Advertisement

ಜಾರಿ ಹಂತದಲ್ಲಿ ‘ಜಲಸಿರಿ’ 24×7 ನಗರ ನೀರು ಯೋಜನೆ

11:18 PM Jul 27, 2019 | Team Udayavani |

ಪುತ್ತೂರು: ಬೆಳೆಯುತ್ತಿರುವ ಪುತ್ತೂರು ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಸಮರ್ಪಕಗೊಳಿಸುವ ನಿಟ್ಟಿನಲ್ಲಿ ‘ಜಲಸಿರಿ’ 24×7 ಯೋಜನೆಯು ಅನುಷ್ಠಾನಗೊಳ್ಳುತ್ತಿದ್ದು, ಸರ್ವೇ ಕಾರ್ಯ ನಡೆದು ಡಿಸೈನ್‌ ಹಂತದಲ್ಲಿದೆ. ಮಳೆಗಾಲ ಮುಗಿದ ಕೂಡಲೇ ಕಾಮಗಾರಿ ಆರಂಭವಾಗಲಿದೆ.

Advertisement

ನಗರಸಭೆ ಮತ್ತು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (ಕೆಯುಐಡಿಎಫ್‌ಸಿ) ಜಂಟಿ ಸಹಯೋಗದಲ್ಲಿ ಎಡಿಬಿ ಎರಡನೇ ಹಂತದ ಹೊಸ ನೀರು ಸರಬರಾಜು ಯೋಜನೆಗೆ 72 ಕೋಟಿ ರೂ. ಪಟ್ಟಿ ತಯಾರಿಸಲಾಗಿದೆ. ಶೇ. 50ರಷ್ಟು ಎಡಿಬಿ ಸಾಲ, ಶೇ. 40 ರಾಜ್ಯ ಸರಕಾರದ ಅನುದಾನ ಹಾಗೂ ಶೇ. 10 ಅನುದಾನವನ್ನು ಸ್ಥಳೀಯಾಡಳಿತ ಭರಿಸಲಿದೆ.

ಸಾರ್ವಜನಿಕ ಮಾಹಿತಿ

ಉಪ್ಪಿನಂಗಡಿಯ ನೆಕ್ಕಿಲಾಡಿಯಲ್ಲಿ ಕುಮಾರಧಾರಾ ನದಿಗೆ ಒಡ್ಡು ನಿರ್ಮಿಸಿ ಅದರಲ್ಲಿ ಸಂಗ್ರಹಗೊಂಡ ನೀರನ್ನು ಪೈಪ್‌ಗ್ಳ ಮೂಲಕ ಪುತ್ತೂರಿಗೆ ಮೂರು ದಶಕಗಳ ಕಾಲ ನೀರು ರವಾನಿಸಲಾಗುತ್ತಿತ್ತು. ಅನಂತರ 10 ವರ್ಷಗಳ ಹಿಂದೆ ಅನುಷ್ಠಾನಗೊಂಡ 38 ಕೋಟಿ ರೂ. ಮೊತ್ತದ ಎಡಿಬಿ ಕುಡಿಯುವ ನೀರು ಯೋಜನೆಯಲ್ಲಿ ಹಳೆಯ ಪೈಪ್‌ಲೈನ್‌ ಜತೆಗೆ ಹೊಸ ಪೈಪ್‌ಲೈನ್‌ ಅಳವಡಿಕೆ, ಹೊಸದಾಗಿ ಓವರ್‌ಹೆಡ್‌ ಟ್ಯಾಂಕ್‌ಗಳು, ರೇಚಕ ಸ್ಥಾವರ ನಿರ್ಮಾಣ ಇತ್ಯಾದಿ ಕಾಮಗಾರಿ ಜಾರಿಗೆ ಬಂದಿತ್ತಾದರೂ, ಹಲವು ಹುಳುಕುಗಳು ಕಂಡುಬಂದ ಜತೆಗೆ ನಗರದ ಶೇ. 60 ಪ್ರದೇಶಕ್ಕೆ ಮಾತ್ರ ನೀರು ಪೂರೈಕೆ ನಡೆದಿತ್ತು. ಈ ಕಾರಣದಿಂದ ಹೊಸ ಯೋಜನೆಯನ್ನು ಅಳವಡಿಸುವ ಸಂದರ್ಭ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಅನುಸರಿಸಲಾಗಿದೆ. ಹಲವು ಸುತ್ತಿನ ಸಭೆಗಳ ಮೂಲಕ ಚರ್ಚಿಸಿ, ಸಾರ್ವಜನಿಕ ಅಭಿಪ್ರಾಯವನ್ನೂ ಪರಿಗಣಿಸಲಾಗಿದೆ.

