Advertisement

ಅಂತಾರಾಜ್ಯ ಬೈಕ್‌ ಕಳ್ಳರ ಬಂಧನ

11:55 AM Dec 02, 2018 | |

ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ವೇಲೂರು ಜಿಲ್ಲೆಯ ನಾರಾಯಣನ್‌ (27) ಮತ್ತು ಸಿ.ಪ್ರಭಾಕರನ್‌ (31) ಬಂಧಿತರು. ಆರೋಪಿಗಳು ನಗರದಲ್ಲಿ ಕದ್ದ ಬೈಕ್‌ಗಳನ್ನು ತಮಿಳುನಾಡಿನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು.

Advertisement

ಇವರಿಂದ 15 ಲಕ್ಷ ರೂ. ಮೌಲ್ಯದ 25 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನದಿಂದ ಪರಪ್ಪನ ಅಗ್ರಹಾರ ಠಾಣೆಯ 7, ಹುಳಿಮಾವು ಠಾಣೆಯ 3, ಎಚ್‌ಎಸ್‌ಆರ್‌ ಲೇಔಟ್‌ ಠಾಣೆಯ 3, ಮೈಕೋ ಲೇಔಟ್‌ ಠಾಣೆ 2, ಎಲೆಕ್ಟ್ರಾನಿಕ್‌ ಸಿಟಿ ಠಾಣೆ 2, ಬೊಮ್ಮನಹಳ್ಳಿ ಠಾಣೆ 2, ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ಒಂದು ಸೇರಿ, ವಾಹನ ಕಳವಿಗೆ ಸಂಬಂಧಿಸಿದ  20 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.

ಬೇಡಿಕೆಗೆ ತಕ್ಕಂತೆ ಬೈಕ್‌ ಕಳವು: ತಮಿಳುನಾಡಿನ ಗ್ರಾಹಕರ ಬೇಡಿಕೆಗೆ ತಕ್ಕಂತೆ ಆರೋಪಿಗಳು ನಗರದಲ್ಲಿ ಬೈಕ್‌ ಕಳವು ಮಾಡುತ್ತಿದ್ದರು. ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳ ಹ್ಯಾಂಡಲ್‌ ಲಾಕ್‌ ಮುರಿದು ರಾತ್ರೋ ರಾತ್ರಿ ಕದ್ದೊಯ್ಯುತ್ತಿದ್ದರು. ಬಳಿಕ ಇದೇ ಬೈಕ್‌ಗಳಲ್ಲಿ ತಮಿಳುನಾಡಿಗೆ ಹೋಗುತ್ತಿದ್ದರು.

ಈ ಬೈಕ್‌ಗಳನ್ನು ನಿರ್ದಿಷ್ಟ ಗ್ರಾಹಕರಿಗೆ ಕೇವಲ 15ರಿಂದ 30 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು. ಬಂಧಿತರ ಪೈಕಿ ನಾರಾಯಣನ್‌ ವಿರುದ್ಧ ತಮಿಳುನಾಡಿನ ರಾಚಮಂಗಲ ಪೊಲೀಸ್‌ ಠಾಣೆ ಮತ್ತು ಪ್ರಭಾಕರನ್‌ ವಿರುದ್ಧ ಉತ್ತಂಗೇರೆ ಪೊಲೀಸ್‌ ಠಾಣೆಯಲ್ಲಿ ಕಳವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next