Advertisement

ನಿಮ್ಮ ವೈದ್ಯರು ಕೈ ತೊಳೆದುಕೊಳ್ಳುತ್ತಿದ್ದಾರೆಯೇ?

01:14 PM May 07, 2017 | Team Udayavani |

ನಿಮಗೆ ಗೊತ್ತಿದೆಯೇ?
-ನೀವು ರೋಗಿಯಾಗಿದ್ದರೆ, ವೈದ್ಯರು ನಿಮ್ಮನ್ನು ಮುಟ್ಟುವುದಕ್ಕೆ ಮುನ್ನ ಮತ್ತು ಬಳಿಕ ಕೈಗಳನ್ನು ತೊಳೆದುಕೊಳ್ಳಬೇಕು. 

Advertisement

-ಕೆಲವು ವೈದ್ಯರು ತಾವು ಕೈತೊಳೆಯಲು ವ್ಯಯಿಸಬೇಕಾದ ಸಮಯದ ಅರ್ಧಾಂಶಕ್ಕಿಂತಲೂ ಕಡಿಮೆ ಸಮಯದಲ್ಲಿ ಕೈತೊಳೆಯುತ್ತಾರೆ. 

-ನಿಮ್ಮ ಕೈಗಳು ಕೂಡ ಸೂಕ್ಷ್ಮಜೀವಿಗಳನ್ನು ಹರಡಬಲ್ಲವು.

-ನಿಮಗೆ ಅನಾರೋಗ್ಯ ಉಂಟು ಮಾಡಬಲ್ಲ ಬಹುತೇಕ ಸೂಕ್ಷ್ಮಜೀವಿಗಳನ್ನು ಅಲ್ಕೊಹಾಲ್‌ ಆಧಾರಿತ ಕೈತೊಳೆಯುವ ದ್ರಾವಣಗಳು ಸಾಯಿಸಬಲ್ಲವು.

ಎಲ್ಲಕ್ಕಿಂತ ಮುಖ್ಯವಾಗಿ, ಕಳೆದ ವರ್ಷದ ಅಕ್ಟೋಬರ್‌ 15ರಂದು ಕೈಗಳ ನೈರ್ಮಲ್ಯ ರಿಲೇಯಲ್ಲಿ 3,422 ಮಂದಿ ಭಾಗವಹಿಸುವ ಮೂಲಕ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಗಿನ್ನೆಸ್‌ ಬುಕ್‌ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗುವ ಸಾಧನೆ ಮಾಡಿದೆ.  ಕಸ್ತೂರ್ಬಾ ಆಸ್ಪತ್ರೆಯ ಈ ಅಪೂರ್ವ ಮತ್ತು ಅಸಾಮಾನ್ಯ ಪ್ರಯತ್ನ ದಾಖಲೆ ಸ್ಥಾಪಿಸುವ ಉದ್ದೇಶ ಮಾತ್ರದಿಂದಲೇ ನಡೆದುದಲ್ಲ; ಆಸ್ಪತ್ರೆಯಲ್ಲಿ ವಿವಿಧ ಸೋಂಕುಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಅತ್ಯಂತ ಪ್ರಾಮುಖ್ಯ ವಿಧಾನ ಎಂದರೆ ಕೈಗಳನ್ನು ತೊಳೆದುಕೊಳ್ಳುವುದು ಎಂಬುದರ ಬಗ್ಗೆ ವೈದ್ಯರು ಮತ್ತು ರೋಗಿಗಳು ಹಾಗೂ ಅವರ ಬಂಧುಗಳ ನಡುವೆ ಜಾಗತಿಕ ಅರಿವನ್ನು ಮೂಡಿಸುವುದಕ್ಕಾಗಿ ಈ ಮಹತ್ತರ ಸಾಧನೆಯನ್ನು ನಡೆಸಲಾಯಿತು.

Advertisement

ಒಬ್ಬ ರೋಗಿಯಾಗಿ ಅಥವಾ ಒಬ್ಬ  ಸಂದರ್ಶಕರಾಗಿ ಕೈಗಳ 
ನೈರ್ಮಲ್ಯದ  ವಿಚಾರದಲ್ಲಿ  ನಿಮ್ಮ ಪಾತ್ರ ನಿರ್ವಹಿಸುತ್ತಿದ್ದೀರಾ?

