Advertisement

ನಿತ್ಯಾನಂದ ಮಂದಿರದ ಜತೆಗೆ ಶೈಕ್ಷಣಿಕ, ಆರೋಗ್ಯ ಸಂಸ್ಥೆಗಳು ಸ್ಥಾಪನೆಯಾಗಲಿ: ಡಾ|ಎಚ್‌.ಎಸ್‌.ಬಲ್ಲಾಳ್‌

10:19 PM Jan 16, 2023 | Team Udayavani |

ಉಡುಪಿ: ಅಷ್ಟ ಮಠಗಳಿಗೆ ಖ್ಯಾತಿ ಪಡೆದ ಉಡುಪಿ ನಗರದ ಮುಕುಟಕ್ಕೆ ಶ್ರೀ ಭಗವಾನ್‌ ನಿತ್ಯಾನಂದ ಮಂದಿರವೂ ಇನ್ನೊಂದು ಗರಿ ಪೋಣಿಸಿದಂತಾಗಿದೆ. ಈ ಮಂದಿರದ ಜತೆಜತೆಗೆ ಶೈಕ್ಷಣಿಕ, ಆರೋಗ್ಯ ಸಂಸ್ಥೆಗಳು ಸ್ಥಾಪನೆಗೊಂಡಾಗ ಭಕ್ತರ ಆಶೋತ್ತರಗಳು ಈಡೇರಿ, ಮಂದಿರ ಮತ್ತೆ ಉತ್ತುಂಗಕ್ಕೆ ಏರಲಿದೆ ಎಂದು ಎಂದು ಮಣಿಪಾಲ ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಹೇಳಿದರು.

Advertisement

ಉಡುಪಿಯ ಶ್ರೀ ಭಗವಾನ್‌ ನಿತ್ಯಾನಂದ ಸ್ವಾಮಿ ಮಂದಿರ ಮಠದ ನವೀಕೃತ ಮಂದಿರ ಲೋಕಾರ್ಪಣೆ, ಗರ್ಭಗೃಹ ಸಮರ್ಪಣೆ, ಶ್ರೀ ಗುರುವರ್ಯರ ಪಂಚಲೋಹದ ವಿಗ್ರಹ ಪ್ರತಿಷ್ಠೆ ಪ್ರಯುಕ್ತ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಈ ಭವ್ಯ ಮಂದಿರ ನವೀಕೃತಗೊಳ್ಳಲು ಮುಂದೆ ಬಂದ ಮಹಾದಾನಿ ಕೆ.ಕೆ. ಆವರ್ಶೇಕರ್‌ ಸಹಿತ ಸಮಸ್ತ ಭಕ್ತರಿಗೆ ನಿತ್ಯಾನಂದ ಸ್ವಾಮಿಯೇ ಪ್ರೇರಣೆಯಾಗಿ ಮಂದಿರ ಅಭಿವೃದ್ಧಿ ಕಂಡಿದೆ. ಶಿಕ್ಷಣ, ಆರೋಗ್ಯ ಸಂಸ್ಥೆಗಳ ಸ್ಥಾಪನೆ ಹಾಗೂ ಮಂದಿರದ ಅಭಿವೃದ್ಧಿ ಕಾರ್ಯಕ್ಕೆ ಮಾಹೆ ವಿ.ವಿ.ಯಿಂದ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

ಶಾಸಕ ಕೆ. ರಘುಪತಿ ಭಟ್‌ ಮಾತನಾಡಿ, ನಗರದ ಹೃದಯ ಭಾಗದಲ್ಲಿ ಉಡುಪಿಗೆ ಮುಕುಟಪ್ರಾಯವಾಗಿ ನಿತ್ಯಾನಂದ ಮಂದಿರ ಮಠ ನವೀಕರಣಗೊಂಡಿದೆ. ಕೆ.ಕೆ. ಆವರ್ಶೇಕರ್‌ ಕೊಡುಗೆ ಉಡುಪಿಯಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದೆ. ದೇಗುಲಕ್ಕೆ ಸಾಗುವ ಮಾರ್ಗ ಕಿರಿದಾಗಿದ್ದು, ಅದರ ವಿಸ್ತರಣೆಗೆ ಅನುವು ಮಾಡಿಕೊಡುವ ಚಿಂತನೆಯಿದೆ. ಅಲ್ಲದೆ ಮಂದಿರವು ರಾಜಬೀದಿಗೆ ಶೋಭಾಯಮಾನವಾಗಿ ಕಾಣಲು, ಹೆಚ್ಚಿನ ಸ್ಥಳಾವಕಾಶ ಒದಗಿಸುವ ನಿಟ್ಟಿನಲ್ಲಿ ಎದುರಿನಲ್ಲಿರುವ ಕಟ್ಟಡಗಳ ತೆರವಿಗೂ ಪ್ರಯತ್ನಿಸಲಾಗುವುದು. ಅತ್ಯಂತ ಇಕ್ಕಟ್ಟಿನ ಸ್ಥಳದಲ್ಲಿ 10 ಸಾವಿರ ಮಂದಿ ಅನ್ನಪ್ರಸಾದ ಸ್ವೀಕರಿಸಿರುವುದು ನಿತ್ಯಾನಂದ ಸ್ವಾಮಿಯ ಪವಾಡ ಎನ್ನಬಹುದು ಎಂದು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಮುಂಬಯಿ ಉದ್ಯಮಿ ಕೆ.ಕೆ. ಆವರ್ಶೇಕರ್‌ ಮಾತನಾಡಿದರು. ಗೌರವ ಸಲಹೆಗಾರ ಮತ್ತು ಮಾರ್ಗದರ್ಶಕ ಶ್ರೀಧಾಮ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ, ತುಂಗಾರೇಶ್ವರ ಶ್ರೀ ಸದಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

