Advertisement

ನಿಮ್ಮ ವರದಿ ರಾಜಕೀಯ ಪ್ರೇರಿತವಾಗಿದೆಯೇ? 

07:41 AM Nov 23, 2017 | |

ಕಷ್ಟು ವಿವಾದ ಮತ್ತು ಕುತೂಹಲಕ್ಕೆ ಕಾರಣವಾಗಿದ್ದ, ಇಂಧನ ಇಲಾಖೆಯಲ್ಲಿ 2004ರಿಂದ 14ರ ವರೆಗೆ ನಡೆದ ವಿದ್ಯುತ್‌ ಖರೀದಿ ಹಗರಣ ಕುರಿತು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ರಚಿಸಿದ್ದ ಸದನ ಸಮಿತಿ ವರದಿ ಮಂಡನೆ ಮಾಡಿದೆ. ಈ ವರದಿಗೆ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ರಾಜಕೀಯ ದ್ವೇಶದ ಆರೋಪ ಮಾಡಿದ್ದಾರೆ. ಇನ್ನೊಂದೆಡೆ ವರದಿ ಕೇವಲ ಕಾಟಾಚಾರಕ್ಕೆ ಸಲ್ಲಿಸಲಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಈ ಎಲ್ಲ ವಿಚಾರಗಳ ಬಗ್ಗೆ ಸದನ ಸಮಿತಿ ಅಧ್ಯಕ್ಷರಾಗಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಉದಯವಾಣಿ “ನೇರಾ ನೇರ’ ಮಾತಿಗಿಳಿದಾಗ…

Advertisement

ಸದನ ಸಮಿತಿ ಕಾಟಾಚಾರದ ವರದಿ ನೀಡಿತು ಎಂದೆನಿಸುತ್ತಿದೆಯಾ?
ನನಗೆ ಆ ರೀತಿ ಅನಿಸುತ್ತಿಲ್ಲ. ಸಮಿತಿಯ ನಿಯಮಗಳ ಪ್ರಕಾರ ನಮಗೆ ನೀಡಿದ ಇತಿಮಿತಿಯಲ್ಲಿ ಸತ್ಯ ಹೊರಹಾಕಿದ್ದೇನೆ ಎಂಬ ನಂಬಿಕೆ ನನಗಿದೆ. ನಮಗೆ ದೊರೆತ ದಾಖಲೆಗಳ ಆಧಾರ ದಲ್ಲಿಯೇ ಸಮಿತಿ ವರದಿ ಸಿದ್ಧಪಡಿಸಿದ್ದು, ನಾನೂ ಪ್ರಾಮಾಣಿ ಕವಾಗಿಯೇ ಕೆಲಸ ಮಾಡಿದ್ದೇನೆ. ಹಿಂದೆಯೂ ಅನೇಕ ವರದಿಗಳನ್ನು ಮಂಡಿಸಿದ್ದನ್ನು ಗಮನಿಸಿದ್ದೇನೆ. ನಾನು ಮಾತ್ರ ಯಾವುದೇ ಪೂರ್ವಾಗ್ರಹಪೀಡಿತನಾಗಿ ವರದಿ ನೀಡಿಲ್ಲ. 

ವರದಿ ಸಿದ್ಧಪಡಿಸಲು ಸಮಿತಿ ಸದಸ್ಯರಿಂದ ಸಹಕಾರ ಸಿಕ್ಕಿತ್ತಾ?
ಎರಡೂ ರಾಜಕೀಯ ಪಕ್ಷದ ನಾಯಕರು ಅವರವರ ರಾಜಕೀಯ ಪಕ್ಷಗಳ ಲೆಕ್ಕಾಚಾರದಲ್ಲಿಯೇ ವರದಿಯನ್ನು ನೋಡಿದ್ದಾರೆ. ಎರಡೂ ಪಕ್ಷಗಳ ನಾಯಕರು ಅವರ ಪಕ್ಷಗಳ ರಾಜಕೀಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಮಿತಿಗೆ ಮಾಹಿತಿ ನೀಡಿದ್ದಾರೆ. ಇಷ್ಟು ಮಾತ್ರ ಹೇಳುತ್ತೇನೆ.

