Advertisement

ತಪ್ಪನ್ನು ಕ್ಷಮಿಸುವಂತೆ ದೇವರಲ್ಲಿ ಪ್ರಾರ್ಥಿಸಿದ ಜನಾರ್ದನ ಪೂಜಾರಿ

11:13 PM Jun 30, 2019 | Team Udayavani |

ಮಂಗಳೂರು: ಕಾಂಗ್ರೆಸ್‌ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿಯವರು ಭಾನುವಾರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಆಗಮಿಸಿ ಲೋಕಸಭಾ ಚುನಾವಣೆ ಸಂದರ್ಭ ತನ್ನಿಂದ ಆದ ತಪ್ಪಿಗೆ ಕ್ಷಮಿಸುವಂತೆ ದೇವರಲ್ಲಿ ಪ್ರಾರ್ಥಿಸಿದ್ದಾರೆ.

Advertisement

ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಅವರು ನಾಮಪತ್ರ ಸಲ್ಲಿಸುವ ಮೊದಲು ಪುರಭವನದಲ್ಲಿ ಮಾ. 25 ರಂದು ನಡೆದಿದ್ದ ಕಾಂಗ್ರೆಸ್‌ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ಜನಾರ್ದನ ಪೂಜಾರಿ, “ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಜಯ ಗಳಿಸದಿದ್ದರೆ ಗೋಕರ್ಣನಾಥ ಕ್ಷೇತ್ರಕ್ಕೆ ಹೋಗುವುದನ್ನು ನಿಲ್ಲಿಸುತ್ತೇನೆ. ಚರ್ಚ್‌, ಮಸೀದಿಗೂ ಹೋಗುವುದಿಲ್ಲ’ ಎಂದು ಹೇಳಿದ್ದರು. ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು.

ಭಾನುವಾರ ಸಂಜೆ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರಕ್ಕೆ ದಿಢೀರ್‌ ಆಗಮಿಸಿದ ಪೂಜಾರಿಯವರು ಕ್ಷೇತ್ರಕ್ಕೆ ಪ್ರದಕ್ಷಿಣೆಗೈದು ಶ್ರೀ ಗೋಕರ್ಣನಾಥ ಹಾಗೂ ಪರಿವಾರ ದೇವರಿಗೆ ಪ್ರಾರ್ಥನೆ ಸಲ್ಲಿಸಿ ತನ್ನಿಂದ ತಪ್ಪು ಆಗಿದೆ. ನೀವು ನನ್ನನ್ನು ಕ್ಷಮಿಸಬೇಕು ಎಂದು ಬೇಡಿಕೊಂಡರು. ಈ ಮೂಲಕ ಸುಮಾರು ಮೂರು ತಿಂಗಳ ಬಳಿಕ ಪೂಜಾರಿಯವರು ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದಾರೆ.

ಈ ಸಂದರ್ಭ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, “ನಾನು ಜೀವನದಲ್ಲಿ ಮಾಡಿದ ದೊಡ್ಡ ತಪ್ಪು ಇದಾಗಿದೆ. ನಾನು ಹಾಗೆ ಹೇಳಬಾರದಿತ್ತು. ಇದಕ್ಕೆ ಪಶ್ಚಾತ್ತಾಪ ಪಡುತ್ತಿದ್ದೇನೆ. ನನ್ನ ತಪ್ಪಿಗೆ ಕ್ಷಮೆ ನೀಡುವಂತೆ ಬೇಡಿಕೊಳ್ಳಲು ದೇವರ ಬಳಿ ಬಂದಿದ್ದೇನೆ. ಹೀಗೆ ಮಾಡುವಂತೆ ಆದೇಶ ಬಂದ ಅನುಭವ ನನಗೆ ಆಯಿತು. ಅದೇ ರೀತಿ ಚರ್ಚ್‌, ಮಸೀದಿಯ ದೇವರಲ್ಲೂ ಕ್ಷಮೆ ಯಾಚಿಸುತ್ತೇನೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next