Advertisement

ಎಲ್ಲ ಶಾಲೆಗಳ ಬಿಸಿಯೂಟ ಸಾಮಗ್ರಿ ತನಿಖೆ

10:35 PM Jul 09, 2019 | Team Udayavani |

ಪುತ್ತೂರು: ಪುತ್ತೂರು ತಾಲೂ ಕಿನ ಹಾರಾಡಿ ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳ ಬಿಸಿಯೂಟದ ಅಕ್ಕಿ ದುರುಪಯೋಗ ಪ್ರಕರಣದಲ್ಲಿ ಶಾಲಾ ಮುಖ್ಯ ಶಿಕ್ಷಕರ ಅಮಾನತಾಗಿದ್ದು, ಈ ಪ್ರಕರಣ ವನ್ನು ಗಂಭೀರವಾಗಿ ಪರಿಗಣಿಸಿ ತಾಲೂ ಕಿನ ಎಲ್ಲ ಶಾಲೆಗಳ ಬಿಸಿಯೂಟದ ಆಹಾರ ಪದಾರ್ಥಗಳ ತನಿಖೆ ನಡೆಸುವಂತೆ ಪುತ್ತೂರು ತಾಲೂಕು ಪಂಚಾಯತ್‌ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ಅವರು ಅಧಿಕಾರಿಗಳಿಗೆ ಆದೇಶಿಸಿದರು.

Advertisement

ಮಂಗಳವಾರ ತಾ.ಪಂ. ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ 238 ಸರಕಾರಿ ಶಾಲೆಗಳಿದ್ದು, ಅಲ್ಲಿ ಬಿಸಿಯೂಟ ಯೋಜನೆಯಲ್ಲಿ ಖರ್ಚಾಗುವ ಅಕ್ಕಿ ಎಷ್ಟು? ಉಳಿಕೆ ಅಕ್ಕಿ, ಇತರ ಆಹಾರ ಪದಾರ್ಥಗಳನ್ನು ಏನು ಮಾಡ ಲಾಗುತ್ತದೆ? ಎಂದು ತನಿಖೆ ನಡೆಸು ವಂತೆ ಅಧ್ಯಕ್ಷರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಅಕ್ಷರ ದಾಸೋಹ ಉಪ ನಿರ್ದೇಶಕರ ಕಚೇರಿ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನಲ್ಲಿ ಒಟ್ಟು ಐದು ಶಾಲೆಗಳ ಎಸ್‌ಡಿಎಂಸಿ ಅಧ್ಯಕ್ಷರು ದೂರವಾಣಿ ಮೂಲಕ ತನ್ನನ್ನು ಸಂಪರ್ಕಿಸಿ ಅಕ್ಕಿ ದುರುಪಯೋಗದ ಕುರಿತು ಮಾಹಿತಿ ನೀಡಿದ್ದಾರೆ. ಹೀಗಾಗಿ ಅದನ್ನು ಗಂಭೀರವಾಗಿ ಪರಿಗಣಿಸುವಂತೆ ಅಕ್ಷರ ದಾಸೋಹ ಉಪನಿರ್ದೇಶಕ ಸುರೇಶ್‌ ಕುಮಾರ್‌ ಅವರಿಗೆ ತಿಳಿಸಿದರು. ಪ್ರತಿ ಶಾಲೆಗೆ 15 ದಿನಗಳಿಗೊಮ್ಮೆ ತೆರಳಿ ಪರಿಶೀಲಿಸುವಂತೆ ಸಿಆರ್‌ಪಿ ಹಾಗೂ ಬಿಆರ್‌ಪಿಗಳಿಗೆ ತಿಳಿಸಲಾಗಿದೆ ಎಂದು ತಾ.ಪಂ. ಇಒ ಜಗದೀಶ್‌ ಎಸ್‌. ಸಭೆಗೆ ತಿಳಿಸಿದರು.

ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹರೀಶ್‌ ಬಿಜತ್ರೆ ಅವರು ಕೈಕಾರ ವಿದ್ಯುತ್‌ ಸಬ್‌ಸ್ಟೇಷನ್‌ ಅನುಷ್ಠಾನ ಯಾವ ಹಂತದಲ್ಲಿದೆ ಎಂದು ಪ್ರಶ್ನಿಸಿದಾಗ, ಅದಕ್ಕೆ ಪ್ರತ್ಯೇಕ ಜಾಗವನ್ನು ಹುಡುಕಲಾಗಿದ್ದು, ವಿವರಗಳು ತಹಶೀಲ್ದಾರ್‌ ಕಚೇರಿಯಲ್ಲಿವೆ ಎಂದು ಮೆಸ್ಕಾಂ ಎಂಜಿನಿಯರ್‌ ಸಭೆಗೆ ತಿಳಿಸಿದರು. ಈ ಕುರಿತು ತತ್‌ಕ್ಷಣ ಗಮನಹರಿಸಿ ಕ್ರಮ ಕೈಗೊಳ್ಳುವಂತೆ ಪುತ್ತೂರು ತಹಶೀಲ್ದಾರ್‌ ಅನಂತ ಶಂಕರ್‌ ಅವರಿಗೆ ತಿಳಿಸಲಾಯಿತು.

ಸರಕಾರಿ ಬಸ್ಸುಗಳ ವಿರುದ್ಧ ಕ್ರಮ
ಕೆಎಸ್‌ಆರ್‌ಟಿ ಬಸ್ಸುಗಳು ಖಾಲಿ ಇದ್ದರೂ ವಿದ್ಯಾರ್ಥಿಗಳು ನೇತಾಡಿಕೊಂಡು ಹೋಗುತ್ತಾರೆ. ಈ ಕುರಿತು ಏನು ಕ್ರಮ ಎಂದು ತಾ.ಪಂ. ಅಧ್ಯಕ್ಷರು ಕೆಎಸ್‌ಆರ್‌ಟಿಸಿ ಅಧಿಕಾರಿ, ಪೊಲೀಸ್‌ ಇಲಾಖೆ ಹಾಗೂ ಆರ್‌ಟಿಒ ಅಧಿಕಾರಿಗಳನ್ನು ಪ್ರಶ್ನಿಸಿದರು. ತಾವು ಸರಕಾರಿ ಬಸ್ಸುಗಳೆಂದು ಹಾಗೇ ಬಿಟ್ಟಿದ್ದೇವೆ. ಮುಂದೆ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರೆ, ನಾವು ನಿರ್ವಾಹಕರಿಗೆ ಸ್ಪಷ್ಟ ಸೂಚನೆ ನೀಡುತ್ತೇವೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿ ಭರವಸೆ ನೀಡಿದರು.

Advertisement

ಕುಂಬ್ರದಲ್ಲಿ ಸ್ಟೇಜ್‌ ಇಲ್ಲ
ಕುಂಬ್ರದಲ್ಲಿ ವೇಗದೂತ ಬಸ್ಸುಗಳನ್ನು ನಿಲುಗಡೆ ಮಾಡುವಂತೆ 2003ರಲ್ಲಿಯೇ ಆದೇಶವಾಗಿದ್ದರೂ, ಈಗಲೂ ಅಲ್ಲಿ ವೇಗದೂತ ಬಸ್ಸುಗಳು ನಿಲ್ಲುತ್ತಿಲ್ಲ ಯಾಕೆ ಎಂದು ಸ್ಥಾಯೀ ಸಮಿತಿ ಅಧ್ಯಕ್ಷರು ಕೆಎಸ್‌ಆರ್‌ಟಿಸಿ ಅಧಿಕಾರಿಯನ್ನು ಪ್ರಶ್ನಿಸಿದರು. ಪುತ್ತೂರು ಹಾಗೂ ಮಂಗಳೂರು ವಿಭಾಗದ ಬಸ್ಸುಗಳು ಅಲ್ಲಿ ನಿಲ್ಲುತ್ತವೆ. ಆದರೆ ಸ್ಟೇಜ್‌ ಇಲ್ಲ ಎನ್ನುವ ಕಾರಣಕ್ಕೆ ಮೈಸೂರು ವಿಭಾಗದ ಬಸ್ಸುಗಳು ನಿಲ್ಲುತ್ತಿಲ್ಲ. ಈ ವಿಚಾರವನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿ ಸಭೆಗೆ ತಿಳಿಸಿದರು.

