Advertisement

ಇಂಡಸ್ಟ್ರೀ ಅಂದರೆ ಅಷ್ಟೇ ಸಾಕೆ..?

10:05 PM Feb 01, 2020 | Lakshmi GovindaRaj |

ಕೈಗಾರಿಕಾ ವಲಯದ ಅಭಿವೃದ್ಧಿಯೇ ದೇಶದ ಆರ್ಥಿಕ ಪ್ರಗತಿಗೆ ಅಡಿಪಾಯ ಎಂದು ಸರ್ಕಾರ ನಂಬಿದ್ದು, ಕ್ಷೇತ್ರದ ವಿಕಸನಕ್ಕಾಗಿ 27,300 ಕೋಟಿ ರೂ. ಮೀಸಲಿಟ್ಟಿರುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಇದರೊಂದಿಗೆ ರಾಷ್ಟ್ರೀಯ ತಾಂತ್ರಿಕ ಜವಳಿ ಮಿಷನ್‌ಗೆ ಬರೋಬ್ಬರಿ 1,480 ಕೋಟಿ ರೂ. ಘೋಷಿಸುವ ಮೂಲಕ ದೇಶ ಜವಳಿ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲಿದೆ ಎಂಬ ಸುಳಿವು ನೀಡಿದ್ದಾರೆ. ಇದೇ ವೇಳೆ, ಸರ್ಕಾರದ “ಆರ್ಥಿಕ ಅಭಿವೃದ್ಧಿ’ ಪರಿಕಲ್ಪನೆಯಲ್ಲಿ ಕೈಗಾರಿಕಾ ಕ್ಷೇತ್ರ ಮೊದಲ ಆದ್ಯತಾ ವಲಯವಾಗಿದ್ದು, ಮೂಲ ಸೌಕರ್ಯ ಅಭಿವೃದ್ಧಿಗೆ ಎರಡನೇ ಪ್ರಮುಖ ಸ್ಥಾನ ನೀಡಲಾಗಿದೆ.

Advertisement

ಉದ್ಯಮ ಮತ್ತು ವ್ಯಾಪಾರ ವಲಯದಲ್ಲಿ ಭಾರತ ಶ್ರೀಮಂತ ಪರಂಪರೆ ಹೊಂದಿದೆ ಎಂಬುದನ್ನು ತಿಳಿಸಲು ಸರಸ್ವತಿ-ಸಿಂಧೂ ಮತ್ತು ಹರಪ್ಪಾ ನಾಗರಿಕತೆಗಳ ಉದಾಹರಣೆ ನೀಡಿದ ಸಚಿವರು, ಭಾರತದ ಕೌಶಲ್ಯ, ಲೋಹಶಾಸ್ತ್ರ ಮತ್ತು ವ್ಯಾಪಾರ ವಲಯಗಳಿಗೆ ಈ ಪ್ರಾಚೀನ ನಾಗರಿಕತೆಗಳ ಕೊಡುಗೆ ಅಪಾರ. ಅದೇ ಉದ್ಯಮಶೀಲತೆ ಇಂದಿಗೂ ಮುಂದು ವರಿಯುತ್ತಿದ್ದು ದೇಶದ ಯುವಕ, ಯುವತಿಯರು ಹೊಸ ಉದ್ಯಮಗಳನ್ನು ಆರಂಭಿಸುವ ಮೂಲಕ ದೇಶದ ಪ್ರಗತಿಗೆ ಕೊಡುಗೆ ನೀಡುತ್ತಿದ್ದಾರೆ.

ಎಲೆಕ್ಟ್ರಿಕ್‌ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಆದರೆ ಈ ಮಾರುಕಟ್ಟೆಗೆ ಭಾರತದ ಕೊಡುಗೆ ಕಡಿಮೆ. ಈ ನಿಟ್ಟಿನಲ್ಲಿ ಮೊಬೈಲ್‌ ಫೋನ್‌ಗಳು, ಎಲೆಕ್ಟ್ರಾನಿಕ್‌ ಸಾಧನಗಳು ಮತ್ತು ಸೆಮಿ- ಕಂಡಕ್ಟರ್‌ ಮತ್ತಿತರ ಉತ್ಪನ್ನಗಳ ಉತ್ಪಾದನೆಗೆ ಸಂಬಂಧಿ ಸಿದಂತೆ ಸರ್ಕಾರ ಹೊಸ ಯೋಜನೆಯೊಂದನ್ನು ಪರಿಚಯಿಸಲಿದ್ದು, ಇದಕ್ಕೆ ಸಂಬಂಧಿಸಿದ ವಿವರಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.