ಹೆಚ್ಚುವರಿ ಸ್ಥಾವರ
ಹಾಲಿ ನೆಕ್ಕಿಲಾಡಿಯಲ್ಲಿ 6.8 ಎಂಎಲ್ಡಿ (68 ಲಕ್ಷ ಲೀ.) ಸಾಮರ್ಥ್ಯದ ರೇಚಕ ಸ್ಥಾವರವಿದೆ. ಈ ಸಾಮರ್ಥ್ಯ ನಗರಕ್ಕೆ ನೀರು ಸರಬರಾಜಿಗೆ ಸಾಲದ ಹಿನ್ನೆಲೆಯಲ್ಲಿ ಹೆಚ್ಚುವರಿ 8.7 ಎಂಎಲ್ಡಿ (87 ಲಕ್ಷ ಲೀ.) ಸಾಮರ್ಥ್ಯದ ರೇಚಕ ಸ್ಥಾವರವನ್ನು ನಿರ್ಮಿಸಲಾಗುತ್ತದೆ. ಈ ಮೂಲಕ ಯೋಜನೆ ಪೂರ್ಣಗೊಂಡ ಬಳಿಕ ನೆಕ್ಕಿಲಾಡಿಯಲ್ಲಿ 155 ಲಕ್ಷ ಲೀ. ನೀರು ಟ್ರೀಟ್ ಮಾಡಲು ಸಾಧ್ಯವಾಗುತ್ತದೆ.

Advertisement

ಉಪಕರಣಗಳ ಬದಲಾವಣೆ
ಹಾಲಿ ನೆಕ್ಕಿಲಾಡಿಯಲ್ಲಿ ಇರುವ ಜಾಕ್‌ವೆಲ್ ಮತ್ತು ನೀರು ಶುದ್ಧೀಕರಣ ಘಟಕದಲ್ಲಿ ಅಗತ್ಯವಿರುವ ಮೆಕ್ಯಾನಿಕಲ್ ಹಾಗೂ ವಿದ್ಯುತ್‌ ಉಪಕರಣಗಳ ಪೂರ್ಣ ಬದಲಾವಣೆ ಮಾಡಲಾಗುತ್ತದೆ. ಪ್ರತಿ ಮನೆಯ ಮೀಟರ್‌ಗಳನ್ನು ಬದಲಾವಣೆ ಮಾಡಲಾಗುತ್ತದೆ. ನೀರು ಸರಬರಾಜಿಗೆ ಸಂಬಂಧಪಟ್ಟ ವ್ಯತ್ಯಯಗಳು ಉಂಟಾದಲ್ಲಿ ಕಂಪ್ಯೂಟರೈಸ್ಡ್ ವ್ಯವಸ್ಥೆಯ ಮೂಲಕ ಗಮನಿಸಿ ಸಮಸ್ಯೆ ಬಗೆಹರಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು 33 ತಿಂಗಳಲ್ಲಿ ಪೂರ್ಣ

