Advertisement

ಜನಸ್ಪಂದನ ಸಮಾವೇಶ ಅಂದರೆ ಕಾಂಗ್ರೆಸ್‌ಗೇ ಕೆ ಭಯ? ಸಚಿವ ಡಾ|ಕೆ. ಸುಧಾಕರ್‌

12:10 AM Sep 10, 2022 | Team Udayavani |

ಬೆಂಗಳೂರು: “ಜನ ಸ್ಪಂದನ ಸಮಾವೇಶ ಅಂದರೆ ಕಾಂಗ್ರೆಸ್‌ಗೆàಕೆ ಭಯ? ರಾಜ್ಯ ದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಡೆಯಲಾಗದು’. ಜನಸ್ಪಂದನ ಸಮಾವೇಶದ ಉಸ್ತುವಾರಿಗಳಲ್ಲಿ ಒಬ್ಬರಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ| ಕೆ. ಸುಧಾಕರ್‌ “ಉದಯವಾಣಿ’ ಯೊಂದಿಗೆ ಮಾತನಾಡಿ, ಈ ಸಮಾವೇಶ ಮುಂದಿನ ವಿಧಾನ ಸಭೆ ಚುನಾವಣೆಗೆ ಮುನ್ನುಡಿ ಬರೆಯು ವುದರೊಂದಿಗೆ ರಾಜ್ಯ ರಾಜಕೀಯ ವಲಯಕ್ಕೆ ಸಂದೇಶ ರವಾನಿಸಲಿದೆ ಎಂದು ಹೇಳಿದರು.

Advertisement

ಸಮಾವೇಶದ ಮೂಲ ಉದ್ದೇಶ ಏನು?
ಮೂರು ವರ್ಷಗಳ ಜನಸ್ನೇಹಿ ಆಡಳಿತ ನೀಡಿದ ಬಿಜೆಪಿ ಸರಕಾರ, ಸವಾಲುಗಳನ್ನು ಮೀರಿದ ಸಾಧನೆಯನ್ನು ಮಾಡಿ ಮುನ್ನಡೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ವಿಶ್ವಾಸಾರ್ಹ, ಜವಾಬ್ದಾರಿಯುತ, ಪಾರದರ್ಶಕ ಹಾಗೂ ದಕ್ಷ ಆಡಳಿತಕ್ಕೆ ಒಂದು ವರ್ಷ. ಈ ಮಹತ್ತರ ಸಾಧನೆಯನ್ನು ರಾಜ್ಯದ ಜನತೆಯೊಂದಿಗೆ ಹಂಚಿಕೊಳ್ಳುವುದೇ ಕಾರ್ಯಕ್ರಮದ ಉದ್ದೇಶ.

ನೀವು ಪೂರ್ವಭಾವಿ ಸಭೆಗಳಲ್ಲಿ ಸರಕಾರದ ಸಾಧನೆಗಳ ರಿಪೋರ್ಟ್‌ ಕಾರ್ಡ್‌ ಇಡುತ್ತೇವೆ ಎಂದಿದ್ದಿರಿ?
ಕೇಂದ್ರ ಹಾಗೂ ರಾಜ್ಯ ಸರಕಾರ ಅನೇಕ ಜನಪರ ಯೋಜನೆಗಳ ಮೂಲಕ ಅಭಿವೃದ್ಧಿಯ ಪಥವನ್ನೇ ಬದಲಿಸಿದೆ. ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆಯಡಿ, ಕೋವಿಡ್‌ ಮೊದಲ ಅಲೆಯಲ್ಲಿ 391.26 ಕೋಟಿ ರೂ., 2ನೇ ಅಲೆಯಲ್ಲಿ 376.76 ಕೋಟಿ ರೂ. ಹಾಗೂ 3ನೇ ಅಲೆಯ ವೇಳೆ 11.80 ಕೋಟಿ ರೂ. ಮೊತ್ತವನ್ನು ರೋಗಿಗಳ ಚಿಕಿತ್ಸೆಗೆ ಪಾವತಿಸಲಾಗಿದೆ. 3,000 ಕೋಟಿ ರೂ. ವೆಚ್ಚದಲ್ಲಿ 2,275 ಕಿ.ಮೀ ರಾಜ್ಯ ಹೆದ್ದಾರಿ ನಿರ್ಮಾಣ, 5 ಲಕ್ಷಕ್ಕೂ ಹೆಚ್ಚು ಬಸವ ವಸತಿ ಮನೆಗಳಿಗೆ ಮಂಜೂರಾತಿ, 6 ಎಂಜಿನಿಯರಿಂಗ್‌ ಕಾಲೇಜುಗಳನ್ನು ಐಐಟಿ ಮಟ್ಟಕ್ಕೆ ಉನ್ನತೀಕರಿಸಲು ಕ್ರಮ ಸೇರಿದಂತೆ ಅನೇಕ ಜನಹಿತ ಕಾರ್ಯಗಳನ್ನು ಮಾಡಿದೆ.