ನೀವು ಒಬ್ಬ ರೋಗಿಯಾಗಿದ್ದು, ವೈದ್ಯಕೀಯ ಸಲಹೆಯನ್ನು ಪಡೆಯಲು ಬಯಸುತ್ತಿದ್ದೀರಿ ಎಂದಾದರೆ, ನಿಮ್ಮ ಹಕ್ಕುಗಳನ್ನು ನೀವು ಮೊದಲೇ ತಿಳಿದಿರಬೇಕು. ವೈದ್ಯರು ನಿಮ್ಮ ಅನುಮತಿ ಇಲ್ಲದೆ ತಪಾಸಣೆಗಾಗಿ ನಿಮ್ಮನ್ನು ಸ್ಪರ್ಶಿಸುವಂತಿಲ್ಲ. ನಿಮ್ಮನ್ನು ಸ್ಪರ್ಶಿಸುವುದಕ್ಕೆ ಮುನ್ನ ವೈದ್ಯರು ತಮ್ಮ ಕೈಗಳನ್ನು ಸರಿಯಾಗಿ ತೊಳೆದುಕೊಂಡಿದ್ದಾರೆಯೇ ಎಂಬುದನ್ನು ತಿಳಿಯುವ ಎಲ್ಲ ಹಕ್ಕು ನಿಮಗಿದೆ. ಇಲ್ಲವಾದರೆ ಕೆಟ್ಟ ಸೂಕ್ಷ್ಮಜೀವಿಗಳು ನಿಮ್ಮ ದೇಹವನ್ನು ಸೇರಿಕೊಳ್ಳಬಹುದು. ನಿಮಗೆ ಪ್ರಶ್ನಿಸುವ ಹಕ್ಕು ಇದೆ ಮತ್ತು ನಿಮ್ಮ ವೈದ್ಯರ ಬಳಿ ಪ್ರಶ್ನೆಗಳನ್ನು ಕೇಳಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕಾಗಿದೆ. “”ನೀವು ಒಳಬಂದಾಗ ನೀವು ಕೈಗಳನ್ನು ತೊಳೆದುಕೊಂಡದ್ದನ್ನು ನಾನು ಕಾಣಲಿಲ್ಲ. 

ನನ್ನನ್ನು ತಪಾಸಣೆ ಮಾಡುವುದಕ್ಕೆ ಮುನ್ನ ದಯವಿಟ್ಟು ನಿಮ್ಮ ಕೈಗಳನ್ನು ಇನ್ನೊಮ್ಮೆ ತೊಳೆದುಕೊಳ್ಳುವಿರಾ?” ಎಂದು ಅಥವಾ “”ಆಸ್ಪತ್ರೆಯಲ್ಲಿ ಸೂಕ್ಷ್ಮಜೀವಿಗಳು ಪ್ರಸಾರವಾಗುವ ಬಗ್ಗೆ ನನಗೆ ಆತಂಕವಿದೆ. ನನ್ನ ಚಿಕಿತ್ಸೆಯನ್ನು ಆರಂಭಿಸುವುದಕ್ಕೆ ಮುನ್ನ ದಯವಿಟ್ಟು ನಿಮ್ಮ ಕೈಗಳನ್ನು ಇನ್ನೊಮ್ಮೆ ತೊಳೆದುಕೊಳ್ಳುವಿರಾ?” ಎಂದು ನೀವು ಕೇಳಬಹುದು. ನೀವು ರೋಗಿಯಾಗಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ನಿಮ್ಮ ಗೆಳೆಯರು ಅಥವಾ ಬಂಧುಗಳು ನಿಮ್ಮನ್ನು ಸಂದರ್ಶಿಸಲು ಆಗಮಿಸಬಹುದು. ಆಗ “”ನೀವು ಇಲ್ಲಿಗೆ ಬಂದ ಬಳಿಕ ಸ್ವಲ್ಪ ಸಮಯಕ್ಕೆ ಮುನ್ನ ಕೈಗಳನ್ನು ತೊಳೆದುಕೊಂಡಿರಬಹುದು. ಆದರೆ ದಯವಿಟ್ಟು ಅವುಗಳನ್ನು ಇನ್ನೊಮ್ಮೆ ತೊಳೆದುಕೊಳ್ಳುವಿರಾ? ಅದರಿಂದ ನನಗೆ ಹಿತಕರ ಅನುಭವ ಉಂಟಾಗುತ್ತದೆ” ಎಂದು ಹೇಳಬಹುದು. 

