Advertisement

ಮಾನವತೆಯಿಂದ ದೈವತ್ವಕ್ಕೆ ಕರೆದೊಯ್ಯುವುದೇ ಧರ್ಮ

02:45 PM May 26, 2018 | |

ಕಲಬುರಗಿ: ಮಾನವತೆಯಿಂದ ದೈವತ್ವಕ್ಕೆ ಕರೆದೊಯ್ಯುವುದೇ ಧರ್ಮದ ಮೂಲ ಗುರಿಯಾಗಿದೆ ಎಂದು ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು ನುಡಿದರು.

Advertisement

ನಗರದ ಗೋದುತಾಯಿ ಕಾಲೋನಿಯ ಪಂಚಲಿಂಗೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಆಯೋಜಿಸಿರುವ ಕರಿಬಸವೇಶ್ವರ ಗುರುಕುಲ ವೈದಿಕ ಸಂಸ್ಕಾರ ಶಿಬಿರ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಸೂರ್ಯ ಭೂಮಿಗಿಂತ ಎಷ್ಟೋ ದೊಡ್ಡವ. ಆದರೆ ಆತ ದೂರದಲ್ಲಿ ಇರುವುದರಿಂದ ಸಣ್ಣವನಾಗಿ ಕಾಣುತ್ತಾನೆ. ಅದರಂತೆಯೇ ದೇವರು ನಮಗಿಂತ ಎಷ್ಟೋ ದೊಡ್ಡವನು. ಅವನಿಂದ ನಾವು ದೂರ ಇರುವುದರಿಂದ ನೈಜ ಸ್ವರೂಪವನ್ನು ತಿಳಿಯಲಾರೆವು. ಧರ್ಮಾಚರಣೆಗಳು ಭಿನ್ನವಾದರೂ ಸೇರುವ ಗುರಿ ಒಂದೇ. ವಿಚಾರಗಳು ಭಿನ್ನವಾದರೂ ಮುಟ್ಟುವ ಗುರಿ ಒಂದೇ ಎಂದರು.

ಸ್ವಧರ್ಮ ಅನುಷ್ಠಾನ, ಪರಧರ್ಮ ಸಹಿಷ್ಣುತೆ ಬಾಳಿನ ಎರಡು ಕಣ್ಣುಗಳಾಗಬೇಕು. ಧರ್ಮ ದಿಕ್ಸೂಚಿ ಇಟ್ಟುಕೊಂಡು ನಡೆದರೆ ದಾರಿ ತಪ್ಪುವುದಿಲ್ಲ ಎಂದು ನುಡಿದರು. ಜಿಪಂ ಸದಸ್ಯರಾದ ಅರುಣಕುಮಾರ ಪಾಟೀಲ ಉದ್ಘಾಟಿಸಿ, ವೈದಿಕ ಸಂಸ್ಕಾರ ಶಿಬಿರಗಳನ್ನು ಮಾಡುವುದರಿಂದ ಜನರಲ್ಲಿ ಧರ್ಮ ಪ್ರಜ್ಞೆ ಮೂಡುವುದು. ವಿದ್ಯಾರ್ಥಿಗಳಿಗೆ ವೈದಿಕ ಸಂಸ್ಕಾರ ಕೊಡುವುದರಿಂದ ಧರ್ಮ ಸಂಸ್ಕತಿ ಗಟ್ಟಿಗೊಳ್ಳುವುದು ಎಂದರು. 

ಪಂಡಿತ ಶಿವಕವಿ ಜೋಗುರ ಮಾತನಾಡಿ, ಅಗಸ್ತ್ಯ ಮಹಾಋಷಿ, ವ್ಯಾಸರಿಗೆ ಬೋಧಿಸಿರುವ ಕೀರ್ತಿ ಪಂಚಪೀಠಗಳ ಆಚಾರ್ಯರಿಗೆ ಸಲ್ಲುತ್ತದೆ. ಹೊನ್ನಕಿರಣಗಿಯ ಶ್ರೀಗಳು 110 ವಿದ್ಯಾರ್ಥಿಗಳಿಗೆ ಸಂಸ್ಕಾರ ಶಿಬಿರ ನಡೆಸುತ್ತಿರುವ ಕಾರ್ಯ ಸಮಾಜ ಸುಧಾರಣೆ ಆಗುವುದು ಎಂದು ನುಡಿದರು. 