ಮಂಗಳೂರಿಗೆ ಬಂದಿದ್ದ ಮೋದಿಯವರು ಡಬಲ್‌ ಎಂಜಿನ್‌ ಸರಕಾರ ಎಂದು ಹೇಳಿದ್ದಾರೆ. ರಾಜ್ಯ ಸರಕಾರದ ಸಾಧನೆಗಳೇನು?
ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಬಿಜೆಪಿ ಇರುವುದರಿಂದ ಜನಕಲ್ಯಾಣದ ಆಶಯದ ಯೋಜನೆಗಳಿಗೆ ವೇಗ ದೊರೆತಿದೆ. ಡಬಲ್‌ ಎಂಜಿನ್‌ನ ವಾಹನದಂತೆಯೇ ಯೋಜನೆಗಳನ್ನೂ ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ವಿಪಕ್ಷದವರು ಜನಸ್ಪಂದನ ಅಲ್ಲ ಭ್ರಷ್ಟ ಉತ್ಸವ ಮಾಡಲಿ, ಬೆಂಗಳೂರು ಮುಳುಗಿರುವಾಗ ಇದು ಬೇಕಿತ್ತಾ ಎನ್ನುತ್ತಿದ್ದಾರಲ್ಲ?
ಹಿಂದಿನ ಕಾಂಗ್ರೆಸ್‌ ಸರಕಾರ ತನ್ನ ಅವಧಿಯಲ್ಲಿ ಪ್ರತೀ ದಿನವೂ ಭ್ರಷ್ಟ ಉತ್ಸವವನ್ನು ನಡೆಸಿದೆ. ಕಳೆದ 60ಕ್ಕೂ ಹೆಚ್ಚು ವರ್ಷಗಳಲ್ಲಿ ಅದನ್ನೇ ಮಾಡಿದೆ. ಯಾವಾಗ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದರೋ, ಅಂದಿನಿಂದ ಈ ಉತ್ಸವ ಸಂಪೂರ್ಣ ಅಂತ್ಯ ಕಂಡಿದೆ. ಈಗೇನಿದ್ದರೂ ಅಭಿವೃದ್ಧಿಯ ಉತ್ಸವ ನಡೆಯುತ್ತಿದೆ. ಪ್ರವಾಹ ಸಂಕಷ್ಟದ ವಿಷಯದಲ್ಲಿ ಬಿಜೆಪಿ ಸರಕಾರ ಜನರಿಗೆ ನೆರವಾಗಿದೆ.

Advertisement

ಈ ಸಮಾವೇಶದಿಂದಲೇ ಮುಂದಿನ ಚುನಾವಣೆಯ ಪ್ರಚಾರ ಆರಂಭವೇ?
ಇದು ಚುನಾವಣ ಪ್ರಚಾರ ಕಾರ್ಯಕ್ಕಿಂತಲೂ ಹೆಚ್ಚಾಗಿ ನಮ್ಮ ಸರಕಾರದ ಸಾಧನೆಗಳನ್ನು ಹೇಳಿಕೊಳ್ಳುವ ಅವಕಾಶ. ವಿವಿಧ ಯೋಜನೆಗಳ ಫ‌ಲಾನುಭವಿಗಳು ಸರಕಾರಕ್ಕೆ ಧನ್ಯವಾದ ಸಲ್ಲಿಸಲು ಕಾಯುತ್ತಿದ್ದಾರೆ. ಆಡಳಿತ ಪಕ್ಷವಾಗಿ ರಿಪೋರ್ಟ್‌ ಕಾರ್ಡ್‌ ಜನರ ಮುಂದಿಡುವ ಕರ್ತವ್ಯವನ್ನು ಮಾಡುತ್ತಿದ್ದೇವೆ.

ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಇದರಿಂದ ಲಾಭವಾಗುತ್ತಾ?
ಜನರಿಗೆ, ಪಕ್ಷದ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಇದು ಸಂಭ್ರಮದ ಸಂಗತಿ. ದೊಡ್ಡಬಳ್ಳಾಪುರ ಸೇರಿದಂತೆ ಇಡೀ ಬಯಲು ಸೀಮೆಯಲ್ಲಿ ಬಿಜೆಪಿಯ ಹೊಸ ಅಲೆಯನ್ನು ಸೃಷ್ಟಿಸಿ ಜನಹಿತ ಆಡಳಿತದ ನವ ಪರ್ವ ಸೃಷ್ಟಿಸಲು ಅವಕಾಶ.

ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ನೆಲೆ ಇದೆಯಾ ?
ಬದಲಾವಣೆ ಜಗದ ನಿಯಮ. 2014 ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ ಈ ಹಿಂದೆ ಇದ್ದ ಸನ್ನಿವೇಶ ಬದಲಾಗಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರು. ಅದೇ ರೀತಿ ಆ ಭಾಗದಲ್ಲೂ ಬಿಜೆಪಿ ಜನಪ್ರಿಯತೆ ಬೆಳೆಯುತ್ತಿದೆ. ದುರ್ಬಲವಾಗಿರುವಲ್ಲೆಲ್ಲ ಮತ್ತೆ ಬಳ ಪಡೆದುಕೊಳ್ಳಲಿದೆ.

 ಜನಸ್ಪಂದನ ಸಮಾವೇಶ ನಿಮ್ಮ ಶಕ್ತಿ ಪ್ರದರ್ಶನವೇ?
ಖಂಡಿತ ಅಲ್ಲ. ನನ್ನ ಕರ್ತವ್ಯ ನಿಷ್ಠೆಯ ಪ್ರದರ್ಶನ ಎನ್ನಬಹುದು. ಸಮಾವೇಶದ ಹೊಣೆಯನ್ನು ಸ್ವೀಕರಿಸಿ ಕೆಲಸ ಮಾಡುತ್ತಿದ್ದು, ಪಕ್ಷದ ವರಿಷ್ಠರಿಗೆ ಆಭಾರಿ. ಚಿಕ್ಕಬಳ್ಳಾಪುರ ಹಾಗೂ ಕೋಲಾರ ಮೊದಲಾದ ಭಾಗಗಳಲ್ಲಿ ಪಕ್ಷದ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪಕ್ಷ ಬಲಪಡಿಸುವ ಕೆಲಸ ಮಾಡುತ್ತಿದ್ದೇನೆ.

-ಎಸ್‌.ಲಕ್ಷ್ಮೀ ನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next