ಕಕ್ಕೂರು ಕೊಲೆ: ಮಾಹಿತಿ ಇಲ್ಲ
2012ರ ಜೂನ್‌ ತಿಂಗಳಲ್ಲಿ ಬೆಟ್ಟಂಪಾಡಿಯ ಕಕ್ಕೂರಿನಲ್ಲಿ ಒಂದೇ ಮನೆಯ ನಾಲ್ವರ ಹತ್ಯೆ ನಡೆಸಿದ್ದು, ಮನೆಯ ಯಜಮಾನ ವೆಂಕಟರಮಣ ಭಟ್ಟರು ನಾಪತ್ತೆಯಾಗಿದ್ದರು. ಕೆಲ ಸಮಯದ ಬಳಿಕ ಅಲ್ಲಿ ಅಸ್ಥಿಪಂಜರ ಲಭ್ಯವಾಗಿದ್ದು, ಅದು ವೆಂಕಟರಮಣ ಭಟ್ಟರದು ಎಂದು ಹೇಳಲಾಗಿದ್ದರೂ, ತನಿಖೆಯಲ್ಲಿ ಅದು ಅವರದ್ದಲ್ಲ ಎಂದು ಸಾಬೀತಾಗಿತ್ತು. ಪ್ರಸ್ತುತ ಈ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎಂದು ತಾ.ಪಂ. ಅಧ್ಯಕ್ಷರು ಪ್ರಶ್ನಿಸಿದರು. ಈ ಕುರಿತು ತಮ್ಮಲ್ಲಿ ಸದ್ಯಕ್ಕೆ ಮಾಹಿತಿಯಿಲ್ಲ. ತಿಳಿದುಕೊಂಡು ಹೇಳುವುದಾಗಿ ಪೊಲೀಸ್‌ ಅಧಿಕಾರಿ ತಿಳಿಸಿದರು.

ನಿಡ್ಪಳ್ಳಿ ದೇವಸ್ಥಾನದ ವಠಾರದಲ್ಲಿ ಅಂಬೇಡ್ಕರ್‌ ಭವನಕ್ಕೆ ಮೀಸಲಿಟ್ಟ ಜಮೀನಿನಲ್ಲಿ ಅರಣ್ಯ ಇಲಾಖೆ ಗಿಡ ನೆಟ್ಟಿದೆ ಎನ್ನುವ ದೂರು ಬಂದಿದ್ದು, ಈ ಕುರಿತು ಪರಿಶೀಲಿಸುವಂತೆ ಅಧ್ಯಕ್ಷರು ಅರಣ್ಯ ಇಲಾಖೆ ಅಧಿಕಾರಿಗೆ ತಿಳಿಸಿದರು. ಉಪ್ಪಿನಂಗಡಿ ಹಾಸ್ಟೆಲ್ ಕಟ್ಟಡದ ಕುರಿತು ಮಾಹಿತಿ ಕೇಳಿದಾಗ, ಬೇರೆ ಕಟ್ಟಡವನ್ನು ನೋಡಲಾಗಿದ್ದು ಮುಂದೆ ಎಲ್ಲರ ಅನುಮತಿ ಪಡೆದು ಸ್ಥಳಾಂತರಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ಗಳಲ್ಲಿ ಪ.ಜಾತಿ ವಿದ್ಯಾರ್ಥಿಗಳ ಸೀಟು ಭರ್ತಿಯಾಗುತ್ತಿಲ್ಲ ಎಂದು ಅಧಿಕಾರಿ ಸಭೆಯ ಗಮನಕ್ಕೆ ತಂದರು.

ತಾಲೂಕಿನಲ್ಲಿ 23 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. ಕಡಬ ಆಸ್ಪತ್ರೆಗೆ ಮಂಗಳೂರಿನ ಖಾಸಗಿ ವೈದ್ಯ ಕಾಲೇಜುಗಳಿಂದ ವೈದ್ಯರು ಆಗಮಿಸಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next