸಿದ್ದರು. ಅಕ್ರಮ ಕಟ್ಟಡವು ಧರೆಗುರುಳುತ್ತಿದ್ದಂತೆ ಜೋರಾಗಿ ಚಪ್ಪಾಳೆ ತಟ್ಟುತ್ತ, ವಿಶಲ್‌ ಹೊಡೆಯುತ್ತ ಸಂಭ್ರಮಿಸಿದರು. ಭ್ರಷ್ಟಾಚಾರವನ್ನು ಸಹಿಸ ಲಾಗದು ಎಂಬ ಸಂದೇಶವನ್ನು ಇದು ರವಾನಿಸಿದೆ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು “ರಿಯಲ್‌ ಎಸ್ಟೇಟ್‌ ಕುಳಗಳಿಗೆ ಇದು ತಕ್ಕ ಪಾಠ ಕಲಿಸಿದೆ’ ಎಂದರು.

ಅವನೊಬ್ಬ ಮಾತ್ರ ನಿದ್ರೆಗೆ ಜಾರಿದ್ದ!
ಅವಳಿ ಕಟ್ಟಡ ಸುತ್ತಮುತ್ತಲಿನ ಎಲ್ಲ ಮನೆಗಳು, ಅಪಾರ್ಟ್‌ಮೆಂಟ್‌ಗಳ ನಿವಾಸಿಗರು ಶುಕ್ರವಾರ, ಶನಿವಾರವೇ ಸ್ಥಳಾಂತರಗೊಂಡಿದ್ದರು. ಉಳಿದವರನ್ನು ರವಿವಾರ ಮುಂಜಾನೆಯೇ ಸ್ಥಳಾಂತರ ಮಾಡಲಾಯಿತು. ಮನೆಗಳು ಖಾಲಿಯಾಗುತ್ತಿದ್ದಂತೆ ಹೊರಗೆ ಸ್ಟಿಕ್ಕರ್‌ ಅಂಟಿಸಲಾಗುತ್ತಿತ್ತು. ಹಾಗಿದ್ದರೂ, ಎರಡೆರಡು ಬಾರಿ ಪರಿಶೀಲನೆ ಕಡ್ಡಾಯಗೊಳಿಸಲಾಗಿತ್ತು. ಇನ್ನೇನು ಎಲ್ಲರೂ ಶಿಫ್ಟ್ ಆದರು ಎಂದು ಭಾವಿಸುವಷ್ಟರಲ್ಲಿ, ಸೆಕ್ಯೂರಿಟಿ ಗಾರ್ಡ್‌ವೊಬ್ಬರು ಓಡಿ ಬಂದು, “ಎಮೆರಾಲ್ಡ್‌ ಕೋರ್ಟ್‌ ಅಪಾರ್ಟ್‌ಮೆಂಟ್‌ನ ಮೇಲಿನ ಮಹಡಿಯೊಳಗೆ ಒಬ್ಬ ನಿದ್ರಿಸುತ್ತಿದ್ದಾನೆ ನೋಡಿ’ ಎಂದು ಹೇಳಿದರು. ಕೂಡಲೇ ಕಾರ್ಯಪ್ರವೃತ್ತರಾದ ಕಾರ್ಯಪಡೆ ಸಿಬಂದಿ, ಅಲ್ಲಿಗೆ ಹೋಗಿ ಆತನನ್ನು ಎಬ್ಬಿಸಲು ಹರಸಾಹಸ ಪಟ್ಟರು. ಕೊನೆಗೂ ನಿದ್ರಾವಸ್ಥೆಯಿಂದ ಎಚ್ಚೆತ್ತ ಆತನನ್ನು ತರಾತುರಿಯಿಂದ ಬೇರೆಡೆಗೆ ಕಳುಹಿಸಲಾಯಿತು.

