Advertisement

ಅತಿಥಿ ಉಪನ್ಯಾಸಕರಿಗೆ ಅಸಡ್ಡೆಯ ಅವಮಾನ

06:26 PM Jun 29, 2018 | Sharanya Alva |

ಬೆಳಗ್ಗೆ 7.30ರ ಸಮಯ. ಚುಮುಚುಮು ಮಾ  ಚಳಿಯ ಜತೆಗೆ ಹೊಂಗಿರಣಗಳ ಬಿಸಿಲು ತಾಕುತ್ತಿತ್ತು. ಯುವತಿಯೊಬ್ಬಳು ಅವಸರದಲ್ಲಿ ತೆರಳುತ್ತಿದ್ದಳು. ಅದೇ ದಾರಿಯಲ್ಲಿ ನಾನೂ ಸಾಗುತ್ತಿದ್ದರಿಂದ ಜತೆಗಾರ್ತಿ ಸಿಕ್ಕಳು ಎಂಬ ನಿಟ್ಟುಸಿರಿನೊಂದಿಗೆ ಅವಳೊಂದಿಗೆ ನಡೆಯತೊಡಗಿದೆ. ಗುರುತು ಪರಿಚಯ ಇಲ್ಲದ್ದರಿಂದ ಮಾತನಾಡಿಸುವ ಗೋಜಿಗೆ ಹೋಗಲಿಲ್ಲ. ಆದರೆ ಅವಳ ವೇಗಕ್ಕೆ ನನ್ನ ಹೆಜ್ಜೆಯ ಅಂತರ ಕಡಿಮೆಯಾಗುತ್ತಿತ್ತು. ತಕ್ಷಣ ನನ್ನ ನಡಿಗೆ ಕೊಂಚ ಜೋರು ಮಾಡಿದೆ. ಕುತೂಹಲ ತಡೆಯಲಾಗಲಿಲ್ಲ.

Advertisement

ಹತ್ತಿರ ಹೋಗಿ ಮಾತನಾಡಿಸಿಯೇ ಬಿಟ್ಟೆ. “ಹೆಸರು ಕಮಲಾ. ಹತ್ತಿರದ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದೇನೆ. ಬೆಳಗ್ಗೆ 8 ಗಂಟೆಗೆ ಕ್ಲಾಸ್‌ ಇದೆ. ಅದಕ್ಕೆ ಅವಸರದಲ್ಲಿ ತೆರಳುತ್ತಿದ್ದೇನೆ’ ಎಂದಳು. “ಅರೇ, ಅಷ್ಟೊಂದು ಅವಸರ ಇದ್ದರೆ ಬಸ್‌ ಅಥವಾ ಆಟೋಗೆ ತೆರಳಬೇಕಿತ್ತು’ ಎಂದಾಗ ನಿರಾಶಾಭಾವದ ನಗೆಯ ಉತ್ತರ. ಅರೆಕ್ಷಣ ಇಬ್ಬರಲ್ಲೂ ಮೌನ. ಮಾತು ಮುಂದುವರೆಸಿದೆ. ಏನಾಯಿತು ಎಂದು ಕೇಳಿದಾಗ, “ಹರಕಲು ಮನೆ, ಮುರುಕಲು ಚಾಪೆ ಇದ್ದರೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಜತೆಗೆ ಬದುಕು ಕಟ್ಟಿಕೊಳ್ಳಬೇಕು ಎಂಬ ಹಂಬಲದೊಂದಿಗೆ ಊರು ಬಿಟ್ಟು ಬಂದು ಖಾಸಗಿ ಕಾಲೇಜು ಸೇರಿಕೊಂಡಿದ್ದೇನೆ. ಪ್ರತಿ ತಿಂಗಳು 10 ಸಾವಿರ ಸಂಬಳ ನಿಗದಿ ಮಾಡಿದ್ದಾರೆ. ಆದರೆ, ಸರಿಯಾದ ಸಮಯಕ್ಕೆ ಯಾವತ್ತೂ ಸಂಬಳ ಬಂದಿಲ್ಲ. ಈಗ ಮೂರು ತಿಂಗಳಿನಿಂದ ಸಂಬಳ ಆಗಿಲ್ಲ. ಬದುಕು ನಡೆಸುವುದೇ ದುಸ್ತರವಾಗಿದೆ.