ಆದರೆ, ನೀವು ಹೀಗೆಂದೂ ಕೇಳಿರಲಿಕ್ಕಿಲ್ಲ. ಯಾಕೆ ಎಂದರೆ, ವೈದ್ಯರು ನಿಮಗೆ ಅತ್ಯುತ್ತಮ ಆರೈಕೆ ನೀಡುತ್ತಾರೆ ಎಂಬ ಭರವಸೆ ನಿಮಗಿರುತ್ತದೆ. ತನ್ನ ರೋಗಿಯನ್ನು ತಪಾಸಿಸುವುದಕ್ಕೆ ಮುನ್ನ ವೈದ್ಯರು ತಮ್ಮ ಕೈಗಳನ್ನು ತೊಳೆಯದೆ ಇರುವುದಿಲ್ಲ. ಆದರೆ, ಪ್ರತಿ ಬಾರಿಯೂ ನೀವು ಅದೃಷ್ಟವಂತರಾಗಿರಬೇಕಾಗಿಲ್ಲ. ವೈದ್ಯಕೀಯ ಅಥವಾ ಶಸ್ತ್ರಚಿಕಿತ್ಸಾ ಕ್ರಮಗಳಿಗಾಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಲ್ಲಿ ಲಕ್ಷಾಂತರ ಸೋಂಕು ಪ್ರಕರಣಗಳಿಗೆ ಕೈಗಳ ಕಳಪೆ ನೈರ್ಮಲ್ಯ ಸ್ಥಿತಿಯೇ ಕಾರಣವಾಗಿದೆ ಮತ್ತು ಇದು ಸಾವಿರಾರು ಮೃತ್ಯುಗಳಿಗೆ ದಾರಿ ಮಾಡಿಕೊಡುತ್ತದೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳುತ್ತದೆ.

ಆಸ್ಪತ್ರೆಯಲ್ಲಿ ನಿಮ್ಮನ್ನು ಸೋಂಕಿನ 
ಅಪಾಯಕ್ಕೆ ತಳ್ಳುವ ಅಂಶಗಳಾವುವು?

ಅನೇಕ ಅಂಶಗಳು ನಿಮಗೆ ಎಚ್‌ಸಿಎಐಗಳನ್ನು ಉಂಟು ಮಾಡಬಲ್ಲವು. ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ಅಥವಾ ದಾಖಲಾಗುವುದಕ್ಕೆ ಅಥವಾ ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುನ್ನ ಮತ್ತು ಬಳಿಕ ನೀವು ಈ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಸಮಾಜದ ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ಎಚ್‌ಸಿಎಐಗಳಿಗೆ ಕಾರಣವಾಗುವ ಎಲ್ಲ ಅಂಶಗಳ ಬಗ್ಗೆ ತಿಳಿದುಕೊಳ್ಳುವುದು ಹಾಗೂ ನಿಮಗೆ ಸಂಶಯಗಳಿದ್ದರೆ ಸಂಬಂಧಿತರನ್ನು ಪ್ರಶ್ನಿಸುವುದು ನಿಮ್ಮ ಹಕ್ಕು ಹಾಗೂ ಹೊಣೆಗಾರಿಕೆಯಾಗಿದೆ. 

ಅತಿ ಅಪಾಯದ ಮತ್ತು ಸೂಕ್ಷ್ಮ ಕ್ರಿಯಾವಿಧಾನಗಳು ಇಂತಹ ಕ್ರಿಯಾವಿಧಾನಗಳನ್ನು ವೈದ್ಯರು ಶಿಫಾರಸು ಮಾಡಿದರೆ ಅವರನ್ನು ವಿವರವಾಗಿ ಕೇಳಿ – “”ಕ್ರಿಯಾವಿಧಾನದ ಸಮಯದಲ್ಲಿ ಮತ್ತು ಆ ಬಳಿಕ ಉಂಟಾಗಬಹುದಾದ ಸೋಂಕಿಗೆ ಸಂಬಂಧಿಸಿದ ಸಂಕೀರ್ಣ ಸಮಸ್ಯೆಗಳೇನು?”

ಪ್ರತೀ ಅತಿ ಅಪಾಯದ ಮತ್ತು ಸೂಕ್ಷ್ಮ ಕ್ರಿಯಾವಿಧಾನಗಳ ಬಗ್ಗೆ ಅಂತರ್ಜಾಲದಲ್ಲಿ ನಿಮಗೆ ಮಾಹಿತಿ ಲಭ್ಯವಿದೆ. ನಿಮ್ಮ ವೈದ್ಯರ ಜತೆಗೆ ಮಾತನಾಡುವುದಕ್ಕೆ ಮುನ್ನ ಆ ಬಗ್ಗೆ ಚೆನ್ನಾಗಿ ಶೋಧಿಸಿ ಅಧ್ಯಯನ ಮಾಡಿಕೊಳ್ಳಿ. ಈ ಬಗ್ಗೆ ನೀವು ವೈದ್ಯರ ಜತೆಗೆ ಚರ್ಚಿಸಬಹುದು. 