Advertisement

ಏನಿದು ಇಂಪ್ಲೋಶನ್‌ ವಿಧಾನ?
100 ಮೀ. ಎತ್ತರದ ಅವಳಿ ಕಟ್ಟಡಗಳನ್ನು “ವಾಟರ್‌ಫಾಲ್‌ ಇಂಪ್ಲೋಶನ್‌’ (ಒಳಮುಖ ಸ್ಫೋಟ) ಎಂಬ ವಿಧಾನ ಬಳಸಿ ಕೆಡವಲಾಗಿದೆ. ಕಟ್ಟಡವು ಒಳಮುಖವಾಗಿ ಅಂದರೆ ತನ್ನೊಳಗೇ ಸ್ಫೋಟಗೊಂಡು ಬೀಳುವ ವಿಧಾನವನ್ನು ಇಂಪ್ಲೋಶನ್‌ ಟೆಕ್ನಿಕ್‌ ಎನ್ನುತ್ತಾರೆ. ಇದಕ್ಕಾಗಿ ಎಂಜಿ ನಿಯರ್‌ಗಳು ಒಂದು ಹಂತದಲ್ಲಿ ಬಹಳ ಚಾಣಾಕ್ಷತೆಯಿಂದ ಕಟ್ಟಡಕ್ಕೆ ಆಧಾರವಾಗಿರುವಂಥ ರಚನೆಗಳನ್ನು ಪತನಗೊಳ್ಳುವಂತೆ ಮಾಡಿದ್ದಾರೆ. ಮೇಲಿನಿಂದ ಕೆಳಗಿನವರೆಗೆ ಕಟ್ಟಡದ ಪ್ರಮುಖ ಆಧಾರ ಸ್ಥಳಗಳೊಳಗೆ ಸ್ಫೋಟಕಗಳನ್ನು ಡ್ರಿಲ್‌ ಮಾಡಿಡಲಾಗಿತ್ತು. ಬಟನ್‌ ಒತ್ತುತ್ತಿದ್ದಂತೆ ಇಡೀ ಕಟ್ಟಡವು ಒಳಮುಖವಾಗಿ ಕುಸಿದು ನೆಲಸಮಗೊಂಡಿತು. ಹೀಗಾಗಿ ಸುತ್ತಮುತ್ತಲಿನ ಕಟ್ಟಡಗಳಿಗೆ ಹೆಚ್ಚಿನ ಹಾನಿಯಾಗುವುದು ತಪ್ಪಿತು.

ಕಟ್ಟಡದ ಗೋಡೆ, ಕಿಟಕಿಗೆ ಹಾನಿ
ಅವಳಿ ಕಟ್ಟಡ ನೆಲಸಮ ಮಾಡುವಾಗ ಅದರ ಅಕ್ಕಪಕ್ಕದ ಕಟ್ಟಡಗಳಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಅವಳಿ ಕಟ್ಟಡದ ಪಕ್ಕದಲ್ಲಿರುವ ಎಟಿಎಸ್‌ ಕಟ್ಟಡದ 10 ಮೀಟರ್‌ ಎತ್ತರದ ಗಡಿ ಗೋಡೆ ಕುಸಿದುಬಿದ್ದಿದೆ. ಹಾಗೆಯೇ ಆ ಕಟ್ಟಡದ ಕಿಟಕಿಗಳಿಗೆ ಹಾನಿಯಾಗಿರುವುದಾಗಿ ವರದಿಯಾಗಿದೆ. ಧ್ವಂಸವಾದ ಕಟ್ಟಡದ ಪಕ್ಕದಲ್ಲೇ ಇರುವ ಸೂಪರ್‌ಟೆಕ್‌ ಎಮೆರಾಲ್ಡ್‌ ಕಟ್ಟಡಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿಸಲಾಗಿದೆ.

ಮೊಮ್ಮಗನಿಗಾಗಿ ಆಗ್ರಾದಿಂದ ಬಂದೆವು
ನೋಯ್ಡಾದ ಅವಳಿ ಕಟ್ಟಡ ನೆಲಸಮಗೊಳಿಸುವು ದನ್ನು ನೋಡುವುದಕ್ಕೆಂದೇ ಬೇರೆ ಬೇರೆ ಊರುಗಳಿಂದ ನೋಯ್ಡಾಕ್ಕೆ ಅನೇಕರು ಬಂದಿದ್ದರು. ಅದರಲ್ಲಿ ಆಗ್ರಾದ ರಿಯಾಜ್‌ ಮತ್ತು ಅವರ ಪತ್ನಿ ಹಾಗೂ 5 ವರ್ಷದ ಮೊಮ್ಮಗ ಕೂಡ ಸೇರಿದ್ದಾರೆ. ಅಕ್ರಮ್‌(5) ಈ ಕಟ್ಟಡಗಳನ್ನು ನೆಲಸಮ ಮಾಡುವ ವಿಚಾರವನ್ನು ಸಾಮಾಜಿಕ ಜಾಲತಾಣಗಳಿಂದ ತಿಳಿದುಕೊಂಡಿದ್ದು, ಅದನ್ನು ಕಣ್ಣಾರೆ ನೋಡ ಬೇಕೆಂದು ಹಠ ಹಿಡಿದು ಕುಳಿತಿ ದ್ದನಂತೆ. ಆ ಹಿನ್ನೆಲೆ ಆತನ ಅಜ್ಜ-ಅಜ್ಜಿ ಅವನನ್ನು ನೋಯ್ಡಾಕ್ಕೆ ಕರೆದು ಕೊಂಡು ಬಂದಿದ್ದಾರೆ. ಆದರೆ ಪೊಲೀಸರು ಆ ಸ್ಥಳಕ್ಕೆ ತೆರಳದಂತೆ ತಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.

