Advertisement

ಜಗಜ್ಯೋತಿ ಕಲಾವೃಂದದ ವಾರ್ಷಿಕೋತ್ಸವ, ಪ್ರಶಸ್ತಿಗಳ ಪ್ರದಾನ

10:26 AM Feb 16, 2018 | |

ಡೊಂಬಿವಲಿ: ಜಗಜ್ಯೋತಿ ಕಲಾವೃಂದದ ನಾಡು-ನುಡಿಯ ಸೇವೆ ಅನುಕರಣೀಯ ಮತ್ತು ಅಭಿನಂದನೀಯವಾಗಿದ್ದು, ಕನ್ನಡದ ಅತ್ಯುತ್ತಮ ಸಾಹಿತ್ಯ ಕೃಷಿಕರನ್ನು ಗುರುತಿಸಿ ಅವರಿಗೆ ನೀಡುತ್ತಿರುವ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಪ್ರಶಸ್ತಿಯು ಇತರ ಸಂಘಟನೆಗಳಿಗೆ ಮಾದರಿಯಾಗಿದೆ. ಸಂಸ್ಥೆಯ ಕಾರ್ಯ ನಿಂತ ನೀರಾಗದೆ, ಹರಿಯುವ ನದಿಯಂತಾಗಬೇಕು. ದಿ| ಪ್ರೊ| ಸೀತಾರಾಮ ಶೆಟ್ಟಿ ಅವರೊಂದಿಗೆ ನನ್ನ ಅವಿನಾಭಾವ ಸಂಬಂಧವಿತ್ತು. ಅವರು ಹಾಕಿಕೊಟ್ಟ ಆದರ್ಶದ ಪಥದಲ್ಲಿ ಸಂಸ್ಥೆಯು ಮುಂದುವರಿಯುತ್ತಿರುವುದು ಗಮನಾರ್ಹವಾಗಿದೆ. ನಾಡು-ನುಡಿಯ ಅಭಿವೃದ್ಧಿಗೆ ಸದಾ ತುಡಿಯುತ್ತಿರುವ ಜಗಜ್ಯೋತಿ ಕಲಾವೃಂದಕ್ಕೆ ಎಲ್ಲರ ಸಹಕಾರ ಸದಾಯಿರಲಿ ಎಂದು ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಮಾಜಿ ಅಧ್ಯಕ್ಷ ಶ್ಯಾಮ್‌ ಎನ್‌. ಶೆಟ್ಟಿ ಅವರು ನುಡಿದರು.

Advertisement

ಫೆ. 11ರಂದು ಡೊಂಬಿವಲಿ ಪೂರ್ವದ ಠಾಕೂರ್‌ ಸಭಾಗೃಹದಲ್ಲಿ ನಡೆದ ಜಗಜ್ಯೋತಿ ಕಲಾವೃಂದ ಮುಂಬಯಿ ಇದರ 32ನೇ ವಾರ್ಷಿಕೋತ್ಸವ ಮತ್ತು ಸಂಸ್ಥೆಯ 2017 ಸಾಲಿನ ಅಖೀಲ ಭಾರತ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಕಥಾ ಮತ್ತು ಕವಿತಾ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಜೇಯ ಸ್ಪರ್ಧಿಗಳಿಗೆ ಶುಭಹಾರೈಸಿದರು.

ಸಮಾರಂಭದಲ್ಲಿ ಸಂಸ್ಥೆಯ 2017 ಸಾಲಿನ ಅಖೀಲ ಭಾರತ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಕಥಾ ಸ್ಪರ್ಧೆಯಲ್ಲಿ ವಿಜೇತರಾದ ಮೈಸೂರಿನ ಸಾಹಿತಿ ಲೀಲಾವತಿ ರಾಮಕೃಷ್ಣ ಮತ್ತು ಕವಿತಾ ಪ್ರಶಸ್ತಿ ಪಡೆದ ಮಂಗಳೂರಿನ ಲೇಖಕಿ, ಅಕ್ಷಯಾ ಆರ್‌. ಶೆಟ್ಟಿ ಅವರಿಗೆ ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಪ್ರಮಾಣ ಪತ್ರ, ನಗದು ಬಹುಮಾನವನ್ನಿತ್ತು ಪ್ರಶಸ್ತಿ ಪ್ರದಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಬಂಟರ ಸಂಘ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಸುಬೋದ್‌ ಭಂಡಾರಿ ಅವರು ಮಾತನಾಡಿ, ಜಗಜ್ಯೋತಿ ಕಲಾವೃಂದದ ಕಾರ್ಯ ಅಭಿನಂದನೀಯ. 32ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಈ ಸಂಸ್ಥೆ ಶತಮಾನೋತ್ಸವ ಆಚರಿಸುವಂತಾಗಲಿ ಎಂದರು.