ಎಲೆಕ್ಟ್ರಿಕ್‌ ಉತ್ಪನ್ನ, ಬಿಡಿಭಾಗಗಳ ಉತ್ಪಾದನಾ ಉದ್ಯಮವು ಜಾಗತಿಕ ಮಟ್ಟದಲ್ಲಿ ತೀವ್ರ ಸ್ಪರ್ಧೆಯಿಂದ ಕೂಡಿದೆ. ಈಗಾಗಲೇ ಈ ಕ್ಷೇತ್ರದಲ್ಲಿ ಭಾರತ ತನ್ನ ಸಾಮರ್ಥ್ಯ ಸಾಬೀತುಪಡಿಸಿದೆ. ಅಸಂಖ್ಯ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿರುವ ಎಲೆಕ್ಟ್ರಾನಿಕ್‌ ಉತ್ಪನ್ನಗಳ ಉತ್ಪಾದನಾ ವಲಯದಲ್ಲಿ ಗಟ್ಟಿಯಾಗಿ ನಿಲ್ಲಲು ಭಾರತವು ನೆಟರ್ಕಿಂಗ್‌ (ಕೇಬಲ್‌, ವೈರ್‌ಲೆಸ್‌ ಾಧನ ಇತ್ಯಾದಿ) ಉತ್ಪನ್ನಗಳ ತಯಾರಿಕೆಗೆ ಗಮನಹರಿಸಬೇಕಿದೆ. ಇದರಿಂದ ದೇಶದ ಯುವಜನತೆಗೆ ಉದ್ಯೋಗ ದೊರೆಯುವ ಜತೆಗೆ ಆರ್ಥಿಕ ಪ್ರಗತಿಗೂ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಏಕೀಕೃತ ಖರೀದಿ: ಸರಕು ಮತ್ತು ಸೇವೆಗಳ ಖರೀದಿಗಾಗಿ ದೇಶದಾದ್ಯಂತ ಒಂದೇ ವೇದಿಕೆ ಕಲ್ಪಿಸುವ ಉದ್ದೇಶದಿಂದ ಸರ್ಕಾರಿ ಇ-ಮಾರುಕಟ್ಟೆಯು (ಜಿಇಎಂ) ಏಕೀಕೃತ ಖರೀದಿ ವ್ಯವಸ್ಥೆ ಪರಿಚಯಿಸುತ್ತಿದೆ. ಏಕೀಕೃತ ಖರೀದಿ ವ್ಯವಸ್ಥೆಯಿಂದ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಇದರಿಂದ ಸಾಕಷ್ಟು ಪ್ರಯೋಜನಗ ಳಾಗಲಿದ್ದು, ಈ ಮೂಲಕ ವೇದಿಕೆಯಲ್ಲಿನ ವಹಿವಾ ಟನ್ನು ವಾರ್ಷಿಕ 3 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಪ್ರಸ್ತುತ 3.24 ಲಕ್ಷ ವ್ಯಾಪಾ ರಿಗಳು ಈ ವೇದಿಕೆಯಲ್ಲಿ ಸಕ್ರಿಯರಾಗಿದ್ದಾರೆ.

