Advertisement

ಐಪಿಎಲ್‌ಗೆ ಬಂತು ಸ್ಟಾರ್‌ ಕಳೆ : ಕೊಹ್ಲಿ, ಜಡೇಜ ಇಂದು ಕಣಕ್ಕೆ

11:34 PM Apr 13, 2017 | Team Udayavani |

ಬೆಂಗಳೂರು/ರಾಜ್‌ಕೋಟ್‌: ಪ್ರಮುಖ ಆಟಗಾರರಿಲ್ಲದೆ ಸೊರಗಿದ್ದ 10ನೇ ಐಪಿಎಲ್‌ಗೆ ಶುಕ್ರವಾರದಿಂದ ಸ್ಟಾರ್‌ ಕಳೆ ಲಭಿಸಲಿದೆ. ಕ್ರಿಕೆಟ್‌ ಹೀರೋಗಳಾದ ವಿರಾಟ್‌ ಕೊಹ್ಲಿ ಮತ್ತು ರವೀಂದ್ರ ಜಡೇಜ ಈ ಐಪಿಎಲ್‌ನಲ್ಲಿ ಮೊದಲ ಸಲ ಕಣಕ್ಕಿಳಿಯಲಿದ್ದಾರೆಂಬ ಸಿಹಿ ಸುದ್ದಿ ಬಿತ್ತರಗೊಂಡಿದೆ. ವಿರಾಟ್‌ ಕೊಹ್ಲಿ ಶುಕ್ರವಾರ ಬೆಂಗಳೂರಿನಲ್ಲಿ ನಡೆಯುವ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿದರೆ, ಆತ್ತ ಪುಣೆ ಎದು ರಿನ ರಾಜ್‌ಕೋಟ್‌ ಪಂದ್ಯದಲ್ಲಿ ರವೀಂದ್ರ ಜಡೇಜ ಗುಜರಾತ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ.

Advertisement

ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ ಸರಣಿ ವೇಳೆ ಭುಜದ ಗಾಯಕ್ಕೆ ಸಿಲುಕಿದ್ದ ವಿರಾಟ್‌ ಕೊಹ್ಲಿ ವಿಶ್ರಾಂತಿಯಲ್ಲಿದ್ದರು. ಇವರ ಗೈರಲ್ಲಿ ಶೇನ್‌ ವಾಟ್ಸನ್‌ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದರು. 3 ಪಂದ್ಯಗಳನ್ನಾಡಿರುವ ಬೆಂಗಳೂರು ತಂಡ ಕೇವಲ ಒಂದರಲ್ಲಷ್ಟೇ ಜಯ ಕಂಡಿತ್ತು. ವಿರಾಟ್‌ ಕೊಹ್ಲಿ ಚೇತರಿಸಿಕೊಂಡ ಸುದ್ದಿಯನ್ನು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಿದೆ. ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಬಿಸಿಸಿಐ ವೈದ್ಯರು ಬುಧವಾರ ಖಚಿತಪಡಿಸಿದ್ದಾರೆ. ಅವರು ಎ. 14ರ ಮುಂಬೈ ಇಂಡಿಯನ್ಸ್‌ ಎದುರಿನ ಪಂದ್ಯಕ್ಕೆ ಲಭ್ಯರಿರುತ್ತಾರೆ ಎಂದೂ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ವಿಶ್ರಾಂತಿ ಮುಗಿಸಿದ ಜಡೇಜ
2016-17ನೇ ಸರಣಿಯ ಎಲ್ಲ ಟೆಸ್ಟ್‌ ಪಂದ್ಯಗಳನ್ನಾಡಿ, ಆಸ್ಟ್ರೇಲಿಯ ವಿರುದ್ದ ಸರಣಿಸ್ರೇಷ್ಠ ಗೌರವಕ್ಕೂ ಪಾತ್ರರಾಗಿದ್ದ ರವೀಂದ್ರ ಜಡೇಜ ಅವರಿಗೆ 2 ವಾರಗಳ ವಿಶ್ರಾಂತಿ ನೀಡಲಾಗಿತ್ತು. ಹೀಗಾಗಿ ಅವರು 10ನೇ ಐಪಿಎಲ್‌ನಲ್ಲಿ ಈವರೆಗೆ ಕಾಣಿಸಿಕೊಂಡಿರಲಿಲ್ಲ. ಈ ಅವಧಿಯಲ್ಲಿ 2 ಪಂದ್ಯಗಳನ್ನಾಡಿದ ಸುರೇಶ್‌ ರೈನಾ ನೇತೃತ್ವದ ಗುಜರಾತ್‌ ಲಯನ್ಸ್‌ ಎರಡ ರಲ್ಲೂ ಹೀನಾಯವಾಗಿ ಸೋತಿತ್ತು. ಕೆಕೆಆರ್‌ ಹಾಗೂ ಹೈದರಾಬಾದ್‌ ವಿರುದ್ಧದ ಈ 2 ಪಂದ್ಯಗಳಲ್ಲಿ ಗುಜರಾತ್‌ಗೆ ಕೀಳಲು ಸಾಧ್ಯವಾದದ್ದು ಒಂದೇ ವಿಕೆಟ್‌ ಎಂಬುದು ರೈನಾ ಪಡೆಯ ದುರಂತವನ್ನು ಸಾರುತ್ತದೆ. ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜ ಆಗಮನದಿಂದ ತಂಡದ ಅದೃಷ್ಟ ಬದಲಾಗಬಹುದೆಂಬ ನಂಬಿಕೆ ಗುಜರಾತ್‌ ಲಯನ್ಸ್‌ ಅಭಿಮಾನಿಗಳದ್ದು.

Advertisement

Udayavani is now on Telegram. Click here to join our channel and stay updated with the latest news.

Next