ವಿಶೇಷ ಆಮಂತ್ರಿತರಾಗಿ ಆಗಮಿಸಿದ ಡೊಂಬಿವಲಿ ಕರ್ನಾಟಕ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಷ್ಮಾ ಡಿ. ಶೆಟ್ಟಿ  ಇವರು ಮಾತನಾಡಿ, ಹೊರನಾಡಿನಲ್ಲಿ ಕನ್ನಡಾಂಬೆಯ ತೇರನ್ನು ಎಳೆಯುತ್ತಿರುವ ಕನ್ನಡಪರ ಸಂಘಟನೆಗಳಲ್ಲಿ ಜಗಜ್ಯೋತಿ ಕಲಾವೃಂದದ ಹೆಸರು ಮುಂಚೂಣಿಯಲ್ಲಿದ್ದು, ವೃಂದವು ಸಾಹಿತ್ಯ, ಸಂಗೀತ, ಕಲೆ ಹಾಗೂ ಧಾರ್ಮಿಕ ಚಟುವಟಿಕೆಗಳ ಮೂಲಕ ಜನಪ್ರಿಯವಾಗಿದೆ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೀಡುತ್ತಿರುವ ಸಹಾಯ ಅನನ್ಯವಾಗಿದೆ ಎಂದರು.

Advertisement

ಇನ್ನೋರ್ವ ಅತಿಥಿ ಡೊಂಬಿವಲಿ ಕರ್ನಾಟಕ ಸಂಘದ ಉಪಕಾರ್ಯಾಧ್ಯಕ್ಷ ಡಾ| ವಿ. ಎಂ. ಶೆಟ್ಟಿ ಇವರು ಮಾತನಾಡಿ, ಜಗಜ್ಯೋತಿ ಕಲಾವೃಂದವು ಹೊರನಾಡ ಕನ್ನಡಿಗರ ಸ್ನೇಹಸೇತುವಾಗಿ ಕಾರ್ಯನಿರ್ವಹಿಸುತ್ತಿದ್ದು, ಡೊಂಬಿವಲಿಯ 32 ಸಂಘಟನೆಗಳ ಪೈಕಿ ಕಲಾವೃಂದ ಸಮಾಜ ಸೇವೆಯಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟಿದೆ. ಸಂಸ್ಥೆಯ ಸಹಾಯ, ಸಹಕಾರಕ್ಕೆ ತಾವು ಬದ್ಧರಾಗಿದ್ದೇವೆ ಎಂದರು.

ಬಂಟರ ಸಂಘ ಡೊಂಬಿವಲಿ ಪ್ರಾದೇಶ ಸಮಿತಿಯ ಉಪಕಾರ್ಯಾಧ್ಯಕ್ಷ ಆನಂದ ಶೆಟ್ಟಿ ಅವರು ಮಾತನಾಡಿ, ಜಗಜ್ಯೋತಿ ಕಲಾವೃಂದದ ಸಾಮಾಜಿಕ ಕಳಕಳಿ ಅನನ್ಯವಾಗಿದ್ದು, ಸಂಘದ ಸಾಧನೆ ಉತ್ತುಂಗಕ್ಕೇರಿ ಹೆಸರಿನಿಂದ ಜಗತ್ತಿಗೆ ಜ್ಯೋತಿಯನ್ನು ನೀಡಲಿ ಎಂದು ನುಡಿದು ಹಾರೈಸಿದರು.

ಜಗದೀಶ್‌ ನಿಟ್ಟೆ ಅವರು ಪ್ರಾರ್ಥನೆಗೈದರು. ಗಣ್ಯರು ಜ್ಯೋತಿ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ರಮೇಶ್‌ ಶೆಟ್ಟಿ, ಬಾಬು ಮೊಗವೀರ, ಚಂದ್ರ ನಾಯಕ್‌, ಶೇಖರ್‌ ಶೆಟ್ಟಿ, ವಸಂತ ಸುವರ್ಣ ಅವರು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ರಮೇಶ್‌ ಶೆಟ್ಟಿ ಇವರು ಸ್ವಾಗತಿಸಿ, ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿ, ಮುಂದಿನ ಯೋಜನೆ-ಯೋಚನೆಗಳ ಬಗ್ಗೆ ಮಾಹಿತಿ ನೀಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಬಾಬು ಮೊಗವೀರ ವಾರ್ಷಿಕ ವರದಿ ವಾಚಿಸಿದರು. ಚಂದ್ರ ನಾಯ್ಕ, ರಾಜು ಸುವರ್ಣ, ಸುರೇಂದ್ರ ನಾಯ್ಕ, ಸಂತೋಷ್‌ ಶೆಟ್ಟಿ, ಉಮೇಶ್‌ ಸುವರ್ಣ ಅತಿಥಿಗಳನ್ನು ಪರಿಚಯಿಸಿದರು. ವಸಂತ ಸುವರ್ಣ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಸ್ಥಳೀಯ ವಿವಿಧ ಸಂಘಟನೆಗಳ ಪದಾಧಿಕಾರಿ ಗಳಾದ ದಿವಾಕರ ಶೆಟ್ಟಿ ಇಂದ್ರಾಳಿ, ಸುಕುಮಾರ್‌ ಎನ್‌. ಶೆಟ್ಟಿ, ದೇವದಾಸ್‌ ಎಲ್‌. ಕುಲಾಲ್‌, ರವೀಂದ್ರ ವೈ. ಶೆಟ್ಟಿ, ರಾಜು ಭಂಡಾರಿ, ಯೋಗಿನಿ ಶೆಟ್ಟಿ, ಮಾಧುರಿಕಾ ಬಂಗೇರ, ಆಶೀಶ್‌ ಶೆಟ್ಟಿ, ಹರೀಶ್‌ ಶೆಟ್ಟಿ, ಅಶೋಕ್‌ ದಾಸು ಶೆಟ್ಟಿ ಮೊದಲಾದವರು  ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ನೃತ್ಯ ವೈವಿಧ್ಯ ಹಾಗೂ ಶ್ರೀ ಗೀತಾಂಬಿಕಾ ಯಕ್ಷಗಾನ ಕಲಾಮಂಡಳಿಯವರಿಂದ ಗದಾಯುದ್ಧ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.  