Advertisement

ಆರ್ಥಿಕ ಪ್ರಗತಿಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸುವ ಹಾಗೂ ಉದ್ಯೋಗ ಸೃಷ್ಟಿಗೂ ಗಣನೀಯ ಕೊಡುಗೆ ನೀಡುತ್ತಿರುವ ಎಂಎಸ್‌ಎಂಇಗಳ ಸ್ಥಿತಿ ಸುಧಾರಣೆಗೆ ಪೂರಕವಾಗಿರುವ ಯೋಜನೆಗಳನ್ನು ಸರ್ಕಾರ ಕಾಲಕಾಲಕ್ಕೆ ಅನುಷ್ಠಾನಗೊಳಿಸುತ್ತಾ ಬಂದಿದೆ. ಅದೇ ರೀತಿ, ಸಣ್ಣ, ಅತಿಸಣ್ಣ ಮತ್ತು ಮಧ್ಯಮ ವ್ಯವಹಾರಗಳ ಹಣಕಾಸು ಮತ್ತು ಆರ್ಥಿಕ ಸುಸ್ಥಿರತೆಗಾಗಿ ಅಪವರ್ತನ ನಿಯಂತ್ರಣ ಕಾಯ್ದೆ 2011 (ಫ್ಯಾಕ್ಟರ್‌ ರೆಗ್ಯುಲೇಟರಿ ಆಕ್ಟ್) ಕ್ಕೆ ಅಗತ್ಯ ತಿದ್ದುಪಡಿಗಳನ್ನು ತರಲು ಕೇಂದ್ರ ನಿರ್ಧರಿಸಿದೆ.

ಜವಳಿ ಕ್ಷೇತ್ರದ ಸ್ವಾವಲಂಬನೆ: ಈ ಬಾರಿ ಜವಳಿ ಕ್ಷೇತ್ರದ ಅಭಿವೃದ್ಧಿಯತ್ತ ಗಮನಹರಿಸಿರುವ ಕೇಂದ್ರ ಸರ್ಕಾರ, ಜವಳಿ ವಲಯದಲ್ಲಿ ಉತ್ಪಾದನೆ ಹೆಚ್ಚಿಸಲು ರಾಷ್ಟ್ರೀಯ ತಾಂತ್ರಿಕ ಜವಳಿ ಮಿಷನ್‌ಗೆ 1,480 ಕೋಟಿ ರೂ. ಮೀಸಲಿರಿಸಿದೆ. ಪ್ರಸ್ತುತ ವಿವಿಧ ದೇಶಗಳಿಂದ ಭಾರತಕ್ಕೆ ವಾರ್ಷಿಕ ಸುಮಾರು 16 ಶತಕೋಟಿ ಡಾಲರ್‌ ಮೌಲ್ಯದ ಜವಳಿ ಉತ್ಪನ್ನಗಳು ಆಮದಾಗುತ್ತಿವೆ. ಇದರ ಬದಲು ನಮ್ಮಲ್ಲೇ ಹೆಚ್ಚಿನ ಪ್ರಮಾಣದ ಬಟ್ಟೆ ಉತ್ಪಾದಿಸುವಂತಾದರೆ ವಿದೇಶಗಳ ಮೇಲಿನ ಈ ಅವಲಂಬನೆ ಕಡಿಮೆಯಾಗಿ ಜವಳಿ ಕ್ಷೇತ್ರದಲ್ಲಿ ದೇಶ ಸ್ವಾವಲಂಬನೆ ಸಾಧಿಸಬಲ್ಲದು. ಈ ನಿಟ್ಟಿನಲ್ಲಿ ರಾಷ್ಟ್ರೀಯ ತಾಂತ್ರಿಕ ಜವಳಿ ಮಿಷನ್‌ ಆರಂಭಿಸಲು ಸರ್ಕಾರ ನಿರ್ಧರಿಸಿದೆ. 2020ರಿಂದ 2024ರವರೆಗಿನ ಅವಧಿಯಲ್ಲಿ ಈ ಮಹತ್ವದ ಮಿಷನ್‌ ಅನುಷ್ಠಾನಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.