Advertisement

ಪುಷ್ಪಾ ಆವರ್ಶೇಕರ್‌, ಮುಂಬಯಿ ಉದ್ಯಮಿ ಸುರೇಂದ್ರ ಕಲ್ಯಾಣಪುರ, ಶ್ರೀ ಭಗವಾನ್‌ ನಿತ್ಯಾನಂದ ಸ್ವಾಮಿ ಮಂದಿರ ಮಠದ ಅಧ್ಯಕ್ಷ ಕೊಡವೂರು ದಿವಾಕರ ಶೆಟ್ಟಿ, ಜಯಕೃಷ್ಣ ಶೆಟ್ಟಿ ತೋನ್ಸೆ, ಹರ್ಷ ಗ್ರೂಪ್‌ನ ಸೂರ್ಯಪ್ರಕಾಶ್‌, ಆರ್ಕಿಟೆಕ್ಟ್ ಶ್ರೀನಾಗೇಶ್‌ ಹೆಗ್ಡೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪುರುಷೋತ್ತಮ ಪಿ. ಶೆಟ್ಟಿ, ನವೀನ್‌ ಶೆಟ್ಟಿ ತೋನ್ಸೆ, ಲೆಕ್ಕಪರಿಶೋಧಕ ಸಿ.ಕೆ. ಪಾಟೀಲ್‌ ಮಂಬಯಿ, ಗಣೇಶಪುರಿ ಭೀಮೇಶ್ವರ ಸದ್ಗುರು ನಿತ್ಯಾನಂದ ಸಂಸ್ಥಾನದ ಟ್ರಸ್ಟಿ ನ್ಯಾಯವಾದಿ ಸಂಧ್ಯಾ ಜಾಧವ್‌, ಮುಂಬಯಿಯ ನ್ಯಾಯಾಧಿಧೀಶೆ ಯಶಸ್ವಿ ಮರಳ್ಳೋಕರ್‌, ಪ್ರಫ‌ುಲ್ಲಾ ಜಯ ಶೆಟ್ಟಿ, ಡಾ| ಅಶೋಕ್‌ ಶೆಟ್ಟಿ ಸೂರತ್‌, ಬಾಲಕೃಷ್ಣ ಶೆಟ್ಟಿ, ಜಗನ್ನಾಥ್‌ ಹೆಗ್ಡೆ, ನಿರಂಜನ್‌ ಮುಂಬಯಿ, ನವೀನ್‌ ಶೆಟ್ಟಿ ತೋನ್ಸೆ, ಕಾಂಞಂಗಾಡ್‌ ಟ್ರಸ್ಟ್‌ನ ಎಂ. ನರಸಿಂಹ ಶೆಣೈ, ಕೆ. ಮೋಹನ್‌ಚಂದ್ರನ್‌ ನಂಬಿಯಾರ್‌ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಕಾಂಞಂಗಾಡ್‌ ಟ್ರಸ್ಟ್‌ನ ಟ್ರಸ್ಟಿ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಲಾ ಜಗತ್ತು ವಿಜಯ ಕುಮಾರ್‌ ಶೆಟ್ಟಿ ನಿರ್ವಹಿಸಿದರು.

ಕೆ.ಕೆ. ಆವರ್ಶೇಕರ್‌ಗೆ ಸಮ್ಮಾನ
ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಶಾಸಕ ಕೆ. ರಘುಪತಿ ಭಟ್‌ ಅವರು ಶ್ರೀ ನಿತ್ಯಾನಂದ ಮಂದಿರ ಮಠದ ನವೀಕೃತ ಮಂದಿರ ನಿರ್ಮಾಣಕ್ಕೆ ಬಹು ದೊಡ್ಡ ಆರ್ಥಿಕ ಕೊಡುಗೆ ನೀಡಿದ ಮಹಾದಾನಿ ಮುಂಬಯಿಯ ಉದ್ಯಮಿ ಕೆ.ಕೆ. ಆವರ್ಶೇಕರ್‌ ಅವರನ್ನು ಸಮ್ಮಾನಿಸಿ ಗೌರವಿಸಿದರು.

ಸೋಮವಾರ ಬೆಳಗ್ಗೆ ಪುಣ್ಯಾಹ, ಪ್ರತಿಷ್ಠಾಕಲಶ, ಅಧಿವಾಸ ಹೋಮ, ಮಹಾಗಣಪತಿ ಯಾಗ, ಭಗವಾನ್‌ ಶ್ರೀ ನಿತ್ಯಾನಂದ ಸ್ವಾಮಿಗಳ ಬಿಂಬ ಪುನಃಪ್ರತಿಷ್ಠೆ, ಜೀವ ಕಲಶಾಭಿಷೇಕ, ಪ್ರಸನ್ನ ಪೂಜೆ, ನಿತ್ಯಾನಂದ ಸ್ವಾಮಿಗೆ 108 ಕಲಶ ಸಹಿತ ಸಾನ್ನಿಧ್ಯ ಕಲಶೋತ್ಸವ, ಪ್ರಸನ್ನ ಪೂಜೆ, ಮಹಾಪೂಜೆ, ಪಲ್ಲಪೂಜೆ, ಮಧ್ಯಾಹ್ನ ನಡೆದ ಮಹಾ ಅನ್ನಸಂತರ್ಪಣೆಯಲ್ಲಿ ಸುಮಾರು 10 ಸಾವಿರ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ ದೀಪಾರಾಧನೆ, ರಂಗಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

Advertisement

Udayavani is now on Telegram. Click here to join our channel and stay updated with the latest news.

Next