Advertisement

ಶರಾವತಿಯಲ್ಲಿ ನೀರಾವರಿ ಯೋಜನೆ ಸಲ್ಲದು

01:43 AM Jul 04, 2019 | Team Udayavani |

ಬೆಂಗಳೂರು: ‘ಶರಾವತಿ ಸೇರಿದಂತೆ ಪಶ್ಚಿಮಘಟ್ಟಗಳಲ್ಲಿ ಇನ್ನಾವುದೇ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಸೂಕ್ತವಲ್ಲ’ ಎಂದು ಪಶ್ಚಿಮಘಟ್ಟಗಳ ಸಂರಕ್ಷಣೆ ಕಾರ್ಯಪಡೆಯು ಸರ್ಕಾರಕ್ಕೆ ಶಿಫಾರಸು ಮಾಡಿದೆ.

Advertisement

ಶರಾವತಿ ಮತ್ತು ಅಘನಾಶಿನಿಯಿಂದ ಬೆಂಗಳೂರಿಗೆ ನೀರು ತರಬೇಕು ಎಂಬ ಚರ್ಚೆ ನಡೆಯುವ ಹೊತ್ತಿಗೇ ಪಶ್ಚಿಮ ಘಟ್ಟಗಳ ಕಾರ್ಯಪಡೆ ಸರ್ಕಾರಕ್ಕೆ ಇಂಥದ್ದೊಂದು ಶಿಫಾರಸು ನೀಡಿದೆ.

‘ಈಗಾಗಲೇ ಅನೇಕ ಯೋಜನೆಗಳನ್ನು ಪಶ್ಚಿಮಘಟ್ಟ ಅರಣ್ಯ ಪ್ರದೇಶಗಳಲ್ಲಿ ಕೈಗೆತ್ತಿ ಕೊಳ್ಳಲಾಗಿದೆ. ಈ ಮಧ್ಯೆ ಎತ್ತಿನಹೊಳೆ ಯೋಜನೆ ಬೇರೆ ಬರುತ್ತಿದೆ. ಮುಂದೆಯೂ ಇಂತಹ ಯೋಜನೆಗಳನ್ನು ಕೈಗೊಂಡರೆ, ಅದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಇನ್ಮುಂದೆ ಶರಾವತಿಯೂ ಸೇರಿದಂತೆ ಯಾವುದೇ ಯೋಜನೆಗಳನ್ನು ಈ ಭಾಗದಲ್ಲಿ ಕೈಗೆತ್ತಿಕೊಳ್ಳ ದಿರುವುದು ಸೂಕ್ತ’ ಎಂದು ಕಾರ್ಯಪಡೆಯು ಸಲ್ಲಿಸಿರುವ ಅಂತಿಮ ವರದಿಯಲ್ಲಿ ತಿಳಿಸಿದೆ.

ಸುಮಾರು ಎರಡು ವರ್ಷಗಳ ಕಾಲ ಅಧ್ಯಯನ ನಡೆಸಿ ಸಿದ್ಧಪಡಿಸಿದ ‘ಪಶ್ಚಿಮಘಟ್ಟಗಳ ಸಂರಕ್ಷಣೆ ಕಾರ್ಯಪಡೆಯ ಅಧ್ಯಯನ ಮತ್ತು ಶಿಫಾರಸುಗಳ ಅಂತಿಮ ವರದಿ’ಯಲ್ಲಿ ಇದನ್ನು ಉಲ್ಲೇಖೀಸಿದೆ. ನಗರದ ಮಲ್ಲೇಶ್ವರದಲ್ಲಿರುವ ಅರಣ್ಯ ಭವನದಲ್ಲಿ ಗುರುವಾರ ಈ ವರದಿಯನ್ನು ಬಿಡುಗಡೆ ಮಾಡಿದ ಕಾರ್ಯಪಡೆ ಅಧ್ಯಕ್ಷ ಡಾ.ಎಸ್‌. ಚಂದ್ರಶೇಖರ್‌, ನಂತರ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಹಸ್ತಾಂತರಿಸಿದರು.

