ಲಕ್ಷ್ಮೇಶ್ವರ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೋಟ್ಯಂತರ ರೂ. ಅನುದಾನದಲ್ಲಿ ಸ್ಲಂ ಬೋರ್ಡ್ನಿಂದ ಪಟ್ಟಣದಲ್ಲಿ ಕೊಳಚೆ ಪ್ರದೇಶದಲ್ಲಿ ನಿರ್ಮಿಸುತ್ತಿರುವ 343 ಮನೆಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಅಲ್ಲದೇ ಈ ಯೋಜನೆ ಬಗ್ಗೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಫಲಾನುಭವಿಗಳಿಗೆ ಸತ್ಯಾಂಶ ತಿಳಿಸದೇ ಅವರನ್ನು ಕತ್ತಲ್ಲಿಟ್ಟು ಕಾರ್ಯ ಕಾರ್ಯ ಸಾಧಿಸುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಗುತ್ತಿಗೆದಾರರು ಮತ್ತು ಇಂಜನೀಯರುಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಶಂಕರ ಬಾಳಿಕಾಯಿ ಆಗ್ರಹಿಸಿದ್ದಾರೆ.
ಗುರುವಾರ ಪಟ್ಟಣದಲ್ಲಿ ಮನೆಗಳ ಗುಣಮಟ್ಟದ ಪರಿಶೀಲನೆಗೆ ಆಗಮಿಸಿದ್ದ ಸಹಾಯಕ ಇಂಜಿನಿಯರ್ ಪ್ರವೀಣ ಎಚ್. ಅವರನ್ನು ಶಂಕರ ಬಾಳಿಕಾಯಿ ಅವರು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕೊಳಚೆ ಪ್ರದೇಶದ ಬಡ ಜನತೆಗೆ ಅನುಕೂಲವಾಗಲೆಂದು ಸರ್ಕಾರ ಎಸ್ಸಿ ಮತ್ತು ಎಸ್ಟಿ ವರ್ಗಕ್ಕೆ 3.50 ಲಕ್ಷ ಹಾಗೂ ಸಾಮಾನ್ಯರಿಗೆ 2.70 ಲಕ್ಷ ರೂ.ಗಳಲ್ಲಿ ಮನೆ ನಿರ್ಮಾಣ ಮಾಡಿಕೊಡುವಂತೆ ಕೊಳಚೆ ಮಂಡಳಿಗೆ ಆದೇಶ ಮಾಡಿದೆ. ಆದರೆ ಸರ್ಕಾರದ ಆದೇಶ ಗಾಳಿಗೆ ತೂರಿ ಕಳಪೆ ಮಟ್ಟದ ಸಾಮಗ್ರಿ ಬಳಸಿ ಬೇಕಾಬಿಟ್ಟಿಯಾಗಿ ಗುತ್ತಿಗೆದಾರರು ಮನೆ ನಿರ್ಮಿಸುತ್ತಿದ್ದಾರೆ. ಗುಣಮಟ್ಟದ್ದಲ್ಲದ ಸಿಮೆಂಟ್ ಬ್ರಿಕ್ಸ್, ತುಂಡಾದ ಕಬ್ಬಿಣದ ಸರಳು ಮತ್ತು ಕಡಿಮೆ ಪ್ರಮಾಣದ ಸಿಮೆಂಟ್ ಬಳಕೆ ಮಾಡಿ ಮನೆ ಕಟ್ಟುತ್ತಿದ್ದಾರೆ.
4.91 ಲಕ್ಷ ವೆಚ್ಚದಲ್ಲಿ ಕೊಳಚೆ ಮಂಡಳಿಯವರು ಸುಂದರ ಮನೆ ನಿರ್ಮಿಸಿಕೊಡುತ್ತೇವೆ ಎಂದು ಫಲಾನುಭವಿಗಳಿಗೆ ಇಲ್ಲ ಸಲ್ಲದ ಸುಳ್ಳು ಹೇಳುತ್ತಿದ್ದಾರೆ. ಸರ್ಕಾರಗಳ ಅನುದಾನದ ಹೊರತಾಗಿ ಮನೆ ನಿರ್ಮಾಣಕ್ಕೆ ತಗಲುವ ಹೆಚ್ಚಿಗೆ ಮೊತ್ತ ಎಸ್ಸಿ/ಎಸ್ಟಿಯವರಿಗೆ 1.40 ಲಕ್ಷ ಮತ್ತು ಸಾಮಾನ್ಯರಿಗೆ 2.21 ಲಕ್ಷ ಸಾಲವನ್ನು ಕಾರ್ಮಿಕ ಇಲಾಖೆಯಿಂದ ಕೊಡಿಸುವ ಮೂಲಕ ಕೊಳಚೆ ಮಂಡಳಿಯು ಬಡ ಜನತೆಯ ತಲೆ ಮೇಲೆ ಸಾಲ ಹೇರುವ ಹುನ್ನಾರ ನಡೆಸಿದೆ. ಆದರೆ ಈ ವಿಷಯವನ್ನು ಇದುವರೆಗೂ ಫಲಾನುಭವಿಗಳ ಕಿವಿಗೆ ಹಾಕದೆ ಅವರಿಂದ ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಕಾರ್ಡ್ ಮಾಡಿಸುವ ಮೂಲಕ ಕೆರೆಯ ನೀರನ್ನು ಕೆರೆಗೆ ಚಲ್ಲಿ ವರವ ಪಡೆಯುವ ಹುನ್ನಾರ ನಡೆಸಿದ್ದಾರೆ. ಇಷ್ಟೆಲ್ಲದ್ದರ ನಡುವೆ ಮನೆಗಳಿಗೆ ಇಲೆಕ್ಟ್ರಿಕಲ್, ಪಬ್ಲಿಂಗ್, ಬಣ್ಣ ಇತರೇ ಕಾರ್ಯಗಳನ್ನು ಮಾಡದೇ ಮನೆ ಅರ್ಧಕ್ಕೆ ಬಿಟ್ಟು ಹೋಗಲಿದೆ ಎಂಬ ಮಾಹಿತಿಯೂ ಇದೆ ಎಂದು ಆರೋಪಿಸಿದ ಅವರು, ಕೂಡಲೇ ಜಿಲ್ಲಾಧಿಕಾರಿಗಳು ತಕ್ಷಣ ತನಿಖೆ ನಡೆಸಿ ಸೂಕ್ತ ಕ್ರಮಕೂಗೊಳ್ಳಬೇಕು. ಒಂದು ವೇಳೆ ಜಿಲ್ಲಾಧಿಕಾರಿಗಳು ಕ್ರಮಕ್ಕೆ ಮುಂದಾಗದೇ ಹೋದಲ್ಲಿ ಲಕ್ಷೆ ್ಮೕಶ್ವರ ಬಂದ್ ಮಾಡಿ ಲೋಕಾಯುಕ್ತ ತನಿಖೆಗೆ ಮುಂದಾಗುವ ಮೂಲಕ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದರು. ಜಾಕೀರ್ ಹುಸೇನ್ ಹವಾಲ್ದಾರ, ವಿಜಯ ಆಲೂರ ಇದ್ದರು.