Advertisement

ಶರಣ ಸಂಸ್ಥಾನದ ಲಿಂಗರಾಜಪ್ಪ ಅಪ್ಪಾ ಅಧ್ಯಕ್ಷತೆ ವಹಿಸಿ, ಇಂದು ಧರ್ಮ ಸಂಸ್ಕಾರ ಶಿಬಿರಗಳನ್ನು ಗಂಡು ಮಕ್ಕಳಿಗೆ ಕೊಡುವುದರ ಜೊತೆಗೆ, ಹೆಣ್ಣು ಮಕ್ಕಳಿಗೂ ಪಾಲ್ಗೊಳ್ಳುವ ಅವಕಾಶ ಕೊಡಬೇಕು. ಮುಂದಿನ ದಿನಮಾನದಲ್ಲಿ ವೈದಿಕ ಸಂಸ್ಕಾರ ಶಿಬಿರದ ಜೊತೆಗೆ ಕಂಪ್ಯೂಟರ್‌ ತರಬೇತಿ ಶಿಬಿರ ನಡೆಸಬೇಕೆಂದು ಸಲಹೆ ನೀಡಿದರು. 

ಪಾಳಾದ ಗುರುಮೂರ್ತಿ ಶಿವಾಚಾರ್ಯರು, ರೇವಣಸಿದ್ದ ಚರಂತೇಶ್ವರ ಶಿವಾಚಾರ್ಯರು, ಓಂಕಾರ ಬೇನೂರಿನ ಸಿದ್ಧರೇಣುಕಾ ಶಿವಾಚಾರ್ಯರು, ಮಹಾಗಾಂವದ ಗುರುಲಿಂಗ ಶಿವಾಚಾರ್ಯರು, ಸ್ಟೇಷನ್‌ ಬಬಲಾದದ ರೇವಣಸಿದ್ದ ಶಿವಾಚಾರ್ಯರು, ಮಲ್ಲಿಕಾರ್ಜುನ ಟೆಂಗಳಿ ಶಾಸ್ತ್ರೀ, ಮಲ್ಲಿಕಾರ್ಜುನ ಎಸ್‌. ಪಾಟೀಲ, ಶಾಂತವೀರ ತುಪ್ಪದ, ಡಾ| ಮಲ್ಲಿಕಾರ್ಜುನ ಪಾಟೀಲ, ಶಿವಶಂಕರ ಗಚ್ಚಿನಮಠ, ವೀರಯ್ಯಶಾಸ್ತ್ರಿ ಮಲಕೂಡ, ಬಸವರಾಜ ಪುರಾಣಿಕ, ಅಣ್ಣಾರಾವ ಕಲಗುರ್ತಿ, ವಿಶ್ವರಾಧ್ಯ ನಾಮಕಲ್‌, ಕೇಶವರಾವ ಪಾಟೀಲ್‌, ಜಾನಪ್ಪಗೌಡ ಪಾಟೀಲ, ಶರಣಬಸಪ್ಪ ಬಗಲಿ, ಸಿದ್ರಾಮಪ್ಪ ಆಲಗೂಡಕರ ಇದ್ದರು. ವೈದಿಕ ಪಟುಗಳಿಂದ ವೇದಘೋಷ ಜರುಗಿತು. ಸಿದ್ದಮಲ್ಲಯ್ಯ ಹಿರೇಮಠ ಸ್ವಾಗತಿಸಿದರು. ನಾಗಲಿಂಗಯ್ಯ ಮಠಪತಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next