Advertisement

ಪಾರಂಪರಿಕ ತಾಣಗಳಿಗೆ ಸಿಗುತ್ತಾ ಅಭಿವೃದ್ಧಿ ಭಾಗ್ಯ?

09:18 AM Jan 04, 2019 | |

ಬಾಗಲಕೋಟೆ: ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲೆಯಲ್ಲಿ ವಿಫುಲ ಅವಕಾಶಗಳಿದ್ದರೂ ಈವರೆಗೆ ನಿರ್ಲಕ್ಷ್ಯಕ್ಕೊಳಗಾಗಿದ್ದ ಬಾದಾಮಿ, ಐಹೊಳೆ, ಪಟ್ಟದಕಲ್ಲು ತಾಣಗಳ ಅಭಿವೃದ್ಧಿಯ ಭಾಗ್ಯ ತೆರೆಯುತ್ತಾ ಎಂಬ ಆಶಾಭಾವನೆ ಜಿಲ್ಲೆಯ ಜನರಲ್ಲಿದೆ. ಹೌದು, ದೇಶ-ವಿದೇಶಿಗರೂ ನಿಬ್ಬೆರಗಾಗಿ ನೋಡುವಂತಹ ಪ್ರವಾಸಿ ತಾಣಗಳು ಜಿಲ್ಲೆಯಲ್ಲಿವೆ. ವಿಶ್ವಗುರು ಬಸವಣ್ಣನವರ ಐಕ್ಯ ಸ್ಥಳ ಕೂಡಲಸಂಗಮ, ದೇಶದ ಸಂಸತ್‌ ಭವನ ನಿರ್ಮಾಣಕ್ಕೆ ಮಾದರಿ ಎನ್ನಲಾದ ಐಹೊಳೆ (ದುರ್ಗಾ ಟೆಂಪಲ್‌), ವಿಶ್ವ ಪರಂಪರೆ ಪಟ್ಟಿಗೆ ಸೇರಿದ ಹಾಗೂ ಬಾದಾಮಿಯ ಚಾಲುಕ್ಯ ಅರಸರಿಗೆ ಪಟ್ಟಾಧಿಕಾರ ಮಾಡಲಾಗುತ್ತಿದ್ದ ಪಟ್ಟದಕಲ್ಲ, ನೈಸರ್ಗಿಕ ಕಲ್ಲುಬಂಡೆಗಳಲ್ಲಿ ನಿರ್ಮಾಣಗೊಂಡ ಬಾದಾಮಿಯ ಮೇಣಬಸದಿ, ಉತ್ತಕರ್ನಾಟಕದ ಆರಾಧ್ಯ ದೇವತೆ ಬನಶಂಕರಿ ದೇವಸ್ಥಾನ, ದೇಶದ ಮಠಗಳಿಗೆ ಮಠಾಧೀಶರನ್ನು ನೀಡುವ ಶಿವಯೋಗ ಮಂದಿರ, ದಕ್ಷಿಣದ ಕಾಶಿ ಎಂದೇ ಕರೆಸಿಕೊಳ್ಳುವ ಮಹಾಕೂಟ ಹೀಗೆ ಹತ್ತು ಹಲವು ಪ್ರವಾಸಿ ತಾಣಗಳು ಜಿಲ್ಲೆಯಲ್ಲಿವೆ. ಆದರೆ, ಈ ತಾಣಗಳ ಸುತ್ತ ಕನಿಷ್ಠ ಮೂಲ ಸೌಲಭ್ಯಗಳೂ ಇಲ್ಲ. ಇಲ್ಲಿಗೆ ಬರುವ ಸಾವಿರಾರು ಪ್ರವಾಸಿಗರು, ಇಲ್ಲಿನ ಆಡಳಿತ, ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನಗೊಂಡೇ ತೆರಳುತ್ತಾರೆ.

Advertisement

ಸಿದ್ದರಾಮಯ್ಯರ ಮರ್ಯಾದೆ ಪ್ರಶ್ನೆ: ಐದು ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ ಹಲವು ಭಾಗ್ಯಗಳ ಯೋಜನೆ ನೀಡಿದ ಸಿದ್ದರಾಮಯ್ಯ ಅವರಿಗೆ ರಾಜಕೀಯ ಪುನರ್‌ಜನ್ಮ ನೀಡಿದ್ದು ಬಾದಾಮಿ.  ಅದರಲ್ಲೂ ಅತಿ ಕಡಿಮೆ ಮತಗಳಲ್ಲಿ ಗೆಲುವು ಕಂಡು, ರಾಜ್ಯ ರಾಜಕೀಯದಲ್ಲಿ ಪ್ರಚಲಿತ ನಾಯಕರಾಗಿ ಉಳಿದಿದ್ದಾರೆ. ಹೀಗಾಗಿ ಬಾದಾಮಿ ಕ್ಷೇತ್ರ ಪ್ರತಿನಿಧಿಸುವ ಸಿದ್ದರಾಮಯ್ಯ, ಈ ಐದು ವರ್ಷದಲ್ಲಿ ಕ್ಷೇತ್ರಕ್ಕೆ ಅಭಿವೃದ್ಧಿಯ ಕೊಡುಗೆ ನೀಡುವ ಜವಾಬ್ದಾರಿಯೂ ಅವರ ಮೇಲಿದೆ. ಕೇವಲ ಬಾದಾಮಿಯಿಂದ ಗೆದ್ದಿದ್ದೇನೆ, ರಾಜಕೀಯದಲ್ಲಿ ಪ್ರಚಲಿತದಲ್ಲಿದ್ದೇನೆ ಎಂಬುದಕ್ಕಷ್ಟೇ ಸೀಮಿತಗೊಂಡರೆ, ಇಡೀ ಬಾದಾಮಿ ಕ್ಷೇತ್ರ ಜನ, ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರು ಅವರನ್ನು ನಿಂದಿಸದೇ ಇರಲಾರದು. 