ಅಂಥದರಲ್ಲಿ ಬಸ್‌, ಆಟೋಗೆ ಹೋಗಲು ದುಡ್ಡು ಎಲ್ಲಿಂದ ಬರಬೇಕು?’ ಎಂದು ಪ್ರಶ್ನಿಸಿದಾಗ ಮಾತೇ ಹೊರಡ ಲಿಲ್ಲ. ಆಗ ನಾನೂ ಮೌನಕ್ಕೆ ಜಾರಿದೆ. ಕಾಲೇಜು ಬಂದಿದ್ದರಿಂದ ಅವಳು ಮತ್ತೆ ಸಿಗ್ತಿನಿ ಎಂದು ಗೇಟ್‌ನತ್ತ ನಡೆದಳು. ಇದು ಕೇವಲ ಕಮಲಾ ಕಥೆ ಮಾತ್ರವಲ್ಲ, ಸಾವಿರಾರು ಅತಿಥಿ ಉಪನ್ಯಾಸಕರ ದುಸ್ಥಿತಿ. ಹೆಸರಿನಲ್ಲಿ ಮಾತ್ರ ಅತಿಥಿಯಾಗಿರುವ ಇವರಿಗೆ ಯಾಕಾದರೂ ಉಪನ್ಯಾಸಕ ವೃತ್ತಿಗೆ ಬಂದೆನೋ ಎಂಬ ಭಾವನೆ ಕಾಡುತ್ತಿದೆ. ಪ್ರತಿ ತಿಂಗಳು ಗರಿ ಗರಿ ನೋಟಿನ ಸಂಬಳ ಎಣಿಸುವುದು ಇವರಿಗೆ ಕನಸಿನ ಮಾತು. ಮೂರ್‍ನಾಲ್ಕು ತಿಂಗಳಿಗೊಮ್ಮೆ ಆಗುವ ಅರೆಬರೆ ಸಂಬಳದಲ್ಲೇ ಖುಷಿ ಪಡುತ್ತಿದ್ದಾರೆ.

ಆಡಳಿತ ಮಂಡಳಿಯವರು ಹೇಳಿದ ಎಲ್ಲ ಕೆಲಸವನ್ನೂ ಚಾಚೂ ತಪ್ಪದೆ ಮಾಡಿದರೂ ಬೆಲೆ ಇಲ್ಲದಂತೆ ನಡೆಸಿಕೊಳ್ಳುತ್ತಾರೆ. ಇಂದಿನ ದಿನಮಾನಗಳಲ್ಲಿ ನಗರದಂತಹ ಪ್ರದೇಶಗಳಲ್ಲಿ 10 ಸಾವಿರ ಸಂಬಳದಲ್ಲಿ ಜೀವನ ನಡೆಸುವುದು ಕಷ್ಟ. ಹೊರಗಡೆ ಹೆಜ್ಜೆ ಇಡಬೇಕಾದರೂ ಜೇಬಿನಲ್ಲಿ ಕನಿಷ್ಟ ಎಂದರೂ 500 ರೂ. ಇರಲೇಬೇಕು. ಸಿಗುವ ಐದಾರು ಸಾವಿರದಲ್ಲಿ ಅತಿಥಿಗಳು ಬದುಕು ಕಟ್ಟಿಕೊಳ್ಳಲು ಸಾಧ್ಯವೇ? ಕುಟುಂಬ ಎಂದ ಮೇಲೆ ಹಲವಾರು ಆರ್ಥಿಕ ಸಮಸ್ಯೆಗಳು ಇದ್ದೇ ಇರುತ್ತವೆ. ಮಕ್ಕಳ ಶಾಲೆ ಫೀ, ವಯಸ್ಸಾದ ಅಪ್ಪ-ಅಮ್ಮನ ಅನಾರೋಗ್ಯ ಸ್ಥಿತಿ, ಮನೆ ಬಾಡಿಗೆ, ಅಂಗಡಿ ಸಾಮಾನು ಹೀಗೆ ಸಾಕಷ್ಟು ಸಮಸ್ಯೆಗಳನ್ನು ನಿಭಾಯಿಸುವುದರಲ್ಲಿ ಅವರ ನಿತ್ಯದ ಜೀವನದ ಎತ್ತಿನ ಬಂಡಿಯ ಹಗ್ಗಜಗ್ಗಾಟ ಹಳ್ಳ ಹಿಡಿಯುತ್ತಿದೆ.