ನಿಮ್ಮ ವರದಿ ರಾಜಕೀಯ ಪ್ರೇರಿತವಾಗಿದೆಯೇ? ಹಾಗೆಂದು ಆರೋಪ ಇದೆಯಲ್ಲಾ?
ನಾವು ಯಾವುದೇ ರಾಜಕೀಯ ಉದ್ದೇಶ, ಲಾಭ-ನಷ್ಟದ ಲೆಕ್ಕಾಚಾರ ಇಟ್ಟುಕೊಂಡು ವರದಿ ಸಿದ್ಧಪಡಿಸಿಲ್ಲ. ನಮಗೆ ದೊರೆತ ಮಾಹಿತಿ ಆಧಾರದ ಮೇಲೆಯೇ ಸಿದ್ಧಪಡಿಸಿದ್ದೇವೆ. ಯಾವುದೇ ಕಾರಣಕ್ಕೂ ಇದರಲ್ಲಿ ರಾಜಕೀಯ ಬೆರೆಸಲು ನನಗೆ ಇಷ್ಟವಿಲ್ಲ. ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ನಾಳೆ ನನ್ನ ವಿರುದ್ಧವೂ ಈ ರೀತಿಯ ಆರೋಪ ಕೇಳಿ ಬರುವ ಬಗ್ಗೆ ಎಚ್ಚರಿಕೆಯಿಂದಲೇ ವಾಸ್ತವಾಂಶಗಳನ್ನು ಮಾತ್ರ ವರದಿಯಲ್ಲಿ ಸೇರಿಸಲಾಗಿದೆ. ಎಚ್‌.ಡಿ. ಕುಮಾರಸ್ವಾಮಿ ಅವರು 29 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಆರೋಪಿಸಿದ್ದರು. ಆದರೆ ಆ ಬಗ್ಗೆ ನಮಗೆ ಯಾವುದೇ ದಾಖಲೆಗಳು ದೊರೆತಿಲ್ಲ. ನಮಗೆ ದೊರೆತಗಳ ದಾಖಲೆಗಳ ಆಧಾರದಲ್ಲಿ ನಷ್ಟವಾಗಿರುವುದನ್ನು ವರದಿಯಲ್ಲಿ ಉಲ್ಲೇಖೀಸಲಾಗಿದೆ.

2002ರಿಂದ 2008ರ ವರೆಗೆ ಕಲ್ಲಿದ್ದಲು ತೊಳೆಯುವುದರಲ್ಲಿ ನಷ್ಟವಾಗಿದೆ ಎಂದಿರುವ ನೀವು ಅದರ ಹೊಣೆಯನ್ನು ಯಾರ ಮೇಲೂ ಹೊರಿಸಿಲ್ಲ ಏಕೆ?
ಆ ಸಮಯದಲ್ಲಿ ಆಗಿರುವ ಬೆಳವಣಿಗೆ ಬಗ್ಗೆ ದೊರೆತಿರುವ ಮಾಹಿತಿಯನ್ನು ವರದಿಯಲ್ಲಿ ಸೇರಿಸಿದ್ದೇವೆ. ಆಗ ಅಧಿಕಾರ ದಲ್ಲಿದ್ದವರ ಬಗ್ಗೆ ಸದನ ಸಮಿತಿಯಲ್ಲಿ ಯಾರೂ ದೂರು ನೀಡಿಲ್ಲ. ಮಾಹಿತಿಯನ್ನೂ ನೀಡಿಲ್ಲ. ಯಾರ ಬಗ್ಗೆಯೂ ಪ್ರಸ್ತಾವ ಮಾಡದೇ ಇರುವುದರಿಂದ 
ಹೆಸರುಗಳನ್ನು ನಾವು ಸೇರಿಸಿಲ್ಲ. 

