Advertisement

ರೊಬೊಟಿಕ್ಸ್‌ ತರಬೇತಿಗೆ ಸೂಚಿಸಿದ್ದ ISIS !- ಶಿವಮೊಗ್ಗ ಪ್ರಕರಣದಲ್ಲಿ ವಿಚಾರ ಬಹಿರಂಗ

10:09 PM Jul 01, 2023 | Team Udayavani |

ಹೊಸದಿಲ್ಲಿ/ಬೆಂಗಳೂರು: ಶಿವಮೊಗ್ಗದಲ್ಲಿ ಕಳೆದ ವರ್ಷ ನಡೆದಿದ್ದ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಮತ್ತು ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಜಾಗತಿಕ ಉಗ್ರ ಸಂಘಟನೆ ಐಸಿಸ್‌ ಕೈವಾಡವಿರುವುದು ಸ್ಪಷ್ಟವಾಗಿದೆ.  ಅಲ್ಲದೆ, ಆರೋಪಿಗಳಲ್ಲಿ ಕೆಲವರಿಗೆ ರೊಬೊಟಿಕ್ಸ್‌ ತರಬೇತಿ ಪಡೆಯುವಂತೆ ಐಸಿಸ್‌ ಹ್ಯಾಂಡ್ಲರ್‌ನಿಂದ ಸೂಚನೆ ಬಂದಿತ್ತು ಎಂಬ ಆಘಾತಕಾರಿ ವಿಚಾರವೂ ಬಹಿರಂಗವಾಗಿದೆ. ಈ ಪ್ರಕರಣಗಳು ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಐಸಿಸ್‌ ರೂಪಿಸಿದ್ದ ಸಂಚಿನ ಭಾಗವಾಗಿದ್ದವು ಎಂಬುದೂ ತನಿಖೆಯಿಂದ ಸಾಬೀತಾಗಿದೆ.

Advertisement

ಶಿವಮೊಗ್ಗದ ಉಗ್ರ ಸಂಚು ಪ್ರಕರಣ ಸಂಬಂಧ ಶುಕ್ರವಾರ 9 ಮಂದಿ ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಪೂರಕ ಆರೋಪಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಹಲವು ಹೊಸ ಅಂಶಗಳನ್ನು ಬಹಿರಂಗಪಡಿಸಲಾಗಿದೆ. ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾದ ಐವರು ಆರೋಪಿಗಳು ಟೆಕ್ನಿಕಲ್‌ ಹಿನ್ನೆಲೆ ಹೊಂದಿದ್ದು, ಅವರಿಗೆ ರೊಬೊಟಿಕ್ಸ್‌ ತರಬೇತಿ ಪಡೆದು ಉಗ್ರ ಕೃತ್ಯಕ್ಕೆ ಅಗತ್ಯವಿರುವ ಕೌಶಲ ಪಡೆಯುವಂತೆ ಸೂಚಿಸಲಾಗಿತ್ತು ಎಂದು ಉಲ್ಲೇಖೀಸಲಾಗಿದೆ.

ಆರೋಪಿಗಳು ಯಾರು?

ಮೊಹಮ್ಮದ್‌ ಶಾರೀಕ್‌(25), ಮಾಜ್‌ ಮುನೀರ್‌ ಅಹ್ಮದ್‌(23), ಸಯ್ಯದ್‌ ಯಾಸೀನ್‌(22), ರೀಶಾನ್‌ ತಾಜುದ್ದೀನ್‌ ಶೇಖ್‌(22), ಹುಜೈರ್‌ ಫ‌ರ್ಹಾನ್‌ ಬೇಗ್‌(22), ಮಾಜಿನ್‌ ಅಬ್ದುಲ್‌ ರೆಹಮಾನ್‌(22), ನದೀಂ ಅಹ್ಮದ್‌ ಕೆ. ಎ. (22), ಝಬೀವುಲ್ಲಾ (32) ಮತ್ತು ನದೀಮ್‌ ಫೈಜಲ್‌ ಎನ್‌.(27) ಹೆಸರುಗಳು ಆರೋಪಪಟ್ಟಿಯಲ್ಲಿವೆ. ಇವರೆಲ್ಲರೂ ಕರ್ನಾಟಕದವರೇ ಆಗಿದ್ದು, ಇವರ ವಿರುದ್ಧ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ, ಐಪಿಸಿ ಮತ್ತು ಆಸ್ತಿಪಾಸ್ತಿ ಹಾನಿ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ.

