Advertisement

ಉರ್ವದಲ್ಲಿ ಜಪಾನ್‌ ಮಾದರಿಯ ಸಬ್‌ಸ್ಟೇಷನ್‌!

11:25 PM Mar 04, 2020 | mahesh |

ಮಹಾನಗರ: ಕೇಂದ್ರ ಸರಕಾರದ ಸಮಗ್ರ ವಿದ್ಯುತ್‌ ಅಭಿವೃದ್ಧಿ ಯೋಜನೆಯಡಿ (ಐ.ಪಿ.ಡಿ.ಎಸ್‌.) ಮೆಸ್ಕಾಂನಿಂದ ದ.ಕ. ಜಿಲ್ಲೆಯಲ್ಲೇ ಮೊದಲ ಅತ್ಯಾಧುನಿಕ ತಂತ್ರಜ್ಞಾನದ ಜಿಐ (ಗ್ಯಾಸ್‌ ಇನ್ಸು ಲೇಟೆಡ್‌) ಸಬ್‌-ಸ್ಟೇಷನ್‌ ಮಂಗಳೂರಿನ ಉರ್ವದಲ್ಲಿ ನಿರ್ಮಾಣವಾಗುತ್ತಿದೆ.

Advertisement

ಸಾಕಷ್ಟು ಸ್ಥಳಾವಕಾಶ ಲಭ್ಯವಿಲ್ಲದ ನಗರ ಪ್ರದೇಶಗಳಲ್ಲಿ ಗ್ಯಾಸ್‌ ಇನ್ಸುಲೇಟೆಡ್‌ ವಿದ್ಯುತ್‌ ಉಪಕೇಂದ್ರಗಳನ್ನು ಸ್ಥಾಪಿಸಲು ಮೆಸ್ಕಾಂ ಉದ್ದೇಶಿಸಿದೆ. ಈ ಯೋಜನೆ ಯಲ್ಲಿ ಮಂಗಳೂರು, ಬಂಟ್ವಾಳ, ಉಡುಪಿ, ಸಾಲಿಗ್ರಾಮ ಜನನಿಬಿಡ ನಗರ ಪ್ರದೇಶಗಳಲ್ಲಿ ಗ್ಯಾಸ್‌ ಇನ್ಸುಲೇಟೆಡ್‌ ಸಬ್‌ಸ್ಟೇಷನ್‌ಗಳನ್ನು ಒಟ್ಟು 39 ಕೋ.ರೂ. ವೆಚ್ಚದಲ್ಲಿ ಸ್ಥಾಪಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಸದ್ಯ ಮಣ್ಣಗುಡ್ಡದಲ್ಲಿರುವ ಸಬ್‌ಸ್ಟೇಷನ್‌ನಲ್ಲಿ ಒತ್ತಡ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಉರ್ವ ಮಾರ್ಕೆಟ್‌ನ ಪಕ್ಕ ದಲ್ಲಿ ಹೊಸ ಸಬ್‌ಸ್ಟೇಷನ್‌ ತೆರೆಯಲು ಉದ್ದೇಶಿಸಲಾಗಿದೆ. ಸಾಮಾನ್ಯವಾಗಿ ಸಬ್‌ ಸ್ಟೇಷನ್‌ಗೆ ಹಲವು ಎಕರೆ ಭೂಮಿ ಅಗತ್ಯವಿರುವುದರಿಂದ ನಗರ ವ್ಯಾಪ್ತಿಯಲ್ಲಿ ಸ್ಥಳಾವಕಾಶ ಲಭ್ಯವಿಲ್ಲದ ಕಾರಣದಿಂದ ಗ್ಯಾಸ್‌ ಇನ್ಸುಲೇಟೆಡ್‌ ವಿದ್ಯುತ್‌ ಉಪ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ.
ಒಟ್ಟು 12.82 ಕೋ.ರೂ. ವೆಚ್ಚದಲ್ಲಿ 8 ಎಂವಿಎ ಸಾಮರ್ಥ್ಯದ ಎರಡು ಅತ್ಯಾಧುನಿಕ ಟ್ರಾನ್ಸ್‌ಫಾರ್ಮರ್‌ಗಳನ್ನು ಇಲ್ಲಿ ನಿರ್ಮಿಸಲಾಗುತ್ತದೆ. ಮಣ್ಣಗುಡ್ಡದಲ್ಲಿ ಸದ್ಯ 10ಎಂವಿಎ ಸಾಮರ್ಥ್ಯದ ಸಬ್‌ಸ್ಟೇಷನ್‌ ಕಾರ್ಯಾಚರಿಸುತ್ತಿದೆ. ಸದ್ಯ ಕಾಮಗಾರಿ ಆರಂಭವಾಗಿದ್ದು, ಎರಡು ವರ್ಷದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ವಿದ್ಯುತ್‌ ಸರಬರಾಜು
ಸದ್ಯ ಕೊಟ್ಟಾರಚೌಕಿ, ಅಶೋಕನಗರ ವ್ಯಾಪ್ತಿಗೆ ಕಾವೂರು, ಪಣಂಬೂರು ಸಬ್‌ಸ್ಟೇಷನ್‌ನಿಂದ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ಆದರೆ, ಉರ್ವ ಸ್ಟೇಷನ್‌ ಪೂರ್ಣವಾದ ಬಳಿಕ ಇಲ್ಲಿಂದಲೇ ಅಲ್ಲಿಗೆ ವಿದ್ಯುತ್‌ ಸರಬರಾಜು ಮಾಡಲಾಗುತ್ತದೆ.

