Advertisement

ಮಲ್ಲಿಗೆ ಬೆಳೆದು ಗೌರವ ಶಿಕ್ಷಕಿಯರಿಗೆ ವೇತನ

11:29 PM Jun 19, 2019 | Lakshmi GovindaRaj |

ಬಂಟ್ವಾಳ: ಮಲ್ಲಿಗೆ ಬೆಳೆದು ಜೀವನ ಸಾಗಿಸುವವರಿದ್ದಾರೆ. ಆದರೆ, ಬಂಟ್ವಾಳ ತಾಲೂಕು ಕುಳ ಗ್ರಾಮದ ಓಜಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಇದೇ ಆದಾಯ ಮೂಲದಿಂದ ಗೌರವ ಶಿಕ್ಷಕಿಯರಿಗೆ ವೇತನ ಪಾವತಿಸುವುದಷ್ಟೇ ಅಲ್ಲದೆ ಶಾಲೆಯನ್ನು ಮಾದರಿಯನ್ನಾಗಿ ಮುನ್ನಡೆಸುತ್ತಿದೆ.

Advertisement

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಹೊನ್ನಪ್ಪ ಗೌಡರು ಸ್ವತಃ ಗಿಡಕ್ಕೆ ನೀರು, ಗೊಬ್ಬರ ನೀಡಿ ಮನೆ ಮಲ್ಲಿಗೆಯಂತೆ ಬೆಳೆಸುತ್ತಾರೆ. ಶಿಕ್ಷಕ ವೃಂದ, ಎಸ್‌ಡಿಎಂಸಿಯ ಇತರ ಸದಸ್ಯರು, ವಿದ್ಯಾರ್ಥಿಗಳು ಸಹಕರಿಸುತ್ತಾರೆ. ಬಿಸಿಯೂಟ ಅಡುಗೆಯ ಆಯಾ ಮಲ್ಲಿಗೆ ಕೊಯ್ದು ಹೆಣೆದು ಸಿದ್ಧಪಡಿಸಿದರೆ, ನಿತ್ಯ ಕೂಲಿ ಕೆಲಸಕ್ಕೆ ಹೋಗುವ ಎಸ್‌ಡಿಎಂಸಿ ಅಧ್ಯಕ್ಷರು ಹೂವಿನ ಅಟ್ಟಿಯನ್ನು ಪುತ್ತೂರು ಬಳಿಯ ಕಬಕದಲ್ಲಿ ಮಾರಾಟಕ್ಕೆ ನೀಡುತ್ತಾರೆ.

ಇದರಿಂದ ಸಿಗುವ ವಾರ್ಷಿಕ ಆದಾಯ ಸರಾಸರಿ 60ರಿಂದ 70 ಸಾವಿರ ರೂ.ಗಳಷ್ಟು ಆಗುತ್ತದೆ. ಗೌರವ ಶಿಕ್ಷಕಿಯರಿಗೆ ಇದರಿಂದಲೇ ಸಂಬಳ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು, ಇತರ ಖರ್ಚುವೆಚ್ಚ ಭರಿಸುವುದಕ್ಕೂ ಉಪಯೋಗಿಸಲಾಗುತ್ತದೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವ ಹೊನ್ನಪ್ಪ ಗೌಡರು, ಇಡೀ ಕುಳ ಗ್ರಾಮಕ್ಕೆ ನಮ್ಮದು ಒಂದೇ ಸರಕಾರಿ ಶಾಲೆ. ಶಾಲೆಗೆ ಇರುವ 1.06 ಎಕ್ರೆ ಜಮೀನನ್ನು ಚೆನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ.

7ರಿಂದ 80ಕ್ಕೆ ನೆಗೆದ ಸಾಧನೆ: 1968ರಲ್ಲಿ ಆರಂಭವಾದ ಸರಕಾರಿ ಶಾಲೆಯಿದು. 12 ವರ್ಷಗಳ ಹಿಂದೆ, 2007ರಲ್ಲಿ ಇಲ್ಲಿ ಇದ್ದದ್ದು ಕೇವಲ ಏಳು ವಿದ್ಯಾರ್ಥಿಗಳು. ಅಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಶಾಲೆಯನ್ನು ಮುಚ್ಚಲು ಶಿಫಾರಸ್ಸಾಗಿತ್ತು. ಆದರೆ, ಆಗಿನ ಎಸ್‌ಡಿಎಂಸಿ ಅಧ್ಯಕ್ಷರು, ಪದಾಧಿಕಾರಿಗಳು ನಿರಂತರ ಪ್ರಯತ್ನಿಸಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿಕೊಂಡರು.

