Advertisement

ಆರನೇ ಇಂದ್ರಿಯ ಎಂಬುದು ನಿಜಕ್ಕೂ ಇದೆಯೇ? 

11:48 AM Sep 16, 2017 | |

ಸುಮಾರು 50 ವರ್ಷಗಳ ಹಿಂದಿನ ಮಾತು ಇದು. ಭಕ್ತರು, ಅಭಿಮಾನಿಗಳು ಕರ್ನಾಟಕದ ಪ್ರಮುಖ ಮಠವೊಂದರ ಸ್ವಾಮೀಜಿಯನ್ನು  ಸುತ್ತವರಿದಿದ್ದರು. ಬೆಂಗಳೂರಿನಿಂದ ಪ್ರಮುಖ ವಾಣಿಜ್ಯೋದ್ಯಮಿಯೊಬ್ಬರು ಬಂದು, ಸ್ವಾಮೀಜಿ ಯವರಿಗಾಗಿ ಕಾಯುತ್ತಾ ನಿಂತಿದ್ದರು. ಅವರು ತಮ್ಮ ಪರಿಚಯವನ್ನು ಸ್ವಾಮೀಜಿಯವರ ಆಪ್ತ ವಲಯಕ್ಕೆ ತಿಳಿಸಿರಲಿಲ್ಲ. ಬಹುದೊಡ್ಡ ವಾಣಿಜ್ಯೋದ್ಯಮಿಗಳ ವಿನಯ ಪ್ರಶಂಸನೀಯ. ಈ ವಿಷಯ ತಿಳಿದಿರದ ಸ್ವಾಮೀಜಿ ಮತ್ತೂಂದು ರೂಮಿನಲ್ಲಿದ್ದರು. ಅಲ್ಲಿ ಭಕ್ತರ ಬಳಿ ಮಾತಾಡುತ್ತಿರುವಾಗಲೇ ಥಟ್ಟನೆ ಎರಡು ಸೆಕೆಂಡ್‌ಗಳ ಕಾಲ ಕಣ್ಮುಚ್ಚಿ ಏನನ್ನೋ ಧ್ಯಾನಿಸಿದರು. ನಂತರ ಕಣ್ತೆರೆದು, ಆಪ್ತರನ್ನು ಕರೆದು “ಹೊರಗೆ ಬೆಂಗಳೂರಿನ (ಹೆಸರು ಬೇಡ) ಇಂಥವರು ನನಗಾಗಿ ಕಾಯುತ್ತಿದ್ದಾರೆ. ಅವರನ್ನು ಒಳಗೆ ಕರೆದುಕೊಂಡು ಬನ್ನಿ’ ಎಂದು ಆದೇಶಿಸಿದರು. ವಾಣಿಜ್ಯೋದ್ಯಮಿ ಒಳಗೆ ಬಂದು, ಸ್ವಾಮೀಜಿಗೆ ನಮಿಸಿ ” ಸ್ವಾಮೀಜಿ, ನಾನು ಅಲ್ಪ. ಹೊರಗೆ ಅದೆಷ್ಟೋ ಜನ ಕಾದಿದ್ದಾರೆ. ಅವಸರವೇನೂ ಇರಲಿಲ್ಲ’ ಎಂದರು. ಆದರೆ ಸ್ವಾಮೀಜಿ, “ವಿಶ್ವಾಧಾರೆ, ಮಹಾಮಾಯಿ, ಕಾಮೇಶ್ವರಿಯಾದ ರಾಜರಾಜೇಶ್ವರಿ, ನಿಮ್ಮನ್ನು ಬರ ಹೇಳುವ ಪ್ರೇರಣೆ ಕೊಟ್ಟ ಮೇಲೆ, ನಾನು ಅವಳ ಆದೇಶ ಪಾಲಿಸಲೇಬೇಕಲ್ಲವೆ?’ ಎಂದು ಮಾರುತ್ತರಿಸಿದರು. “ನಮಸ್ತೇ, ವಿಜಯೇ ಗಂಗೇ ಶಾರದೇ ವಿಕಟಾನನೇ| ಪೃಥ್ವಿರೂಪೇ, ದಯಾರೂಪೇ, ತೇಜೋರೂಪೇ ನಮೋನಮಃ||’ ಎಂದು ಅವಳನ್ನು ಭಜಿಸಿ, “ಮನೋಭೀಷ್ಟ ಪೂರೈಸು’ ಎಂದು ದೇವಿಯಲ್ಲಿ ವಿನಂತಿಸಿಕೊಂಡೆ ಎಂದು ಉದ್ಯಮಿಗೆ  ಹೇಳಿದರು. 

