Advertisement

ಐಟಿ ದಾಳಿ ರಾಜಕೀಯ ಪ್ರೇರಿತ: ರಾಠೊಡ

01:11 PM Apr 22, 2019 | pallavi |

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಅವರು ಹೀನಾಯವಾಗಿ ಸೋಲುತ್ತಾರೆ. ಆ ಬಳಿಕ ಜೈಲಿಗೂ ಹೋಗುತ್ತಾರೆ ಎಂದು ವಿಧಾನಪರಿಷತ್‌ ಸದಸ್ಯ, ಎಐಸಿಸಿ ವಕ್ತಾರ ಪ್ರಕಾಶ ರಾಠೊಡ ಹೇಳಿದರು.

Advertisement

ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಐಟಿ ದಾಳಿಗಳು ರಾಜಕೀಯ ಪ್ರೇರಿತವಾಗುತ್ತಿದೆ. ಚುನಾವಣೆ ವೇಳೆ ಐಟಿ ದಾಳಿ ನಡೆಸಲು ಅವಕಾಶವೇ ಇಲ್ಲ. ಐಟಿ ದಾಳಿ ನಡೆಸಲು ಕೆಲವೊಂದು ನಿಯಮಗಳಿವೆ. ಅದನ್ನು ಮೀರಿ, ದಾಳಿ ನಡೆಸುತ್ತಿರುವುದು ಖಂಡನೀಯ. ಅಲ್ಲದೇ ಕಾಂಗ್ರೆಸ್‌-ಜೆಡಿಎಸ್‌ ಪಕ್ಷದವರ ಮೇಲೆಯೇ ಈ ದಾಳಿ ಕೇಂದ್ರೀಕೃತವಾಗಿವೆ ಎಂದರು.

ಚುನಾವಣೆ ವೇಳೆ ಅಕ್ರಮವಾಗಿ ಹಣ ಸಾಗಿಸುತ್ತಿದ್ದರೆ ಚುನಾವಣೆ ಅಧಿಕಾರಿಗಳು ದಾಳಿ ನಡೆಸಬೇಕು. ಆ ಹಣವನ್ನು ವಶಕ್ಕೆ ಪಡೆದು, ತನಿಖೆ ನಡೆಸಬೇಕು. ಆದರೆ, ಐಟಿ ಇಲಾಖೆಗೆ, ತಮಗೆ ಸಲ್ಲಿಸಿದ ಆದಾಯ ದಾಖಲೆಯಲ್ಲಿ ಸಂಶಯ ಬಂದರೆ, ಒಂದು ನೋಟಿಸ್‌ ನೀಡಿ, ವಿವರ ಪಡೆಯಬೇಕು. ಅದರಲ್ಲೂ ತಪ್ಪುಗಳಿದ್ದರೆ ಪ್ರಕರಣ ದಾಖಲಿಸಲು ಅವಕಾಶವಿದೆ. ಅದನ್ನು ಬಿಟ್ಟು ಚುನಾವಣೆ ವೇಳೆ, ದಾಳಿ ನಡೆಸಲು ಯಾರು ಅವಕಾಶ ಕೊಟ್ಟರು. ಇದಕ್ಕೆ ಚುನಾವಣೆ ಆಯೋಗವೂ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಆಯೋಗದ ಮೇಲಿನ ವಿಶ್ವಾಸವೂ ಜನರು ಕಳೆದುಕೊಳ್ಳುತ್ತಾರೆ ಎಂದು ಹೇಳಿದರು.