ಆಡಿಟ್‌ ಮಿತಿ ವಿಸ್ತರಣೆ; ಷರತ್ತುಗಳು ಅನ್ವಯ!: ಪ್ರಸ್ತುತ ಒಂದು ಕೋಟಿ ರೂ.ಗಿಂತ ಹೆಚ್ಚು ವಹಿವಾಟು ನಡೆಸುತ್ತಿರುವ ಉದ್ಯಮ, ವ್ಯಾಪಾರಿ ಗಳು ತಮ್ಮ ಲೆಕ್ಕದ ಪುಸ್ತಕಗಳನ್ನು ಅಕೌಂಟೆಂಟ್‌ಗಳ ಮೂಲಕ ಆಡಿಟ್‌ ಮಾಡಿಸಬೇಕಿದೆ. ಇದರಿಂದ ಸಣ್ಣ ರೀಟೇಲರ್‌ಗಳು, ವ್ಯಾಪಾರಿಗಳು, ಅಂಗಡಿ ಮಾಲೀಕರನ್ನು ಒಳಗೊಂಡಿರುವ ಎಂಎಸ್‌ಎಂಇ(ಮಧ್ಯಮ, ಸಣ್ಣ ಮತ್ತು ಸೂಕ್ಷ್ಣ ಉದ್ಯಮ) ವಲಯಕ್ಕೆ ಆಗುತ್ತಿರುವ ನಷ್ಟ ತಪ್ಪಿಸುವ ಉದ್ದೇಶದಿಂದ ಪ್ರಸ್ತುತ ಇರುವ ವಹಿವಾಟಿನ ಮಿತಿಯನ್ನು ಐದು ಪಟ್ಟು, ಅಂದರೆ, 1ರಿಂದ 5 ಕೋಟಿ ರೂ.ಗೆ ವಿಸ್ತರಿಸಲಿದೆ. ಆದರೆ, ನಗದು ರಹಿತ ವಹಿವಾಟನ್ನು ಉತ್ತೇಜಿಸುವ ದೃಷ್ಟಿಯಿಂದ, ಕೇವಲ ಶೇ.5ರವರೆಗೆ ನಗದು ವಹಿವಾಟು ನಡೆಸುವ ಉದ್ಯಮ, ವ್ಯಾಪಾರಿಗಳಿಗೆ ಮಾತ್ರ 5 ಕೋಟಿ ರೂ. ವಹಿವಾಟು (ಆಡಿಟ್‌) ಮಿತಿಯ ಪ್ರಯೋಜನ ನೀಡುವುದಾಗಿ ಸರ್ಕಾರ ತಿಳಿಸಿದೆ.

ಜಿ 20ಗೆ 100 ಕೋಟಿ ರೂ.: 2022ರಲ್ಲಿ ಭಾರತಕ್ಕೆ ಸ್ವಾತಂತ್ರೊತ್ಸವದ 75ನೇ ವರ್ಷಾಚರಣೆಯ ಸಂಭ್ರಮ. ಈ ಸುಸಂದರ್ಭದಲ್ಲೇ, ಪ್ರತಿಷ್ಠಿತ ಜಿ 20 ಸಮ್ಮೇಳನವನ್ನು ಭಾರತದಲ್ಲಿ ಆಯೋಜಿಸು ತ್ತಿರುವುದಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್‌ ಹರ್ಷ ವ್ಯಕ್ತಪಡಿಸಿದ್ದಾರೆ. ಹಾಗೇ ಈ ಐತಿಹಾಸಿಕ ಸಮ್ಮೇಳನ ಆಯೋಜನೆಗೆ ಸಂಬಂಧಿಸಿದ ಸಿದ್ಧತೆಗಳನ್ನು ಆರಂಭಿಸಲು 100 ಕೋಟಿ ರೂ. ಮೀಸಲಿರಿಸುವುದಾಗಿ ತಿಳಿಸಿದ್ದಾರೆ. ದತ್ತಾಂಶವು ಬಲವಾದ ವಿಶ್ವಾಸಾರ್ಹತೆ ಹೊಂದಿರಬೇಕಾಗುತ್ತದೆ.

