Advertisement

Janata Darshan: ಜನರೇ ಇಲ್ಲದೆ ನಡೆದ ಜನತಾ ದರ್ಶನ

01:08 PM Oct 19, 2023 | Team Udayavani |

ಕನಕಪುರ: ಸರ್ಕಾರದ ಆದೇಶದ ಮೇರೆಗೆ ಮೊದಲ ಬಾರಿಗೆ ಡಿಸಿಎಂ ಡಿಕೆಶಿ ತಾಲೂಕಿನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮಕ್ಕೆ ಸಾರ್ವಜನಿಕರು ಬಾರದೆ ಜನರೇ ಇಲ್ಲದ ಜನತಾದರ್ಶನ ನಡೆಸಿದ ಜಿಲ್ಲಾಡಳಿತಕ್ಕೆ ಒಂದು ರೀತಿಯ ಮುಜುಗರಕ್ಕೆ ಕಾರಣವಾಯಿತು.

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ಬುಧವಾರ ಜಿಲ್ಲಾಧಿಕಾರಿ ಅವಿನಾಶ್‌ ಮೆನನ್‌ ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮಕ್ಕೆ ಸಮಸ್ಯೆಗಳ ಅರ್ಜಿ ಹಿಡಿದುಕೊಂಡು ದೂರು ಸಲ್ಲಿಸುವ ಸಾರ್ವಜನಿಕರೇ ಬಂದಿರಲಿಲ್ಲ. ಹಾಗೆಂದ ಮಾತ್ರಕ್ಕೆ ತಾಲೂಕಿನಲ್ಲಿ ಸಮಸ್ಯೆಗಳೇ ಇಲ್ಲ ಎಂದರ್ಥವಲ್ಲ ಸಂಘ ಸಂಸ್ಥೆ ಮುಖಂಡರು ಸಾರ್ವಜನಿಕರಿಗೆ ತಾಲೂಕು ಆಡಳಿತ ಗೊಂದಲ ಮತ್ತು ಸರಿಯಾದ ಮಾಹಿತಿ ನೀಡಿದೆ ಕಟಾಚಾರಕ್ಕೆ ಕಾರ್ಯಕ್ರಮ ಆಯೋಜನೆ ಮಾಡಿದೆ ಎಂಬ ಆರೋಪಗಳು ಸಹ ವ್ಯಕ್ತವಾದವು.

ಸರ್ಕಾರದ ಆದೇಶದ ಮೇರೆಗೆ ಅ.18ರಂದು ತಾಲೂಕು ಕಚೇರಿಯಲ್ಲಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜನತಾದರ್ಶನ ಮತ್ತು ಅ. 20ರಂದು ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜನತಾದರ್ಶನ ಆಯೋಜನೆ ಮಾಡಿರುವುದಾಗಿ ತಾಲೂಕು ಆಡಳಿತ ಮಾಹಿತಿ ನೀಡಿತ್ತು. ಆದರೆ, ಅ.18ರಂದು ತಾಲೂಕು ಕಚೇರಿ ಬದಲಾಗಿ ಅಂಬೇಡ್ಕರ್‌ ಭವನದಲ್ಲಿ ಉಪ ವಿಭಾಗಾಧಿಕಾರಿಗಳ ಬದಲಿಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜನತಾದರ್ಶನ ನಡೆಸಿದೆ ಇದರಿಂದ ಸಾರ್ವಜನಿಕರಲ್ಲಿ ಒಂದು ರೀತಿಯ ಗೊಂದಲ ಸೃಷ್ಟಿಯಾಗಿದ್ದು ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬೆಳಗ್ಗೆ 10:30ಕ್ಕೆ ಅಂಬೇಡ್ಕರ್‌ ಭವನದಲ್ಲಿ ಜನತಾದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು ಜಿಲ್ಲಾ ಮತ್ತು ತಾಲೂಕು ಮಟ್ಟದ ಬಹುತೇಕ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಾರ್ಯಕ್ರಮಕ್ಕೆ ಸಾರ್ವಜನಿಕರು ಬಂದಿಲ್ಲ ಎಂಬ ಮಾಹಿತಿ                    ತಿಳಿದು 11ಗಂಟೆಗೆ ನಗರಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ತಾಲೂಕು ಕಚೇರಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಇದ್ದು 12 ಗಂಟೆಯ ನಂತರ ಅಂಬೇಡ್ಕರ್‌ ಭವನಕ್ಕೆ ಬಂದು ಕಾರ್ಯಕ್ರಮ ಉದ್ಘಾಟಿಸಿ ದೂರು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದರು.