Advertisement

ಮೇಲ್ನೋಟಕ್ಕೆ ಇದೊಂದು ಕಥೆಯಂತೆ ಕಾಣಬಹುದು. ಆದರೆ ನೂರಕ್ಕೆ ನೂರು ವಾಸ್ತವವಿದು. ಅತೀಂದ್ರಿಯ ಜ್ಞಾನವನ್ನು ಕೊಡುವ ಭಗವದ್‌ ಕೃಪೆ ಎಲ್ಲರಿಗೂ ಲಭ್ಯವಿಲ್ಲ. ದೇವಿ ತನ್ನ ಭಕ್ತರಿಗೆ ದಿವ್ಯ ಜ್ಞಾನವನ್ನು ಕರುಣಿಸುತ್ತಾಳೆ. ಪಂಚೇಂದ್ರಿಯಗಳು ಅಷ್ಟು ಸುಲಭದಲ್ಲಿ ನಮ್ಮ ನಿಯಂತ್ರಣಕ್ಕೆ ಬರುವುದಿಲ್ಲ. ಆದರೂ ಪ್ರಕೃತಿ ಇವುಗಳನ್ನು ಮೀರಿದ ವಿವೇಕವನ್ನು ನೀಡಿದೆ. ಪ್ರಾಣಿಗಳ ಪಾಲಿಗೂ ಕಿವಿ, ಕಣ್ಣು, ಮೂಗು, ನಾಲಗೆ, ಚರ್ಮಗಳುಂಟು. ಆದರೆ ಮನುಷ್ಯನಂತೆ ಆನೆ ತನ್ನ ಮನಸ್ಸನ್ನು ವಿವೇಕದಿಂದ ನಿಯಂತ್ರಿಸಿಕೊಳ್ಳದು. ಹುಲಿಯೂ ಅಷ್ಟೇ. ಆದರೆ ಮನುಷ್ಯನ ವಿವೇಕ ಪ್ರಾಣಿಗಳನ್ನು ಮೀರಿ ನಿಂತಿರುವ ಸಂಪನ್ನತೆಗೆ ನಮ್ಮನ್ನು ಹಿಡಿದು ತಂದಿದೆ. ಇದು ಆಕಸ್ಮಿಕವಲ್ಲ, ದೈವ ಸಾಕ್ಷಾತ್ಕಾರ. ಕಣ್ಣು ಮುಚ್ಚಿಕೊಂಡಾಗ ಕತ್ತಲೇ ಕಾಣಿಸುವುದು. ಆದರೆ ಕತ್ತಲೆ, ಬೆಳಕು, ಬಣ್ಣ ಸಾವಿರಾರು ರೂಪ ವಿಶೇಷಗಳು ಕಣ್ಣು ಮುಚ್ಚಿಕೊಂಡಾಗಲೂ ಸ್ಪಷ್ಟ. ಇಂಥ ಈ ಅವ್ಯಕ್ತವೇ ನಮ್ಮೊಳಗಿನ ಬ್ರಹ್ಮ. ಹೀಗಾಗಿಯೇ ಅಹಂ ಬ್ರಹ್ಮಾಸ್ಮಿ ಎಂದು ಶಂಕರರು ಹೇಳಿದ್ದು. ಕಣ್ಣು ಮುಚ್ಚಿಕೊಂಡರೆ ಸಾಲದು, ಕಣ್ಣುಗಳನ್ನು ತೆರೆಯದೇ ಜೀವನ ಸಾಗದು. ಆಗ ನಾವೇ ಬೇರೆ, ಎದುರಿಗಿನ ಬ್ರಹ್ಮ ಸೃಷ್ಟಿಯೇ ಬೇರೆ. ನಾವು, ನಮ್ಮನ್ನು ಸೃಷ್ಟಿಸಿದ ಬ್ರಹ್ಮ ಬೇರೆ ಬೇರೆ. ಹೀಗಾಗಿ ಮಧ್ವಾಚಾರ್ಯರು, ನಾವು ಬೇರೆ, ಸೂತ್ರಧಾರ ಬೇರೆ ಎನ್ನುತ್ತಾ ದ್ವೆ„ತವನ್ನು ಸಂಭ್ರಮಿಸಿದರು. 