Advertisement

ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನಷ್ಟವಾಗಿರುವ ಬಗ್ಗೆ ನೇರವಾಗಿ ಅವರ ಹೆಸರು ಉಲ್ಲೇಖೀ ಸಲಾಗಿದೆ. ಆ ಅವಧಿಯಲ್ಲಿ ಇಂಧನ ಸಚಿವರಾಗಿದ್ದ ಎಚ್‌. ಡಿ. ರೇವಣ್ಣ ಅವರ ಹೆಸರು ವರದಿಯಲ್ಲಿ ಇಲ್ಲವಲ್ಲಾ?
ನಾನು ಕುಮಾರಸ್ವಾಮಿ ಹೆಸರು ಸೇರಿಸಿಲ್ಲ. ಅವರ ಕಾಲದಲ್ಲಿ ಆಗಿರುವ ನಷ್ಟದ ಬಗ್ಗೆ ಸಮಿತಿಯಲ್ಲಿದ್ದ ಸದಸ್ಯರು ಮಾಹಿತಿ ನೀಡಿದ್ದಾರೆ. ಅವರು ನೀಡಿದ ಮಾಹಿತಿ ಆಧಾರದಲ್ಲಿ ವರದಿಯಲ್ಲಿ ಹೆಸರು ಸೇರಿಸಲಾಗಿದೆ. ಆ ಸಮಯದಲ್ಲಿ ಆಗಿರುವ ನಷ್ಟದ ಬಗ್ಗೆ ಸ್ಪಷ್ಟ ದಾಖಲೆಗಳನ್ನು ಒದಗಿಸಿ ರುವುದರಿಂದ ವರದಿಯಲ್ಲಿ ಹೆಸರು ಸೇರಿಸಲಾಗಿದೆ. ಆ ನಂತರ ಕಲ್ಲಿದ್ದಲು ತೊಳೆದು ಬಳಕೆ ಮಾಡುವಂತೆ ಕೇಂದ್ರ ಸರಕಾರವೇ ಗೆಜೆಟ್‌ ಅಧಿಸೂಚನೆ ಹೊರಡಿಸಿತ್ತು. ಅದರಂತೆ ಕಲ್ಲಿದ್ದಲು ತೊಳೆಯುವ ವ್ಯವಸ್ಥೆ ರೂಪಿಸಲಾಗಿತ್ತು. ಈಗ ಕಾರಣಾಂತರ ಗಳಿಂದ ಅದು ಸ್ಥಗಿತಗೊಂಡಿದೆ. 

ಶೋಭಾ ಕರಂದ್ಲಾಜೆ ಇಂಧನ ಸಚಿವರಾಗಿದ್ದಾಗ ಭ್ರಷ್ಟಾಚಾರ ಆಗಿದೆ ಎಂದು ಹೇಳಿ ಆ ಪ್ರಕರಣದ ಬಗ್ಗೆ ಮಾತ್ರ ತನಿಖೆಗೆ ಶಿಫಾರಸು ಮಾಡಲಾಗಿದೆಯಲ್ಲಾ?
ಶೋಭಾ ಕರಂದ್ಲಾಜೆ ಅವರ ಅವಧಿಯಲ್ಲಿ ಟೆಂಡರ್‌ ಕರೆದಿದ್ದು ನಿಜಾನಾ? ಎಲ್ಲವೂ ಇಶ್ಯೂ ಆಗಿರೋದು ನಿಜಾನಾ? 25 ವರ್ಷ ಯಾವುದೇ ದರ ಬದಲಾವಣೆ ಇಲ್ಲ ಅಂತ ಆಗಿರೋದು ನಿಜಾನಾ? ಎಲ್ಲವನ್ನೂ ಆದೇಶ ಕೊಟ್ಟಾದ ಮೇಲೆ ಅಂತಹ ಟೆಂಡರ್‌ ರದ್ದು ಮಾಡಿದರೆ ಅದಕ್ಕೇನು ಹೇಳುತ್ತೀರಿ? ಇದು ಮೇಜರ್‌ ಇಶ್ಯೂ ಆಗಿದ್ದಕ್ಕೆ ತನಿಖೆಗೆ ಶಿಫಾರಸು ಮಾಡಿದ್ದೇವೆ. ನನ್ನ ರಾಜಕೀಯ ಅನುಭವದಲ್ಲಿ ಏನ್‌ ಮಾಡಬೇಕು ಎಂದು ತೋಚಿತೋ ಆದನ್ನು ಮಾಡಿದ್ದೇನೆ. 

