Advertisement

ಇದು ಗುಜರಿ ಅಂಗಡಿಯಲ್ಲ-ಸರ್ಕಾರಿ ಕಚೇರಿ ಆವರಣ!

11:50 AM Dec 15, 2018 | |

ಚಿತ್ತಾಪುರ: ತಾಲೂಕಿನ ಕೆಲ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದಾಗ ಇದೇನು ಗುಜರಿ ಅಂಗಡಿಯಾ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡದೆ ಇರದು. ಏಕೆಂದರೆ ಸದಾ ಓಡಾಡುತ್ತಿರಲಿ ಎಂದುಕೊಂಡೆ ಸರ್ಕಾರಿ ಇಲಾಖೆಗಳಿಗೆ ಒದಗಿಸಿದ ಸರ್ಕಾರಿ ಜೀಪ್‌ಗ್ಳು ಒಂದೇ ಕಡೆ ಸ್ಥಿರವಾಗಿ ನಿಂತು ತುಕ್ಕುಹಿಡಿದಿವೆ.

Advertisement

ಸರ್ಕಾರಿ ಇಲಾಖೆಗಳ ಆವರಣದಲ್ಲಿ ತುಕ್ಕು ಹಿಡಿದ ವಾಹನಗಳಿಗೆ ಸರ್ಕಾರಕ್ಕೆ ಲಕ್ಷಗಟ್ಟಲೇ ನಷ್ಟ ಸಂಭವಿಸುತ್ತಿದೆ. ಸರ್ಕಾರಿ ವಾಹನಗಳನ್ನು ಓಡಿಸಲು ಸರ್ಕಾರದ ಚಾಲಕರೇ ಇದ್ದು, ಸರಿಯಾಗಿ ನಿರ್ವಹಿಸುತ್ತಿಲ್ಲ. ವಾಹನಗಳ ಚಿಕ್ಕ ಪುಟ್ಟ ದುರಸ್ತಿಯನ್ನು ಮಾಡಿಕೊಳ್ಳದ ಇವರು ವಾಹನ ಕೆಟ್ಟ ಕೂಡಲೇ ಒಂದೆಡೆ ನಿಲ್ಲಿಸಿ ಆರಾಮವಾಗಿರುತ್ತಾರೆ. ತಾಲೂಕು ಪಂಚಾಯಿತಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಉಪವಿಭಾಗ ಇಲಾಖೆ, ಸಚಿವ ಪ್ರಿಯಾಂಕ್‌ ಖರ್ಗೆ ಕಾರ್ಯಾಲಯದ ಹಿಂಭಾಗ, ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆ ಎದುರು ಹೀಗೆ ಅನೇಕ ಇಲಾಖೆಗಳ ಆವರಣಗಳಲ್ಲಿ ಅನೇಕ ವರ್ಷಗಳಿಂದ ಅಧಿಕಾರಿಗಳ ಜೀಪುಗಳು ಕೆಟ್ಟು ನಿಂತಿವೆ. ಅಧಿಕಾರಿಗಳು ಈ ವಾಹನಗಳ ಬಗ್ಗೆ ಗಮನವನ್ನೇ ಹರಿಸಿಲ್ಲ.

ಕೆಟ್ಟ ವಾಹನಗಳು ದುರಸ್ತಿಯಾಗುವ ಹಂತದಲ್ಲಿರುವಾಗಲೇ ಹರಾಜು ಹಾಕಿಯಾದರೂ ಸರ್ಕಾರಕ್ಕೆ ಉಪಕರಿಸಬಹುದು. ಈ ಬಗ್ಗೆಯೂ ಯಾರೂ ತಲೆ ಕೆಡಿಸಿಕೊಂಡಿಲ್ಲ.
 
ವಾಹನಗಳು ಬಹುಬೇಗ ತುಕ್ಕು ಹಿಡಿಯಲು ಇಲ್ಲಿನ ವಾತಾವರಣವೂ ಕಾರಣ ಎನ್ನುವವರಿದ್ದಾರೆ. ಸದಾ ಬಿಸಿಲ ಬೇಗೆಯಲ್ಲಿ, ಧೂಳಿನಲ್ಲಿ ಅದನ್ನು ಬಳಸದೆ ನಿಲ್ಲಿಸಿದರೆ ಅದು ಹೊಸ ವಾಹನವೇ ಆಗಿದ್ದರೂ ಒಂದೆರೆಡು ವಾರದಲ್ಲಿ ತುಕ್ಕು ಹಿಡಿಯುತ್ತದೆ. ಪರಿಸ್ಥಿತಿ ಹೀಗಿರುವಾಗ ವರ್ಷಾನುಗಟ್ಟಲೇ ನಿಂತಲ್ಲೇ ನಿಂತಿರುವ ವಾಹನಗಳ ಸ್ಥಿತಿ ಏನು?