ಏನಿದು ಜಿಐಎಸ್‌?
ವಿದ್ಯುತ್‌ ಸಬ್‌ಸ್ಟೇಷನ್‌ಗಳಲ್ಲಿ ಸಾಮಾನ್ಯವಾಗಿ ಏರ್‌ ಇನ್ಸುಲೇಟೆಡ್‌ ವಿಧಾನ ಅಳವಡಿಸಲಾಗುತ್ತದೆ. ಹೈ ವೋಲ್ಟೆಜ್‌ ವಿದ್ಯುತ್‌ ಪ್ರಸರಣವಾಗುವ ಕಾರಣ ವಿದ್ಯುತ್‌ ತಂತಿಗಳ ಮಧ್ಯೆ ಸಾಕಷ್ಟು ಅಂತರ ಅಗತ್ಯ. ಹಾಗಾಗಿ ಸಬ್‌ ಸ್ಟೇಷನ್‌ಗೆ ಸುಮಾರು ಅರ್ಧ ಎಕರೆಗಿಂತಲೂ ಹೆಚ್ಚು ಜಾಗ ಬೇಕಾಗುತ್ತದೆ. ಇದನ್ನು ನಿವಾರಿಸಲು ಜಪಾನಿನಲ್ಲಿ ಪ್ರಥಮವಾಗಿ ಗ್ಯಾಸ್‌ ಇನ್ಸುಲೇಟೆಡ್‌ ವಿಧಾನ ಅಭಿವೃದ್ಧಿ ಪಡಿಸಲಾಗಿತ್ತು. ಹೈ ವೋಲ್ಟೆಜ್‌ ವಿದ್ಯುತ್‌ ಪ್ರಸರ ಣದ ಪ್ರಮುಖ ರಚನೆಗಳನ್ನು ಕಿರಿದಾಗಿಸಿ, ಸಲ್ಪರ್‌ ಹೆಕ್ಸಾಫ‌ೂರಿಡ್‌ ಗ್ಯಾಸ್‌ ಕವಚದಲ್ಲಿ ಮುಚ್ಚಿಡುವ ವಿಧಾನ ಇದಾಗಿದೆ. ಬ್ರೇಕರ್‌, ಟ್ರಾನ್ಸಾರ್ಮರ್‌ ಯಾರ್ಡ್‌ ಸಣ್ಣ ಕಂಟ್ರೋಲ್‌ ರೂಂನಿಂದ ಇದನ್ನು ನಿಯಂತ್ರಿಸಬಹುದು. ಇದರ ನಿರ್ಮಾಣ ವೆಚ್ಚ ದುಬಾರಿಯಾದರೂ, ನಿರ್ವಹಣೆ ಮಾತ್ರ ಬಹಳಷ್ಟು ಸುಲಭ. 30×40 ಚದರ ಅಡಿ ಜಾಗದಲ್ಲಿಯೂ ಈ ಸಬ್‌ ಸ್ಟೇಷನ್‌ ನಿರ್ಮಿಸಬಹುದಾಗಿದೆ.

