Advertisement

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಭಾರತದ ನಾರಿ ವಿಶ್ವಕ್ಕೆ ಮಾದರಿಯಾಗಬೇಕಿದೆ

10:30 AM Mar 08, 2021 | Team Udayavani |

ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾಃ

Advertisement

ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾಃ ಕ್ರಿಯಾಃ||

ಅರ್ಥ: ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ. ಸ್ತ್ರೀಯರನ್ನೆಲ್ಲಿ ಅವಮಾನಗೊಳಿಸಲಾಗುತ್ತದೋ ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥ ಎಂದು. ಈ ಮಾತು ಭಾರತೀಯ ಪರಂಪರೆಯಲ್ಲಿ ಹೆಣ್ಣೊಬ್ಬಳ ಸ್ಥಾನಮಾನವನ್ನು ಸೂಚಿಸುತ್ತದೆ. ಕೆಲವು ದಶಕಗಳಿಂದ ಸ್ತ್ರೀ ಸಮಾನತೆಯ ಬಗ್ಗೆ ಪಾಠ ಬೋಧಿಸುತ್ತಿರುವ ಪರಕೀಯ ಮನಸ್ಥಿತಿಗಳಿಗೆ ಅಂದಿನ ಭಾರತದ ನೈಜ ಉಚ್ಛ್ರಾಯ ಸ್ಥಿತಿಯನ್ನು ತೆರೆದಿಡುತ್ತದೆ. ಮನು ಎಂದರೆ ಹೆಣ್ಣಿನ ಶತ್ರು ಎಂದು ಬಿಂಬಿಸುವ ಇಂದಿನ ಸೋ-ಕಾಲ್ಡ್ ಮಹಿಳಾಪರ ಹೋರಾಟಗಾರ್ತಿಯರಿಗೆ ನಿಜಕ್ಕೂ ಆತನ ಚಿಂತನೆಗಳ ಪರಿವೆಯನ್ನು ತೆರೆದಿಡುತ್ತದೆ. ಇಂದಿಗೂ ಭಾರತ ಇದನ್ನು ಯಥಾವತ್ತಾಗಿ ಪಾಲಿಸುತ್ತಾ ಬಂದಿದೆ.

ಪ್ರಕೃತಿಯನ್ನು, ಭೂಮಿಯನ್ನು, ನದಿಗಳನ್ನು, ಪರ್ವತಗಳನ್ನು ಅಷ್ಟೇ ಅಲ್ಲ ಈ ಜಗತ್ತಿನ ಅತ್ಯಂತ ಶ್ರೇಷ್ಠ ಸಂಗತಿಗಳೆಲ್ಲವನ್ನೂ ಹೆಣ್ಣೆಂದು ಭಾವಿಸಿಯೇ ಗೌರವಿಸುವುದು ಭಾರತೀಯ ಪರಂಪರೆಯ ಶ್ರೇಷ್ಠತೆ.