ಹೊನ್ನಪ್ಪ ಗೌಡರು ಎಸ್‌ಡಿಎಂಸಿ ಅಧ್ಯಕ್ಷರಾದದ್ದು 2017-18ರಲ್ಲಿ. ಅದಕ್ಕೆ ಹಿಂದೆ ಅವರ ಸಹೋದರ ಸುಂದರ ಗೌಡರಿದ್ದರು. 2010ರ ಸುಮಾರಿಗೆ ಹೊನ್ನಪ್ಪ ಗೌಡರು ಧರ್ಮಸ್ಥಳ ಗ್ರಾ.ಯೋಜನೆಯ ಅಧ್ಯಕ್ಷರಾಗಿದ್ದಾಗ ಶಾಲೆಯಲ್ಲಿ ಮಲ್ಲಿಗೆ ಬೆಳೆ ಆರಂಭಿಸಿದರು. ಆಗ ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದ ರಮೇಶ್‌ ಭಟ್‌ ಸಾಥಿಯಾದರು. ಈಗ ಶಾಲೆಯಲ್ಲಿ ಮೂವರು ಗೌರವ ಶಿಕ್ಷಕಿಯರಿದ್ದಾರೆ. ಸ್ಮಾರ್ಟ್‌ ಕ್ಲಾಸ್‌ ಸೌಕರ್ಯ ಇದೆ.

Advertisement

ನೈಋತ್ಯ ರೈಲ್ವೇ ಮೈಸೂರು ವಿಭಾಗವು ಈ ಶಾಲೆಗೆ 2 ಲಕ್ಷ ರೂ.ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿಕೊಟ್ಟಿದೆ. ಶಾಲೆಗಾಗಿ ಊರವರು ಒಟ್ಟು ಸೇರಿ ಕೊಳವೆ ಬಾವಿ ಮಾಡಿಸಿದ್ದಾರೆ. ಇಂಗುಗುಂಡಿ ರಚಿಸಿರುವುದರಿಂದ ವರ್ಷವಿಡೀ ಸಮೃದ್ಧ ನೀರು. ಶಾಲೆಗೆ ಪ್ರಸ್ತುತ ಸಾಲಿನಲ್ಲಿ 6ನೇ ತರಗತಿ ಮಂಜೂರಾಗಿದ್ದು, ಗುಣಮಟ್ಟದ ಶಿಕ್ಷಣದ ಕಾರಣ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಮುಂದಿನ ವರ್ಷ ಎಲ್‌ಕೆಜಿ ತರಗತಿ ಆರಂಭಿಸುವ ಬಗ್ಗೆ ಶಾಲಾಭಿವೃದ್ಧಿ ಸಮಿತಿ ಚಿಂತನೆ ನಡೆಸಿದೆ.

ಅರ್ಜಿ ಸಲ್ಲಿಸದೆ ಪ್ರಶಸ್ತಿ:ಶಾಲೆಗೆ ವಿಲ್ಮಾ ಸಿಕ್ವೇರಾ ಪ್ರಭಾರ ಮುಖ್ಯ ಶಿಕ್ಷಕಿ. ಶಾಲೆಯ ಅಭಿವೃದ್ಧಿಯ ವಿಚಾರ ಬಂದಾಗ ತಮ್ಮ ಮಾಸಿಕ ವೇತನವನ್ನು ವಿನಿಯೋಗಿಸಲು ಹಿಂದೆ ಮುಂದೆ ನೋಡುವುದಿಲ್ಲ. ಸ್ವತಃ ಕ್ಷೇತ್ರ ಶಿಕ್ಷಣಾಧಿಕಾರಿ ಶಿಫಾರಸು ಮಾಡಿ ಅವರಿಗೆ ಕಳೆದ ಸಾಲಿನಲ್ಲಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ದೊರಕಿಸಿಕೊಟ್ಟಿದ್ದಾರೆ. ಇವರಲ್ಲದೆ ಇನ್ನೊಬ್ಬರು ಖಾಯಂ ಶಿಕ್ಷಕರಿದ್ದಾರೆ.