ಸಿದ್ದರಾಮಯ್ಯ ಕೇವಲ ರಾಜ್ಯ ರಾಜಕೀಯದಲ್ಲಿ ವರ್ಚಸ್ಸು ಹೊಂದಿಲ್ಲ. ದೇಶದ ರಾಜಕಾರಣದಲ್ಲೂ ಅವರಿಗೆ ಹೆಸರಿಗೆ. ಮುಖ್ಯಮಂತ್ರಿಯಾದವರು, ಒಂದು ಕ್ಷೇತ್ರದಲ್ಲಿ ಸೋತು, ಇನ್ನೊಂದು ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಅವರನ್ನು ಗೆಲ್ಲಿಸಿದ ಕ್ಷೇತ್ರ ಯಾವುದು, ಆ ಕ್ಷೇತ್ರಕ್ಕಾಗಿ ಸಿದ್ದರಾಮಯ್ಯ ಕೊಡುಗೆ ಏನು ಎಂಬ ಚರ್ಚೆ ಬರುವುದು ಸಾಮಾನ್ಯ. ಹೀಗಾಗಿ ಬಾದಾಮಿಗೆ ಅಭಿವೃದ್ಧಿಯ ಭಾಗ್ಯ ಕೊಡುವುದು ಅವರ ಮರ್ಯಾದೆ, ಗೌರವ ಹಾಗೂ ಪ್ರತಿಷ್ಠೆಯ ಪ್ರಶ್ನೆಯೂ ಹೌದು ಎನ್ನಲಾಗುತ್ತಿದೆ.

ಬದಲಾಗಿದೆಯೇ ವ್ಯವಸ್ಥೆ: ಬಾದಾಮಿಯೂ ಸೇರಿದಂತೆ ಜಿಲ್ಲೆಯಲ್ಲಿ ಜಿಡ್ಡುಗಟ್ಟಿದ ಆಡಳಿತ ವ್ಯವಸ್ಥೆಯಲ್ಲಿ ಒಂದಷ್ಟು (ಬಾದಾಮಿ ತಾಲೂಕಿನಲ್ಲಿ ಮಾತ್ರ) ಬದಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಬಾದಾಮಿ ತಾಲೂಕಿನಲ್ಲಿ ಬಹುತೇಕ ಆ ಕಡೆ (ದಕ್ಷಿಣಕರ್ನಾಟಕ) ಭಾಗದ ಅಧಿಕಾರಿಗಳಿದ್ದಾರೆ. ಒಂದು ಲೆಟರ್‌ಪ್ಯಾಡ್‌ ಗೂ ಹಣ ಪಡೆಯುವ ಸಂಪ್ರದಾಯ ಸಧ್ಯಕ್ಕೆ ಇಲ್ಲ ಎನ್ನುವ ಮಾತಿದೆ. ಆದರೂ, ಆಗಾಗ ಭ್ರಷ್ಟಾಚಾರದ, ಅಧಿಕಾರಿಗಳಿಗೆ ಸ್ಥಳ ನಿಯುಕ್ತಿಗೊಳಿಸುವ ವಿಷಯದಲ್ಲಿ ಸಿದ್ದರಾಮಯ್ಯ ಭ್ರಷ್ಟಾಚಾರ ನಡೆಸದಿದ್ದರೂ,
ಅವರ ಹೆಸರಿನಲ್ಲಿ ಕೆಲವರು ಹಳೆಯ ಪರಂಪರೆ ನಡೆಸಿದ್ದಾರೆ ಎಂಬ ಆರೋಪವೂ ಇದೆ. ಇದೆಲ್ಲದರ ಹೊರತಾಗಿ, ರಸ್ತೆಗಳ ಅಭಿವೃದ್ಧಿಗೆ 64 ಕೋಟಿ, ಬನಶಂಕರಿ ಹೊಂಡಕ್ಕೆ ಶಾಶ್ವತ ನೀರು ತುಂಬಿಸಲು 61 ಲಕ್ಷ, ಶಾಲಾ ಕೊಠಡಿಗಳ ನಿರ್ವಹಣೆಗೆ 3 ಕೋಟಿ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 2 ಕೋಟಿ ಸೇರಿದಂತೆ ಆರು ತಿಂಗಳಲ್ಲಿ ಒಂದಷ್ಟು ಅನುದಾನ ಬಾದಾಮಿಗೆ ಬಂದಿದೆ. ಇದು ಸದ್ಬಳಕೆಯಾಗಬೇಕು. ಇಡೀ ಬಾದಾಮಿ ಅಷ್ಟೇ ಅಲ್ಲದೇ, ಸಿದ್ದರಾಮಯ್ಯ ಅವರಿಗೆ ರಾಜಕೀಯ ಪುನರ್‌ಜನ್ಮ ನೀಡಿದ ಬಾಗಲಕೋಟೆ ಜಿಲ್ಲೆಯೂ ಸಮಗ್ರ ಅಭಿವೃದ್ಧಿಯಾಗಬೇಕು, ನೀರಾವರಿ ಯೋಜನೆಗಳು ಪೂರ್ಣಗೊಳ್ಳಬೇಕು, ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲೇ ಹಾದು ಹೋಗಿರುವ ಎಂಎಲ್‌ಬಿಸಿ, ಜಿಎಲ್‌ಬಿಸಿ ಕಾಲುವೆಗಳಿಗೆ ನಿರಂತರ ನೀರು ಹರಿಬೇಕು ಎಂಬ ಆಶಯ ಜನರಲ್ಲಿದೆ. ಇದನ್ನು ಈಡೇರಿಸುವ ಜವಾಬ್ದಾರಿ-ಕರ್ತವ್ಯ ಸಿದ್ದರಾಮಯ್ಯರ ಮೇಲಿದೆ.