ವಿದ್ಯುತ್‌ ಖರೀದಿಯಲ್ಲಿ 29 ಸಾವಿರ ಕೊಟಿ ರೂ. ನಷ್ಟವಾಗಿದೆ ಎಂದು ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದರಲ್ಲಿ ಸತ್ಯಾಂಶವಿದೆಯೇ?
ಸಮಿತಿಯಲ್ಲಿ ನನಗೆ ಕಂಡ ಸತ್ಯವನ್ನು ವರದಿಯಲ್ಲಿ ತಿಳಿಸಿದ್ದೇನೆ. ಅನೇಕ ಸದನ ಸಮಿತಿಗಳ ವರದಿಗಳನ್ನು ನೋಡಿದ್ದು, ವರದಿ ಯಲ್ಲಿ ಎಷ್ಟು ಪಕ್ಷಪಾತ ಮಾಡಲಾಗುತ್ತದೆ ಎಂಬುದು ನನಗೆ ಗೊತ್ತಿದೆ. ಆದರೆ, ಯಾವುದೇ ತಾರತಮ್ಯ ಮಾಡಿಲ್ಲ. ನಮ್ಮ ಇಲಾಖೆಯ ಅಭಿವೃದ್ಧಿ ದೃಷ್ಟಿಯನ್ನು ಗಮನ ದಲ್ಲಿಟ್ಟುಕೊಂಡು ವರದಿ ನೀಡಲಾಗಿದೆ. ಎಷ್ಟು ನಷ್ಟವಾಗಿದೆ ಎಂದು ದಾಖಲೆಗಳು ಹೇಳಿವೆಯೋ ಅದನ್ನು ವರದಿಯಲ್ಲಿ ಹೇಳಿದ್ದೇನೆ.

ತಾವು ಇಂಧನ ಸಚಿವರಾಗಿದ್ದಾಗ ಯಾವುದೇ ಭ್ರಷ್ಟಾಚಾರ ಆಗಿಲ್ಲ ಎಂದು ನಿಮ್ಮ ಗೆಳೆಯ ಎಚ್‌.ಡಿ. ರೇವಣ್ಣ ಹೇಳಿದ್ದಾರಲ್ಲಾ?
ನಾವು ವರದಿಯಲ್ಲಿ ಆವರ ಹೆಸರು ಸೇರಿಸಿಯೇ ಇಲ್ಲ.

ಅವರ ಬದಲು ಕುಮಾರಸ್ವಾಮಿ ಹೆಸರು ಇದೆಯಲ್ಲ?
ಸುದೀರ್ಘ‌ ಮೌನ

ಈ ವರದಿ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ರೇವಣ್ಣ ಒತ್ತಾಯಿಸಿದ್ದಾರೆ. ಯಾವ ತನಿಖೆಗೆ ಶಿಫಾರಸು ಮಾಡುತ್ತೀರಿ?
ಸದನ ಸಮಿತಿಗೆ ಪರಿಶೀಲನೆ ಸಂದರ್ಭದಲ್ಲಿ ಲಭ್ಯವಾದ ಮಾಹಿತಿ, ದಾಖಲೆಗಳನ್ನು ಆಧರಿಸಿ ವರದಿ ಸಿದ್ಧಪಡಿಸಿ ಸದನ ದಲ್ಲಿ ಮಂಡಿಸಲಾಗಿದೆ. ಸದನದಲ್ಲಿ ಈ ಬಗ್ಗೆ ಚೆರ್ಚೆಯಾಗಿ ಏನು ತೀರ್ಮಾನವಾಗುತ್ತದೆ? ಸರಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ನೋಡಬೇಕು.