ಸ್ತ್ರೀ ಸಮಾನತೆಯ ವಿಚಾರಕ್ಕೆ ಬಂದರೆ ಭಾರತ ಇಂದಲ್ಲ ಹಿಂದಿನಿಂದಲೂ ತನ್ನ ಸ್ಪಷ್ಟವಾದ ನಿಲುವನ್ನು ಹೊಂದಿ, ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸುವ ಮತ್ತು ಅವಕಾಶ ನೀಡುವ ಹಾಗೂ ಅವರ ಮಾತನ್ನೂ ಗೌರವಿಸುವ ಕೆಲಸ ಮಾಡುತ್ತಾ ಬಂದಿದೆ. ರಾಮಾಯಣ ಕಾಲದಲ್ಲಿ ಸೀತೆಯ ಆಸೆ ಪೂರೈಸಲೆಂದು ಪ್ರಭು ಶ್ರೀ ರಾಮಚಂದ್ರ ಮಾಯಾ ಜಿಂಕೆ ಬೆನ್ನತ್ತಿ ಹೋಗಿದ್ದ, ಮಹಾಭಾರತ ಕಾಲದಲ್ಲಿ ದ್ರೌಪದಿಯ ಆಜ್ಞೆಯ ಕಾರಣದಿಂದಾಗಿ ದುರ್ಯೋಧನನ ಎದೆ ಬಗೆದು ಭೀಮಸೇನ ರಕ್ತವನ್ನು ಆಕೆಯ ಕೇಶಕ್ಕೆ ನೇವರಿಸಿ ಪ್ರತಿಜ್ಞೆ ಪೂರ್ಣಗೊಳಿಸಿದ್ದ. ಅಷ್ಟೆ ಏಕೆ ಜೀಜಾಬಾಯಿಯ ಇಚ್ಛೆಯಿಂದಲೇ ಶಿವಾಜಿ ಹಿಂದವಿ ಸ್ವರಾಜ್ಯ ಸ್ಥಾಪಿಸಿದ್ದ. ರಜಪೂತ ರಾಜವಂಶದಲ್ಲಿ ಹೆಣ್ಣುಮಕ್ಕಳಿಗೆ ವಿಶೇಷ ಗೌರವ ಮತ್ತು ಸ್ವಾತಂತ್ರ್ಯ ಇದ್ದುದ್ದನ್ನು ನಾವು ಕಾಣುತ್ತೇವೆ. ಹೀಗಾಗಿ ಹೆಣ್ಣಿನ ಮಾತಿಗೆ ಹಾಗೂ ಭಾವನೆಗಳಿಗೆ ಭಾರತದಲ್ಲಿ ಅತ್ಯಂತ ಬೆಲೆ ಇತ್ತು ಎಂದು ನಿಸ್ಸಂಶಯವಾಗಿ ಹೇಳಬಹುದು.

Advertisement

ಆದರೆ ಮುಂದೆ ಸಾಲು-ಸಾಲು ಪರಕೀಯ ದಾಳಿಗಳ ಪ್ರಭಾವದಿಂದ ಭಾರತದ ಈ ಸಂಸ್ಕಾರಕ್ಕೆ ಚ್ಯುತಿ ಬಂದೊದಗಿತು. ಮುಸಲರ ದಾಳಿಯಿಂದ ಹೆಣ್ಣು ಹೊಸ್ತಿಲ ಹೊರಗೆ ಬರದಂತೆ ನಿರ್ಬಂಧ ಹೇರಲಾಯಿತು. ಎಲ್ಲವನ್ನೂ ಮೀರಿ ಪರಾಕ್ರಮ ತೋರಿದ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ಮೋಸಕ್ಕೆ ಬಲಿಯಾದಳು. ಝಾನ್ಸಿ ರಾಣಿ ಲಕ್ಷ್ಮೀಬಾಯಿ ವೀರಾವೇಶದಿಂದ ಹೋರಾಡಿ ಯುದ್ಧಭೂಮಿಯಲ್ಲಿ ಮರಣವನ್ನಪ್ಪಿದಳು. ರಾಣಿ ಅಬ್ಬಕ್ಕ ಪೋರ್ಚುಗೀಸರ ಜೊತೆಗೆ ಕಾದಾಡಿ ಕಾಲವಾದಳು. ಈ ಸ್ಥಿತಿ ನಮ್ಮ ಸ್ತ್ರೀಯರನ್ನು ಮುಖ್ಯವಾಹಿನಿಗಳಿಂದ ದೂರ ಉಳಿಯುವಂತೆ ಮಾಡಿದವು. ಆದರೆ ಬಹುತೇಕರು ಭಾರತವೇ ಸರಿ ಇರಲಿಲ್ಲ ಈ ದಾಳಿಕೋರರ ಕಾರಣದಿಂದಾಗಿ ಸರಿಯಾಗಿದೆ ಎಂದು ಬೊಬ್ಬೆ ಹೊಡೆಯುತ್ತಾರೆ.