ಅಂಗೀಕೃತ ಗುಣಮಟ್ಟಗಳ ಮತ್ತು ಪ್ರತ್ಯೇಕೀಕರಣ ಮುನ್ನೆಚ್ಚರಿಕೆಗಳ ಅಸಂಪೂರ್ಣ ಅನುಸರಿಸುವಿಕೆ ಪ್ರತೀ ಆಸ್ಪತ್ರೆಯೂ ಅಂಗೀಕೃತ ಗುಣಮಟ್ಟದ ಪ್ರತ್ಯೇಕೀಕರಣ ಮುನ್ನೆಚ್ಚರಿಕೆಗಳನ್ನು ಹೊಂದಿರಬೇಕು. ಇನ್ನಿತರ ರೋಗಿಗಳಿಗೆ ಹರಡುವ ಸೋಂಕನ್ನು ಹೊಂದಿರುವ ಯಾವುದೇ ರೋಗಿಯನ್ನು ಪ್ರತ್ಯೇಕವಾಗಿ ಇರಿಸಿ ಪ್ರತ್ಯೇಕವಾಗಿ ವಿಶೇಷ ಆರೈಕೆ ನೀಡಬೇಕು. ನಿಮ್ಮ ರೋಗಿ ಯಾವುದೇ ಆಸ್ಪತ್ರೆಗೆ ದಾಖಲಾದಾಗ ನಿಮಗೆ ಈ ಬಗ್ಗೆ ತಿಳಿದಿರಬೇಕು. 

ಅಸಮರ್ಪಕ ಪಾರಿಸರಿಕ ನೈರ್ಮಲ್ಯ ಪರಿಸ್ಥಿತಿ ಮತ್ತು ತ್ಯಾಜ್ಯ ವಿಲೇವಾರಿ
ಎಲ್ಲ ಆಸ್ಪತ್ರೆಗಳು ಸಮರ್ಪಕವಾದ ಪಾರಿಸರಿಕ ನೈರ್ಮಲ್ಯ ಪರಿಸ್ಥಿತಿ ಮತ್ತು ತ್ಯಾಜ್ಯ ವಿಲೇವಾರಿಯನ್ನು ಹೊಂದಿರಬೇಕು – ಯಾವುದೇ ಆಸ್ಪತ್ರೆಯಲ್ಲಿ ನಿಮ್ಮ ರೋಗಿಯು ದಾಖಲಾಗುವಾಗ ನೀವು ಈ ಬಗ್ಗೆ ಪ್ರಶ್ನಿಸಬಹುದು ಅಥವಾ ಗಮನಿಸಿ ತಿಳಿಯಬಹುದು. 

ಕಳಪೆ ಮೂಲಸೌಕರ್ಯಗಳು
ಯಾವುದೇ ಆಸ್ಪತ್ರೆಗೆ ನಿಮ್ಮ ರೋಗಿಯನ್ನು ದಾಖಲು ಮಾಡುವುದಕ್ಕೆ ಮುನ್ನ ಆಯಾ ಆಸ್ಪತ್ರೆಯ ಮೂಲಸೌಕರ್ಯಗಳ ಬಗ್ಗೆ ನೀವು ಅಂತರ್ಜಾಲದ ಮೂಲಕ ಅಥವಾ ಯಾವುದೇ ವಿಶ್ವಸನೀಯ ಮೂಲಗಳ ಮುಖಾಂತರ ತಿಳಿಯಬೇಕು. 

ಸಲಕರಣೆಗಳ ನ್ಯೂನತೆ
ಯಾವುದೇ ಆಸ್ಪತ್ರೆಯಲ್ಲಿ ನಿಮ್ಮ ರೋಗಿಯನ್ನು ದಾಖಲಿಸುವುದಕ್ಕೆ ಮುನ್ನ ಅಥವಾ ದಾಖಲಿಸಿದ ಬಳಿಕ ಯಾವುದೇ ಶಸ್ತ್ರಚಿಕಿತ್ಸೆ ಯಾ ದೇಹಪ್ರವೇಶ ಪ್ರಕ್ರಿಯೆಗೆ ಮುನ್ನ ಚಿಕಿತ್ಸೆ ನೀಡುವ ವೈದ್ಯರ ಜತೆಗೆ ಸಮಾಲೋಚಿಸುವ ಮೂಲಕ ಅಥವಾ ಆಸ್ಪತ್ರೆಯ ಆಡಳಿತ ವರ್ಗವನ್ನು ಪ್ರಶ್ನಿಸುವ ಮೂಲಕ ನೀವು ಈ ಬಗ್ಗೆ ತಿಳಿಯಬೇಕು. 