ಪ್ರತಿ ಬಾರಿ ಬಸ್‌ ಸ್ಟಾಪ್‌ಗೆ ಬರುವಾಗಲೂ ಹರಿದ ಖಾಲಿ ಜೇಬಿನಲ್ಲಿ ಕೈಯಾಡಿಸುತ್ತಾ ಸಪ್ಪೆ ಮೋರೆ ಹಾಕಿಕೊಂಡೇ ಕಾಲೇಜಿಗೆ ಬರಬೇಕಾದ ದುಸ್ಥಿತಿ ಇದೆ. ಆರ್ಥಿಕ ಸಮಸ್ಯೆ ಒಬ್ಬ ಸಾಮಾನ್ಯ ಮನುಷ್ಯನನ್ನು ಕೂಡ ಆಕಾಶದಿಂದ ಪಾತಾಳಕ್ಕೆ ಕುಗ್ಗಿಸುತ್ತದೆ. ಮನಸ್ಸಿನಲ್ಲಿ ಸಾಕಷ್ಟು ನೋವು, ಸಮಸ್ಯೆ ಇರುವ ಒಬ್ಬ ಉಪನ್ಯಾಸಕ ಗೋಣಗಿಕೊಂಡು ಕ್ಲಾಸ್‌ ರೂಮ್‌ಗೆ ಬಂದು ಮಕ್ಕಳಿಗೆ ಏನು ಪಾಠ ಮಾಡಲು ಸಾಧ್ಯ? ನೊಂದ ಮನಸ್ಸಿನಿಂದ ಪಾಠ ಮಾಡಿದರೆ ಅದು ಪರಿಣಾಮಕಾರಿಯಾದಿತೇ? ಅಲ್ಲದೇ ಅದು ಕಾಲೇಜಿನ ಬೆಳವಣಿಗೆಗೆ ಪೂರಕವೇ? ಎಷ್ಟೋ ಶಿಕ್ಷಕರು ಉತ್ಸಾಹದಿಂದ ವೃತ್ತಿಗೆ ಬಂದು ನಿರುತ್ಸಾಹಿಗಳಾಗಿದ್ದಾರೆ.

Advertisement

ನಗರ ಪ್ರದೇಶಗಳಲ್ಲಿ ಪ್ರತಿ ವರ್ಷ ಮನೆ ಬಾಡಿಕೆ ಏರಿಯಾಗುತ್ತಿದೆ, ಆದರೂ ಅತಿಥಿ ಉಪನ್ಯಾಸಕರ ಸಂಬಳದಲ್ಲಿ ಒಂದು ರೂಪಾಯಿ ಕೂಡ ಏರಿಕೆಯಾಗಿಲ್ಲ. ಇಂದಿನ ದಿನಗಳಲ್ಲಿ ಬರುವ ಸಂಬಳದಲ್ಲಿ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಕೆಲಸ ದೇವರ ಕೆಲಸ ಎಂದು ಹೇಳುತ್ತಾರೆ. ಆದರೆ ಇಲ್ಲಿ ದೇವರಾದ ಸರ್ಕಾರ ಮಾತ್ರ ಇದನ್ನೆಲ್ಲ ನೋಡಿಯೂ ನೋಡದಂತೆ ಕಣ್ಣು ಮುಚ್ಚಿ ಕುಳಿತಿದೆ. ವೃತ್ತಿ ಬದುಕಿನೊಂದಿಗೆ ಅವರ ದೊಡ್ಡ ಹೋರಾಟವೇ ಶುರುವಾಗಿದೆ. ಪ್ರತಿ ಕಾಲೇಜಿನಲ್ಲೂ ಕಾಯಂ ಶಿಕ್ಷಕರ ಸಂಖ್ಯೆ
ಕಡಿಮೆ ಇದೆ. ಒಂದು ಪ್ರತ್ಯೇಕ ವಿಭಾಗಕ್ಕೆ ಒಬ್ಬ ಕಾಯಂ ಶಿಕ್ಷಕ, ಮೂರು- ನಾಲ್ಕು ಜನ ಅತಿಥಿ  ಉಪನ್ಯಾಸಕರಿರುತ್ತಾರೆ. 

ಕಾಯಂ ಶಿಕ್ಷಕರು ಬಡಪಾಯಿ ಅತಿಥಿ ಉಪನ್ಯಾಸಕರ ಮೇಲೆ ತಮ್ಮ ದರ್ಪ ತೋರಿಸುತ್ತಾರೆ. ಆಯಾ ವಿಭಾಗದ ಕೆಲಸ ಮಾಡುವ ಅತಿಥಿ ಉಪನ್ಯಾಸಕರು ವಿಭಾಗದ ಏಳಿಗೆಗೆ ಸಹಕರಿಸುವಂತೆ ಚರ್ಚಿಸಿ ದರೆ ಸಹಕರಿಸುವುದಕ್ಕಿಂತ ಹೆಚ್ಚಾಗಿ ಕಾಲೆಳೆಯುವ ಕೆಲಸಗಳೇ ಹೆಚ್ಚಾಗಿರುವುದು ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ. ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಪ್ರಮುಖ ಎನ್ನುತ್ತಾರೆ. ಆದರೆ ಇಲ್ಲಿ
ಆಗುತ್ತಿರುವುದು ಶಿಕ್ಷಕರ ಅಪಹಾಸ್ಯ. ಇದರಿಂದಾಗಿ ನೊಂದ ಎಷ್ಟೋ ಶಿಕ್ಷಕರು ಪ್ರತಿನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಪ್ರತಿಯೊಬ್ಬ ಅತಿಥಿ ಉಪನ್ಯಾಸಕರ ಕಥೆಯನ್ನು ಕೇಳಿದರೆ ಕರುಳು ಕಿವುಚಿದಂತಾಗುತ್ತದೆ.

