ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಬೌಲರ್ ಸ್ನಾಯು ಸೆಳೆತಕ್ಕೆ ಒಳಗಾಗಿ ಟೂರ್ನಿಯ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಆ ಮೂಲಕ ಪ್ಲೇ ಆಫ್ ರೇಸ್ ನಲ್ಲಿರುವ ಗಾಯಕ್ವಾಡ್ ಬಳಗಕ್ಕೆ ಆಘಾತವಾಗಿದೆ.
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸಿಎಸ್ ಕೆ ತಂಡದ ಡೆತ್ ಬೌಲರ್ ಮತೀಶ ಪತಿರಾಣ ಅವರಿಗೆ ಸ್ನಾಯು ಸೆಳೆತ ಉಂಟಾಗಿತ್ತು. ಇದೇ ಕಾರಣದಿಂದ ಭಾನುವಾರದ (ಮೇ. ರಂದು) ಪಂಜಾಬ್ ವಿರುದ್ಧ ಪಂದ್ಯದಲ್ಲಿ ಪತಿರಾಣ ಸ್ಥಾನ ಪಡೆದಿಲ್ಲ.
“ಮತೀಶ ಪತಿರಾಣ ಅವರು ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ. ಅವರು ಚೇತರಿಸಿಕೊಳ್ಳಲು ಶ್ರೀಲಂಕಾಕ್ಕೆ ಮರಳುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪತಿರಾಣ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತದೆ” ಎಂದು ಸಿಎಸ್ ಕೆ ಹೇಳಿದೆ.
ಡೆತ್ ಬೌಲರ್ ಆಗಿ ತಂಡಕ್ಕೆ ಆಸರೆಯಾಗಿದ್ದ ಪತಿರಾಣ, ಈ ಸೀಸನ್ ನಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು. ಆಡಿದ 6 ಪಂದ್ಯದಲ್ಲಿ 13 ವಿಕೆಟ್ ಪಡೆದಿದ್ದರು.
ಪತಿರಾಣ ಮುಂದಿನ ದಿನಗಳಲ್ಲಿ ತಂಡಕ್ಕೆ ಮರಳುತ್ತಾರಾ ಇಲ್ವೋ ಎನ್ನುವುದರ ಬಗ್ಗೆ ಸಿಎಸ್ ಕೆ ಇದುವರೆಗೆ ಮಾಹಿತಿ ನೀಡಿಲ್ಲ.
ಇತ್ತ ಬಾಂಗ್ಲಾದ ವೇಗಿ ಮುಸ್ತಾಫಿಜುರ್ ರೆಹಮಾನ್ ಕೂಡ ತವರಿಗೆ ಮರಳಿದ್ದು, ದೀಪಕ್ ಚಹಾರ್ ಕೂಡ ಸ್ನಾಯು ಸೆಳೆತದಿಂದ ತಂಡದಿಂದ ಹೊರಗೆ ಉಳಿದಿದ್ದಾರೆ. ಇದು ಪ್ಲೇ ಆಫ್ ನಲ್ಲಿರುವ ಚೆನ್ನೈಗೆ ಹೊಡೆತವಾಗಿ ಪರಿಣಾಮಿಸಿದೆ.