ಮೊದಲಿಗೆ ರೈತ ಸಂಘದ ಮುಖಂಡರು ಸರಿಯಾದ ಮಾಹಿತಿ ಕೊಡದೆ ಕಾಟಾಚಾರಕ್ಕೆ ಜನತಾದರ್ಶನ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ದೂರುತ್ತಿದ್ದಂತೆ ಸಭೆ ಮತ್ತು ಮಾಧ್ಯಮಗಳಿಗೆ ಸಾರ್ವಜನಿಕರ ಸಮಸ್ಯೆಗಳು ತಿಳಿಯದೆದ್ದರೂ ಚಿಂತೆ ಇಲ್ಲ ನಿಮ್ಮ ಸಮಸ್ಯೆ ನನ್ನ ಗಮನಕ್ಕೆ ಬಂದರೆ ಸಾಕು ಎಂದು ಜಿಲ್ಲಾಧಿಕಾರಿಗಳು ರೈತ ಮುಖಂಡರ ಮಾತನಾಡುತ್ತಿದ್ದ ಮೈಕ್‌ ಹಿಂಪಡೆದುಕೊಂಡು ದೂರು ಸ್ವೀಕರಿಸಿ ಚರ್ಚೆ ನಡೆಸಿದರು.

Advertisement

ಜನತಾದರ್ಶನ ಕಾರ್ಯಕ್ರಮದ ಬಗ್ಗೆ ತಡವಾಗಿ ಮಾಹಿತಿ ತಿಳಿದು ಆನಂತರ ಬೆರಣಿಕೆಯಷ್ಟು ಸಾರ್ವ ಜನಿಕರು ಬಂದು ದೂರು ನೀಡಿ ಸಮಸ್ಯೆ ಬಗೆಹರಿ ಸುವಂತೆ ಮನವಿ ಮಾಡಿದರು. ಕೆಲವರು ಎರಡು ದೂರುಗಳನ್ನು ನೀಡಿದರೂ 27 ಅರ್ಜಿಗಳು ಸಲ್ಲಿಕೆಯಾದವು.

ಜಿಲ್ಲಾ ಪಂಚಾಯಿತಿ  ಸಿಇಒ ದಿಗ್ವಿಜಯ್‌ ಬೋಡ್ಚೆ, ಉಪ ವಿಭಾಗಾ ಧಿಕಾರಿ ವಿನಯ್‌, ಅರಣ್ಯ ಅಧಿಕಾರಿ ರಾಮಕೃಷ್ಣ ಪ್ರಸಾದ್‌, ತಹಶೀಲ್ದಾರ್‌ ಸ್ಮಿತಾ, ಗ್ರೇಡ್‌-2 ತಹಶೀ ಲ್ದಾರ್‌ ಶಿವಕುಮಾರ್‌, ಇಒ ಭೈರಪ್ಪ ಹಾಗೂ ಜಿಲ್ಲಾ- ತಾಲೂಕು ಮಟ್ಟದ ಅಧಿಕಾರಿಗಳಿದ್ದರು.

ತಪ್ಪು ಒಪ್ಪಿಕೊಂಡ ಜಿಲ್ಲಾಧಿಕಾರಿ: ಅಂಬೇಡ್ಕರ್‌  ಭವನ ದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸುಮಾರು 400 ಜನರು ಕುಳಿತುಕೊಳ್ಳುವ ಆಸನಗಳಿವೆ. ಆದರೆ ಜಿಲ್ಲಾ- ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರೂ ಸಭಾಂಗಣ ಖಾಲಿ ಖಾಲಿಯಾಗಿ ಕಾಣುತ್ತಿತ್ತು. ಅರ್ಧದಷ್ಟು ಆಸನಗಳು ಭರ್ತಿಯಾಗಿರಲಿಲ್ಲ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡದಿರುವುದರಿಂದ ಸಾರ್ವಜನಿಕರು ಬಂದಿಲ್ಲ ಎಂದು ಜಿಲ್ಲಾಧಿಕಾರಿಗಳೇ ಒಪ್ಪಿಕೊಂಡಿದ್ದು, ಜಿಲ್ಲಾಡಳಿತಕ್ಕೆ ಮುಜುಗರಕ್ಕೆ ಕಾರಣವಾಯಿತು.