ಹೊರ ಹಾಗೂ ಒಳನಾಡಿನ ಕನ್ನಡಿಗರು ಕನ್ನಡ ಹಾಗೂ ಅಲ್ಲಿಯ ಭಾಷೆಯನ್ನು ಅನುವಾದಿಸಿ ಸಾಹಿತ್ಯ ಕೃಷಿ  ಮಾಡಿದರೆ ಪರಸ್ಪರರ ಭಾಷಾ ಸಾಹಿತ್ಯದ ಅದಾನ-ಪ್ರದಾನದ ಜತೆಗೆ ಕನ್ನಡ ಭಾಷೆಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸಬಹುದಾಗಿದೆ. ಶಿಕ್ಷಣ ಮಾಧ್ಯಮದಿಂದ ಕನ್ನಡವನ್ನು ಉಳಿಸಿ-ಬೆಳೆಸುವುದು ಇಂದು ಅಸಾಧ್ಯವಾಗಿದೆ. ಕಲಾ ಮಾಧ್ಯಮದ ಮುಖಾಂತರ ಸ್ವಲ್ಪ ಮಟ್ಟಿಗೆ ಕನ್ನಡವನ್ನು ಉಳಿಸಬಹುದಾಗಿದೆ. ಹೊರನಾಡ ಕನ್ನಡಿಗರು  ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸುತ್ತಿರುವ ಕಾರ್ಯ ಅಭಿನಂದನೀಯ. ನನ್ನ ಕೃತಿಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆಮಾಡಿದ ಸಂಸ್ಥೆಗೆ ಕೃತಜ್ಞಳಾಗಿದ್ದೇನೆ 
– ಲೀಲಾವತಿ ರಾಮಕೃಷ್ಣ  ಮೈಸೂರು (ಕಥಾ ಪ್ರಶಸ್ತಿ ಪುರಸ್ಕೃತರು).

ಕನ್ನಡವೇ ಉಸಿರೆಂದು ಹೇಳುವ ಕರ್ನಾಟಕದ ಜನತೆಗಿಂತ ಗಡಿಯಾಚೆಯೂ ಕನ್ನಡವನ್ನು ಉಳಿಸಿ-ಬೆಳೆಸುತ್ತಿರುವ ನಿಮ್ಮೆಲ್ಲರ ಕಾರ್ಯ ಅಭಿನಂದನೀಯ. ಮನುಷ್ಯ  ವೃತ್ತಿಯ ಜತೆ ಪ್ರವೃತ್ತಿಯೂ ಮನುಷ್ಯನ ಬದುಕಿಗೆ ಸ್ಫೂರ್ತಿದಾಯಕವಾಗಿದೆ. ನನ್ನ ಬರವಣಿಗೆಗೆ ಸ್ಫೂ³ರ್ತಿ ನೀಡಿ, ನಾನು ಎಲ್ಲಿದ್ದೇನೆ ಎಂಬ ನನ್ನ ಕಾವ್ಯ ಸಂಗ್ರಹಕ್ಕೆ ಸಂಸ್ಥೆಯ ಕವಿತಾ ಪುರಸ್ಕಾರವನ್ನು ಪ್ರದಾನಿಸಿದ್ದು ನನ್ನ ಭಾಗ್ಯವೆಂದು ತಿಳಿದಿದ್ದೇನೆ. ಪ್ರಶಸ್ತಿಗೆ ಆಯ್ಕೆ ಮಾಡಿದ ಜಗಜ್ಯೋತಿ ಸಂಸ್ಥೆಗೆ ಋಣಿಯಾಗಿದ್ದೇನೆ 
– ಅಕ್ಷಯಾ ಆರ್‌. ಶೆಟ್ಟಿ  ಮಂಗಳೂರು (ಕವಿತಾ ಪ್ರಶಸ್ತಿ ಪುರಸ್ಕೃತರು).

ಚಿತ್ರ-ವರದಿ : ಗುರುರಾಜ ಪೋತನೀಸ್‌

Advertisement

Udayavani is now on Telegram. Click here to join our channel and stay updated with the latest news.

Next