ಬಿಜೆಪಿ ಐಟಿ ಅಸ್ತ್ರಕ್ಕೆ ನೀವು ಈ ವರದಿಯನ್ನು ಬಿಜೆಪಿ ವಿರುದ್ಧ ಪ್ರತ್ಯಸ್ತ್ರ ಮಾಡುತ್ತಿದ್ದೀರಂತೆ?
ಬಿಜೆಪಿ ವಿರುದ್ಧ ಬಳಸಲು ನಮ್ಮಲ್ಲಿ ಅಸ್ತ್ರಗಳ ಕೊರತೆ ಇಲ್ಲ. ಯಾವುದೇ ರಾಜಕೀಯ ಅಸ್ತ್ರವಾಗಿ ಈ ವರದಿ ಬಳಸಿಕೊಳ್ಳುತ್ತಿಲ್ಲ. ಈ ಬಗ್ಗೆ ಆರೋಪ ಮಾಡುವವರು ಬಹಿರಂಗವಾಗಿ ಹೇಳಿಕೆ ನೀಡಲಿ. ಅದಕ್ಕೆ ಉತ್ತರ ಕೊಡುತ್ತೇನೆ.

ಸದನ ಸಮಿತಿ ವರದಿಯಿಂದ ಏನಾದರೂ ಕ್ರಮ ಆಗುತ್ತದೆ ಎಂಬ ನಂಬಿಕೆ ಇದೆಯೇ ಅಥವಾ ನೈಸ್‌ ವರದಿಯ ಸಾಲಿಗೆ ನಿಮ್ಮ ವರದಿಯೂ ಸೇರುತ್ತದೆಯೇ?
ನೈಸ್‌ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಹೀಗಾಗಿ ನೈಸ್‌ ಕುರಿತ ಸದನ ಸಮಿತಿ ವರದಿ ಆಧರಿಸಿ ಕ್ರಮ ಕೈಗೊಳ್ಳಲು ಸಮಸ್ಯೆ ಇದೆ. ಆದರೆ, ಇಂಧನ ಇಲಾಖೆಗೆ ಸಂಬಂಧಿಸಿದಂತೆ ವರದಿಯಲ್ಲಿರುವ ಅಂಶಗಳ ವಿಚಾರ ಯಾವುದೇ ಕೋರ್ಟ್‌ ನಲ್ಲಿ ಇಲ್ಲ. ಹೀಗಾಗಿ ಸದನದಲ್ಲಿ ಚರ್ಚೆಯಾಗಿ ಏನಾಗುತ್ತದೆ ಎಂಬುದನ್ನು ನೋಡಬೇಕು.