ರಾಜ್ಯದ ನೂರಾರು ಕಾಲೇಜುಗಳು ಅತಿಥಿ ಉಪನ್ಯಾಸಕ ರಿಲ್ಲದೇ ನಡೆಯುವುದೇ ಕಷ್ಟ. ಹಲವಾರು ವರ್ಷಗಳಿಂದ ಸೇವೆ ಸಲ್ಲಿಸು ತ್ತಿದ್ದರೂ ಇದುವರೆಗೂ ಸರ್ಕಾರ ಅವರ ಸೇವೆಯನ್ನು ಕಾಯಂ ಗೊಳಿಸದೆ ಇರುವುದು ದುರಂತ. ಇನ್ನೊಂದು ಕುತೂಹಲಕಾರಿ ವಿಷಯವೆಂದರೆ ಕಾಲೇಜುಗಳಲ್ಲಿ ದ್ವಿತೀಯ ದರ್ಜೆ ಸಹಾಯಕನಿಗೆ ಕೊಡುವಂತಹ ಸಂಬಳಕ್ಕಿಂತಲೂ ಕಡಿಮೆ ಹಣವನ್ನು ಅತಿಥಿ ಉಪನ್ಯಾಸಕರಿಗೆ ನೀಡಲಾಗುತ್ತಿದೆ.

ಅತಿಥಿ ಉಪನ್ಯಾಸಕರು ಕನಿಷ್ಠ ವೇತನ ಪಡೆಯುತ್ತಾ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿದ್ದಾರೆ. ಆದರೆ ಅವರಿಗೆ ಸೇವಾ ಭದ್ರತೆ ಇಲ್ಲದಂತಾಗಿದೆ. ಹಲವು ವರ್ಷಗಳಿಂದ ಅನೇಕ ಹೋರಾಟಗಳ ಮೂಲಕ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೆ ಸರ್ಕಾರ ಮಾತ್ರ ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ರಾಜ್ಯ ಸರ್ಕಾರ ವೇತನ ಹೆಚ್ಚಳದ ಜೊತೆಗೆ ಸೇವಾ ಭದ್ರತೆ ಒದಗಿಸಬೇಕು. ಮಹಿಳಾ ಅತಿಥಿ ಉಪನ್ಯಾಸಕರಿಗೆ ಹೆರಿಗೆ ರಜೆ ಜೊತೆಗೆ ವೇತನ ನೀಡಬೇಕು. ಸೇವಾ ಹಿರಿತನದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕು ಪಿಎಚ್‌ಡಿ, ನೆಟ್‌, ಸೆಟ್‌ ಪದವಿಗಳಿಗೆ ಅನು ಗುಣವಾಗಿ ಆಂಧ್ರ ಮತ್ತು ಮಹಾರಾಷ್ಟ್ರ ಸರ್ಕಾರಗಳ ಮಾದರಿ ಯಲ್ಲಿ ಮಾಸಿಕ ವೇತನ 25 ಸಾವಿರ ನಿಗದಿಪಡಿಸಬೇಕೆಂಬುದು ಅತಿಥಿ ಉಪನ್ಯಾಸಕರ ಬೇಡಿಕೆ.

ಆದರೆ, ಇದ್ಯಾವುದನ್ನೂ ಕೇಳುವ ಸೌಜನ್ಯತೆ ಕೂಡ ಸರ್ಕಾರಕ್ಕಿಲ್ಲ. ಹೋರಾಡಿ ಹಕ್ಕು ಪಡೆದುಕೊಳ್ಳುವ ಶಕ್ತಿಯೂ ಅತಿಥಿ ಉಪನ್ಯಾಸಕರಿಗಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಅಮೂ ಲಾಗ್ರ ಬದಲಾವಣೆ ತರಲು ಹೊರಡುವ ಮುನ್ನ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಲಿ. “ಪುಸ್ತಕಯುಕ್ತ ಪರೀಕ್ಷೆ’ಗೂ ಮುನ್ನ ಸಮರ್ಪಕ ಸಂಬಳ ನೀಡಲಿ. “ಉನ್ನತ’ ಬದಲಾವಣೆಯ ಶಿಕ್ಷಣಕ್ಕೆ ಆದ್ಯತೆಯ ಜತೆಗೆ ಅತಿಥಿಗಳ ಸತ್ಕಾರವೂ ನಡೆಯಲಿ. 

*ಶೃತಿ ಚಿನಗುಂಡಿ, ಉಪನ್ಯಾಸಕಿ

Advertisement

Udayavani is now on Telegram. Click here to join our channel and stay updated with the latest news.

Next