ಕಾಮಗಾರಿ 33 ತಿಂಗಳಲ್ಲಿ ಪೂರ್ಣ ಗೊಳ್ಳಲಿದೆ. 3 ತಿಂಗಳು ಪ್ರಾಯೋಗಿಕ ಸರಬರಾಜು ನಡೆಯಲಿದೆ. ಅನಂತರ 8 ವರ್ಷಗಳ ಕಾಲ ಸಂಸ್ಥೆಯೇ ನಿರ್ವಹಣೆ ಜವಾಬ್ದಾರಿ ನಿರ್ವಹಿಸಲಿದೆ. ಮುಂದಿನ 3 ವರ್ಷಗಳಲ್ಲಿ ನಿರಂತರ ನೀರು ಸರಬರಾಜಿನ ಉನ್ನತೀಕರಿಸಿದ ವ್ಯವಸ್ಥೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೂ ಮಾಹಿತಿ ನೀಡಲಾಗುತ್ತಿದ್ದು, ಉತ್ತಮ ಹಾಗೂ ಗುಣಮಟ್ಟದ ವ್ಯವಸ್ಥೆ ಜಾರಿಗೊಳ್ಳಲಿದೆ.
– ಅಶೋಕ್‌ ಎಂ.ಬಿ., ಎಕ್ಸಿಕ್ಯೂಟಿವ್‌ ಎಂಜಿನಿಯರ್‌, ಕೆ.ಯು.ಐ.ಡಿ.ಎಫ್‌.ಸಿ.

ನಗರಸಭೆ ಮೇಲುಸ್ತುವಾರಿ

ಜಲಸಿರಿ ಯೋಜನೆಯ ಮೂಲಕ ಪುತ್ತೂರಿನಲ್ಲಿ ಉತ್ತಮ ನೀರು ಸರಬರಾಜು ಯೋಜನೆ ಜಾರಿಯಾಗುತ್ತಿದೆ. ಆ ಮೂಲಕ ಹಲವು ಬೇಡಿಕೆಗಳು ಈಡೇರಲಿವೆ. ನಗರಸಭೆಯೇ ಇದರ ಮೇಲುಸ್ತುವಾರಿ ವಹಿಸಲಿದೆ.
– ರೂಪಾ ಟಿ. ಶೆಟ್ಟಿ,ಪೌರಾಯುಕ್ತರುಪುತ್ತೂರು ನಗರಸಭೆ

ಪ್ರಸ್ತಾವಿತ ಘಟಕಗಳು

• ಮುರ (ಪಟ್ನೂರು) -ಮೇಲ್ಮಟ್ಟದ ಜಲಸಂಗ್ರಹಗಾರ (3 ಲಕ್ಷ ಲೀ. ಸಾಮರ್ಥ್ಯ)

• ಮೈಕ್ರೋವೇವ್‌ ಸ್ಟೇಷನ್‌ – ಮೇಲ್ಮಟ್ಟದ ಜಲಸಂಗ್ರಹಗಾರ (1 ಲಕ್ಷ ಲೀ. ಸಾಮರ್ಥ್ಯ)

• ಸಿಟಿಗುಡ್ಡೆ – ನೆಲಮಟ್ಟದ ಜಲಸಂಗ್ರಹಗಾರ (10 ಲಕ್ಷ ಲೀ. )

• ಸಿಟಿಒ, ದರ್ಬೆ – ಮೇಲ್ಮಟ್ಟದ ಜಲಸಂಗ್ರಹಗಾರ (6 ಲಕ್ಷ ಲೀ. ಸಾಮರ್ಥ್ಯ)

• ಲಿಂಗದಗುಡ್ಡ – ಮೇಲ್ಮಟ್ಟದ ಜಲಸಂಗ್ರಹಗಾರ(2.5 ಲಕ್ಷ ಲೀ. ಸಾಮರ್ಥ್ಯ)

• ಬಲ್ನಾಡ್‌ ಹೆಲಿಪ್ಯಾಡ್‌ – ಮೇಲ್ಮಟ್ಟದ ಜಲಸಂಗ್ರಹಗಾರ (2 ಲಕ್ಷ ಲೀ. ಸಾಮರ್ಥ್ಯ)