ಬಿಜೆಪಿಯವರು ಐಟಿ ದಾಳಿ ಮಾಡಿಸುವ ಮೂಲಕ ಮತ್ತು ಇತರ ಮಾರ್ಗಗಳಿಂದ ನಿಮ್ಮನ್ನು ಟಾರ್ಗೆಟ್‌ ಮಾಡುತ್ತಿದ್ದಾರಾ?
ಈ ಸಂದರ್ಭದಲ್ಲಿ ರಾಜಕೀಯ ಮಾತನಾಡುವುದಿಲ್ಲ. ಅದಕ್ಕೆ ಬೇರೆ ಸಮಯ ಇದೆ. ಐಟಿ ದಾಳಿ ವೇಳೆ ನನ್ನಲ್ಲಿ 300 ಕೋಟಿ ರೂ. ಕಪ್ಪು ಹಣ ಪತ್ತೆಯಾಗಿದೆ ಎಂದು ವಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಹೇಳಿದ್ದರು. ಅವರಿಗೆ ಮಾಹಿತಿ ಕೊಟ್ಟವರು ಯಾರು? ಅವರೇನು ಐಟಿ ಅಧಿಕಾರಿಯೇ? ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಕಲ್ಲಿದ್ದಲು ಖರೀದಿ ಮಾಡಲು ಬೇರೆಯವರ ಪರವಾಗಿ ಸರಕಾರದ ಹಣ ನೀಡಿದ್ದಾರೆ, ದೊಡ್ಡ ಭ್ರಷ್ಟಾಚಾರ ಮಾಡಲಾಗಿದೆ ಎಂದು ನನ್ನ ವಿರುದ್ಧ ಹೇಳಿದ್ದರು. ಈಗ ಸದನ ನಡೆಯುತ್ತಿರುವಾಗ ಬಿಜೆಪಿ ಸದಸ್ಯರು ಏಕೆ ಈ ಪ್ರಸ್ತಾಪ ಮಾಡುತ್ತಿಲ್ಲ. ಅವರನ್ನು ತಡೆಹಿಡಿದವರು ಯಾರು?

ಅಂದರೆ ಬಿಜೆಪಿಯವರು ನಿಮ್ಮ ವಿರುದ್ಧ ಆಪಪ್ರಚಾರ ಮಾಡುತ್ತಿದ್ದಾರಾ?
ಬಿಜೆಪಿಯವರು ಪ್ರಚಾರಕ್ಕಾಗಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರು ಮಾಡುವ ಆರೋಪದ ಬಗ್ಗೆ ಸೂಕ್ತ ದಾಖಲೆ ಇದ್ದರೆ ಸದನದಲ್ಲಿ ಮಂಡಿಸಿ ಚರ್ಚೆ ನಡೆಸಲಿ. ಬಹಿರಂಗವಾಗಿ ಯಾವುದೇ ಚರ್ಚೆಗೆ ಬರಲಿ. ಅವರಿಗೆ ಮಾಧ್ಯಮಗಳಲ್ಲಿ ಪ್ರಚಾರ ಸಿಗುತ್ತದೆ ಎನ್ನುವ ಕಾರಣಕ್ಕೆ ಸುಳ್ಳು ಹೇಳುತ್ತ ಹೊರಟಿದ್ದಾರೆ. ಐಟಿ ದಾಳಿಯ ಬಗ್ಗೆಯೂ ಸದನದಲ್ಲಿಯೇ ಚರ್ಚೆಯಾಗಲಿ.

ಬಿಜೆಪಿಯವರು ನಿಮ್ಮೊಂದಿಗೆ ಫ್ರೆಂಡ್‌ಶಿಪ್‌ ಬಯಸುತ್ತಿ ದ್ದಾರಾ? ಈ ಬಗ್ಗೆ ಮಾತುಕತೆ ನಡೆದಿರೋದು ನಿಜವೇ?
ಅದೆಲ್ಲವನ್ನು ನಾನು ಈಗ ಮಾತನಾಡೋದಿಲ್ಲ. 