ಕ್ರಿಮಿನಲ್‌ ಸಂಚು

Advertisement

ಶಾರೀಕ್‌, ಮುನೀರ್‌ ಮತ್ತು ಯಾಸೀನ್‌ ಐಸಿಸ್‌ ಹ್ಯಾಂಡ್ಲರ್‌ನೊಂದಿಗೆ ಸೇರಿ ಭಾರತದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವಂಥ ಕೃತ್ಯಗಳನ್ನು ಎಸಗಲು ಕ್ರಿಮಿನಲ್‌ ಸಂಚು ರೂಪಿಸಿದ್ದರು. ಈ ಮೂವರು ದೇಶದ ಭದ್ರತೆ, ಏಕತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವ ಉದ್ದೇಶದಿಂದಲೇ ಸಹ ಆರೋಪಿಗಳನ್ನು ನೇಮಕ ಮಾಡಿಕೊಂಡಿದ್ದರು ಎಂದೂ ಎನ್‌ಐಎ ಆರೋಪಪಟ್ಟಿಯಲ್ಲಿ ಉಲ್ಲೇಖೀಸಿದೆ. ಆನ್‌ಲೈನ್‌ ಹ್ಯಾಂಡ್ಲರ್‌ ಎಲ್ಲ ಆರೋಪಿಗಳಿಗೂ ಕ್ರಿಪ್ಟೋಕರೆನ್ಸಿ ಮೂಲಕ ಹಣ ರವಾನಿಸುತ್ತಿದ್ದ.

ಕಳೆದ ವರ್ಷದ ಸೆ. 19ರಂದು ಶಿವಮೊಗ್ಗ ಗ್ರಾಮೀಣ ಪೊಲೀಸರು ಈ ಪ್ರಕರಣ ಸಂಬಂಧ ಆರಂಭದಲ್ಲಿ ಕೇಸು ದಾಖಲಿಸಿಕೊಂಡಿದ್ದರು. ಅನಂತರದಲ್ಲಿ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ನ.15ರಂದು ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆಯನ್ನು ಕೈಗೆತ್ತಿಕೊಂಡು, ಹೊಸದಾಗಿ ಕೇಸು ನೋಂದಣಿ ಮಾಡಿಕೊಂಡಿತ್ತು.

ಕೌಶಲಕ್ಕಾಗಿ ಕೋರ್ಸ್‌

ಈ ಪೈಕಿ ಅಹ್ಮದ್‌ ಮತ್ತು ಸಯ್ಯದ್‌ ಯಾಸಿನ್‌ ಹೆಸರನ್ನು ಮಾರ್ಚ್‌ ತಿಂಗಳಲ್ಲಿ ಸಲ್ಲಿಸಿದ್ದ ಚಾರ್ಜ್‌ಶೀಟ್‌ನಲ್ಲೇ ಉಲ್ಲೇಖೀಸಲಾಗಿತ್ತು. ಅವರ ವಿರುದ್ಧ ಈಗ ಇನ್ನೂ ಕೆಲವು ಆರೋಪಗಳನ್ನು ಹೊರಿಸಲಾಗಿದೆ. ಇವರಿಬ್ಬರೂ ರೀಶಾನ್‌ ತಾಜುದ್ದೀನ್‌ ಶೇಖ್‌, ಮಜಿನ್‌ ಅಬ್ದುಲ್‌ ರೆಹಮಾನ್‌ ಮತ್ತು ನದೀಮ್‌ ಅಹ್ಮದ್‌ ಕೆ.ಎ. ಅವರೊಂದಿಗೆ ಮೆಕ್ಯಾನಿಕಲ್‌ ಮತ್ತು ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವ್ಯಾಸಂಗ ಮಾಡಿದ್ದರು. ಇವರೆಲ್ಲರಿಗೂ ಭಾರತದಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಅಜೆಂಡಾವನ್ನು ಮುಂದಕ್ಕೆ ಕೊಂಡೊಯ್ಯಲು ಹಾಗೂ ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಅಗತ್ಯವಿರುವ ಕೌಶಲ್ಯಗಳನ್ನು ಹೊಂದಲು ರೊಬೊಟಿಕ್ಸ್‌ ಕೋರ್ಸ್‌ ಮಾಡುವಂತೆ ವಿದೇಶಿ ಮೂಲದ ಐಸಿಸ್‌ ಹ್ಯಾಂಡ್ಲರ್‌ ಸೂಚಿಸಿದ್ದ ಎಂದು ಚಾರ್ಜ್‌ಶೀಟ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next