Advertisement

IPS Officer letter: ತಪ್ಪು ಮಾಡಿ ಬೇರೆಯವರ ಮೇಲೆ ಆರೋಪಿಸುವ ಎಚ್‌ಡಿಕೆ: ಸಿಎಂ ಸಿದ್ದರಾಮಯ್ಯ

12:43 AM Sep 30, 2024 | Team Udayavani |

ಮೈಸೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಪ್ಪು ಮಾಡಿರುವ ಕಾರಣ ಬೇರೆಯವರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಹಂದಿಗಳೊಂದಿಗೆ ಎಂದಿಗೂ ಗುದ್ದಾಡಬೇಡಿ. ಗುದ್ದಾಡಿದರೆ ಹೊಲಸು ನಿಮಗೂ ಮೆತ್ತಿಕೊಳ್ಳತ್ತದೆ, ಅದನ್ನು ಹಂದಿಗಳು ಸಂಭ್ರಮಿಸುತ್ತವೆ’ ಎಂಬ ಜಾರ್ಜ್‌ ಬರ್ನಾರ್ಡ್‌ ಶಾ ಅವರ ಜನಪ್ರಿಯ ನುಡಿಗಟ್ಟನ್ನು ಉಲ್ಲೇಖೀಸಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಗಳಿಗೆ ಲೋಕಾಯುಕ್ತ ಎಸ್‌ಐಟಿ ಮುಖ್ಯಸ್ಥ ಎಡಿಜಿಪಿ ಎಂ. ಚಂದ್ರಶೇಖರ್‌ ರಾವ್‌ ಪತ್ರದ ಮೂಲಕ ನೀಡಿರುವ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದರು.

ಎಡಿಜಿಪಿ ಎಂ. ಚಂದ್ರಶೇಖರ್‌ ರಾವ್‌ ಅವರು ಕುಮಾರಸ್ವಾಮಿಯನ್ನು ಹಂದಿ ಎಂದು ಕರೆದಿದ್ದಾರಾ? ಇಲ್ಲ ತಾನೇ. ಅವರು ಇಂಗ್ಲಿಷ್‌ನ ಜಾರ್ಜ್‌ ಬರ್ನಾರ್ಡ್‌ ಶಾ ಅವರ ವ್ಯಾಕ್ಯವನ್ನು ಉಲ್ಲೇಖಿಸಿದ್ದಾರೆ ಅಷ್ಟೇ. ಕುಮಾರಸ್ವಾಮಿ ಎಡಿಜಿಪಿ ಮೇಲೆ ಕೆಲವೊಂದಿಷ್ಟು ಆರೋಪ ಮಾಡಿದ್ದರು. ಅದಕ್ಕೆ ಕೆಲವು ಉತ್ತರಗಳನ್ನು ಕೊಟ್ಟಿದ್ದಾರೆ. ಹಂದಿ ಎನ್ನುವ ಪದವನ್ನು ಕುಮಾರಸ್ವಾಮಿ ಅವರಿಗೆ ಬಳಸಿದ್ದಾರೆ ಎಂದು ಹೇಗೆ ಹೇಳುತ್ತೀರಾ. ನಾನು ಈ ವಿಚಾರದ ಬಗ್ಗೆ ಸುದೀರ್ಘ‌ ವಿವರಣೆ ನೀಡುವುದಿಲ್ಲ. ಅದರಲ್ಲೂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಹೇಳಿದ್ದೇನೆ ಎಂದರು.

ನನಗೆ ಸ್ನೇಹಮಯಿ ಕೃಷ್ಣ ಯಾರು ಎಂಬುದೇ ಗೊತ್ತಿಲ್ಲ. ನಾನು ಇವತ್ತಿನವರೆಗೂ ಅವರನ್ನು ನೋಡಿಲ್ಲ. ಅವರ ಮೇಲೆ ಏನೇನು ಕೇಸ್‌ಗಳಿವೆ ಅದು ನನಗೆ ಗೊತ್ತಿಲ್ಲ. ಅವರು ಇಡಿಗೆ ದೂರು ನೀಡಿರಬಹುದು. ದೂರು ನೀಡಿದ ತತ್‌ಕ್ಷಣ ತನಿಖೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ದೂರು ಕೊಟ್ಟಿದ್ದಾರೆ ಕೊಡಲಿ ಬಿಡಿ. ಈಗ ಮುಡಾ ವಿಚಾರ ನ್ಯಾಯಾಲಯದಲ್ಲಿದೆ, ಇದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು. ದಸರಾ ಉತ್ಸವಗಳ ಸಿದ್ಧತೆಗಳಿಗೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಸಿದ್ಧತೆಗಳನ್ನು ವೀಕ್ಷಿಸಲು ಅ. 2ರಂದು ಮೈಸೂರಿಗೆ ಆಗಮಿಸಲಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಜಾತಿ ಗಣತಿ ವರದಿ ಜಾರಿ ಖಚಿತ: ಸಿಎಂ
ಮೈಸೂರು: ಸೌಲಭ್ಯಗಳಿಂದ ವಂಚಿತರಾಗಿರುವ ಜನರನ್ನು ಗುರುತಿಸುವ ಉದ್ದೇಶದಿಂದಲೇ ನಮ್ಮ ಸರಕಾರ ಸಾಮಾಜಿಕ ಗಣತಿ (ಜಾತಿಗಣತಿ)ಯನ್ನು ನಡೆ ಸಿದ್ದು, ಮುಂದಿನ ದಿನಗಳಲ್ಲಿ ಈ ವರದಿಯನ್ನು ಸಚಿವ ಸಂಪುಟದ ಮುಂದಿರಿಸಿ, ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಮೈಸೂರು ಜಿಲ್ಲಾ ಹಿಂದುಳಿದ ವರ್ಗಗಳ ವಸತಿ ನಿಲಯಗಳ ಹಳೆ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕ ಗಣತಿ ವರದಿಯನ್ನು ಸರಕಾರ ಸ್ವೀಕರಿಸಿದೆ. ಆದರೆ ಹಲವು ಕಾರಣದಿಂದ ಆ ವರದಿ ಇನ್ನೂ ಜಾರಿಯಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ವರದಿಯನ್ನು ಸಂಪುಟದ ಮುಂದಿರಿಸಿ ಜಾರಿಗೆ ಕ್ರಮ ಕೈಗೊಳ್ಳಲಾಗುವುದು. ಜಾತಿ ಜನಗಣತಿ ಕಾಂಗ್ರೆಸ್‌ ಪಕ್ಷದ ಸಿದ್ಧಾಂತವೂ ಆಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next