ದೇವರು ಎಂಬುದು ಏನೇ ಇರಲಿ. ಆದರೆ ಈ ಭೂಮಿ, ಈ ಬಾನು, ಈ ತಾರೆ, ಈ ವಿಶ್ವ ಬಂದುದೆಲ್ಲಿಂದ? ಇಂಥ ಪ್ರಶ್ನೆಗಳಿಗೆ ಈವರೆಗೆ ಯಾರೂ ಸರಿಯಾಗಿ ಉತ್ತರಿಸಿಲ್ಲ. ಅದು ಶುರುವಾಯ್ತು, ಆತ ಶುರು ಮಾಡಿದ್ದಾನೆ ಅನ್ನುತ್ತಾರಷ್ಟೇ. ಅದು ಏನು? ಆತ ಯಾರು? ಇಲ್ಲ…ಈ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ.  ನಮ್ಮ ಅನುಭವಕ್ಕೆ ದೊರಕಬಲ್ಲ ವಿಚಾರ ಅದು ಮತ್ತು ಅವನು. ಅದರಾಚೆಗೆ ನಮ್ಮ ಅನುಭವ, ವಿವೇಕ, ಮನಸ್ಸೂ ಕೂಡ ಏನನ್ನು ಹೇಳಲಾರದು. ಶೂನ್ಯಕ್ಕೂ ಚಲನೆ ಸಾಧ್ಯ. ಅದಕ್ಕೀಗ ನಮ್ಮ ವಿಶ್ವವೇ ಸಾಕ್ಷಿ. ಇಲ್ಲ…ಸಾಧ್ಯವಿಲ್ಲ..ಇದೇ ಎಂಬುದನ್ನು ಖಚಿತ ಶಬ್ದಗಳಲ್ಲಿ ತಿಳಿಸಲಾಗದು. ಇಂಥದೊಂದು ದೌರ್ಬಲ್ಯವನ್ನು ಶಬ್ದಗಳಲ್ಲಿ ಹೇಳಿ ತಿಳಿಸಲಾಗದ್ದು ಅತೀಂದ್ರಿಯಗಳ ಶಕ್ತಿ ಕೂಡ.