• ಬಲ್ನಾಡ್‌ ಕೆಲ್ಯಾಡಿ – ಮೇಲ್ಮಟ್ಟದ ಜಲಸಂಗ್ರಹಗಾರ(1 ಲಕ್ಷ ಲೀ. ಸಾಮರ್ಥ್ಯ)

• ಕೆಎಚ್ಬಿ ಸೈಟ್, ತೆಂಕಿಲ – ಮೇಲ್ಮಟ್ಟದ ಜಲಸಂಗ್ರಹಗಾರ(20 ಲಕ್ಷ ಲೀ. ಸಾಮರ್ಥ್ಯ)

• ನೆಕ್ಕಿಲಾಡಿ – ನೀರು ಶುದ್ಧೀಕರಣ ಘಟಕ (8.7 ಎಂಎಲ್ಡಿ)

• ನೆಕ್ಕಿಲಾಡಿ – ಮರು ನೀರು ಶುದ್ಧೀಕರಣ ಘಟಕ (15 ಎಂಎಲ್ಡಿ)

ಕಾಮಗಾರಿಗಳು ಹೀಗಿವೆ
• 1.68 ಕಿ.ಮೀ. ಉದ್ದದ 400 ಮಿ.ಮೀ. ವ್ಯಾಸದ ಕಚ್ಚಾ ನೀರು ಏರು ಕೊಳವೆಯು ಜಾಕ್‌ವೆಲ್ ನಿಂದ ನೀರು ಶುದ್ಧೀಕರಣ ಘಟಕದವರೆಗೆ ವಿಸ್ತರಣೆಗೊಳ್ಳಲಿದೆ.
• ನೆಕ್ಕಿಲಾಡಿಯಲ್ಲಿ 8.7 ಎಂ.ಎಲ್.ಡಿ. ನೀರು ಶುದ್ಧೀಕರಣ ಘಟಕ ನಿರ್ಮಾಣಗೊಳ್ಳಲಿದೆ.
• 12.42 ಕಿ.ಮೀ. ಉದ್ದ 400 ಮಿ.ಮೀ. ವ್ಯಾಸದ ಶುದ್ಧ ನೀರು ಏರು ಕೊಳವೆ ಮಾರ್ಗ- ನೀರು ಶುದ್ಧೀಕರಣ ಘಟಕದಿಂದ ತೆಂಕಿಲದ 20 ಲಕ್ಷ ಲೀ. ನೆಲಮಟ್ಟದ ಸಂಗ್ರಾಹದವರೆಗೆ.
• 6 ಮೇಲ್ಮಟ್ಟದ ಜಲಸಂಗ್ರಹಗಾರ ಮತ್ತು 2 ನೆಲಮಟ್ಟದ ಜಲಸಂಗ್ರಹಗಾರ ನಿರ್ಮಾಣಗೊಳ್ಳಲಿದೆ.
• 142. 66 ಕಿ.ಮೀ ಉದ್ದದ ವಿತರಣಾ ಕೊಳವೆ ಜಾಲ ನಿರ್ಮಾಣ. •29 ಬಲ್ಕ್ ವಾಟರ್‌ ಮೀಟರ್‌.
• 4,500 ಹೊಸ ಮನೆ ಸಂಪರ್ಕಗಳು ಮತ್ತು ಹಾಲಿ ಇರುವ 9226 ಹಳೆಯ ಮಾಪಕಗಳ ಬದಲಾವಣೆ. • ಹಾಲಿ ಇರುವ ಜಾಕ್‌ವೆಲ್ ಮತ್ತು ನೀರು ಶುದ್ಧೀಕರಣ ಘಟಕದಲ್ಲಿ ಅಗತ್ಯವಿರುವ ಮೆಕ್ಯಾನಿಕಲ್ ಹಾಗೂ ವಿದ್ಯುತ್‌ ಉಪಕರಣಗಳ ಬದಲಾವಣೆ.

Advertisement

Udayavani is now on Telegram. Click here to join our channel and stay updated with the latest news.

Next