Advertisement

‘ಕೈ’ಗೆ IT ಭಾರೀ ಶಾಕ್‌!; ಡಿಕೆಶಿ ನಿವಾಸ,ರೆಸಾರ್ಟ್‌ ಮೇಲೆ ದಾಳಿ

08:42 AM Aug 02, 2017 | |

ರಾಮನಗರ : ಮಹತ್ವದ ವಿದ್ಯಮಾನವೊಂದರಲ್ಲಿ  ಗುಜರಾತ್‌ನ ಕಾಂಗ್ರೆಸ್‌ ಶಾಸಕರು ತಂಗಿರುವ ಬಿಡದಿಯ ಈಗಲ್‌ಟನ್‌ ರೆಸಾರ್ಟ್‌, ಇಂಧನ ಸಚಿವ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌ ನಿವಾಸ ಸೇರಿದಂತೆ 35 ಕಡೆಗಳಲ್ಲಿ  ಬುಧವಾರ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಅಧಿಕಾರಿಗಳ ನಾಲ್ಕು ತಂಡಗಳು ದಾಳಿ ನಡೆಸಿ ಕಾಂಗ್ರೆಸ್‌ ಪಕ್ಷಕ್ಕೆ ದೊಡ್ಡ ಶಾಕ್‌ ನೀಡಿದೆ. 

Advertisement

ಸಿಆರ್‌ಪಿಎಫ್ ಯೋಧರ ಭದ್ರತೆಯೊಂದಿಗೆ ದಾಳಿ ನಡೆಸಲಾಗಿದ್ದು, ರೆಸಾರ್ಟ್‌ನಿಂದ ಹೊರಹೋಗುವ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. 20ಕ್ಕೂ ಹೆಚ್ಚು ಮಂದಿ  ಅಧಿಕಾರಿಗಳು ಶಾಸಕರ ಕೊಠಡಿಗಳಲ್ಲಿಯೂ  ಪರಿಶೀಲನೆ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ. 

 ಬೆಂಗಳೂರಿದ ಸದಾಶಿವನಗರದಲ್ಲಿರುವ ಶಿವಕುಮಾರ್‌ ನಿವಾಸ, ಕನಕಪುರದಲ್ಲಿರುವ ಸಂಸದ ಸುರೇಶ್‌ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಶಿವಕುಮಾರ್‌ ಅವರ ಆಪ್ತ ವಿಧಾನ ಪರಿಷತ್‌ ಸದಸ್ಯ ಎನ್‌.ರವಿ ಅವರ ನಿವಾಸದ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.

ರೆಸಾರ್ಟ್‌ನಿಂದ ಡಿಕೆಶಿ ಶಿಫ್ಟ್ 
ರೆಸಾರ್ಟ್‌ನಲ್ಲಿದ್ದ ಡಿ.ಕೆ.ಶಿವಕುಮಾರ್‌ ಅವರನ್ನು ಐಟಿ ಅಧಿಕಾರಿಗಳು  ಬಿಗಿ ಭದ್ರತೆಯೊಂದಿಗೆ ಬೆಂಗಳೂರಿಗೆ ಕರೆತರುತ್ತಿರುವ ಬಗ್ಗೆ ವರದಿಯಾಗಿದೆ. 

ದೆಹಲಿ ನಿವಾಸದಲ್ಲಿ 5 ಕೋಟಿ ವಶ 
ಡಿ.ಕೆ.ಶಿವಕುಮಾರ್‌ ಅವರ ದೆಹಲಿಯ ಸಫ್ದರ್‌ ಜಂಗ್‌ನಲ್ಲಿರುವ ನಿವಾಸದ ಮೇಲೂ ದಾಳಿ ನಡೆಸಲಾಗಿದ್ದು, 5 ಕೋಟಿ ರೂಪಾಯಿ ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ. 
ಡಿ.ಕೆ.ಶಿವಕುಮಾರ್‌ ಅವರ ವಿವಿಧ ಕಚೇರಿಗಳ ಮೇಲೂ ದಾಳಿ ನಡೆಸಲಾಗಿದ್ದು ದಾಖಲೆಗಳ  ಪರಿಶೀಲನೆ ಪ್ರಗತಿಯಲ್ಲಿದೆ. 