ಅತಿ ರೋಗಿ ಜನಸಂದಣಿ
ಈ ದೇಶದಲ್ಲಿ ಜನಪ್ರಿಯ ಮತ್ತು ಒಳ್ಳೆಯದು ಎಂದು ಪರಿಗಣಿತವಾದ ಯಾವುದೇ ಆಸ್ಪತ್ರೆ ಯಾವಾಗಲೂ ರೋಗಿ ಜನರಿಂದ ಕಿಕ್ಕಿರಿದಿರುತ್ತದೆ. ಈ ರೋಗಿ ಜನಸಂದಣಿಯನ್ನು ರೋಗಿಗಳ ಸುರಕ್ಷೆ ಮತ್ತು ಚಿಕಿತ್ಸೆಗಳಿಗೆ ಅಡಚಣೆ ಉಂಟಾಗದಂತೆ ಆಸ್ಪತ್ರೆ ಆಡಳಿತವು ಹೇಗೆ ನಿಭಾಯಿಸುತ್ತದೆ? ಎನ್ನುವುದನ್ನು ರೋಗಿ ದಾಖಲೀಕರಣದ ಸಮಯದಲ್ಲಿ ಸಂಬಂಧಿತರನ್ನು ವಿಚಾರಿಸಿ ನೀವು ತಿಳಿದುಕೊಳ್ಳಬೇಕು

ಸೋಂಕು ತಡೆಯ ಮೂಲಭೂತ ಕ್ರಮಗಳ  ಕಳಪೆ ಜ್ಞಾನ ಮತ್ತು ಕಳಪೆ ಉಪಯೋಗ
ಪ್ರತೀ ಪ್ರತಿಷ್ಠಿತ ಆಸ್ಪತ್ರೆಯೂ ಸೋಂಕು ತಡೆ ಕ್ರಮಗಳ ಮೇಲ್ವಿಚಾರಣೆ ನಡೆಸುವ ಹಾಗೂ ಸೋಂಕಿಗೆ ತುತ್ತಾದ ರೋಗಿಗಳಿಗೆ ಚಿಕಿತ್ಸೆ ನೀಡಲು ಆ್ಯಂಟಿಬಯಾಟಿಕ್‌ ನೀತಿಯ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಸೋಂಕು ನಿಯಂತ್ರಣ ತಂಡವೊಂದನ್ನು ಹೊಂದಿರಬೇಕು. 

ಇಂಜೆಕ್ಷನ್‌ ಮತ್ತು ರಕ್ತ ಮರುಪೂರಣ ಸುರಕ್ಷೆಯ ಬಗ್ಗೆ ಜ್ಞಾನದ ಕೊರತೆ
ಪ್ರತೀ ಪ್ರತಿಷ್ಠಿತ ಆಸ್ಪತ್ರೆಯೂ ಗುಣಮಟ್ಟದ ದಾಖಲಿತ ಇಂಜೆಕ್ಷನ್‌ ಮತ್ತು ರಕ್ತ ಮರುಪೂರಣ ಸುರಕ್ಷಾ ಕ್ರಮಗಳನ್ನು ಹೊಂದಿರಬೇಕು. ನಿಮ್ಮ ರೋಗಿಯು ಈ ಚಿಕಿತ್ಸಾ ಕ್ರಮಗಳಿಗೆ ಒಳಗೊಳ್ಳುವುದಿದ್ದರೆ ನಿಮಗೆ ಈ ಬಗ್ಗೆ ತಿಳಿದಿರಬೇಕು. 

ರೋಗಿಯ ಸುರಕ್ಷೆಯ ಬಗ್ಗೆ ನೀತಿ ನಿಯಮಗಳು ಮತ್ತು ಮಾರ್ಗದರ್ಶಿ ಸೂತ್ರಗಳ ಗೈರುಹಾಜರಿ
ಪ್ರತೀ ಪ್ರತಿಷ್ಠಿತ ಆಸ್ಪತ್ರೆಯೂ ಗುಣಮಟ್ಟದ ದಾಖಲಿತ ರೋಗಿ ಸುರಕ್ಷಾ ನೀತಿ ನಿಯಮಗಳು ಮತ್ತು ಮಾರ್ಗದರ್ಶಿ ಸೂತ್ರಗಳನ್ನು ಹೊಂದಿರಬೇಕು. ಅವುಗಳ ಬಗ್ಗೆ ತಿಳಿಯುವುದು ನಿಮ್ಮ ಹಕ್ಕು. ಸಾಮಾನ್ಯವಾಗಿ ನಿಮ್ಮ ಮಾಹಿತಿಗಾಗಿ ಇವುಗಳನ್ನು ಆಸ್ಪತ್ರೆಯ ಒಳಗೆ ಎಲ್ಲರಿಗೂ ಕಾಣಿಸುವಂತೆ ಪ್ರದರ್ಶಿಸಿರುತ್ತಾರೆ.

ನಿಮ್ಮ ವೈದ್ಯರನ್ನು  ಪ್ರತೀ ಬಾರಿಯೂ ಪ್ರಶ್ನಿಸಿ
ನನ್ನನ್ನು ತಪಾಸಿಸುವುದಕ್ಕೆ ಮುನ್ನ ನಿಮ್ಮ ಕೈಗಳನ್ನು ತೊಳೆದುಕೊಂಡಿದ್ದೀರಾ?