ನಾವು ದೂರು ಕೊಟ್ಟರೂ ಏಕೆ ದಾಳಿ ಮಾಡ್ಲಿಲ್ಲ: ಐಟಿ ಇಲಾಖೆಯವರು ಕಾಂಗ್ರೆಸ್‌-ಜೆಡಿಎಸ್‌ನವರ ಮೇಲೆ ದಾಳಿ ಮಾಡುತ್ತಿದೆ. ಆದರೆ, ಕೆಪಿಸಿಸಿ ಚುನಾವಣೆ ಸಮಿತಿಯಿಂದ ಸ್ವತಃ ದೂರು ಕೊಟ್ಟಿದ್ದೇವು. 150 ಕೋಟಿ ನೀಡಿ, ಕಾಂಗ್ರೆಸ್‌ ಶಾಸಕರನ್ನು ಖರೀದಿ ಮಾಡಲಾಗುತ್ತಿದೆ. ಈ ಕುರಿತು ದಾಳಿ ನಡೆಸಿ ಪರಿಶೀಲಿಸಿ ಎಂದು ಮನವಿ ಮಾಡಿದರೂ, ಐಟಿ ಇಲಾಖೆ ಕ್ರಮ ಕೈಗೊಂಡಿಲ್ಲ. ಈಗ ಬಿಜೆಪಿಗರ ಒತ್ತಡದಿಂದ ಐಟಿ ದಾಳಿ ನಡೆಯುತ್ತಿವೆ ಎಂದು ಆರೋಪಿಸಿದರು.

ನೋಟು ನಿಷೇಧದ ವೇಳೆ ಜನಾರ್ದನ ರಡ್ಡಿ ಅವರು 100 ಕೋಟಿ ಖರ್ಚು ಮಾಡಿ, ತಮ್ಮ ಪುತ್ರಿಯ ಮದುವೆ ಮಾಡಿದರು. ಆಗ 2 ಸಾವಿರ ಮುಖ ಬೆಲೆಯ ಹೊಸ ನೋಟು, ಮೊದಲ ಬಾರಿಗೆ ಚಲಾವಣೆಯಾಗಿದ್ದೇ ರಡ್ಡಿ ಪುತ್ರಿಯ ಮದುವೆ ವೇಳೆ. ಇನ್ನು ಯಡಿಯೂರಪ್ಪ ಭ್ರಷ್ಟಾಚಾರದಲ್ಲಿ ಸಿಲುಕಿ ಜೈಲಿಗೂ ಹೋಗಿ ಬಂದಿದ್ದಾರೆ. ಅವರ ಮೇಲೆ ಐಟಿ ದಾಳಿ ನಡೆಯಲ್ಲ. ಕಾಂಗ್ರೆಸ್‌- ಜೆಡಿಎಸ್‌ನವರ ಮೇಲೆಯೇ ದಾಳಿ ಏಕೆ ನಡೆಯುತ್ತಿವೆ ಎಂಬುದು ಸ್ಪಷ್ಟವಾಗುತ್ತದೆ ಎಂದರು.

Advertisement

ವಿಜಯಪುರದಲ್ಲೂ ಜೆಡಿಎಸ್‌ ಅಭ್ಯರ್ಥಿಯ ಸಂಬಂಧಿಕರ ಮೇಲೆ ಐಟಿ ದಾಳಿ ನಡೆಸಲಾಗಿದೆ. ಬಡವರಿಗೆ ಶಿಕ್ಷಣ ಕೊಡಲು ಆರಂಭಿಸಿದ ಸಂಸ್ಥೆಯ ಮೇಲೆ ದಾಳಿ ಮಾಡಿದ್ದಾರೆ. ಆದರೆ, ಐದು ವರ್ಷದಲ್ಲಿ ಶೇ. 30ರಷ್ಟು ಆಸ್ತಿ ಹೆಚ್ಚಳವಾದರೂ ಬಿಜೆಪಿ ಅಭ್ಯರ್ಥಿ ಮೇಲೆ ಐಟಿ ದಾಳಿ ಏಕೆ ಆಗಲ್ಲ ಎಂದು ಪ್ರಶ್ನಿಸಿದರು.