ಸ್ಮಶಾನ ಜಾಗ ಮಂಜೂರಿಗೆ ಮಲ್ಲಿಕಾರ್ಜುನ್‌ ಮನವಿ:

ಧಮ್ಮ ದೇವಿಗೆ ಟ್ರಸ್ಟ್‌ ಮಲ್ಲಿಕಾರ್ಜುನ್‌ ದೂರು ಸಲ್ಲಿಸಿ ತಾಲೂಕಿನಲ್ಲಿ ಬಹುತೇಕ ಗ್ರಾಮಗಳಲ್ಲಿ ಸ್ಮಶಾನದ ಕೊರತೆ ಇದೆ. ಸ್ಮಶಾನವಿದ್ದರೂ ಕೆಲವು ಗ್ರಾಮಗಳಲ್ಲಿ ದಲಿತರ ಶವಸಂಸ್ಕಾರಕ್ಕೆ ವಿರೋಧ ಮಾಡುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಿ ಪ್ರತಿ ಗ್ರಾಮಗಳಲ್ಲಿ ಸ್ಮಶಾನಗಳನ್ನು ಮಂಜೂರು ಮಾಡಬೇಕು. ಜತೆಗೆ ಆಹಾರ ಇಲಾಖೆಯಲ್ಲಿ ಕಳೆದ 6 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಫ‌ುಡ್‌ ಇನ್ಸ್ ಪೆಕ್ಟರ್ ಮನೋಹರ್‌ ವರ್ಗಾವಣೆಯಾಗಿದ್ದರೂ ತನ್ನ ಪ್ರಭಾವ ಬಳಸಿ ಮತ್ತೆ ತಾಲೂಕಿಗೆ ವರ್ಗಾವಣೆ ಮಾಡಿಕೊಂಡು ಆಯಕಟ್ಟಿನ ಜಾಗದಲ್ಲಿ ಕುಳಿತು ಪಡಿತರ ಕಾಳ ಸಂತೆಯಲ್ಲಿ ಮಾರಾಟಕ್ಕೆ ಕುಮ್ಮಕ್ಕು ನೀಡಿದ್ದಾರೆ. ಜತೆಗೆ ಸರ್ಕಾರದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಪ್ರಭಾವಿಗಳಿಗೆ ಪಡಿತರ ಕಾರ್ಡ್‌ಗಳಿಗೆ ಅನುಮೋದನೆ ನೀಡಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು, ಕ್ರಮಕ್ಕೆ ಆಗ್ರಹಿಸಿದರು.

ತಂಗುದಾಣ ನಿರ್ಮಿಸಿ ಕೊಡಿ: ಅಂಥೋಣಿ ರಾಜ್‌ ಮಧು:

ರೈತ ಸಂಘದ ಮುಖಂಡ ಅಂಥೋಣಿ ರಾಜ್‌ ಮಧು ದೂರು ಸಲ್ಲಿಸಿ ಹಾರೋಬಲೆ ಗ್ರಾಮದಲ್ಲಿ ಪ್ರಯಾಣಿಕರ ತಂಗುದಾಣವನ್ನು ವಾಣಿಜ್ಯ ಮಳಿಗೆಯಾಗಿ ಪರಿವರ್ತಿಸಲಾಗಿದೆ ಇದರಿಂದ ಜನರಿಗೆ ಸಾರಿಗೆ ಬಸ್‌ಗಾಗಿ ಮಳೆ ಬಿಸಿಲಿನಲ್ಲಿ ನಿಂತು ಕಾಯಬೇಕು ಈ ಬಗ್ಗೆ ಜಿಪಂ, ತಾಪಂ ಅಧಿಕಾರಿಗಳಿಗೂ ದೂರು ಸಲ್ಲಿಸಿ ರೈತ ಸಂಘದಿಂದ ಪ್ರತಿಭಟನಾ ಧರಣಿ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಯಾಣಿಕರ ತಂಗುದಾಣ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next