Advertisement

ಕೆಪಿಟಿಸಿಎಲ್‌; ಇನ್ನಷ್ಟೇ ಅನುಷ್ಠಾನ
ನೆಹರೂ ಮೈದಾನದ ಬಳಿ ಇರುವ ಮೆಸ್ಕಾಂನ 33 ಕೆ.ವಿ. ಸಾಮರ್ಥ್ಯದ ಸಬ್‌ ಸ್ಟೇಷನ್‌ ಅನ್ನು ಕೆಪಿಟಿಸಿಎಲ್‌ ವತಿಯಿಂದ 110 ಕೆ.ವಿ.ಯ ಅತ್ಯಾಧುನಿಕ ತಂತ್ರಜ್ಞಾನದ ಜಿಐಎಸ್‌(ಗ್ಯಾಸ್‌ ಇನ್ಸುಲೇಟೆಡ್‌ ಸ್ಟೇಷನ್‌) ಆಗಿ ಮೇಲ್ದರ್ಜೆಗೇರಿಸುವ ಬಗ್ಗೆ ಒಂದೆರಡು ವರ್ಷದಿಂದ ಚರ್ಚೆ ನಡೆಯಿತಾದರೂ ಅದು ಇನ್ನಷ್ಟೇ ಅನುಷ್ಠಾನಗೊಳ್ಳಬೇಕಿದೆ. ಅದಕ್ಕಿಂತಲೂ ಮೊದಲು ಇದೀಗ ಮೆಸ್ಕಾಂನ ಜಿಐಎಸ್‌ ನಿರ್ಮಾಣ ಕಾಮಗಾರಿ ಉರ್ವದಲ್ಲಿ ಆರಂಭವಾಗಿದೆ.

1 ಕಿ.ಮೀ. ವ್ಯಾಪ್ತಿಯಲ್ಲಿ ಭೂಗತ ಕೇಬಲ್‌
ಕೆಪಿಟಿಸಿಎಲ್‌ನ ಕಾವೂರಿನಲ್ಲಿರುವ 220 ಕೆ.ವಿ. ಶರಾವತಿ ವಿದ್ಯುತ್‌ ಸ್ವೀಕರಣಾ ಕೇಂದ್ರದಿಂದ ಜಿಲ್ಲೆಯ ಬೇರೆ ಬೇರೆ ಭಾಗದ ಮೆಸ್ಕಾಂ ಸಬ್‌ಸ್ಟೇಷನ್‌ಗೆ ವಿದ್ಯುತ್‌ ಸರಬರಾಜಾಗುತ್ತದೆ. ಇದರಂತೆ ಮಣ್ಣಗುಡ್ಡ ಸಬ್‌ಸ್ಟೇಷನ್‌ಗೆ ವಿದ್ಯುತ್‌ ಸರಬರಾಜಾಗುತ್ತಿದೆ. ಇದೀಗ ಉರ್ವದಲ್ಲಿ ಜಿಐಎಸ್‌ ಸ್ಟೇಷನ್‌ ಆಗುವ ಕಾರಣದಿಂದ ಮಣ್ಣಗುಡ್ಡದಿಂದ ಉರ್ವದವರೆಗೆ ಸುಮಾರು 1 ಕಿ.ಮೀ. ವ್ಯಾಪ್ತಿಯಲ್ಲಿ ಭೂಗತ ಕೇಬಲ್‌ ಅಳವಡಿಸಲಾಗುತ್ತದೆ. ಇದರ ಕಾಮಗಾರಿ ಸದ್ಯ ಆರಂಭವಾಗಿದೆ ಎಂದು ಮೆಸ್ಕಾಂ ಮೂಲಗಳು ತಿಳಿಸಿವೆ.

ಕಾಮಗಾರಿ ಆರಂಭ
ಸಾಕಷ್ಟು ಸ್ಥಳಾವಕಾಶ ಲಭ್ಯವಿಲ್ಲದ ನಗರ ಪ್ರದೇಶಗಳಲ್ಲಿ ಗ್ಯಾಸ್‌ ಇನ್ಸುಲೇ ಟೆಡ್‌ ವಿದ್ಯುತ್‌ ಉಪಕೇಂದ್ರಗಳನ್ನು ಸ್ಥಾಪಿಸಲು ಮೆಸ್ಕಾಂ ಉದ್ದೇಶಿಸಿದೆ. ಈ ಯೋಜನೆಯಂತೆ ಮಂಗಳೂರಿನ ಉರ್ವದಲ್ಲಿ ಕಾಮಗಾರಿ ಆರಂಭಗೊಂಡಿದ್ದು, ಪ್ರಗತಿಯಲ್ಲಿದೆ.
 - ಸ್ನೇಹಲ್‌ ಆರ್‌., ವ್ಯವಸ್ಥಾಪಕ ನಿರ್ದೇಶಕರು-ಮೆಸ್ಕಾಂ

- ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next