ನೀವು ನಾಚಿಕೆ ಪಡುವುದು ಅಥವಾ ಹಿಂಜರಿಯುವ ಅಗತ್ಯವಿಲ್ಲ. ನಿಮ್ಮ ವೈದ್ಯರು ಅತ್ಯುತ್ತಮ ಆರೈಕೆಯನ್ನು ನಿಮಗೆ ಒದಗಿಸುವುದಕ್ಕೆ ಸಹಾಯಕವಾಗುವಂತೆ ಕೈಗಳನ್ನು ತೊಳೆದುಕೊಳ್ಳಿ ಎಂದು ವೈದ್ಯರನ್ನು ವಿನಂತಿಸುವುದು ರೋಗಿಯಾಗಿ ನಿಮ್ಮ ಪ್ರಮುಖ ಜವಾಬ್ದಾರಿಯಾಗಿದೆ.  

ದೇಹ ಪ್ರವೇಶಿಕೆ ಉಪಕರಣಗಳು ಹಾಗೂ  ಆ್ಯಂಟಿಬಯಾಟಿಕ್‌ಗಳ ದೀರ್ಘ‌ಕಾಲಿಕ  ಮತ್ತು ಅಸಮರ್ಪಕ ಬಳಕೆ
ನಿಮ್ಮ ರೋಗಿಗೆ ಅಳವಡಿಸಲಾಗಿರುವ ಕೆಥೇಟರ್‌, ರೈಲ್ಸ್‌ ಟ್ಯೂಬ್‌, ಎಂಡೊಟ್ರೇಕಿಯಲ್‌ ಟ್ಯೂಬ್‌, ಐವಿ ಲೈನ್‌ನಂತಹ ದೇಹ ಪ್ರವೇಶ ಸಲಕರಣೆಗಳ ಬಗ್ಗೆ ನಿಮ್ಮ ವೈದ್ಯರನ್ನು ಪ್ರಶ್ನಿಸಬೇಕು – ಇವುಗಳನ್ನು ಎಷ್ಟು ದಿನಗಳ ಕಾಲ ಮುಂದುವರಿಸ ಬೇಕು? ದೀರ್ಘ‌ಕಾಲದ ಬಳಕೆಯಿಂದ ಇವು ರೋಗಿಗೆ ಸೋಂಕು ಉಂಟು ಮಾಡಬಲ್ಲವೇ? ಯಾವುದೇ ರೋಗಿಗೆ ಪ್ರತೀ ದೇಹ ಪ್ರವೇಶ ಸಲಕರಣೆ ಯನ್ನು ಬಳಸುವುದಕ್ಕೆ ಶಿಫಾರಸು ಮಾಡಲಾದ ಸಮಯ ಇರುತ್ತದೆ. ವಿಶೇಷ ಪರಿಸ್ಥಿತಿಗಳಲ್ಲಿ ಸೂಚಿಸಲ್ಪಟ್ಟಿದ್ದರೆ ಮಾತ್ರ ಅವುಗಳ ಬಳಕೆಯನ್ನು ಮುಂದುವರಿಸಬಹುದಾಗಿದೆ. 

ನಿಮ್ಮ ರೋಗಿಗೆ ನೀಡಲಾದ ಆ್ಯಂಟಿಬಯಾಟಿಕ್‌ಗಳ ಬಗ್ಗೆ ನಿಮ್ಮ ವೈದ್ಯರನ್ನು ಪ್ರಶ್ನಿಸಬೇಕು
ರೋಗಿಗೆ ಆ್ಯಂಟಿಬಯಾಟಿಕ್‌ಗಳ ನೈಜ ಅಗತ್ಯ ಇದೆಯೇ? ಇರುವುದಾದರೆ ಯಾಕೆ? ಆ್ಯಂಟಿಬಯಾಟಿಕ್‌ಗಳನ್ನು ಎಷ್ಟು ಕಾಲ ಮುಂದುವರಿಸಬೇಕು? 

ದೀರ್ಘ‌ಕಾಲಿಕ ಆ್ಯಂಟಿಬಯಾಟಿಕ್‌ ಬಳಕೆಯು ರೋಗಿಯಲ್ಲಿ ಬಹು – ಔಷಧ ನಿರೋಧಕ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರ ಬೆಳವಣಿಗೆಯ ಮೂಲಕ ಯಾವುದೇ ಮುಂದುವರಿದ ಮತ್ತು ತೀವ್ರ ತರಹದ ಸೋಂಕಿಗೆ ಅವಕಾಶ ಮಾಡಿಕೊಡಬಲ್ಲುದೇ?