10 ವರ್ಷಗಳಿಂದ ನಾವು ಶಾಲೆಯ ಶೈಕ್ಷಣಿಕ ಮಟ್ಟ ಸುಧಾರಿಸುತ್ತಾ ಬಂದುದರಿಂದ ಮಕ್ಕಳ ಸಂಖ್ಯೆಯೂ ಹೆಚ್ಚುತ್ತಾ ಬಂದಿದೆ. ಈ ವರ್ಷ 33 ಮಕ್ಕಳ ಸೇರ್ಪಡೆಯೊಂದಿಗೆ ಒಟ್ಟು ಸಂಖ್ಯೆ 80ಕ್ಕೆ ಏರಿಕೆಯಾಗಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ನೂರರ ಗಡಿ ದಾಟಿಸುವುದಕ್ಕಾಗಿ ಇಂಗ್ಲಿಷ್‌ ತರಗತಿ ಆರಂಭಿಸುವ ಯೋಜನೆ ಇದೆ.
-ಹೊನ್ನಪ್ಪ ಗೌಡ. ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ ಓಜಲ

ಗೌರವ ಶಿಕ್ಷಕಿಯರ ಸಂಭಾವನೆಗೆ ಮಲ್ಲಿಗೆ ಕೃಷಿಯ ಆದಾಯವಿದೆ. ಕಡಿಮೆ ಆದರೆ ನಾವು ಭರಿಸುತ್ತೇವೆ. ಮಧ್ಯಾಹ್ನದ ಬಿಸಿಯೂಟಕ್ಕೆ ಬೇಕಾದ ತರಕಾರಿ ಬೆಳೆಯುತ್ತೇವೆ. ಊರಿನ ಜನ ಸರ್ವ ಸಹಕಾರ ನೀಡುತ್ತಾರೆ. ಮುಂದಿನ ಶೈಕ್ಷಣಿಕ ವರ್ಷ ಮಕ್ಕಳ ಸಂಖ್ಯೆ ಹೆಚ್ಚುವುದರಿಂದ ನಮಗೊಂದು ಸುಸಜ್ಜಿತ ಕಟ್ಟಡ ಬೇಕು.
-ವಿಲ್ಮಾ ಸಿಕ್ವೇರಾ, ಪ್ರಭಾರ ಮುಖ್ಯ ಶಿಕ್ಷಕಿ, ಓಜಲ ಶಾಲೆ

ಅತ್ಯಂತ ಕಡಿಮೆ ಗೈರು ಹಾಜರಾತಿಯ ಶಾಲೆ ಎಂಬ ಕೀರ್ತಿ ಓಜಲ ಶಾಲೆಗಿದೆ. ಶಾಲಾಭಿವೃದ್ಧಿ ಸಮಿತಿ ಸದಸ್ಯರೆಲ್ಲ ಕೂಲಿ ಕಾರ್ಮಿಕರು. ಆದರೆ, ಹೃದಯ ಶ್ರೀಮಂತರು. ಎಲ್ಲರೂ ಒಂದಲ್ಲ ಒಂದು ವೃತ್ತಿ ಪರಿಣಿತರಾಗಿದ್ದು, ಎಲ್ಲ ಅಭಿವೃದ್ಧಿ ಕೆಲಸಗಳಲ್ಲಿ ಶ್ರಮದಾನದ ಮೂಲಕ ಕೈಜೋಡಿಸುತ್ತಾರೆ. ಶಾಲೆಗಾಗಿ ಅವಿಶ್ರಾಂತ ದುಡಿಯುವ ಮುಖ್ಯ ಶಿಕ್ಷಕಿಯ ಶ್ರಮ, ಸಾಧನೆಯನ್ನು ಕಂಡು ನಾವೇ ಕಳೆದ ಶೈಕ್ಷಣಿಕ ವರ್ಷದಲ್ಲಿ ಶಿಫಾರಸು ಮಾಡಿ ಪ್ರಶಸ್ತಿ ಕೊಡಿಸಿದ್ದೇವೆ.
-ಎನ್‌. ಶಿವಪ್ರಕಾಶ್‌, ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ

* ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next