ಅದು ಹಾಗಿರಲಿ ಅವರ ಹರಕು ಮನಸ್ಥಿತಿಗಳಿಗೆ ಅಬ್ಬಕ್ಕ, ಚೆನ್ನಮ್ಮ, ಲಕ್ಷ್ಮೀಬಾಯಿ, ಜೀಜಾಬಾಯಿ ಸೇರಿದಂತೆ ಅನೇಕ ವೀರ ಮಾತೆಯರೇ ಉತ್ತರವಾಗುತ್ತಾರೆ. ಇನ್ನು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮಹಿಳೆಗೆ ಪುರುಷ ಸಮಾನ ಸ್ಥಾನಮಾನ ಸಿಗಬೇಕೆಂದು ಬಹು ಜೋರಾಗಿಯೇ ಕೂಗು ಕೇಳಿಬಂತು‌. ಅದಕ್ಕೆ ಪೂರಕವೆನ್ನುವಂತೆ ಸರ್ಕಾರಗಳೂ ಅವರನ್ನು ಓಲೈಸುವುದಕ್ಕೊ ಅಥವಾ ಮೇಲೆತ್ತುವುದಕ್ಕೊ ಸ್ತ್ರೀಯರಿಗೆ ಬೇಡಿಕೆ ಪ್ರಮಾಣದ ಮೀಸಲಾತಿ ಒದಗಿಸಿವೆ‌. ಆದರೆ ಅದರ ಸದ್ಭಳಕೆಯ ನೈಜತೆ ನೋಡಿದಾಗ ನಿಜಕ್ಕೂ ಖೇದ ಅನ್ನಿಸುತ್ತದೆ. ಚುನಾವಣೆಯ ವಿಚಾರದಲ್ಲಿ ಮೀಸಲಾತಿಯ ಚರ್ಚೆ ಬಹು ಜೋರಾಗಿಯೇ ಈ ನಡುವೆ ನಡೆದಿತ್ತು. 1993ರ 73 ಮತ್ತು 74ನೇ ತಿದ್ದುಪಡಿಯ ಅನ್ವಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಶೇ 33%ರಷ್ಟು ಮೀಸಲಾತಿ ಒದಗಿಸಲಾಯಿತು.