ಪಶ್ಚಿಮಘಟ್ಟದ ಸಾವಿರಾರು ಎಕರೆ ಪ್ರದೇಶಗಳಲ್ಲಿ ಈಗಾಗಲೇ ಅರಣ್ಯ ಜಲವಿದ್ಯುತ್‌ ಸ್ಥಾವರ, ರೈಲು ಹಳಿಗಳು, ವಿದ್ಯುತ್‌ ಮಾರ್ಗಗಳು ಮತ್ತಿತರ ಯೋಜನೆಗಳು ಸ್ಥಾಪನೆಗೊಂಡಿವೆ. ಇದೇ ರೀತಿ ಮುಂದುವರಿದರೆ ಪರಿಸರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿರುವ ಕಾರ್ಯಪಡೆ, ಈಗ ರಾಜ್ಯದಲ್ಲಿ ಸ್ಥಾಪನೆಯಾಗಿರುವ ಸ್ಥಾವರಗಳ ಕುರಿತು ಪುನರ್‌ವಿಮರ್ಶೆ ಮಾಡುವ ಅಗತ್ಯವಿದೆ ಎಂದೂ ಹೇಳಿದೆ.

Advertisement

‘ಆಗಿದ್ದಾಯ್ತು; ಮುಂದೆ ಆಗೋದು ಬೇಡ’: ಎತ್ತಿನಹೊಳೆ ಬಗ್ಗೆ ಕಾರ್ಯಪಡೆ ನಿಲುವೇನು ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ‘ಉದ್ದೇಶಿತ ಯೋಜನೆ ಈಗಾಗಲೇ ಅನುಷ್ಠಾನಗೊಳ್ಳುತ್ತಿದೆ. ಆದ್ದರಿಂದ ಆಗಿರುವುದನ್ನು ನಿಲ್ಲಿಸಿ ಎಂದು ಹೇಳಲು ಆಗುವುದಿಲ್ಲ. ಸಾಧ್ಯವಾದಷ್ಟು ಅರಣ್ಯ ಉಳಿಸಬೇಕು ಎಂದು ಹೇಳಿದ್ದೇವೆ. ಇನ್ನು ಈ ಯೋಜನೆ ಬಗೆಗಿನ ನಿಲುವನ್ನು ಸರ್ಕಾರಕ್ಕೆ ಬಿಡುತ್ತೇವೆ’ ಎಂದಷ್ಟೇ ಹೇಳಿದರು.

ಪಶ್ಚಿಮಘಟ್ಟಗಳ ವ್ಯಾಪ್ತಿಯಲ್ಲಿ 22 ಮುಖ್ಯ ನದಿಗಳು ಮತ್ತು 180 ಉಪನದಿಗಳು ಹುಟ್ಟುತ್ತವೆ. ಆ ಎಲ್ಲ ನದಿ ಮೂಲಗಳನ್ನು ಸಂರಕ್ಷಿಸಿ, ಅವುಗಳು ಸದಾ ಜೀವನದಿಗಳಾಗಿ ಇರುವಂತೆ ಕಾಪಾಡುವುದು ಆದ್ಯಕರ್ತವ್ಯ. ಆದರೆ, ನದಿ ದಂಡೆಗಳಲ್ಲಿ ಇರುವ ದೇವಸ್ಥಾನಗಳಿಗೆ ಭೇಟಿ ನೀಡುವ ಪ್ರವಾಸಿಗಳು ಬಹಿರ್ದೆಸೆಗೆ ಹೋಗುತ್ತಿರುವುದು ಹೆಚ್ಚಾಗಿದೆ. ಇದನ್ನು ತಪ್ಪಿಸಲು ನದಿಗಳ ಸಮೀಪ ಹಾಗೂ ಶಾಲೆಗಳು, ಆರೋಗ್ಯ ಕೇಂದ್ರಗಳ ಸಮೀಪ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿ, ಒಳಚರಂಡಿ ವ್ಯವಸ್ಥೆ ಕಲ್ಪಿಸುವ ತುರ್ತು ಅಗತ್ಯವಿದೆ.

ಅಲ್ಲದೆ, ಪಶ್ಚಿಮಘಟ್ಟ ವ್ಯಾಪ್ತಿಯ ಗ್ರಾಮ, ಪಟ್ಟಗಳಲ್ಲಿ ಶೌಚಾಲಯಗಳ ಕೊರತೆ ಇರುವುದರಿಂದ ಬಹಿರ್ದೆಸೆ ಪದ್ಧತಿ ಈಗಲೂ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಮನೆಗಳಿಗೂ ಶೌಚಾಲಯ ನಿರ್ಮಾಣದ ಜತೆಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದೂ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next