Advertisement

ಬಡ್ಡಿ ರಹಿತ ಸಾಲ ಯೋಜನೆ: ಉಡುಪಿ ಜಿಲ್ಲೆ ಶೇ. 88.93 ಸಾಧನೆ

01:31 AM Mar 27, 2021 | Team Udayavani |

ಕಾರ್ಕಳ: ಕೋವಿಡ್‌ 19ನಿಂದಾಗಿ ಸಂಕಷ್ಟದಲ್ಲಿರುವ ಬೀದಿಬದಿ ವ್ಯಾಪಾರಿಗಳಿಗೆ ನೆರವಾಗಲೆಂದು ಕೇಂದ್ರ ಸರಕಾರ ಆತ್ಮನಿರ್ಭರ ಯೋಜನೆಯಡಿ ನೀಡುತ್ತಿರುವ ಬಡ್ಡಿ ರಹಿತ ಸಾಲ ಯೋಜನೆಗೆ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಉತ್ತಮ ಸ್ಪಂದನೆ ದೊರಕಿದ್ದು, ಆರಂಭಿಕ 10 ತಿಂಗಳಲ್ಲಿ ಜಿಲ್ಲೆಯಲ್ಲಿ ಶೇ. 88.93 ಪ್ರಗತಿ ಸಾಧಿಸಿ, ಉತ್ತಮ ಸಾಧನೆ ಮಾಡಿದೆ.

Advertisement

ನಗರ ಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್‌ಗಳ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳು ಈ ಯೋಜನೆ ಸೌಲಭ್ಯ ಪಡೆದುಕೊಂಡಿದ್ದು, ನಗರಾಡಳಿತಗಳಿಗೆ ಆರಂಭಿಕ ಗುರಿಯನ್ನು ನೀಡಲಾಗಿತ್ತು. ಈ ಪೈಕಿ ಉಡುಪಿ ಕುಂದಾಪುರ, ಕಾರ್ಕಳ, ಕಾಪು, ಸಾಲಿಗ್ರಾಮ ನಗರಾಡಳಿತಗಳು ನಿಗದಿತ ಗುರಿಗಿಂತಲೂ ಮೀರಿದ ಸಾಧನೆಯನ್ನು ಮಾಡಿವೆ.

ಈ 5 ಆಡಳಿತಗಳಿಗೆ ಒಟ್ಟು 2,185 ಗುರಿ ನೀಡಲಾಗಿತ್ತು. ಅದಕ್ಕಿಂತ ಹೆಚ್ಚು ಅಂದರೆ 2965 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 1527 ಮಂದಿಗೆ ಸಾಲ ಮಂಜೂರಾತಿಗೊಂಡಿದ್ದು, 1358 ಮಂದಿಗೆ ಸೌಲಭ್ಯ ವಿತರಿಸಲಾಗಿದೆ. 13.58 ಲಕ್ಷ ರೂ. ವಿತರಿಸಲಾಗಿದೆ.
ಕೋವಿಡ್‌ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾದ ಬೀದಿ ಬದಿ ವ್ಯಾಪಾರಿಗಳ ಪುನಶ್ಚೇತನಕ್ಕೆ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಸಾಲ ಸೌಲಭ್ಯ ಯೋಜನೆಯನ್ನು ಕೇಂದ್ರ ಸರಕಾರ ಕಳೆದ ಜೂನ್‌ 1ರಿಂದ ದೇಶಾದ್ಯಂತ ಜಾರಿಗೆ ತಂದಿತ್ತು. 10 ತಿಂಗಳಿಂದ ಸಾಲ ವಿತರಣೆ ನಡೆಯುತ್ತಿದ್ದು, 2020ರ ಮೇ ತನಕ ಈ ಯೋಜನೆ ಚಾಲ್ತಿಯಲ್ಲಿರುತ್ತದೆ.

2ನೇ ಬಾರಿಯೂ ಪಡೆಯಬಹುದು
ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ತಲಾ 10 ಸಾವಿರ ರೂ.ವರೆಗೆ ಸಾಲ ನೀಡಲಾಗುತ್ತಿದ್ದು, ಒಂದು ವರ್ಷದೊಳಗೆ ಮಾಸಿಕ ಕಂತುಗಳ ಮೂಲಕ ಹಿಂದಿರುಗಿಸಬೇಕಾಗುತ್ತದೆ. ಈಗಾಗಲೇ 10 ತಿಂಗಳು ಕಂತು ಸಕಾಲದಲ್ಲಿ ತುಂಬಿರುವ ವ್ಯಾಪಾರಿಗಳು ಮತ್ತೆ ಸಾಲ ಬಯಸಿದಲ್ಲಿ ಬಾಕಿ ಇರುವ ಮೊತ್ತವನ್ನು ತುಂಬಿ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿದೆ. 2020ರ ಮಾ.24ರ ವೇಳೆಯಲ್ಲಿ ಹಾಗೂ ಅದಕ್ಕೂ ಮೊದಲು ನಗರ ಪ್ರದೇಶದಲ್ಲಿ ವ್ಯಾಪಾರ ಮಾಡುತ್ತಿದ್ದವರು, ಪಿಎಂ ಸ್ವನಿಧಿ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗುತ್ತಾರೆ.

ಉತ್ತಮ ಸ್ಪಂದನೆ
ನಗರ ಕೇಂದ್ರಿತ ಬೀದಿ ಬದಿ ವ್ಯಾಪಾರಿಗಳು ಯೋಜನೆಯ ಸದುಪಯೋಗ ಪಡಿಸಿಕೊಂಡಿದ್ದಾರೆ. ವ್ಯಾಪಾರಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇನ್ನು ಒಂದಷ್ಟು ವಿತರಣೆಗೆ ಬಾಕಿಯಿದ್ದು, ಅದನ್ನು ಮಾಡುತ್ತೇವೆ. ಯೋಜನೆಯಿಂದ ವ್ಯಾಪಾರಿಗಳಿಗೆ ಸಾಕಷ್ಟು ಪ್ರಯೋಜನವಾಗಿದೆ.
-ಭಾಸ್ಕರ ಅಮೀನ್‌, ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ

Advertisement

ಯೋಜನೆಯಲ್ಲಿ ಯಾರೆಲ್ಲ ಒಳಪಡುತ್ತಾರೆ?
ಪುರಸಭೆ, ನಗರಸಭೆ, ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ರಸ್ತೆ ಬದಿ ತಳ್ಳು ಬಂಡಿ, ಆಟೋಗಳಲ್ಲಿ ತಿಂಡಿ, ಊಟ ಹಾಗೂ ಪಾನೀಯ ಪದಾರ್ಥಗಳನ್ನು ಮಾರಾಟ ಮಾಡುವವರು ಮತ್ತು ಮನೆಗಳ ಬಳಿ ತೆರಳಿ ತರಕಾರಿ, ಹೂ, ಕಾಯಿ ಮಾರುವವರು ಹಾಗೂ ರಸ್ತೆ ಬದಿಗಳಲ್ಲಿ ಬಿಡಿ ವ್ಯಾಪಾರಿಗಳು ಈ ಸಾಲ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಪಾದರಕ್ಷೆಗಳು, ಚರ್ಮ ಉತ್ಪನ್ನಗಳ ದುರಸ್ತಿ ಹಾಗೂ ಮಾರಾಟ ಮಾಡುವವರು, ಆಟದ ಸಾಮಾನು, ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವವರೂ ಈ ಯೋಜನೆಯಲ್ಲಿ ಒಳಪಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next