ಆದರೆ ಇಂದಿಗೂ ಈ ಕಾಯಿದೆಯ ದುರುಪಯೋಗವೇ ಆಗುತ್ತಿರುವುದು ಶೋಚನೀಯ. ಅದು ಹೇಗೆ ಎಂದು ಕೇಳುತ್ತೀರಾ? ಮಹಿಳೆಯೊಬ್ಬಳು ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುತ್ತಾಳೆ, ಆದರೆ ಪ್ರಚಾರಕ್ಕೆ ತನ್ನ ಮನೆಯ ಗಂಡ ಹೋಗುತ್ತಾನೆ, ಆಕೆ ಚುನಾಯಿತಳಾಗುತ್ತಾಳೆ ಆದರೆ ಹಾರ-ತುರಾಯಿ ಪತಿಗೆ ಸಲ್ಲುತ್ತವೆ. ಇದೆಲ್ಲಾ ಆತ ತನ್ನ ಮನೆಯ ಹೆಂಗಸಿನ ವಿಜಯ ಸಂಭ್ರಮಿಸಲು ಮಾಡುತ್ತಾನೆ ಎಂದು ಭಾವಿಸಬಹುದು. ಆದರೆ ಆಕೆ ಚುನಾಯಿತಳಾದ ನಂತರ ಆಕೆಯ ಹೆಸರಿನ ಮೇಲೆ ಅಧಿಕಾರವನ್ನೂ ಚಲಾಯಿಸುವ ಸ್ಥಿತಿಗೆ ಏನೆಂದು ಹೇಳುವುದು? ಇಂದು ಬಹುತೇಕ ಗ್ರಾಮೀಣ ವಲಯದ ಎಲ್ಲ ಮೀಸಲು ಕ್ಷೇತ್ರಗಳಲ್ಲೂ ಈ ದೃಶ್ಯವನ್ನು ಕಾಣಬಹುದು. ಹೆಸರಿಗೆ ಹೆಣ್ಣೊಬ್ಬಳು ಸಮಾನತೆಯ ಅಥವಾ ಮೀಸಲಾತಿಯ ಹೆಸರಿನಲ್ಲಿ ಅವಕಾಶ ಪಡೆದರೆ ಅದರ ನಿಜವಾದ ಅನುಭೋಗಿಗಳು ಗಂಡಸರಾಗಿರುತ್ತಾರೆ. ಇದೊಂದೇ ಕ್ಷೇತ್ರವಲ್ಲ ಬಹುತೇಕ ವಿಚಾರಗಳಲ್ಲಿ ಹೀಗೆ ಇದೆ, ಅದೂ ಗ್ರಾಮೀಣ ಭಾಗದಲ್ಲಿ ಈ ರೀತಿಯ ಚಿತ್ರಣ ಸರ್ವೇಸಾಮಾನ್ಯ. ಇದು ಬದಲಾಗಬೇಕಿದೆ. ಸ್ತ್ರೀ ಸಮಾನತೆ ಎಂದರೆ ಇದಲ್ಲ..! ಆಕೆಗೆ ಒದಗಿಸಿದ ಅವಕಾಶ ಆಕೆಯಿಂದಲೇ ಬಳಕೆಯಾಗಿ, ಆಕೆಯೇ ನಿರ್ಧಾರ ತೆಗೆದುಕೊಳ್ಳುವಂತಾಗಬೇಕು. ಆ ಕಡೆಗೆ ಇಂದು ಸ್ತ್ರೀವಾದ ಗಮನ ಹರಿಸಬೇಕಿದೆ. ಪುರುಷನನ್ನು ಹಿಂದಿಕ್ಕುವ ಕಡೆಯಲ್ಲ!

ಶಂಕರ ಭಗವತ್ಪಾದರು ಒಂದೆಡೆ ಹೇಳುತ್ತಾರೆ:

ವಿಧೇರ ಜ್ಞಾನೇನ ದ್ರವಿಣ ವಿರಹೇಣಾಲಸತಯಾ

ವಿಧೇಯಾಶಕ್ಯತ್ವಾತ್ತವ ಚರಣಯೋರ್ಯಾ ಚ್ಯುತಿರತ್|

ತದೇತತ್ ಕ್ಷಂತವ್ಯಂ ಜನನಿ ಸಕಲೋದ್ಧಾರಿಣಿ ಶಿವೇ|

ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ||2||

ಅರ್ಥ: ಹೇ ಜನನಿ, ವಿಧಿ ವಿಲಾಸದಿಂದಲೂ, ನನ್ನ ದಾರಿದ್ರ್ಯದಿಂದಲೂ, ಆಲಸ್ಯದಿಂದಲೂ ಮತ್ತು ನಿನಗೆ ವಿಧೇಯನಾಗಿರಲು ಅಶಕ್ಯವಾದದರಿಂದಲೂ ನಿನ್ನ ಅಡಿದಾವರೆಗಳಿಂದ ಚ್ಯುತನಾದೆನು. ಹೇ ಸಕಲೋದ್ಧಾರಿಣಿ ಶಿವೇ, ನೀನು ನನ್ನ ಸಕಲ ಲೋಪದೋಷಗಳನ್ನೂ ಕ್ಷಮಿಸು. ಲೋಕದಲ್ಲಿ ಕುಪುತ್ರ ಹುಟ್ಟಿದರೂ ಹುಟ್ಟ ಬಹುದು, ಆದರೆ ಕುಮಾತೆ ಎಲ್ಲಿಯೂ ಕಾಣಬರುವುದಿಲ್ಲ.