ಮಠದ ಸ್ವಾಮೀಜಿ ಹಾಗೂ ಅವರನ್ನು ಕಾಣಲು ಬಂದ ವಾಣಿಜ್ಯೋದ್ಯಮಿ ಈ ಇಬ್ಬರೂ ಅತೀಂದ್ರಿಯ ಶಕ್ತಿ ಪಡೆದವರು. ಪರಸ್ಪರರನ್ನು ನೋಡಿರದಿದ್ದರೂ ಅವರಿಬ್ಬರಲ್ಲಿ ಅನ್ಯ ಶಕ್ತಿಯೊಂದು ಅತೀಂದ್ರಿಯ ಆವರಣದೊಂದಿಗೆ “ನಾನು ಬಂದಿದ್ದೇನೆ’ ಎಂದು ಸ್ವಾಮಿಗಳಿಗೆ ಬಿನ್ನವಿಸಿಕೊಳ್ಳಲು ಉದ್ಯಮಿಗೆ ಸಹಕರಿಸಿತ್ತು. ಇದೇ ಅತೀಂದ್ರಿಯ ಶಕ್ತಿಗಳ ಆವರಣ ಸ್ವಾಮೀಜಿಯವರಿಗೆ “ಅವರನ್ನು ಕರೆದು ತನ್ನಿ’ ಎಂದು ಆದೇಶಿಸಲು ಪ್ರೇರಣೆ ನೀಡಿತು. ಈ ಇಂದ್ರಿಯ ಯಾವುದು ಹಾಗಾದರೆ? ಈ ಅತೀಂದ್ರಿಯ ಶಕ್ತಿ ಸುಲಭವಾಗಿ ಒಲಿಯದು. ಕೆಲವರಿಗೆ ಯಾಕೆ ಒಲಿಯುತ್ತದೆ? ಅದು ವಿಶೇಷವಾದ ವರವೇ? ಕೆಲವೊಮ್ಮೆ ಅತೀಂದ್ರಿಯ ಶಕ್ತಿಯೇ ಒಬ್ಬ ವ್ಯಕ್ತಿಯ ಮಿತಿಯೂ ಆಗಿ ಬಿಡಬಹುದು. ಜ್ಞಾನದ ಕೊನೆಯ ಬಿಂದು ಮತ್ತೆ ಕತ್ತಲಿಗೆ ತಳ್ಳಿ ಬಿಡುತ್ತದೆ. 

ನಮ್ಮ ದೇಹದ ವಿಚಾರಗಳನ್ನೇ ತೆಗೆದುಕೊಳ್ಳಿ. ರಕ್ತ, ಮಜ್ಜನ, ಮಾಂಸ, ಮೂಳೆ, ಸ್ನಾಯು, ಕರುಳು, ಹೃದಯ, ಪಿತ್ತಕೋಶ, ಮೆದುಳು, ಮೂಗು, ಕಿವಿ, ಬಾಯಿ ಇತ್ಯಾದಿ ಎಲ್ಲವೂ ಹೇಗೆ, ಎಷ್ಟು, ಏಕೆ, ಯಾವಾಗ ಹಾಳಾಗಬಲ್ಲವು ಎಂಬುದನ್ನು ನಾವೀಗ ತಿಳಿದು ಬಿಟ್ಟಿದ್ದೇವೆ. ಹೀಗಾಗಿ ನಮಗೆ ಬೇಕಾದಷ್ಟು ಊಟವನ್ನು ಮಾಡಲಿಕ್ಕೇ ನಾವು ಹೆದರುತ್ತೇವೆ. ನಮ್ಮ ಪಚನಕ್ರಿಯೆ ತಗ್ಗಿದೆ. ಶ್ರಮಕ್ಕೆ ಅವಕಾಶವಿಲ್ಲ. ಶ್ರಮಕ್ಕೆ ಅವಕಾಶ ಬೇಕೆಂದರೆ ನಾವು ಆಧುನಿಕತೆಯನ್ನು ತಬ್ಬಿಕೊಳ್ಳಬಾರದು. ಆಧುನಿಕತೆಯು ವಿನಯವನ್ನು ಸಂಪಾದಿಸಿಕೊಡುವ ಶಕ್ತಿ ಹೊಂದಿದೆಯೇ? ಒಂದೂ ಮಾತ್ರೆಯನ್ನು ನುಂಗದೆ ಜೀವನವನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಿದೆಯೇ? ಡಯಾಲಿಸಿಸ್‌ ತನಕ ಮುಂದುವರಿಯದ ಹಾಗೆ, ಹೇಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು? 