ಮೊದಲು ತಿಳಿಯೋಣ
ಆರೋಗ್ಯ ಸೇವೆಗೆ ಸಂಬಂಧಿಸಿದ ಸೋಂಕು 
(ಎಚ್‌ಸಿಎಐಗಳು)ಗಳು ಎಂದರೇನು? – 

ಜಾಗತಿಕ ಮಟ್ಟದಲ್ಲಿ ಆಸ್ಪತ್ರೆಗಳಲ್ಲಿ ಪದೇ ಪದೇ ಸಂಭವಿಸುವ ಅನಪೇಕ್ಷಿತ ಘಟನೆಗಳೇ ಆರೋಗ್ಯ ಸೇವೆಗೆ ಸಂಬಂಧಿಸಿದ ಸೋಂಕು (ಎಚ್‌ಸಿಎಐ)ಗಳು. ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಸಂದರ್ಭಗಳಿಗೆ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ರೋಗಿಗಳಿಗೆ ಎಚ್‌ಸಿಎಐಗಳು ಉಂಟಾಗುವುದು -ಈ ಸೋಂಕುಗಳನ್ನು ಪ್ರತಿಬಂಧಿಸಬಹುದಾಗಿದೆ. 

ಜಾಗತಿಕವಾಗಿ ಪ್ರತಿವರ್ಷ ಲಕ್ಷಾಂತರ ರೋಗಿಗಳು ಎಚ್‌ಸಿಎಐಗಳಿಗೆ ತುತ್ತಾಗುತ್ತಾರೆ ಹಾಗೂ ಅದರ ಪರಿಣಾಮವಾಗಿ ಗಮನಾರ್ಹ ಸಾವುನೋವು ಮತ್ತು ಆರೋಗ್ಯ ಸೇವಾ ಸೌಲಭ್ಯಗಳಿಗೆ ಅಪಾರ ಆರ್ಥಿಕ ನಷ್ಟ ಉಂಟಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಆಸ್ಪತ್ರೆಗೆ ದಾಖಲಾದ ಪ್ರತೀ 100 ರೋಗಿಗಳಲ್ಲಿ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಏಳು ಮತ್ತು ಅಭಿವೃದ್ಧಿಶೀಲ ದೇಶಗಳಲ್ಲಿ 10 ಮಂದಿ ರೋಗಿಗಳು ಕನಿಷ್ಠ ಒಂದು ಎಚ್‌ಸಿಎಐಗೆ ತುತ್ತಾಗುತ್ತಾರೆ. ಸಹಜವಾಗಿಯೇ ತುರ್ತು ನಿಗಾ ವಿಭಾಗಕ್ಕೆ ದಾಖಲಾಗುವ ವಯಸ್ಕ ಮತ್ತು ಬಾಲರೋಗಿಗಳಲ್ಲಿ ಎಚ್‌ಸಿಎಐ ಉಂಟಾಗುವ ಸೋಂಕು ಹೊರೆಯು ಹೆಚ್ಚು ಆದಾಯ ಹೊಂದಿರುವ ದೇಶಗಳಿಗಿಂತ ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಲ್ಲಿ ಅಧಿಕ. ರೋಗಿಗಳಿಗೆ ಚಿಕಿತ್ಸೆ ನೀಡಿ ಅವರು ಗುಣಮುಖರಾಗುವುದಕ್ಕೆ ನೆರವಾಗಲು ಆಧುನಿಕ ಆಸ್ಪತ್ರೆಗಳು ಅನೇಕ ವಿಧದ ದೇಹ ಪ್ರವೇಶ ಸಲಕರಣೆಗಳು ಮತ್ತು ವಿಧಾನಗಳನ್ನು ಅನುಸರಿಸುತ್ತವೆ. 