ಬಂಜಾರಾರನ್ನು ಎಸ್‌ಸಿಗೆ ಸೇರಿಸಿದ್ದು ಕಾಂಗ್ರೆಸ್‌: ಪ್ರಕಾಶ ರಾಠೊಡ
ಬಾಗಲಕೋಟೆ:
ಉತ್ತರಕರ್ನಾಟಕದ ಲಂಬಾಣಿ ಸಮಾಜ ಬಾಂಧವರನ್ನು ಎಸ್‌.ಸಿ ವರ್ಗಕ್ಕೆ ಸೇರಿಸಿದ್ದು ಕಾಂಗ್ರೆಸ್‌. ಇಡೀ ರಾಜ್ಯದಲ್ಲಿ ಲಂಬಾಣಿ ಸಮಾಜಕ್ಕೆ ಕಾಂಗ್ರೆಸ್‌ ದೊಡ್ಡ ಕೊಡುಗೆ ನೀಡಿದ್ದು, ಜಿಲ್ಲೆಯ ಸಮಾಜ ಬಾಂಧವರು ವಿದ್ಯಾವಂತ ಹಾಗೂ ಕ್ರಿಯಾಶೀಲ ಮಹಿಳೆ ವೀಣಾ ಕಾಶಪ್ಪನವರ ಗೆಲ್ಲಿಸಬೇಕು ಎಂದು ವಿಧಾನಪರಿಷತ್‌ ಸದಸ್ಯ, ಎಐಸಿಸಿ ವಕ್ತಾರ ಪ್ರಕಾಶ ರಾಠೊಡ ಮನವಿ ಮಾಡಿದರು.

ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ 1977ರಲ್ಲಿ ದೇವರಾಜ ಅರಸು ಸರ್ಕಾರದಲ್ಲಿ ಮೊದಲ ಬಾರಿಗೆ ನಮ್ಮ ಸಮಾಜದಿಂದ ಸಚಿವರಾಗಿದ್ದ ದಿ| ಕೆ.ಟಿ. ರಾಠೊಡ ಅವರ ಪ್ರಯತ್ನದಿಂದ ಉತ್ತರಕರ್ನಾಟಕದಲ್ಲಿ ಬಂಜಾರಾ ಸಮಾಜವನ್ನು ಎಸ್‌.ಸಿ ವರ್ಗಕ್ಕೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಸಮಾಜವನ್ನು ಎಸ್‌.ಸಿ ವರ್ಗಕ್ಕೆ ಸೇರಿಸಿದರು. ಅದರ ಫಲವಾಗಿ ಲಂಬಾಣಿ ಸಮಾಜ ಇಂದು ಎಲ್ಲ ರಂಗದಲ್ಲೂ ಸಾಧನೆ ಮಾಡಲು ಸಾಧ್ಯವಾಗಿದೆ. ಹೀಗಾಗಿ ನಮ್ಮ ಸಮಾಜಕ್ಕೆ ಕಾಂಗ್ರೆಸ್‌ ನೀಡಿದ ಕೊಡುಗೆ ಯಾರೂ ಮರೆಯಲ್ಲ ಎಂದು ಹೇಳಿದರು.

ಸಿದ್ದು ಸರ್ಕಾರದಲ್ಲಿ ಕಂದಾಯ ಗ್ರಾಮ: ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮ ಮಾಡಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಇತ್ತು. ಸಿದ್ದರಾಮಯ್ಯ ಅವರು ಸಿಎಂ ಆದ ಬಳಿಕ ರಾಜ್ಯದ 500ಕ್ಕೂ ಹೆಚ್ಚು ತಾಂಡಾಗಳು ಕಂದಾಯ ಗ್ರಾಮಗಳಾಗಿ ಮಾಡುವ ಮಹತ್ವದ ನಿರ್ಣಯ ಕೈಗೊಂಡರು. ನಮ್ಮ ಸಮಾಜದ ಧರ್ಮಗುರು ಸೇವಾಲಾಲ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಘೋಷಿಸಿದರು. ಇಡೀ ದೇಶದಲ್ಲೇ ಸರ್ಕಾರದಿಂದ ಸೇವಾಲಾಲ ಜಯಂತಿ ನಡೆಯುವುದು ರಾಜ್ಯದಲ್ಲಿ ಮಾತ್ರ.