ಸ್ತ್ರೀ ಎಂದಿಗೂ ಪುರುಷನಿಗೆ ಸಮಾನವಾಗಲಾರಳು ಏಕೆಂದರೆ ಭಾರತೀಯ ಪುರುಷ ಎಂದಿಗೂ ಆಕೆಯನ್ನು ಕೀಳೆಂದು ಭಾವಿಸಿಲ್ಲ. ಆಕೆಗೆ ಪುರುಷನಿಗೆ ಎಂದೂ ಹೋಲಿಕೆಯಾಗಲಾರ. ಹೆಣ್ಣೆಲ್ಲಿ? ಗಂಡೆಲ್ಲಿ?

ಹೆಣ್ಣು ಈ ರಾಷ್ಟ್ರದಲ್ಲಿ ದೇವತೆ, ಮಹಾ ಮಾತೆ, ಸಾಕ್ಷಾತ್ ಜಗನ್ಮಾತೆ. ವಿದೇಶಿಗರಂತೆ ಆಕೆ ನಮಗೆ ಕೇವಲ ಭೋಗದ ವಸ್ತುವಲ್ಲ‌. ಪರಕೀಯ ವಿಚಾರಗಳಿಂದ ಪ್ರೇರಿತವಾಗಿರುವ ಮನಸ್ಸುಗಳು ಇದನ್ನು ಅರಿಯಬೇಕಿದೆ. ಆಕೆಯನ್ನು ನಾವು ಅತ್ಯಂತ ಶ್ರೇಷ್ಠ ಸ್ಥಾನದಲ್ಲಿಟ್ಟು ಪೂಜಿಸುತ್ತಿದ್ದೇವೆ. ಹೀಗಾಗಿ ಸಮಾನತೆಯ ಚಿಂತನೆಗಿಂತ ಆಕೆ ಎತ್ತರದಲ್ಲಿದ್ದಾಳೆ. ಅದನ್ನು ಉಳಿಸಿಕೊಳ್ಳುವ ಕೆಲಸ ನಮ್ಮ ನಾಡಿನ ಸ್ತ್ರೀಯರಿಂದ ಆಗಬೇಕಿದೆ. ಈ ರಾಷ್ಟ್ರದ ಏಳಿಗೆಯಲ್ಲಿ ಸಕ್ರೀಯವಾಗಿ ಭಾಗಿಯಾಗಿ ನಾಡ ಕಟ್ಟಬೇಕಿದೆ. ಮಗಳಾಗಿ ತಂದೆಯ ಗೌರವ ಉಳಿಸಬೇಕಿದೆ, ಹೆಂಡತಿಯಾಗಿ ಗಂಡನ ಕಷ್ಟಸುಖದಲ್ಲಿ ಭಾಗಿಯಾಗಬೇಕಿದೆ, ತಾಯಿಯಾಗಿ ತನ್ನ ಮಕ್ಕಳನ್ನು ಪೊರೆಯಬೇಕಿದೆ, ಸ್ನೇಹಿತೆಯಾಗಿ ತನ್ನ ಗೆಳೆಯನನ್ನು ಸನ್ಮಾರ್ಗದಲ್ಲಿ ನಡೆಸಬೇಕಿದೆ, ಸಹೋದರಿಯಾಗಿ ಸಹೋದರನಿಗೆ ರಕ್ಷೆ ನೀಡಬೇಕಿದೆ, ಭಾರತದ ನಾರಿಯಾಗಿ ವಿಶ್ವಕ್ಕೆ ಮಾದರಿಯಾಗಬೇಕಿದೆ.

ಕಿರಣಕುಮಾರ ವಿವೇಕವಂಶಿ

ಪತ್ರಿಕೋದ್ಯಮ ವಿಭಾಗ, ಹುಬ್ಬಳ್ಳಿ

 

Advertisement

Udayavani is now on Telegram. Click here to join our channel and stay updated with the latest news.

Next