ಇಂತಹ ವಿಧಾನಗಳು (ಶಸ್ತ್ರಕ್ರಿಯೆ) ಹಾಗೂ ವೈದ್ಯಕೀಯ ಕ್ರಿಯಾವಿಧಾನಗಳಲ್ಲಿ ಉಪಯೋಗಿಸಲ್ಪಡುವ ಕೆಥೇಟರ್‌, ರೈಲ್ಸ್‌ ಟ್ಯೂಬ್‌, ಇಂಟ್ರಾವೆನಸ್‌ (ಐವಿ) ಲೈನ್‌, ಎಂಡೊಟ್ರೇಕಿಯಲ್‌ ಟ್ಯೂಬ್‌ನಂತಹ ಸಲಕರಣೆಗಳ ಜತೆಗೆ ಈ ಸೋಂಕುಗಳು ಸಂಬಂಧ ಹೊಂದಿವೆ. ಕೆಥೆಟರ್‌ ಸಂಬಂಧಿತ ಮೂತ್ರನಾಳ ಸೋಂಕು (ಸಿಎಯುಟಿಉ)ಯು ಎಚ್‌ಸಿಎಐಗಳಲ್ಲಿ ಅತ್ಯಂತ ಸಾಮಾನ್ಯವಾದುದಾಗಿದ್ದರೆ, ಅನಂತರದ ಸ್ಥಾನಗಳಲ್ಲಿ ಶಸ್ತ್ರಕ್ರಿಯೆ ನಡೆದ ದೇಹಸ್ಥಳದ ಸೋಂಕು (ಎಸ್‌ಎಸ್‌ಐ), ಆಸ್ಪತ್ರೆಯಲ್ಲಿ ಉಂಟಾದ ನ್ಯುಮೋನಿಯಾ (ಎಚ್‌ಎಪಿ) ಇವೆ. ವಿಶೇಷತಃ ಸೀಮಿತ ಸಂಪನ್ಮೂಲ ಹೊಂದಿರುವ ಭಾರತದಂತಹ ದೇಶಗಳಲ್ಲಿ ಪರಿಸ್ಥಿತಿ ಹೀಗಿದ್ದು, ಇದು ಅಮೆರಿಕದಂತಹ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಒಂಬತ್ತು ಪಟ್ಟು ಹೆಚ್ಚು. ನಮ್ಮ ದೇಶದಲ್ಲಿ ಐಸಿಯುನಲ್ಲಿ ಉಂಟಾಗುವ ಸೋಂಕುಗಳ ಒಟ್ಟಾರೆ ಸಂಭವನೀಯತೆಯು ಹೆಚ್ಚು ಆದಾಯವುಳ್ಳ ದೇಶಗಳಿಗಿಂತ 2-3 ಪಟ್ಟು ಅಧಿಕವಾಗಿದ್ದರೆ, ವೈದ್ಯಕೀಯ ಸಲಕರಣೆ ಸಂಬಂಧಿಯಾಗಿ ಉಂಟಾಗುವ ಸೋಂಕುಗಳ ಹೊರೆಯು 13 ಪಟ್ಟು ಅಧಿಕವಾಗಿದೆ. ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ನವಜಾತ ಶಿಶುಗಳಿಗೆ ಎಚ್‌ಸಿಎಐಗಳು ತಗಲುವ ಅಪಾಯ ಅತಿ ಹೆಚ್ಚು;  ಈ ಸೋಂಕು ಪ್ರಮಾಣವು ಹೆಚ್ಚು ಆದಾಯವುಳ್ಳ ದೇಶಗಳಿಗಿಂತ 3ರಿಂದ 20 ಪಟ್ಟು ಅಧಿಕವಾಗಿದೆ. 

ಪ್ರತಿರಕ್ಷಣಾ ನಿಗ್ರಹ ಮತ್ತು  ಇತರ ತೀವ್ರ ರೋಗಿ ಪರಿಸ್ಥಿತಿಗಳು
ವೈದ್ಯಕೀಯ ಸಲಹೆಯನ್ನು ಬಯಸುವುದಕ್ಕೆ ಮುನ್ನ ಇವುಗಳನ್ನು ತಿಳಿದುಕೊಳ್ಳಿ 
-ನೀವು ಪ್ರತಿರಕ್ಷಣಾ ನಿಗ್ರಹಕ್ಕೆ ಒಳಗಾಗಿದ್ದೀರಾ?
-ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯು ಜನ್ಮತಃ ಅಥವಾ ಯಾವುದೇ ಕಾಯಿಲೆ ಯಾ ಚಿಕಿತ್ಸೆಯಿಂದಾಗಿ ಕಡಿಮೆಯಾಗಿದೆಯೇ?

ನೀವು ಇದನ್ನು ಚೆನ್ನಾಗಿ ತಿಳಿದುಕೊಳ್ಳಬೇಕು ಮತ್ತು ದಾಖಲಿಸಿ ಇರಿಸಿಕೊಳ್ಳಬೇಕು. ಪ್ರತಿರಕ್ಷಣಾ ನಿಗ್ರಹಕ್ಕೆ ಒಳಗಾಗಿದ್ದರೆ ನೀವು ಎಚ್‌ಸಿಎಐಗಳಿಗೆ ತುತ್ತಾಗುವ ಸಂಭವನೀಯತೆ ಹೆಚ್ಚಿರುತ್ತದೆ. 

ಮುಂದಿನ ವಾರಕ್ಕೆ

– ಡಾ|  ಚಿರಂಜಯ್‌ ಮುಖೋಪಾಧ್ಯಾಯ,   
ಎಂಡಿ, ಪಿಎಚ್‌ಡಿ, ಪಿಡಿಸಿಸಿ (ಸೋಂಕುರೋಗಗಳು)
ಪ್ರೊಫೆಸರ್‌, ಮೈಕ್ರೊಬಯಾಲಜಿ ವಿಭಾಗ, ಕಸ್ತೂರ್ಬಾ ಮೆಡಿಕಲ್‌ ಕಾಲೇಜು, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next