Advertisement

ಕಾಂಗ್ರೆಸ್‌ ಕೆಂಡಾಮಂಡಲ 
ಐಟಿ ದಾಳಿ ಕೇಂದ್ರ ಸರ್ಕಾರದ ಹತಾಶೆಯ ಕ್ರಮ ಎಂದು ರಾಜ್ಯಸಭಾ ಅಭ್ಯರ್ಥಿ ಅಹಮದ್‌ ಪಟೇಲ್‌ ಕಿಡಿ ಕಾರಿದ್ದಾರೆ. ಕೇವಲ ಒಂದು ರಾಜ್ಯಸಭಾ ಸ್ಥಾನಕ್ಕಾಗಿ ಹಿಂದೆಂದೂ ಮಾಡದಂತಹ ತಂತ್ರಗಳನ್ನು ಬಿಜೆಪಿ  ಈಗ ಮಾಡುತ್ತಿದೆ. ಒಂದೂ ಸ್ಥಾನಕ್ಕಾಗಿ ಏನು ಬೇಕಾದರು ಬಿಜೆಪಿ ಮಾಡುತ್ತದೆ ಎಂದು ಆರೋಪಿಸಿದ್ದಾರೆ.

ಹೋರಾಟ ಮಾಡಿ 
ದೊಡ್ಡ ಪ್ರಮಾಣದಲ್ಲಿ ಐಟಿ ದಾಳಿ ನಡೆದ ಬಳಿಕ ಸಿಟ್ಟಿಗೆದ್ದಿರುವ ಕಾಂಗ್ರೆಸ್‌ ಪಕ್ಷ ಕೇಂದ್ರದ ವಿರುದ್ಧ ಹೋರಾಟ ನಡೆಸಲು ಅಣಿಯಾಗಿದೆ. ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಐಟಿ ದಾಳಿ ವಿರುದ್ಧ ನೀವು ಹೋರಾಟ ಮಾಡಿ ಎಂದಿರುವುದಾಗಿ ವರದಿಯಾಗಿದೆ. 

ಲೋಕಸಭೆಯಲ್ಲಿ ವಿಷಯ ಪ್ರಸ್ತಾಪ 
ಐಟಿ ದಾಳಿ ವಿಚಾರವನ್ನು ಲೋಕಸಭಾ ಕಲಾಪದಲ್ಲಿ ಪ್ರಸ್ತಾವಿಸಲು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ. ರಾಜ್ಯ ಸಭೆಯಲ್ಲೂ ಈ ವಿಚಾರವಾಗಿ ಕಾವೇರಿದ ಚರ್ಚೆ ನಡೆದಿದೆ. 

ಐಟಿ ದಾಳಿಗೂ ಶಾಸಕರಿಗೂ ಸಂಬಂಧ ಇಲ್ಲ
ಇಂದು ನಡೆಸಿರುವ ದಾಳಿಗೂ ಗುಜರಾತ್‌  ಕಾಂಗ್ರೆಸ್‌ ಶಾಸಕರಿಗೂ ಯಾವುದೇ ಸಂಬಂಧ ಇಲ್ಲ ಎಂದು  ಸಿಬಿಡಿಟಿ ಅಧ್ಯಕ್ಷ ಸುಶೀಲ್‌ ಚಂದ್ರ ಸ್ಪಷ್ಟನೆ ನೀಡಿದ್ದಾರೆ.ಡಿ.ಕೆ.ಶಿವಕುಮಾರ್‌ ಅವರ ವಿರುದ್ಧ ನಡೆಸುತ್ತಿರುವ ಐಟಿ ತನಿಖೆಯ ಭಾಗವಾಗಿ ಪೂರ್ವ ಯೋಜನೆಯಂತೆ ದಾಳಿ ನಡೆಸಿದ್ದೇವೆ ಎಂದಿದ್ದಾರೆ. 

ರಾಜ್ಯ ಸಭಾ ಚುನಾವಣೆಯಲ್ಲಿ ಸೋನಿಯಾ ರಾಜಕೀಯ ಕಾರ್ಯದರ್ಶಿ ಅಹಮದ್‌ ಪಟೇಲ್‌ ರನ್ನು ಗೆಲ್ಲಿಸುವ ಸಲುವಾಗಿ ಗುಜರಾತ್‌ನ 40 ಕ್ಕೂ ಹೆಚ್ಚು ಕಾಂಗ್ರೆಸ್‌ ಶಾಸಕರನ್ನು ಆಪರೇಷನ್‌ ಕಮಲ ಭೀತಿಯಲ್ಲಿ ರೆಸಾರ್ಟ್‌ಗೆ ಕರೆಸಿಕೊಳ್ಳಲಾಗಿದೆ.ಶಾಸಕರ ಉಸ್ತುವಾರಿಯನ್ನು ಸಚಿವ ಡಿ.ಕೆ.ಶಿವಕುಮಾರ್‌ ವಹಿಸಿಕೊಂಡಿದ್ದಾರೆ. 

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next