ರಾಜಕೀಯವಾಗಿ ಒಂದು ಪ್ರಶ್ನೆ, ನೀವು ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದೀರಿ. ನಿಮ್ಮ ಪ್ರಚಾರ ಯಾವಾಗ ಶುರು ಮಾಡುತ್ತೀರಾ?
ನಾನು ಈಗಾಗಲೇ ಪ್ರಚಾರ ಆರಂಭಿಸಿದ್ದೇನೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪ್ರಚಾರ ನಡೆಸಿದ್ದೇನೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತ್ಯೇಕ ಯಾತ್ರೆ ಮಾಡುತ್ತಾರಂತಲ್ಲಾ, ಅವರೊಂದಿಗೆ ನೀವು ಹೋಗುತ್ತೀರಾ?
ಮುಖ್ಯಮಂತ್ರಿ ಪ್ರಚಾರ ಮಾಡುವುದು ಸರಕಾರದ ಪರವಾಗಿ. ನಾನೂ ಸರಕಾರದ ಒಂದು ಭಾಗ. ಹೀಗಾಗಿ ಮುಖ್ಯಮಂತ್ರಿ ಜೊತೆಗೆ ಹೋಗುತ್ತೇನೆ. ಈಗಾಗಲೇ ಹಲವು ಕಾರ್ಯಕ್ರಮಗಳ ಕುರಿತು ಇಬ್ಬರೂ ಒಟ್ಟಿಗೆ ಪ್ರಚಾರ ನಡೆಸಿದ್ದೇವೆ.

ನೀವು ಪ್ರಚಾರ ಸಮಿತಿ ಅಧ್ಯಕ್ಷರಾಗಿ ಬಿಜೆಪಿ, ಜೆಡಿಎಸ್‌ ರೀತಿ ಪಕ್ಷದ ವತಿಯಿಂದ ಯಾವುದೇ ಯಾತ್ರೆ ಮಾಡುವುದಿಲ್ಲವೇ?
ನಾನು ಸರಕಾರದ ಭಾಗವಾಗಿರುವುದರಿಂದ ಮುಖ್ಯಮಂತ್ರಿ ಯೊಂದಿಗೆ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ. ಪಕ್ಷದ ವತಿಯಿಂದ ಏನಾದರೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾದರೆ ಅದನ್ನು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ನೋಡಿಕೊಳ್ಳುತ್ತಾರೆ. 

ಪಕ್ಷದಲ್ಲಿ ನಿಮ್ಮನ್ನು ನಿರ್ಲಕ್ಷ ಮಾಡ್ತಿದ್ದಾರೆ ಎಂಬ ಮಾತಿದೆ, ನಿಜವೇ?
ಯಾರು ಹೇಳಿದ್ದು ನಿಮಗೆ? ನನ್ನನ್ನು ಯಾರೂ ನಿರ್ಲಕ್ಷ ಮಾಡೋಕೆ ಸಾಧ್ಯವಿಲ್ಲ. 

ನೀವು ಮುಖ್ಯಮಂತ್ರಿ ಅಭ್ಯರ್ಥಿಗೆ ಸ್ಪರ್ಧಿಯಾಗುತ್ತೀರಿ ಎಂಬ ಕಾರಣಕ್ಕೆ ನಿಮ್ಮನ್ನು ದೂರವಿಟ್ಟರು ಎಂಬ ಮಾತಿದೆಯಲ್ಲಾ?
ಅದೆಲ್ಲದಕ್ಕೂ ಈಗ ಉತ್ತರ ನೀಡಲು ಸಾಧ್ಯವಿಲ್ಲ.

ಅಧ್ಯಕ್ಷ  ಸ್ಥಾನ ತಪ್ಪಿಸಿದರಾ?
ನನಗೆ ಅಧ್ಯಕ್ಷ ಸ್ಥಾನ ತಪ್ಪಿದೆ ಎಂದು ಯಾರು ಹೇಳಿದ್ದು? ಅಧ್ಯಕ್ಷ  ಸ್ಥಾನ ನೀಡಿ ಎಂದು ನಾನು ಯಾರ ಬಳಿಯೂ ಹೋಗಿರಲಿಲ್ಲ. ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ಹೈಕಮಾಂಡ್‌ ಹೇಳಿದ್ದರೂ ನಾನು ನಿರಾಕರಿಸಿದ್ದೆ.

ಸಂದರ್ಶನ: ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next