ಸರ್ಕಾರಿ ಕಾರ್ಯಾಲಯಗಳ ಆವರಣದಲ್ಲಿ ನಿಲ್ಲುವ ವಾಹನಗಳ ಟೈರ್‌, ಟ್ಯೂಬ್‌ ಇನ್ನಿತರ ಬಿಡಿ ಭಾಗಗಳು ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತಿವೆ ಎನ್ನುವ ಆರೋಪಗಳು ಇವೆ. ಸರ್ಕಾರಿ ಅಧಿಕಾರಿಗಳು ಇಂತಹ ವಾಹನಗಳನ್ನು ಹರಾಜು ಹಾಕಬೇಕು ಎಂದು ನಿರ್ಧರಿಸುವ ಹೊತ್ತಿಗೆ ಅಲ್ಲಿ ಉಳಿಯುವುದು ಕೇವಲ ಮೇಲಾಗದ ಆಕಾರ ಮಾತ್ರ. ಹೀಗಾಗಿ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟ ಅಷ್ಟಿಷ್ಟಲ್ಲ. ಪೊಲೀಸ್‌ ಇಲಾಖೆ ಹಿಡಿದಿಟ್ಟ ದ್ವಿಚಕ್ರವಾಹನಗಳಿಂದ ಹಿಡಿದು ಅಪಘಾತಕ್ಕೆ ಒಳಗಾದ ವಾಹನಗಳು ಈ ಪಟ್ಟಿಯಲ್ಲಿ ಬರುವುದಿಲ್ಲ. ಇವುಗಳ ನಷ್ಟ ಲೆಕ್ಕ ಹಾಕಿದರಂತೂ ಬಾಯಿ ಮುಚ್ಚಲೇಬೇಕು. ಕೆಲವರಿಗೆ ಇದು ಚಿಕ್ಕ ವಿಷಯ ಎನ್ನಿಸಬಹುದು. ಆದರೆ ಈ ಬಗ್ಗೆ ಗಂಭೀರವಾಗಿ ಚಿಂತಿಸಿದರೆ ಅದರ ಮೌಲ್ಯ ತಿಳಿಯುತ್ತದೆ.

ಅಬಕಾರಿ ಇಲಾಖೆ, ನೀರಾವರಿ ಇಲಾಖೆಯಲ್ಲಿಯೂ ಅನೇಕ ವಾಹನಗಳು ತುಕ್ಕು ಹಿಡಿದು ಆಯುಷ್ಯ ಕಳೆದುಕೊಂಡಿವೆ.
ಪ್ರತಿಯೊಂದು ಇಲಾಖೆಯಲ್ಲಿ ಅಧಿಕಾರಿಗಳಿ ಗಾಗಿಯೇ ಪ್ರತ್ಯೇಕ ವಾಹನ ನೀಡಲಾಗುತ್ತಿದೆ. ಅಧಿಕಾರಿ ವಾಹನದ ಓಡಾಟ ಅವಧಿ ಮುಕ್ತಾಯವಾದ ನಂತರ ಟೆಂಡರ್‌ ಕರೆಯಬೇಕು. ಆದರೆ ಅನೇಕ ವಾಹನಗಳ ಅವಧಿ ಮುಗಿದು ಎಂಟಹತ್ತು ವರ್ಷಗಳಾಗಿದ್ದರೂ ಹರಾಜು ಪ್ರಕ್ರಿಯೆ ಕರೆದಿಲ್ಲ.

Advertisement

ಹೀಗಾಗಿ ವಾಹನಗಳು ನಿಂತಲ್ಲೇ ಕೊಳೆಯುತ್ತಿವೆ. ಅತ್ತ ಸರ್ಕಾರಕ್ಕೂ ಲಾಭವಾಗದೆ, ಇನ್ನೊಂದೆಡೆ ಬಳಕೆಗೂ ಬಾರದೆ ನಿರಪಯುಕ್ತವಾಗಿ ಬಿದ್ದಿರುವ ವಾಹನಗಳನ್ನು ನೋಡಿದ ಸಾರ್ವಜನಿಕರು ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇವುಗಳು ಸರ್ಕಾರಿ ವಾಹನವಾಗಿದ್ದರಿಂದ ಯಾರೂ ಗಮನ ನೀಡುತ್ತಿಲ್ಲ. ಯಾವುದೇ ಅಧಿಕಾರಿಗಳೇ ಆಗಲಿ ಸ್ವಂತ ವಾಹನವಾಗಿದ್ದರೆ ಈ ರೀತಿ ಮಳೆ, ಬಿಸಿಲಿನಲ್ಲಿ ನಿಲ್ಲಿಸಿ ತುಕ್ಕು ಹಿಡಿಯುವಂತೆ ಮಾಡುತ್ತಿದ್ದರೇ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.