ಆರು ತಿಂಗಳ ಬಳಿಕ ಸಭೆ: ವಿಧಾನಸಭೆ ಸಾರ್ವತ್ರಿಕ ಚುನಾವಣೆ ಬಳಿಕ ಬಾದಾಮಿ ನಗರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಮಹತ್ವದ ಸಭೆ ನಿಗದಿಯಾಗಿತ್ತು. ಆದರೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಅದು ರದ್ದಾಗಿತ್ತು. ಈ ಮಹತ್ವದ ಸಭೆ ಜ. 4 ಮತ್ತು 5ರಂದು ನಿಗದಿಯಾಗಿವೆ. ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ, ಆಹಾರ ಮತ್ತು ನಾಗರಿಕ ಸರಬರಾಜು, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಜಮೀರ್‌ ಅಹ್ಮದ, ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ ಅವರನ್ನು ಬಾದಾಮಿಗೆ ಕರೆಸಿಕೊಂಡು, ಕ್ಷೇತ್ರದಲ್ಲಿ ಅವರವರ ಇಲಾಖೆಗಳಿಂದ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಭೆ ನಡೆಸುತ್ತಿದ್ದಾರೆ. ಈ ಸಚಿವರ ಜತೆಗೆ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳೂ ಭಾಗವಹಿಸುತ್ತಿದ್ದು, ಸಮಗ್ರ ಕ್ರಿಯಾ ಯೋಜನೆಗೆ ತಕ್ಷಣ ಅನುಮೋದನೆ ದೊರೆಯಲಿ ಎಂಬ ಒತ್ತಾಯ ಕ್ಷೇತ್ರದ ಜನರದ್ದು

Advertisement

ನೀರಾವರಿಗೂ ಆದ್ಯತೆ ಕೊಡಲಿ ಬಾದಾಮಿಯ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಯಾ ಇಲಾಖೆಯ ಸಚಿವರು, ಹಿರಿಯ ಅಧಿಕಾರಿಗಳನ್ನು ಬಾದಾಮಿಗೆ ಕರೆಸಿ, ವಿಶೇಷ ಸಭೆ ನಡೆಸುತ್ತಿರುವುದು ಉತ್ತಮ ಬೆಳವಣಿಗೆ. ಆದರೆ, ಜಲ ಸಂಪನ್ಮೂಲ ಸಚಿವರನ್ನೂ ಕರೆಸಿ, ಘಟಪ್ರಭಾ ಎಡದಂಡೆ, ಮಲಪ್ರಭಾ ಮಲದಂಡೆ ಯೋಜನೆಯ ಕಾಲುವೆಗಳಿಗೂ ನೀರು ಹರಿಸಲು ಕ್ರಮ ಕೈಗೊಳ್ಳಬೇಕು.
 ಗಿರೀಶ ಪಾಟೀಲ, ಕಗಲಗೊಂಬ ಗ್ರಾಮದ ಮುಖಂಡ

„ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next