ಕಲಬುರಗಿಯಲ್ಲಿ ಬಂಜಾರ ಸಂಸ್ಕೃತಿ-ಉಡುಪು ಉಳಿಸಿ- ಬೆಳೆಸಲು 38 ಎಕರೆ ಜಾಗೆ ನೀಡಿ, ಬಂಜಾರಾ ಉಡುಪು ತಯಾರಿಕೆ ಕೇಂದ್ರ ಘೋಷಣೆ ಮಾಡಿದರು. ಸೇವಾಲಾಲರ ಜನ್ಮಸ್ಥಳ ಸೂರಗುಂಡನಕೊಪ್ಪ ಸಮಗ್ರ ಅಭಿವೃದ್ಧಿಗೆ 100 ಕೋಟಿ ನೀಡಿದರು. ಹೀಗಾಗಿ ಇಡೀ ಬಂಜಾರಾ ಸಮಾಜಕ್ಕೆ ಗೌರವ, ಸ್ಥಾನಮಾನ- ಅವಕಾಶ ಕಲ್ಪಿಸಿದ್ದು ಕಾಂಗ್ರೆಸ್‌ ಮಾತ್ರ. ಆದ್ದರಿಂದ ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವೀಣಾ ಕಾಶಪ್ಪನವರ ಅವರನ್ನು ನಮ್ಮ ಸಮಾಜ ಬಾಂಧವರು ಬೆಂಬಲಿಸಿ, ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಬಿ. ಸೌದಾಗರ, ವಕ್ತಾರ ಅನೀಲಕುಮಾರ ದಡ್ಡಿ ಇದ್ದರು.

ಬಂಜಾರಾರನ್ನು ಎಸ್‌ಸಿಗೆ ಸೇರಿಸಿದ್ದು ಕಾಂಗ್ರೆಸ್‌: ಪ್ರಕಾಶ ರಾಠೊಡ

ನಗರದಲ್ಲಿ ನಡೆದ ಐಟಿ ದಾಳಿಗೂ-ಕಾಂಗ್ರೆಸ್‌ ಪಕ್ಷಕ್ಕೂ ಸಂಬಂಧವಿಲ್ಲ. ಅದೊಂದು ಭೂಮಿ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದ್ದು ಎಂದು ಅದಕ್ಕೆ ಸಂಬಂಧಿಸಿದವರು ಹೇಳಿದ್ದಾರೆ. ಹಿಂದೆ ಉಸ್ತುವಾರಿ ಸಚಿವರ ಆಪ್ತ ಸಹಾಯಕರಾಗಿದ್ದ ಆರೀಪ್‌ ಕಾರ್ಲೆಕರ, ಸದ್ಯ ಸಚಿವರ ಆಪ್ತ ಸಹಾಯಕರಾಗಿಲ್ಲ. ಈ ದಾಳಿಗೂ, ಸಿಕ್ಕಿರಬಹುದಾದ ಹಣಕ್ಕೂ, ಕಾಂಗ್ರೆಸ್‌ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ.
•ಎಂ.ಬಿ. ಸೌದಾಗರ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ

ದೇಶದಲ್ಲಿ ಹಿಂದೂ-ಮುಸ್ಲಿಂ ಎಂದು ಒಡೆದಾಳುವ ನೀತಿಯನ್ನು ಪ್ರಧಾನಿ ಮೋದಿ ಹಾಗೂ ಬಿಜೆಪಿ ನಡೆಸುತ್ತಿದೆ. ಹಿಂದೂ-ಮುಸ್ಲಿಂರು ಸೌಹಾರ್ದದಿಂದ ಬದುಕುವುದನ್ನು ಬಯಸುವ ಜಾತ್ಯತೀತ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಮತದಾರರು ಬೆಂಬಲಿಸಬೇಕು. ಆ ಮೂಲಕ ದೇಶದಲ್ಲಿ ಕೋಮು-ಸೌಹಾರ್ದತೆ ಗಟ್ಟಿಗೊಳಿಸಬೇಕು.
•ಪ್ರಕಾಶ ರಾಠೊಡ, ಎಐಸಿಸಿ ವಕ್ತಾರ, ಎಂಎಲ್ಸಿ