ನಾನು ಬರುವುದಕ್ಕಿಂತ ಮುಂಚೆಯೇ ಕೆಟ್ಟುನಿಂತ ವಾಹನಗಳು ಇಲ್ಲಿವೆ. ಈ ಕುರಿತು ಡಿಡಿಪಿಐ ಅವರಿಗೆ ಎರಡು ಬಾರಿ ಹರಾಜು ಮಾಡಲು ಮನವಿ ನೀಡಲಾಗಿದೆ. ಜಿಲ್ಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಇಲಾಖೆಯಲ್ಲಿರುವ ವಾಹನಗಳನ್ನು ಒಂದೇ ಸಲ ಹರಾಜು ಮಾಡಲಾಗುವುದು.
 ಶಂಕರಮ್ಮ ಢವಳಗಿ, ಕ್ಷೇತ್ರಶಿಕ್ಷಣಾಧಿಕಾರಿ

ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ನಾವು ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ 10 ವರ್ಷಗಳಿಂದ ಜೀಪುಗಳು ಕೆಟ್ಟು ನಿಂತಿವೆ. ಇವುಗಳನ್ನು ಜಿಲ್ಲಾ ಪಂಚಾಯಿತಿ ಕಡೆಯಿಂದ ಅನುಮೋದನೆ ತೆಗೆದುಕೊಂಡು ಹರಾಜು
ಮಾಡಲಾಗುವುದು.
 ಜಗದೇವರೆಡ್ಡಿ ಪೋಲಿಸ್‌ ಪಾಟೀಲ, ತಾಪಂ ಅಧ್ಯಕ್ಷರು 

ಪ್ರತಿಯೊಂದು ಸರ್ಕಾರಿ ಕಚೇರಿಗಳಿಗೆ ಅಧಿಕಾರಿಗಳ ಉಪಯೋಗಕ್ಕಾಗಿ ಸರ್ಕಾರ ವಾಹನಗಳನ್ನು ಒದಗಿಸುತ್ತಿದೆ.
ಕೆಲ ವಾಹನಗಳ ಓಡಾಟ ಅವಧಿ ಮುಕ್ತಾಯವಾಗಿ ನಿಂತಿದ್ದರೆ, ಇನ್ನು ಕೆಲವು ಸಣ್ಣಪುಟ್ಟ ದುರಸ್ತಿ ಹೆಸರಲ್ಲಿ ಇಲಾಖೆ ಆವರಣದಲ್ಲಿ ಅನೇಕ ವರ್ಷಗಳಿಂದ ಬಿಸಿಲು, ಮಳೆ ಎನ್ನದೆ ಒಂದೇ ಸ್ಥಳದಲ್ಲಿ ನಿಂತ ವಾಹನಗಳು ತುಕ್ಕು ಹಿಡಿದಿದ್ದು, ಮರು ಬಳಕೆಗೆ ಬಾರದಂತಾಗಿವೆ. ದುರಸ್ತಿಗೆ ಬಂದ ಪ್ರಾರಂಭದಲ್ಲಿಯೇ ವಾಹನಗಳ ಹರಾಜು ಪ್ರಕ್ರಿಯೆಗೆ ಮುಂದಾಗದೆ ಅಧಿಕಾರಿಗಳು ಸರ್ಕಾರಕ್ಕೆ ಲಕ್ಷಾಂತರ ರೂ. ನಷ್ಟ ಮಾಡಿದ್ದಾರೆ.
 ಮಹ್ಮದ್‌ ಜಾವೀದ್‌, ಸ್ಥಳೀಯ ನಿವಾಸಿ

ಕಾಲ ಬದಲಾದಂತೆ ಅಧಿಕಾರಿಗಳು ಬದಲಾಗುತ್ತಾರೆ ಎನ್ನುವ ಮಾತುಗಳು ಇವೆ. ಅಂತಹದ್ದರಲ್ಲಿ ಅಧಿಕಾರಿಗಳೆಂದು ಎನಿಸಿಕೊಂಡವರಿಗೆ ಇಂತಹ ಡಕೋಟಾ ಜೀಪ್‌ನಲ್ಲಿ ಕುಳಿತುಕೊಳ್ಳಲು ಇಷ್ಟವೇ? ಅವರಿಗೆ ಎಸಿ ಇರುವ ಬೋಲೇರೋ, ಸ್ಕಾರ್ಪಿಯೋ, ಇನೋವಾ ಅಂತಹ ಕಾರುಗಳೇ ಬೇಕು. ಅಧಿಕಾರಿಗಳೆಂದು ಎನಿಸಿಕೊಂಡವರಿಗೆ ಸರ್ಕಾರದ ಸಂಬಳ ಬರುತ್ತದೆ, ಅವರಿಗೆ ಅಷ್ಟೇ ಸಾಕು. ಅವರಿಗೆ ಇಂತಹ ಕಾರುಗಳು ಕೆಟ್ಟರೆಷ್ಟು ಬಿಟ್ಟರೆಷ್ಟು. 
 ಸುರೇಶ, ಸ್ಥಳೀಯ ನಿವಾಸಿ

„ಎಂ.ಡಿ. ಮಶಾಖ

Advertisement

Udayavani is now on Telegram. Click here to join our channel and stay updated with the latest news.

Next