ಇದಕ್ಕಾಗಿ ಕೃತಕ ಬುದ್ಧಿಮತ್ತೆ (ಎಐ) ರೀತಿಯ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಅಧಿಕೃತ ಅಂಕಿಅಂಶಗಳ ಕುರಿತ ಹೊಸ ರಾಷ್ಟ್ರೀಯ ನೀತಿಯನ್ನು ಸರ್ಕಾರ ಜಾರಿಗೊಳಿಸಲಿದೆ. ಸುಧಾರಿತ ಡಾಟಾ ಸಂಗ್ರಹ, ಸಮಗ್ರ ಮಾಹಿತಿ ವೇದಿಕೆ ಮತ್ತು ಸಮಯೋಚಿತ ಮಾಹಿತಿ ಪ್ರಸಾರಕ್ಕೆ ಹೊಸ ಮಾರ್ಗದರ್ಶಿಯಾಗುವ ರೀತಿಯಲ್ಲಿ ಈ ನೂತನ ನೀತಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ. ಹಾಗೇ ಪ್ರಸ್ತುತ ಸಂದರ್ಭದಲ್ಲಿ ನಮ್ಮ ಸಂಕೀರ್ಣ ಆರ್ಥಿಕತೆಯ ನೈಜ ಸಮಯ ಮೇಲ್ವಿಚಾರಣೆಗೆ (ರಿಯಲ್‌ ಟೈಮ್‌ ಮಾನಿಟರಿಂಗ್‌) ಸಂಬಂಧಿಸಿದ ಸವಾಲುಗಳನ್ನು ಎದುರಿಸಲು ರಾಷ್ಟ್ರೀಯ ಸಾಂಖೀಕ ವ್ಯವಸ್ಥೆಯ ಅಗತ್ಯವಿದೆ ಎಂದಿದ್ದಾರೆ.

ಸ್ಟಾರ್ಟ್‌ಅಪ್‌ಗಳಿಗೆ ಸಂತಸ: ಕೇಂದ್ರ ಸರ್ಕಾರ ಸ್ಟಾರ್ಟ್‌ಅಪ್‌ಗಳ ವಿಚಾರದಲ್ಲಿ ಕೆಲವು ಗಮನಾರ್ಹ ಘೋಷಣೆಗಳನ್ನು ಮಾಡಿದೆ. ಹೊಸದಾಗಿ ನವೋದ್ಯಮ ಸ್ಥಾಪಿಸುವವರಿಗೆ ಮೂಲಸೌಕರ್ಯದಲ್ಲಿ ರಿಯಾಯಿತಿ(ಭೂಮಿ, ಇಂಧನ ಇತ್ಯಾದಿ), ಸ್ಟಾರ್ಟ್‌ಅಪ್‌ಗಳ ಆರಂಭಿಕ ಹಂತದಲ್ಲಿ ಪ್ರೋತ್ಸಾಹದ ರೂಪದಲ್ಲಿ ಬೀಜ ನಿಧಿ(ಸೀಡ್‌ ಫ‌ಂಡಿಂಗ್‌) ಸೇರಿದಂತೆ ಮುಖ್ಯವಾಗಿ ಸ್ಟಾರ್ಟ್‌ಅಪ್‌ ನೌಕರರ ಷೇರು ಮಾಲೀಕತ್ವದ ಯೋಜನೆ (ಇಎಸ್‌ಒಪಿ)ಯಲ್ಲಿ ತೆರಿಗೆ ಪಾವತಿಯನ್ನು ಐದು ವರ್ಷಗಳವರೆಗೆ ಅಥವಾ ಉದ್ಯೋಗಿಯು ಸ್ಟಾರ್ಟ್‌ಅಪ್‌ ತೊರೆಯುವವರೆಗೆ ವಿನಾಯಿತಿ ನೀಡಲು ಮುಂದಾಗಿದೆ.

ಈ ಸಂಗತಿಯು ಸ್ಟಾರ್ಟ್‌ಅಪ್‌ ಸ್ಥಾಪಕರಿಗೆ ಮತ್ತು ಉದ್ಯೋಗಿಗಳಿಗೆ ಸಂತಸ ಮೂಡಿಸಿದೆ. ಸ್ಟಾರ್ಟಪ್‌ ಸ್ಥಾಪಕರು ಹೆಚ್ಚು ಸಂಬಳ ಕೊಡಲು ಸಾಧ್ಯವಾಗದೇ ಇದ್ದಾಗ, ಪ್ರತಿಭಾನ್ವಿತರನ್ನು ಕಂಪನಿಯಲ್ಲಿ ಉಳಿಸಿಕೊಳ್ಳಲು ಕಂಪನಿಯಲ್ಲಿನ ಚಿಕ್ಕ ಪ್ರಮಾಣದ ಷೇರನ್ನು ಅವರಿಗೆ ಕೊಡುತ್ತಾರೆ. ಇದನ್ನು ಇಎಸ್‌ಒಪಿ ಎನ್ನಲಾಗುತ್ತದೆ. ಈ ಇಎಸ್‌ಒಪಿಗೆ ಇದುವರೆಗೂ ತೆರಿಗೆ ವಿಧಿಸಲಾಗುತ್ತಿತ್ತು. ಹೀಗಾಗಿ, ಈಗ ತೆರಿಗೆ ವಿಚಾರದಲ್ಲಿ ವಿನಾಯಿತಿ ನೀಡಿರುವುದರಿಂದ ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಿಗಳಿಗೆ ಇಎಸ್‌ಒಪಿ ಒದಗಿಸುವ ಪ್ರೋತ್ಸಾಹಿಸಿದಂತಾಗುತ್ತದೆ.