Advertisement

ಸೊಂಟ, ಬೆನ್ನು, ಮಂಡಿ, ಪಾದದ ನಡು, ಸಂಧಿ, ಸಂಧಿಯ ನೋವಿರದೆ ಅಸ್ಥಿ ಮಂಡಲವನ್ನು ಸಂಭಾಳಿಸಿಕೊಂಡು ವೃದ್ಧಾಪ್ಯವನ್ನು ಶಿಕ್ಷೆಯಾಗದಂತೆ ನೋಡುವುದು ಸಾಧ್ಯವಿಲ್ಲ ಎಂಬುದು ಹಲವರ ಉತ್ತರ. ಆದರೆ ಸಾಧ್ಯ ಎಂದು ಕೆಲವರು ಹೇಳುತ್ತಾರೆ. ಡಾಕ್ಟರ್‌ಗೆ ದೇವಿ ಶಕ್ತಿ ಕೊಡುತ್ತಾಳೆ. ವೈಷ್ಣವರಿಗೆ ಹರಿ ಸರ್ವೋತ್ತಮ. ಸ್ಮಾರ್ತರಿಗೆ ಶಿವನು ವಿಷ ನಿವಾರಕನಾಗಿದ್ದಾನೆ. 

ಭಾರತೀಯ ಪರಂಪರೆಯು ಯೋಗವನ್ನು, ಧ್ಯಾನ, ತಪ-ಜಪಗಳನ್ನು ಮಂತ್ರ, ತಂತ್ರಾದಿ ವಿಷಯಗಳ ಕುರಿತಾಗಿ ಸುದೀರ್ಘ‌ವಾಗಿ ವ್ಯಾಖ್ಯಾನವನ್ನು ಕಟ್ಟಿಕೊಟ್ಟಿದೆ. ಕುಂಡಲಿನಿಯ ಜಾಗೃತ ಸಿದ್ಧಿಯು ನಮ್ಮ ಅನುಭವವನ್ನು ಲೌಕಿಕದಿಂದ ಅಲೌಕಿಕಕ್ಕೆ ಸಂಯೋಜಿಸಿ ಮನುಷ್ಯನಿಗೆ ಮೀರಿದ ಅತಿಮಾನುಷ ಶಕ್ತಿ ಘಟಕಗಳನ್ನು ಒದಗಿಸುತ್ತದೆ. ಸಾಧಕರು ಯೋಗದ ಮೂಲಕ, ಶಕ್ತಿ ಪೂಜೆಯ ಮೂಲಕ, ತಪಶ್ಚರ್ಯ ಅನುಷ್ಠಾನಗಳ ಮೂಲಕ ಲೌಕಿಕದ ಕಗ್ಗಂಟುಗಳನ್ನು ನಿವಾರಿಸುತ್ತಾರೆ. ಅದರಲ್ಲೂ ಅನಿಷ್ಠಾನಾದಿ ಜಪಗಳಿಂದ ಭೂತ, ಭವಿಷ್ಯತ್‌, ವರ್ತಮಾನಗಳನ್ನು ವಿಭಿನ್ನ ರೀತಿಯಲ್ಲಿ ಅರಿಯುವ ಶಕ್ತಿ ಹೊಂದಿರುತ್ತಾರೆ. ಅತಿಮಾನಷ, ಅತೀಂದ್ರಿಯ ಅನುಭವಗಳನ್ನು ಹೇಳುವ ಜನ ನಮಗೆ ಅರೆ

ಹುಚ್ಚರಂತೆ ಕಾಣಿಸಿಕೊಂಡರೆ ಅದರಲ್ಲಿ ಆಶ್ಚರ್ಯವಿಲ್ಲ. ಧಾರ್ಮಿಕವಾದ ಭ್ರಮೆ ಮತ್ತು ವಾಸ್ತವಗಳ ಮಿಶ್ರಣದಲ್ಲಿ ತೇಲಾಡುವ ಜನರ ಅಪಲಾಪ ಎಂದು ಕೆಲವರು ಗುರುತಿಸುತ್ತಾರೆ. 