ಬೀದಿನಾಯಿಗಳು ಶಿಫ್ಟ್
ಕಟ್ಟಡಗಳ ಸುತ್ತ ಓಡಾಡುತ್ತಿದ್ದ ಸುಮಾರು 40 ಬೀದಿ ನಾಯಿಗಳನ್ನು ಸ್ಫೋಟಕ್ಕೆ ಸ್ವಲ್ಪ ಮುಂಚೆ ಸುರಕ್ಷಿತವಾಗಿ ಶಿಫ್ಟ್ ಮಾಡಿ ಎನ್‌ಜಿಒಗಳಿಗೆ ಹಸ್ತಾಂತರಿಸಲಾಯಿತು. ಇದೇ ವೇಳೆ, “ನೈಜ ಸ್ಫೋಟ ನಡೆಸುವ ಮೊದಲು “ಅಣಕು ಸ್ಫೋಟ’ ಅಥವಾ ಫೈರಿಂಗ್‌ ನಡೆಸುವ ಮೂಲಕ, ಆ ಪ್ರದೇಶದಲ್ಲಿರುವ ಪಕ್ಷಿಗಳನ್ನು ರಕ್ಷಿಸಿ’ ಎಂದು ಹಲವು ಎನ್‌ಜಿಒಗಳು ಆಗ್ರಹಿಸಿದ್ದವು.

12 ಬ್ರಹ್ಮೋಸ್‌ಗೆ ಸಮ!
ಕಟ್ಟಡಗಳ ನೆಲಸಮಕ್ಕೆ ಬಳಸಲಾದ 3500 ಕೆ.ಜಿ. ಸ್ಫೋಟ ಕಗಳ ಪ್ರಮಾಣವು ಬ್ರಹ್ಮೋಸ್‌ ಕ್ಷಿಪಣಿಯ 12 ಸಿಡಿತಲೆ ಗಳು ಅಥವಾ ಅಗ್ನಿ-5 ಕ್ಷಿಪಣಿಯ 3 ಅಥವಾ ಪೃಥ್ವಿ ಕ್ಷಿಪಣಿಯ 4 ಸಿಡಿತಲೆಗಳಿಗೆ ಸಮ ಎಂದು ಹೇಳಲಾಗಿದೆ.

ಸ್ಫೋಟದ ಗುಂಡಿ ಒತ್ತಿದೊಡನೆ ಭಾರೀ ಸದ್ದು ಕೇಳಿಸಿತು. ಕಟ್ಟಡದತ್ತ ದಿಟ್ಟಿಸಿ ನೋಡಿದೆ, ನಿಸ್ಸಂಶಯವಾಗಿ ಅಲ್ಲಿ ದಟ್ಟ ಧೂಳು ಎದ್ದಿದ್ದು ಬಿಟ್ಟರೆ ಬೇರೇನೂ ಕಾಣಲಿಲ್ಲ. ಮಾಸ್ಕ್ ಧರಿಸಿ ಅತ್ತ ಧಾವಿಸಿದೆವು. ಸ್ಫೋಟ ಯಶಸ್ವಿಯಾದದ್ದು ದೃಢವಾದೊಡನೆ ಪರಸ್ಪರ ಆಲಿಂಗಿಸಿಕೊಂಡೆವು. ಕಣ್ಣಂಚಲ್ಲಿ ನೀರಿಳಿದಿದ್ದು ಗೊತ್ತೇ ಆಗಲಿಲ್ಲ.
-ಚೇತನ್‌ ದತ್ತಾ, ಸ್ಫೋಟದ ಬಟನ್‌ ಒತ್ತಿದ ವ್ಯಕ್ತಿ

Advertisement

Udayavani is now on Telegram. Click here to join our channel and stay updated with the latest news.

Next