ಬಾಗಲಕೋಟೆ: ಮರಳು ಸಾಗಣೆದಾರರನ್ನು ಹಿಡಿಯಲು ಐಪಿಎಸ್ ಅಧಿಕಾರಿಯೊಬ್ಬರು ನಾಲ್ಕು ಕಿಲೋಮೀಟರ್ ಓಡಿದ ಘಟನೆ ಭಾನುವಾರ ನಡೆದಿದೆ.
ಹುನಗುಂದ ತಾಲೂಕಿನಲ್ಲಿ ಮರಳು ಅಕ್ರಮ ವ್ಯವಹಾರ ಜೋರಾಗಿ ನಡೆಯುತ್ತಿದೆ ಎಂಬ ಆರೋಪ ಹಲವು ವರ್ಷಗಳಿಂದಲೂ ಕೇಳಿ ಬರುತ್ತಿದೆ. ಇಂತಹ ಮರಳು ಅಕ್ರಮದ ಸಾಕ್ಷಾತ್ ದರ್ಶನ ಸ್ವತಃ ಬಾಗಲಕೋಟೆ ಎಎಸ್ಪಿ ಆಗಿರುವ ಐಪಿಎಸ್ ಅಧಿಕಾರಿ ಬಿ.ಎಂ. ಲಕ್ಷ್ಮಿಪ್ರಸಾದ್ ಅವರಿಗೂ ಆಯಿತು.
ಕೂಡಲಸಂಗಮಕ್ಕೆ ಭಾನುವಾರ ಆಗಮಿಸಿದ್ದ ತ್ರಿಪುರಾ ಸಿಎಂ ಮಾಣಿಕ್ ಸರ್ಕಾರ್ ಅವರ ಕಾರ್ಯಕ್ರಮದ ಬಂದೋಬಸ್ತ್ಗಾಗಿ ತೆರಳಿದ್ದ ಐಪಿಎಸ್ ಅಧಿಕಾರಿ ಲಕ್ಷ್ಮಿಪ್ರಸಾದ ಅವರು, ರಾತ್ರಿ ಬಾಗಲಕೋಟೆಗೆ ಮರಳುತ್ತಿದ್ದರು. ಈ ವೇಳೆ ಗಂಜಿಹಾಳ ಕ್ರಾಸ್ ಬಳಿ ಇರುವ ಹಳ್ಳದಲ್ಲಿ 2 ಟ್ರಾÂಕ್ಟರ್ನಲ್ಲಿ ಮರಳನ್ನು 3ರಿಂದ 5 ವ್ಯಕ್ತಿಗಳು ತುಂಬುತ್ತಿದ್ದರು. ಲಕ್ಷ್ಮಿಪ್ರಸಾದ್ ದಾಳಿ ಮಾಡಿದಾಗ ಅವರೆಲ್ಲ ಕತ್ತಲಿನಲ್ಲಿ ಓಡಿದರು. ಮರಳು ಕಳ್ಳರ ಹಿಡಿಯಲು ಸ್ವತಃ ಎಎಸ್ಪಿ ಲಕ್ಷ್ಮಿಪ್ರಸಾದ್ ಅವರೂ ನಾಲ್ಕು ಕಿಮೀವರೆಗೆ ಓಡಿದರು. ಆದರೆ, ಕತ್ತಲೆಯಾಗಿದ್ದರಿಂದ ಆರೋಪಿಗಳು ಸಿಕ್ಕಿಲ್ಲ. ಬಳಿಕ ಗಂಜಿಹಾಳ ಹಳ್ಳದಲ್ಲಿ ಮರಳು ತುಂಬಿದ್ದ ಎರಡು ಟ್ರಾÂಕ್ಟರ್ ವಶಕ್ಕೆ ಪಡೆದು, ಮಾಲೀಕ ಸಿದ್ದಪ್ಪ ಎಂಬುವರನ್ನು ವಿಚಾರಣೆ ನಡೆಸಿದರು. ಮರಳು ತುಂಬಿದ್ದವರು ಯಾರು, ಓಡಿ ಹೋದವರ ಹೆಸರು ಏನು ಎಂಬ ಮಾಹಿತಿ ಪಡೆದು, ಅವರನ್ನು ಹಿಡಿಯಲು ಹುನಗುಂದ ಪೊಲೀಸರಿಗೆ ಸೂಚನೆ ನೀಡಿದರು.
ಗಂಜಿಹಾಳ ಹಳ್ಳದಲ್ಲಿ ಎರಡು ಟ್ರಾÂಕ್ಟರ್ಗಳಲ್ಲಿ 3ರಿಂದ 5 ಜನರು ಮರಳು ತುಂಬುತ್ತಿದ್ದರು. ನನ್ನ ಕಂಡ ತಕ್ಷಣ ಅವರೆಲ್ಲ ಓಡಿ ಹೋದರು. ನಾನೂ ಕೆಲ ದೂರದವರೆಗೆ ಓಡಿ ಹೋಗಿದ್ದೆ. ಆದರೆ, ಕತ್ತಲೆಯಾಗಿದ್ದರಿಂದ ಅವರೆಲ್ಲ ಕಾಣಿಸಲಿಲ್ಲ. ಓರ್ವ ಟ್ರಾÂಕ್ಟರ್ ಮಾಲೀಕನನ್ನು ವಶಕ್ಕೆ ಪಡೆದಿದ್ದು, ಓಡಿ ಹೋದವರನ್ನು ನಾಳೆಯೊಳಗೆ ಬಂಧಿಸಲಾಗುವುದು.
– ಲಕ್ಷ್ಮಿಪ್ರಸಾದ, ಎಎಸ್ಪಿ, ಬಾಗಲಕೋಟೆ