ಆದರೆ ಅತೀಂದ್ರಿಯ ಶಕ್ತಿ ಎಂಬುದು, ಪಂಚೇಂದ್ರಿಯಕ್ಕೆ ಗಟ್ಟಿಯಾಗಿಯೇ ಬೆಸೆದುಕೊಂಡಿರುವ, ಇದು ಬೇರೆಯದೇ ಆದ ಅಂಗ, ಇಂದ್ರಿಯ ಎಂದು ಗುರುತಿಸಲಾಗದ ಭವಿಷ್ಯವನ್ನು ಬಗೆದು ಇಣುಕುವ ಶಕ್ತಿ ಹಲವರಲ್ಲಿ ಜಾಗೃತವಾಗಿರುತ್ತದೆ. ಇದು ಎಲ್ಲಿ ಅಡಕವಾಗಿದೆ ಎಂದು ಗುರುತಿಸಿ ಹೇಳುವುದು ಕಷ್ಟ. ಸ್ಕಿಝೋಫ್ರೀನಿಯಾ ಇರುವ ಜನರನ್ನು ಅವಸರ ಅವಸರವಾಗಿ ನಾವು ಮನೋರೋಗಿಗಳನ್ನಾಗಿ ಗುರುತಿಸುತ್ತೇವೆ. ಒಂದು ಉದಾಹರಣೆ ಗಮನಿಸಿ, ಒಬ್ಬ ಗೃಹಸ್ಥರ ಮಗಳು ಅಪರೂಪಕ್ಕೆ (ಇನ್ನೂ ಹದಿಮೂರರ ಹರೆಯ) ಸೀರೆ ಉಟ್ಟುಕೊಂಡು ಒಂದು ಸಮಾರಂಭಕ್ಕೆ ಹೊರಟಿದ್ದಳು. ಅವಳ ಜೊತೆ ಅದೇ ವಯಸ್ಸಿನ ಅವಳ ಗೆಳತಿಯೊಬ್ಬಳು ಸೇರಿಕೊಂಡಳು. ಈ ಗೃಹಸ್ಥರಿಗೆ ಏನನ್ನಿಸಿತೋ ಏನೋ, ಮಗಳ ಗೆಳತಿಯ ಬಳಿ “ನಿನ್ನ ಸೀರೆಯ ಸೆರಗಿನ ಬಗ್ಗೆ ಜಾಗ್ರತೆ ಇರಲಮ್ಮ’ ಎಂದು ಒಮ್ಮೆಲೇ ಎಚ್ಚರಿಕೆ ನೀಡಿದ್ದರು. 

ಗೃಹಸ್ಥರ ಹೆಂಡತಿ ಅದನ್ನು ಕೇಳಿಸಿಕೊಂಡು ಒಳಗಿನಿಂದ ಓಡಿ ಬಂದು, “ರೀ, ಸುಮ್ಮನಿರ್ರೀ. ನಿಮ್ಮದೊಂದು ಅನಿಷ್ಠ’ ಎಂದು ಸಿಡಿಮಿಡಿಗೊಂಡಳು. ಆ ರಾತ್ರಿ ಸಮಾರಂಭದಲ್ಲಿ ಆರತಿ ಬೆಳಗುವ ಸಮಯದಲ್ಲಿ ಗೃಹಸ್ಥರ ಮಗಳ ಸೆರಗಿಗೆ ಆರತಿ ಹಿಡಿದು (ಅವಳೂ ಆರತಿಗೆ ಕೈ ಜೋಡಿಸಿದ್ದಳು) ಎತ್ತುವಾಗ ಸೆರಗಿಗೆ ಬೆಂಕಿ ಹತ್ತಿಕೊಂಡಿತು.

(ಮುಂದುವರಿಯುವುದು)

ಅನಂತಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next