ಸರ್ವ ಜನರ ಕಲ್ಯಾಣ ದೃಷ್ಟಿಯ ಆಯವ್ಯಯ. ಕೃಷಿ, ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಲಾಗಿದೆ. ಬೆಂಗಳೂರು ಸಬ್‌ ಅರ್ಬಲ್‌ ರೈಲಿಗೂ ನೆರವು ನೀಡಿರುವುದು ಸಂತೋಷಕರ. ಉತ್ತಮ ಬಜೆಟ್‌ಗಾಗಿ ಪ್ರಧಾನಿ, ಹಣಕಾಸು ಸಚಿವರಿಗೆ ಧನ್ಯವಾದ.
-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

ಎಸ್‌ಸಿ, ಎಸ್‌ಟಿ, ಆದಿವಾಸಿಗಳ ಕಲ್ಯಾಣಕ್ಕಾಗಿ 1.38 ಲಕ್ಷ ಕೋಟಿ ರೂ. ನೀಡಿ ದಲಿತರ ಕಲ್ಯಾಣ ಬಯಸಿದ ಅತ್ಯುತ್ತಮ ಬಜೆಟ್‌. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಒದಗಿಸುವ ಜಲಜೀವ ಮಿಷನ್‌ಗೆ 3.60 ಲಕ್ಷ ಕೋಟಿ ರೂ. ಆನುದಾನ ಒದಗಿಸಲಾಗಿದ್ದು, ಇದು ಕ್ರಾಂತಿಕಾರಕ.
-ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ

ಕೇಂದ್ರ ಬಜೆಟ್‌ ಭರವಸೆಯ ಬೆಳಕನ್ನು ನೀಡಿದೆ. ಹೊಸ ತೆರಿಗೆ ಹೊರೆ ವಿಧಿಸದ ಹಣಕಾಸು ಸಚಿವರ ಕ್ರಮ ಸ್ವಾಗತಿಸುತ್ತೇನೆ. ಗ್ರಾಮೀಣಾಭಿವೃದ್ಧಿಗೆ 1.23 ಲಕ್ಷ ಕೋಟಿ ರೂ. ನೀಡಿರುವ ಬಜೆಟ್‌ನಲ್ಲಿ ರೈತರ ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ.
-ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

ದೇಶದ ಆರ್ಥಿಕತೆಯನ್ನು ಸುಧಾರಿಸಿ ಒಟ್ಟು ರಾಷ್ಟ್ರೀಯ ಉತ್ಪನ್ನ ಶೇ.10ಕ್ಕೆ ಏರಿಸುವ ಗುರಿಯೊಂದಿಗೆ ಈ ಬಾರಿಯ ಕೇಂದ್ರ ಬಜೆಟ್‌ ದಿಟ್ಟ ಹೆಜ್ಜೆ ಇಟ್ಟಿದೆ. ಇದನ್ನು ಸಾಧಿಸುವ ಸಲುವಾಗಿ ಕೈಗಾರಿಕೆ ಅಭಿವೃದ್ಧಿಯನ್ನು ಮೂಲಮಂತ್ರವನ್ನಾಗಿಸಿಕೊಂಡಿರುವುದು ಸ್ವಾಗತಾರ್ಹ.
-ಜಗದೀಶ ಶೆಟ್ಟರ್‌, ಕೈಗಾರಿಕಾ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next