ಸೋಲಿನ ಭಯಕ್ಕೆ ಮೋದಿ ಹತಾಶೆ: ಸಿದ್ದು
ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಸೋಲಿನ ಭಯದಿಂದ ಹತಾಶೆಗೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್‌-ಜೆಡಿಎಸ್‌ಗೆ ಸಂಬಂಧಿಸಿದವರ ಮೇಲೆ ಐಟಿ ದಾಳಿ ನಡೆಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಹುನಗುಂದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌-ಜೆಡಿಎಸ್‌ ಗುರಿ ಮಾಡಿಕೊಂಡು ಐಟಿ ದಾಳಿ ನಡೆಸಲಾಗುತ್ತಿದೆ. ಇದಕ್ಕೆ ನೇರವಾಗಿ ಮೋದಿ ಅವರೇ ಕಾರಣ. ಇದು ಅವರಿಗೇ ತಿರುಗುಬಾಣವಾಗಲಿದೆ. ಇಂತಹ ದಾಳಿಯನ್ನು ನಾನು ಖಂಡಿಸುತ್ತೇನೆ. ಐಟಿ ದಾಳಿ ಬೇಕಿದ್ದರೆ ಮುಂದೆ ಮಾಡಿಕೊಳ್ಳಲಿ. ಚುನಾವಣೆ ಸಂದರ್ಭದಲ್ಲಿ ಐಟಿ ಅಧಿಕಾರಿಗಳು, ಇಡೀ ದಿನ ಕೂಡಿಸಿಕೊಂಡು ಮಾತಾಡುವುದು ತಪ್ಪು ಎಂದರು.
ಐಟಿ ದಾಳಿಗೂ- ನನಗೂ ಸಂಬಂಧವಿಲ್ಲ

ಬಾಗಲಕೋಟೆ: ಶನಿವಾರ ನಗರದಲ್ಲಿ ನಡೆದ ಐಟಿ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ಈ ದಾಳಿಯಲ್ಲಿ ನನ್ನ ಹೆಸರನ್ನು ತಳಕು ಹಾಕುತ್ತಿದ್ದು, ರಾಜಕೀಯ ದುರದ್ದೇಶದಿಂದ ನನ್ನು ಹೆಸರು ಈ ದಾಳಿಯಲ್ಲಿ ಪ್ರಸ್ತಾಪಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಆರೀಫ್‌ ಕಾರ್ಲೆಕರವರು ನನ್ನ ಆಪ್ತ ಸಹಾಯಕರಾಗಿದ್ದರು. ಆದರೆ, ಚುನಾವಣೆ ಘೋಷಣೆಗೂ ಮುನ್ನವೇ ಜಿಲ್ಲಾಧಿಕಾರಿಗಳು, ಅವರನ್ನು ಹಿಂಪಡೆದು ಆದೇಶ ಹೊರಡಿಸಿದ್ದಾರೆ. ಅವರ ಆಪ್ತ ಸಹಾಯಕ ಹುದ್ದೆಯಿಂದ ಬಿಡುಗಡೆ ಹೊಂದಿದ್ದರಿಂದ ಅವರ ವ್ಯಕ್ತಿಗತ ವ್ಯವಹಾರಗಳಿಗೂ, ನನಗೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ ಎಂದು ಹೇಳಿದ್ದಾರೆ.

ನನ್ನ ಗಮನಕ್ಕೆ ಬಂದ ಅಂಶಗಳ ಪ್ರಕಾರ ಆ ಹಣ, ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದ್ದಾಗಿದ್ದು, ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳಿಂದ ಮಾಧ್ಯಮದವರು ವಿವರ ಪಡೆದುಕೊಂಡರೆ ಒಳ್ಳೆಯದು. ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳೂ ಸಹ ಆಸ್ತಿ ವ್ಯವಹಾರವೆಂದು ಹೇಳಿಕೊಂಡಿದ್ದಾರೆ. ಆದ್ದರಿಂದ ಮಾಧ್ಯಮದವರು, ಐಟಿ ದಾಳಿಯು ನನ್ನ ಆಪ್ತ ಸಹಾಯಕನ ಮನೆ ಮೇಲೆ ಆಗಿದೆ ಎಂದು ಹಾಗೂ ಆ ಹಣ ನಮ್ಮ ಪಕ್ಷಕ್ಕೆ ಸಂಬಂಧಿಸಿದ್ದೆಂದು ಬಿಂಬಿಸಬಾರದು ಎಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next